ಸಂಕಷ್ಟದಲ್ಲಿರುವ ಸಹಕಾರ ಸಾರಿಗೆಯ ಸಹಾಯಕ್ಕೆ ಬಂದ ಯಡಿಯೂರಪ್ಪ

ಬೆಂಗಳೂರು, ಸೆಪ್ಟೆಂಬರ್ 9: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮಲೆನಾಡಿನ ಜನಪ್ರಿಯ ಸಾರಿಗೆ ಸಂಸ್ಥೆ ಸಹಕಾರ ಸಾರಿಗೆಗೆ ನೆರವು ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ.

ಮಲೆನಾಡಿನ ಪ್ರಯಾಣಿಕರ ವಿಶ್ವಾಸಾರ್ಹ ಸಂಪರ್ಕ ಸಾರಿಗೆಯಾಗಿರುವ ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆಯು ವಿವಿಧ ಕಾರಣಗಳಿಂದ ಆರ್ಥಿಕ ಸಮಸ್ಯೆಯ ಸುಳಿಗೆ ಸಿಲುಕಿದೆ. ಸಂಸ್ಥೆಗೆ ನೆರವು ನೀಡುವ ಮೂಲಕ ಅದರ ಪುನಶ್ಚೇತನಕ್ಕೆ ಮುಮದಾಗುವಂತೆ ಸಂಸದೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸೆ. 7ರಂದು ಪತ್ರ ಬರೆದಿದ್ದರು. ಅದಕ್ಕೆ ಕೂಡಲೇ ಸ್ಪಂದಿಸಿರುವ ಯಡಿಯೂರಪ್ಪ ಅವರು ಸಹಾಯ ಹಸ್ತ ಚಾಚಿದ್ದಾರೆ.

1991ರಲ್ಲಿ ಕೇವಲ ಆರು ಬಸ್‌ಗಳೊಂದಿಗೆ ಆರಂಭಗೊಂಡ ಸಹಕಾರ ಸಾರಿಗೆ ಈಗ 76 ಬಸ್‌ಗಳನ್ನು ಹೊಂದಿದೆ. ಕಾರ್ಮಿಕರೇ ಕಟ್ಟಿದ, ಕಾರ್ಮಿಕರೇ ಮಾಲೀಕರಾದ ಸ್ಪೂರ್ತಿದಾಯಕ ಕಥೆ ಸಹಕಾರ ಸಾರಿಗೆಯದು. ಜಪಾನ್‌ನಂತಹ ದೇಶಗಳು ಸಹಕಾರ ಸಾರಿಗೆ ರೂಪುಗೊಂಡ ಬಗೆ, ಅದರ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರುವ ರೀತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದವು. ಸಹಕಾರ ಸಾರಿಗೆ ಬಸ್ ಎಂದರೆ ಸಮಯಕ್ಕೆ ಸರಿಯಾಗಿ ಬರುವ, ಎಂದಿಗೂ ತಪ್ಪದ ಅತ್ಯಂತ ವಿಶ್ವಾಸಾರ್ಹ ಸಾರಿಗೆ ಎಂಬುದೇ ಜನರ ನಂಬಿಕೆ. ಅದಕ್ಕೆ ತಕ್ಕಂತೆ ಗುಣಮಟ್ಟದ ಸೇವೆ ನೀಡಿರುವುದು ಸಂಸ್ಥೆಯ ಹೆಗ್ಗಳಿಕೆ.

ಕೊಪ್ಪ, ತೀರ್ಥಹಳ್ಳಿ, ಚಿಕ್ಕಮಗಳೂರು, ಶೃಂಗೇರಿ, ಶಿವಮೊಗ್ಗ, ಸಾಗರ, ಹೊಸನಗರ, ಕಳಸ, ಹೊರನಾಡುಗಳ ಮಲೆನಾಡನ್ನು ದಾಟಿ ಉಡುಪಿ, ಮಂಗಳೂರಿನ ಕರಾವಳಿ ಭಾಗದವರೆಗೂ ಸಹಕಾರ ಸಾರಿಗೆ ಸಂಚಾರ ಸೇವೆ ಒದಗಿಸಿದೆ.

