Yuva Nidhi: ಯುವನಿಧಿಗೆ ಕೌಂಟ್ಡೌನ್: ಅರ್ಜಿ ಸಲ್ಲಿಸುವುದು ಹೇಗೆ? ಅಭ್ಯರ್ಥಿಗಳಿಗೆ ಸರ್ಕಾರದ ಷರತ್ತುಗಳೇನು?
ಬೆಂಗಳೂರು, ಡಿಸೆಂಬರ್ 21: ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳ ಅವಧಿಯಲ್ಲೇ ಚುನಾವಣೆಗೂ ಮುನ್ನ ನೀಡಿದ್ದ ಪಂಚ ಗ್ಯಾರಂಟಿಗಳಲ್ಲಿ ನಾಲ್ಕನ್ನು ಪೂರೈಸಿದೆ. ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಇನ್ನೂರು ಯುನಿಟ್ ಉಚಿತ ವಿದ್ಯುತ್, ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಮನೆಯ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರೂ ಹಾಗೂ ಅನ್ನ ಭಾಗ್ಯ ಯೋಜನೆ ನೀಡಿ ಕಾಂಗ್ರೆಸ್ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ.
ಕಾಂಗ್ರೆಸ್ ಸರ್ಕಾರದ ಕೊನೆಯ ಗ್ಯಾರಂಟಿ ಯೋಜನೆಯಾಗಿದ್ದ ಯುವನಿಧಿ ಜಾರಿಗಾಗಿ ಸರ್ಕಾರ ಸಮಯ ತೆಗೆದುಕೊಂಡಿದ್ದು, ಇದೀಗ ಪಂಚ ಗ್ಯಾರಂಟಿಯ ಯುವನಿಧಿ ಯೋಜನೆ ಜಾರಿಗೆ ಮುಂದಾಗಿದೆ. ಶೀಘ್ರದಲ್ಲೇ ರಾಜ್ಯದಲ್ಲಿ ಯುವನಿಧಿ ಯೋಜನೆ ಜಾರಿಯಾಗಲಿದ್ದು, ಇಂದೇ (ಡಿಸೆಂಬರ್ 21) ದಿನಾಂಕ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಕಳೆದ ಕೆಲ ದಿನಗಳಿಂದ ಯುವನಿಧಿ ಯೋಜನೆ ಜಾರಿ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಡಿಸೆಂಬರ್ ಕೊನೆಯ ವಾರದಲ್ಲಿ, ಜನವರಿ ಮೊದಲ ವಾರದಲ್ಲಿ ಯೋಜನೆ ಜಾರಿಯಾಗುತ್ತದೆ ಎನ್ನಲಾಗುತ್ತಿತ್ತು. ಈ ಗೊಂದಲಗಳಿಗೆ ಇಂದು ಉತ್ತರ ಸಿಗಲಿದ್ದು, ಯುವನಿಧಿ ಗ್ಯಾರಂಟಿ ಜಾರಿ ವಿಚಾರವಾಗಿ ವಿಧಾನಸೌಧದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿದೆ. ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸುದ್ದಿಗೋಷ್ಠಿ ನಡೆಸಲಿದ್ದು, ಯುವನಿಧಿ ಜಾರಿ ಬಗ್ಗೆ ಹಾಗೂ ಅರ್ಜಿ ಸಲ್ಲಿಕೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.
ಯುವನಿಧಿಗೆ ಅರ್ಜಿ ಸಲ್ಲಿಸುವುದು ಹೇಗೆ..?
ಅಭ್ಯರ್ಥಿಗಳು ಯುವನಿಧಿಗೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದರ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಅಧೀಕೃತ ಮಾಹಿತಿ ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಯುವನಿಧಿಗೆ ಅರ್ಹತೆ ಹೊಂದಿರುವ ಯುವಕ ಯುವತಿಯರು ಸರ್ಕಾರದ ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕದ ನಿವಾಸಿಯಾಗಿರುವ ಬಗ್ಗೆ ಸೂಕ್ತ ದಾಖಲೆ, ಹತ್ತನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಪದವಿ ಅಂಕಪಟ್ಟಿ, ಆಧಾರ್ ಕಾರ್ಡ್ ದಾಖಲೆಯೊಂದಿಗೆ ಮೊಬೈಲ್, ಕಂಪ್ಯೂಟರ್ ಹಾಗೂ ಗ್ರಾಮ ಒನ್, ಬೆಂಗಳೂರು ಒನ್ನಂತಹ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಇಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾಹಿತಿ ನೀಡಲಿದ್ದು, ಸರ್ಕಾರದಿಂದ ಅಭ್ಯರ್ಥಿಗಳಿಗೆ ಅಧೀಕೃತ ಸೂಚನೆ ಸಿಗಲಿದೆ.
ಯುವನಿಧಿ ಯೋಜನೆ ಎಂದರೇನು..?
ಕಾಂಗ್ರೆಸ್ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನರಿಗೆ ಪಂಚ ಗ್ಯಾರಂಟಿಗಳನ್ನು ನೀಡಿತ್ತು. ಈ ಯೋಜನೆಗಳಲ್ಲಿ ಯುವ ಜನತೆಗಾಗಿ ಕಾಂಗ್ರೆಸ್ ಯುವನಿಧಿ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆ ಪ್ರಕಾರ ಪದವೀಧರರಿಗೆ 3,000 ರೂಪಾಯಿ ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆವನ್ನು ಸರ್ಕಾರ ನೀಡಲಿದೆ. 2022- 23ನೇ ಸಾಲಿನಲ್ಲಿಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದ ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲಾ ಪದವೀಧರರು ಈ ಯುವನಿಧಿ ಯೋಜನೆ ಪಡೆಯಬಹುದಾಗಿದೆ.
ಯುವನಿಧಿಗೆ ಸರ್ಕಾರದ ಷರತ್ತುಗಳೇನು..?
ಯುವನಿಧಿ ಯೋಜನೆ ಅಡಿಯಲ್ಲಿ ಒಬ್ಬ ಅಭ್ಯರ್ಥಿಗೆ ಎರಡು ವರ್ಷಗಳು ಮಾತ್ರ ನಿರುದ್ಯೋಗ ಭತ್ಯೆ ಸಿಗಲಿದೆ. ಎರಡು ವರ್ಷದಲ್ಲಿ ಅಭ್ಯರ್ಥಿಗೆ ಉದ್ಯೋಗ ಸಿಕ್ಕರೆ ಸರ್ಕಾರದಿಂದ ಬರುವ ಹಣ ಸ್ಥಗಿತಗೊಳ್ಳುತ್ತದೆ. ಮುಖ್ಯವಾಗಿ ಅಭ್ಯರ್ಥಿ ತಮಗೆ ಉದ್ಯೋಗ ದೊರೆತ ತಕ್ಷಣ ಸರ್ಕಾರಕ್ಕೆ ತಿಳಿಸಬೇಕು. ಒಂದು ವೇಳೆ ಸರ್ಕಾರದ ಹಣ ಪಡೆದು ಜೊತೆಗೆ ಬೇರೆ ಕೆಲಸದ ಸಂಬಳವನ್ನು ಸಹ ಪಡೆದರೆ ಸರ್ಕಾರದಿಂದ ಅಂತಹ ಅಭ್ಯರ್ಥಿಗೆ ಭಾರೀ ದಂಡ ಬೀಳಲಿದೆ ಎಚ್ಚರವಾಗಿರಿ.












Click it and Unblock the Notifications