ಮೀಸಲಾತಿ ಆಟ, ಭವಾನಿ ರೇವಣ್ಣ ಕೈತಪ್ಪಿದ ಅಧ್ಯಕ್ಷ ಸ್ಥಾನ
ಹಾಸನ, ಏಪ್ರಿಲ್ 06 : ಭವಾನಿ ರೇವಣ್ಣ ಅವರು ಹಾಸನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗುತ್ತಾರೆ ಎಂಬ ರಾಜಕೀಯ ಲೆಕ್ಕಾಚಾರ ಬುಡಮೇಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಕರಡು ಮೀಸಲಾತಿ ಪ್ರಕಟವಾಗಿದ್ದು, ಅತಂತ್ರ ಜಿಲ್ಲಾ ಪಂಚಾಯಿತಿಗಳ ಮೈತ್ರಿ ರಾಜಕೀಯ ಬದಲಾಗಿದೆ.
ಫೆಬ್ರವರಿಯಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು, ಹಾಸನ ಜಿಲ್ಲೆಯ ಹೊಳೇನರಸೀಪುರ ಕ್ಷೇತ್ರದ ಹಳೇಕೋಟೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಅಧಿಕೃತವಾಗಿ ಚುನಾವಣಾ ರಾಜಕಾರಣಕ್ಕೆ ಪ್ರವೇಶ ಮಾಡಿದ್ದರು. [30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]

ಭವಾನಿ ರೇವಣ್ಣ ಅವರು ಗೆಲುವು ಸಾಧಿಸಿದ ಬಳಿಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗುತ್ತಾರೆ ಎಂಬ ಲೆಕ್ಕಾಚಾರ ಆರಂಭವಾಗಿತ್ತು. ಆದರೆ, ಸರ್ಕಾರ ಮಂಗಳವಾರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದ್ದು, ಭವಾನಿ ರೇವಣ್ಣ ಅವರು ಅಧ್ಯಕ್ಷರಾಗುವ ಅವಕಾಶ ಕೈ ತಪ್ಪಿದೆ. [ತಾಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ]
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ (ಮಹಿಳೆ) ಮೀಸಲಾಗಿದೆ. ಇದರಿಂದ ಬಹುಮತ ಹೊಂದಿರುವ ಜೆಡಿಎಸ್ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಕೈತಪ್ಪಿದಂತಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ದೊರೆಯಬಹುದು ಎಂದು ಅಂದಾಜಿಸಲಾಗಿದೆ.
ಚುನಾವಣೆಯಲ್ಲಿ ಪರಿಶಿಷ್ಟ ಪಂಗಡದಿಂದ ಒಬ್ಬರು ಮಹಿಳೆ ಮಾತ್ರ ಗೆದ್ದಿದ್ದು, ಅವರು ಕಾಂಗ್ರೆಸ್ ಪಕ್ಷದವರು. ಆದ್ದರಿಂದ, ಬಾಗೇಶಪುರ ಕ್ಷೇತ್ರದ ಸದಸ್ಯೆ ಶ್ವೇತಾ ದೇವರಾಜು ಅಧ್ಯಕ್ಷೆಯಾಗುವ ಸಾಧ್ಯತೆ ಇದೆ. ಏ.15ರಂದು ಸರ್ಕಾರ ಅಂತಿಮ ಮೀಸಲಾತಿ ಪಟ್ಟಿ ಹೊರಡಿಸಲಿದ್ದು, ಆಗ ಲೆಕ್ಕಾಚಾರ ಬದಲಾಗುವುದೇ? ಕಾದು ನೋಡಬೇಕು.
ಅಂದಹಾಗೆ ಹಾಸನ ಜಿಲ್ಲಾ ಪಂಚಾಯಿತಿ ಒಟ್ಟು ಸದಸ್ಯ ಬಲ 40. 16 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸಿದ್ದರೆ, ಜೆಡಿಎಸ್ 23 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 1 ಸ್ಥಾನ ಗೆದ್ದಿದೆ.












Click it and Unblock the Notifications