ಆರ್ಥಿಕ ಹಿನ್ನಡೆಯ ನಡುವೆ ಮೂಡಿದ ಭರವಸೆ

ಆರ್ಥಿಕ ಹಿನ್ನಡೆಯ ನಡುವೆ ಮೂಡಿದ ಭರವಸೆ

ಕಳೆದ ಒಂದೆರಡು ವರ್ಷಗಳಿಂದ ಸಂಸ್ಥೆ ಭಾರಿ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. ಅದರ ಪರಿಣಾಮವಾಗಿ ಬಸ್‌ಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಸಂಸ್ಥೆಯ ಕಾರ್ಮಿಕರ ವೇತನಕ್ಕೂ ತೊಂದರೆಯಾಗಿದೆ. ನಾಲ್ಕು ಮೂರು ವರ್ಷದ ಹಿಂದಷ್ಟೇ ರಜತ ಮಹತ್ಸೋವದ ಸಂಭ್ರಮ ಆಚರಿಸಿದ್ದ ಸಂಸ್ಥೆಯ ಮುಂದೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಇಷ್ಟು ಕಷ್ಟಪಟ್ಟು ಬೆಳೆಸಿದ ಸಂಸ್ಥೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕಾರ್ಮಿಕರು ಸತತ ಪ್ರಯತ್ನ ಮಾಡುತ್ತಿದ್ದಾರೆ. ಮಾದರಿ ಸಹಕಾರಿ ತತ್ವದಲ್ಲಿ ರೂಪಿಸಿದ ಸಂಸ್ಥೆಯನ್ನು ಉಳಿಸಲು ಅವರ ಮನವಿಗಳಿಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿರಲಿಲ್ಲ ಎಂಬ ಬೇಸರವಿತ್ತು. ಈಗ ಸಂಸ್ಥೆಯ ಸಿಬ್ಬಂದಿಯಲ್ಲಿ ಕಾರ್ಮೋಡದಂಚಿನಲ್ಲಿ ಬೆಳ್ಳಿಕಿರಣದಂತಹ ಭರವಸೆಯೊಂದು ಮೂಡಿದೆ.

ಮುಖ್ಯಮಂತ್ರಿಗೆ ಶೋಭಾ ಕರಂದ್ಲಾಜೆ ಪತ್ರ

ಮುಖ್ಯಮಂತ್ರಿಗೆ ಶೋಭಾ ಕರಂದ್ಲಾಜೆ ಪತ್ರ

ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಂಸದೆ ಶೋಭಾ ಕರಂದ್ಲಾಜೆ, '300ಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿ ದುಡಿಯುತ್ತಿದ್ದು, 2000ಕ್ಕೂ ಹೆಚ್ಚು ಜನರು ಈ ಸಂಸ್ಥೆಯನ್ನು ಆಶ್ರಯಿಸಿದ್ದಾರೆ. ಕಳೆದ 28 ವರ್ಷಗಳಿಂದ ಈ ಸಂಸ್ಥೆ ಚಿಕ್ಕಮಗಳೂರು-ಶಿವಮೊಗ್ಗ-ಉಡುಪಿ ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಯನ್ನು ನೀಡುತ್ತಾ ಬಂದಿರುತ್ತದೆ. ಸಾಮಾಜಿಕ ಕಳಕಳಿಯ ಮೇರೆಗೆ ಸಂಘವು ಬಸ್ಸಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಹಿರಿಯ ನಾಗರಿಕರಿಗೆ ವಿವಿಧ ರಿಯಾಯಿತಿ ದರದಲ್ಲಿ ಸೇವೆಯನ್ನು ಒದಗಿಸುವ ಮೂಲಕ ಸಾರ್ವಜನಿಕ ಸೇವೆ ನಡೆಸಿಕೊಂಡು ಬಂದಿದೆ' ಎಂದು ವಿವರಿಸಿದ್ದಾರೆ.

ಸಹಕಾರ ಸಾರಿಗೆಗೆ ನೆರವು ನೀಡಿ

ಸಹಕಾರ ಸಾರಿಗೆಗೆ ನೆರವು ನೀಡಿ

'ಇತ್ತೀಚೆಗೆ ಡೀಸೆಲ್ ದರ, ವಾಹನ ತೆರಿಗೆ, ವಿಮೆ ಇತ್ಯಾದಿಗಳ ದರ ಹೆಚ್ಚಾಗಿರುವುದರಿಂದ ಸಂಸ್ಥೆಯ ಆರ್ಥಿಕ ಹೊರೆ ಹೆಚ್ಚಾಗಿ ಸಂಸ್ಥೆಯನ್ನು ನಡೆಸಿಕೊಂಡು ಹೋಗುವುದು ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಸಂಸ್ಥೆಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಸಲುವಾಗಿ ಸರ್ಕಾರವು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯವರಿಗೆ ನೀಡುತ್ತಿರುವ ಸವಲತ್ತುಗಳನ್ನು ಸಹಕಾರ ತತ್ವದಡಿಯಲ್ಲಿ ನಡೆಯುತ್ತಿರುವ 'ಸಹಕಾರ ಸಾರಿಗೆ'ಗೆ ನೀಡಬೇಕು ಎಂದು ಮುಖ್ಯಮಂತ್ರಿಯನ್ನು ಕೋರಿರುತ್ತಾರೆ' ಎಂಬುದಾಗಿ ತಿಳಿಸಿದ್ದಾರೆ.

ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಈ ಮನವಿ ಪತ್ರದ ಮೇಲೆ ಆದೇಶಕ್ಕೆ ಸಹಿ ಹಾಕಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, 'ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯವರಿಗೆ ನೀಡುತ್ತಿರುವ ಸವಲತ್ತುಗಳನ್ನು ಸಹಕಾರ ತತ್ವದಡಿಯಲ್ಲಿ ನಡೆಯುತ್ತಿರುವ 'ಸಹಕಾರ ಸಾರಿಗೆ'ಗೆ ತಕ್ಷಣ ಜಾರಿಗೆ ಮಾಡುವಂತೆ ಆದೇಶಿಸುತ್ತೇನೆ' ಎಂದು ಸಾರಿಗೆ ಇಲಾಖೆಗೆ ಸೂಚನೆ ರವಾನಿಸಿದ್ದಾರೆ.

ಆರ್ಥಿಕ ಸಂಕಷ್ಟಕ್ಕೆ ಕಾರಣವೇನು?

ಆರ್ಥಿಕ ಸಂಕಷ್ಟಕ್ಕೆ ಕಾರಣವೇನು?

ಈ ಬಗ್ಗೆ 'ಒನ್ ಇಂಡಿಯಾ' ಜತೆ ಮಾತನಾಡಿದ ಸಹಕಾರ ಸಾರಿಗೆ ಸಂಸ್ಥೆಯ ನಿರ್ದೇಶಕ ಮತ್ತು ಮಾಜಿ ಅಧ್ಯಕ್ಷ ಜಿಆರ್ ವಿಶ್ವನಾಥ್, ಸಂಸ್ಥೆಯು ಸಂಕಷ್ಟದಿಂದ ಹೊರಬರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

''ಮುಖ್ಯವಾಗಿ ಶಾಲಾ ಮಕ್ಕಳೇ ಹೆಚ್ಚಿನ ಪ್ರಯಾಣಿಕರಾಗಿರುತ್ತಾರೆ. ಈಗ ಮಲೆನಾಡಿನಲ್ಲಿ ಎಲ್ಲೆಡೆ ಖಾಸಗಿ ಶಾಲೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಅವರದೇ ಪ್ರತ್ಯೇಕ ಬಸ್ ಹೊಂದಿರುತ್ತಾರೆ. ಜತೆಗೆ ಮನೆ ಮನೆಗೂ ವಾಹನಗಳು ಬಂದಿವೆ. ಹೀಗಾಗಿ ಬಸ್‌ಗಳಲ್ಲಿ ಓಡಾಡುವವರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ, ಡೀಸೆಲ್ ದರ ಹೆಚ್ಚಳ, ತೆರಿಗೆ ಏರಿಕೆ, ವಿಮೆ ಮೊತ್ತದ ಹೆಚ್ಚಳದಂತಹ ನೀತಿಗಳು ಗಾಯದ ಮೇಲೆ ಬರೆ ಎಳೆದಿವೆ'' ಎಂದು ಸಹಕಾರ ಸಾರಿಗೆ ಸಂಸ್ಥೆಯ ಆರ್ಥಿಕ ಸಂಕಷ್ಟಕ್ಕೆ ಕಾರಣಗಳನ್ನು ವಿವರಿಸಿದರು.

ಸರ್ಕಾರದಿಂದ ಸಹಾಯದ ಭರವಸೆ

ಸರ್ಕಾರದಿಂದ ಸಹಾಯದ ಭರವಸೆ

''ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಅವರಿಗೆ ಮನವಿ ಮಾಡಲಾಗಿತ್ತು. ಆದರೆ ಯಾವುದೇ ನೆರವು ಸಿಕ್ಕಿರಲಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೆರವು ಸಿಗಲಿದೆ ಎಂಬ ಭರವಸೆ ಉಂಟಾಗಿತ್ತು. ಅಷ್ಟರಲ್ಲೇ ಸರ್ಕಾರ ಪತನಗೊಂಡಿತ್ತು. ಈಗ ಕೊನೆಗೂ ಸರ್ಕಾರದಿಂದ ಸಹಾಯದ ಭರವಸೆ ಮೂಡಿದೆ. ಶೋಭಾ ಕರಂದ್ಲಾಜೆ ಅವರು ಕೊಪ್ಪಕ್ಕೆ ಬಂದಿದ್ದಾಗ ಅವರನ್ನು ಭೇಟಿ ಮಾಡಿ ಸಂಸ್ಥೆಯ ಸ್ಥಿತಿ ಬಗ್ಗೆ ವಿವರಿಸಿದ್ದೆವು. ಅವರು ಅದಕ್ಕೆ ಸ್ಪಂದಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು'' ಎಂದು ತಿಳಿಸಿದರು.

