ಹೊಸ ಜಿಲ್ಲೆ ರಚನೆಗೆ ಯಡಿಯೂರಪ್ಪ ಆಸಕ್ತಿ, ಅಧಿಕೃತ ಆದೇಶ ಬಾಕಿ
Recommended Video
ಬೆಂಗಳೂರು, ಸೆಪ್ಟೆಂಬರ್ 19: ವಿಜಯನಗರ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಬಹು ಕಾಲದ ಬೇಡಿಕೆಗೆ ಯಡಿಯೂರಪ್ಪ ಅವರು ಸಕಾರತ್ಮಕವಾಗಿ ಸ್ಪಂದಿಸಿದ್ದು, ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸುವುದಾಗಿ ಹೇಳಿದ್ದಾರೆ.
ಅನರ್ಹ ಶಾಸಕ ಆನಂದ್ ಸಿಂಗ್ ಅವರು ಎರಡು ದಿನಗಳ ಹಿಂದಷ್ಟೆ ಹೊಸಪೇಟೆಯನ್ನು ಕೇಂದ್ರವನ್ನಾಗಿ ಮಾಡಿ, ವಿಜಯನಗರ ಜಿಲ್ಲೆ ಘೋಷಣೆ ಮಾಡಬೇಕೆಂದು ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಆನಂದ್ ಸಿಂಗ್ ಮನವಿಗೆ ಸ್ಪಂದಿಸಿರುವ ಯಡಿಯೂರಪ್ಪ ಅವರು ವಿಜಯನಗರ ಜಿಲ್ಲೆ ರಚನೆಯ ಅವಶ್ಯಕತೆ ಇರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಯಡಿಯೂರಪ್ಪ, 'ಈಗಿರುವ ಬಳ್ಳಾರಿ ಜಿಲ್ಲೆ ದೊಡ್ಡದಾಗಿದ್ದು, 11 ತಾಲ್ಲೂಕುಗಳು ಮತ್ತು ಮೂರು ಕಂದಾಯ ಉಪವಿಭಾಗಗಳನ್ನು ಹೊಂದಿದೆ. ಕೆಲವು ಗ್ರಾಮಗಳು ಜಿಲ್ಲಾ ಕೇಂದ್ರದಿಂದ 200 ಕಿ.ಮೀ ದೂರವನ್ನು ಹೊಂದಿವೆ, ಬಡವರಿಗೆ, ರೈತರಿಗೆ ಜಿಲ್ಲಾ ಕೇಂದ್ರಕ್ಕೆ ಬರಲು ಅತ್ಯಂತ ಕಷ್ಟಕರವಾಗಿದೆ' ಎಂದು ಮಾಹಿತಿ ನೀಡಿದ್ದಾರೆ.

ಹೊಸ ಜಿಲ್ಲೆಗೆ 6 ತಾಲ್ಲೂಕುಗಳು ಸೇರ್ಪಡೆ
ಸಾರ್ವಜನಿಕರ ಹಿತದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯ 11 ತಾಲ್ಲೂಕುಗಳಲ್ಲಿ ಬಳ್ಳಾರಿ, ಕುರಗೋಡು, ಸಿರಗುಪ್ಪ, ಕೂಡ್ಲಗಿ, ಸಂಡೂರು ಐದು ತಾಲ್ಲೂಕುಗಳನ್ನು ಮೂಲ ಬಳ್ಳಾರಿ ಜಿಲ್ಲೆಯಲ್ಲಿಯೇ ಉಳಿಸಿಕೊಂಡು, ಉಳಿದ ಆರು ತಾಲ್ಲೂಕುಗಳಾದ ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ, ಹರಪನಹಳ್ಳಿ ತಾಲ್ಲೂಕುಗಳನ್ನು ಒಟ್ಟು ಮಾಡಿ ಹೊಸಪೇಟೆಯನ್ನು ಜಿಲ್ಲಾಕೇಂದ್ರವನ್ನಾಗಿ ಮಾಡಿಕೊಂಡು ವಿಜಯನಗರ ಜಿಲ್ಲೆ ಸ್ಥಾಪನೆಯ ಅವಶ್ಯಕತೆ ಇದೆ ಎಂದು ಯಡಿಯೂರಪ್ಪ ಪತ್ರದಲ್ಲಿ ಹೇಳಿದ್ದಾರೆ.

ಸಂಪುಟ ಸಭೆಯಲ್ಲಿ ತೀರ್ಮಾನ
ವಿಜಯನಗರ ಹೊಸ ಜಿಲ್ಲೆ ಸ್ಥಾಪನೆಯ ವಿಷಯವನ್ನು ಮುಂದಿನ ಸಂಪುಟ ಸಭೆಯಲ್ಲಿ ಇಡಿರೆಂದು ರಾಜ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ ಯಡಿಯೂರಪ್ಪ.

ಜಿಲ್ಲೆ ಘೋಷಣೆ ಬಹುಕಾಲದ ಬೇಡಿಕೆ ಆಗಿತ್ತು
ವಿಜಯನಗರ ಜಿಲ್ಲೆ ಘೋಷಣೆ ಆಗಬೇಕೆಂಬುದು ಹಲವು ಕಾಲದ ಬೇಡಿಕೆ ಆಗಿತ್ತು. ಅನರ್ಹಗೊಂಡಿರುವ ಶಾಸಕ ಆನಂದ್ ಸಿಂಗ್ ಇದೇ ಕಾರಣವನ್ನು ಮುಂದಿಟ್ಟುಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಇತ್ತೀಚೆಗೆ ಕೆಲವು ಮಠಾಧೀಶರನ್ನು ಭೇಟಿಯಾಗಿ ಜಿಲ್ಲೆಗಾಗಿ ಹೋರಾಟ ಆರಂಭಿಸಿ, ಯಡಿಯೂರಪ್ಪ ಅವರಿಗೆ ಮನವಿಯನ್ನೂ ಸಲ್ಲಿಸಿದ್ದರು. ಮನವಿ ಸಲ್ಲಿಸಿದ ಕೂಡಲೇ ಯಡಿಯೂರಪ್ಪ ಅವರು ಮನವಿಗೆ ಸ್ಪಂದಿಸಿದ್ದಾರೆ.

ಹೊಸಪೇಟೆ ಜಿಲ್ಲಾ ಕೇಂದ್ರ ಮಾಡಲು ವಿರೋಧ
ಆದರೆ ಹೊಸಪೇಟೆಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಕೆಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಹೊಸಪೇಟೆಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವುದರಿಂದ ಗಡಿ ಭಾಗದಲ್ಲಿರುವ ಹಲವು ಗ್ರಾಮಗಳ ಜನರಿಗೆ ಜಿಲ್ಲಾ ಕೇಂದ್ರ ದೂರವಾಗುತ್ತದೆ ಎಂದು ಈಗಾಗಲೇ ಕೂಗು ಎದ್ದಿದೆ.











Click it and Unblock the Notifications