6.5 ಕೋಟಿ ರೂ. ನೆರವಿನ ನಿರೀಕ್ಷೆ

6.5 ಕೋಟಿ ರೂ. ನೆರವಿನ ನಿರೀಕ್ಷೆ

''ನಾವು ಕೆಲವೇ ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ಮಂಗಳೂರಿನಲ್ಲಿ ಮೀನುಗಾರರ ಬೋಟ್‌ಗಳಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ನೀಡುವಂತೆ ನಮಗೂ ಡೀಸೆಲ್ ನೀಡಿ ಎಂದು ಕೋರಿದ್ದೇವೆ. ಈ ಮನವಿಯನ್ನು ಪರಿಗಣಿಸುವ ನಿರೀಕ್ಷೆಯಿಲ್ಲ. ವಿದ್ಯಾರ್ಥಿಗಳಿಗೆ ಶೇ 50ರಷ್ಟು ರಿಯಾಯಿತಿ ನೀಡುತ್ತಿದ್ದು, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಗೆ ಸರ್ಕಾರದಿಂದ ಪಾಸ್‌ಗೆ ನೆರವು ನೀಡುವಂತೆ ನಮಗೂ ನೆರವು ಒದಗಿಸಿ ಎಂದು ಕೋರಿದ್ದೆವು. ಸುಮಾರು 8.5 ಕೋಟಿ ರೂ.ಗೆ ಮನವಿ ಮಾಡಲಾಗಿದೆ. 6.5 ಕೋಟಿ ರೂ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ'' ಎಂದು ಮಾಹಿತಿ ನೀಡಿದರು.

''ವಿದ್ಯಾರ್ಥಿಗಳ ಪಾಸ್‌ ಮೇಲಿನ ರಿಯಾಯಿತಿ ಮೇಲೆ ಮಾತ್ರ ನೆರವು ಕೋರಿದ್ದೇವೆ. ಹಿರಿಯ ನಾಗರಿಕರು, ಅಂಗವಿಕಲರು ಸೇರಿದಂತೆ ಇತರೆ ಪ್ರಯಾಣಿಕರಿಗೆ ನೀಡುವ ರಿಯಾಯಿತಿಗಳಿಗೆ ಸರ್ಕಾರದಿಂದ ನೆರವು ಕೋರಿಲ್ಲ'' ಎಂದರು.

ಬಸ್ ಸಂಚಾರ ನಿಲ್ಲಿಸುತ್ತಿಲ್ಲ

ಬಸ್ ಸಂಚಾರ ನಿಲ್ಲಿಸುತ್ತಿಲ್ಲ

''76 ಬಸ್‌ಗಳಲ್ಲಿ ಆರು ಬಸ್‌ಗಳ ಸಂಚಾರ ನಿಂತಿರಬಹುದು. ಆರ್ಥಿಕ ಹೊಡೆತದ ನಡುವೆಯೂ ಸೇವೆ ಮುಂದುವರಿಸುವ ಪ್ರಯತ್ನವನ್ನು ನಡೆಸುತ್ತಿದ್ದೇವೆ. ಕೆಲವು ಹಳ್ಳಿಗಳಿಗೆ ಬಸ್‌ಗಳ ಹೊಂದಾಣಿಕೆ ಮಾಡಿಕೊಂಡು ಸೇವೆ ನೀಡುತ್ತಿದ್ದೇವೆ. ಮಳೆಗಾಲದಲ್ಲಿ ಸಮಸ್ಯೆ ತೀವ್ರವಾಗಿದೆ. ಮಳೆಯಿಂದಾಗಿ ಎಂಟು ದಿನ ಸೇವೆಗೆ ಹಿನ್ನಡೆಯಾಗಿ ಸುಮಾರು 45-50 ಲಕ್ಷ ರೂ. ಆದಾಯಕ್ಕೆ ಹೊಡೆತ ಬಿದ್ದಿತ್ತು'' ಎಂದು ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+