ನೂತನ ಸಚಿವರ ಖಾತೆ ಮತ್ತೆ ಬದಲಾವಣೆ ಮಾಡಿದ ಯಡಿಯೂರಪ್ಪ!
ಬೆಂಗಳೂರು, ಫೆಬ್ರವರಿ 11 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೆಲವು ಸಚಿವ ಖಾತೆಯಲ್ಲಿ ಬದಲಾವಣೆ ಮಾಡಿದ್ದಾರೆ. ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಂಡ 10 ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗಿತ್ತು.
ಖಾತೆ ಹಂಚಿಕೆ ಬಗ್ಗೆ ಕೆಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದರು. ಯಡಿಯೂರಪ್ಪರನ್ನು 'ಧವಳಗಿರಿ' ನಿವಾಸದಲ್ಲಿ ಸೋಮವಾರ ರಾತ್ರಿ ಸಚಿವರುಗಳು ಭೇಟಿಯಾಗಿದ್ದರು. ಮಂಗಳವಾರ ಬೆಳಗ್ಗೆ ಖಾತೆಯಲ್ಲಿ ಬದಲಾವಣೆಯಾಗಿದೆ.
ಹಲವು ಸಚಿವರ ಖಾತೆಗಳನ್ನು ಬದಲಾವಣೆ ಮಾಡಲಾಗಿದ್ದು, ಹೊಸ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದೆ. ರಾಜ್ಯಪಾಲರ ಅಂಕಿತ ಬಿದ್ದ ಬಳಿಕ ಪಟ್ಟಿ ಬಿಡುಗಡೆಯಾಗಲಿದೆ. ಖಾತೆ ಬದಲಾವಣೆ ಕುತೂಹಲಕ್ಕೆ ಕಾರಣವಾಗಿದೆ.
ಬಿ. ಸಿ. ಪಾಟೀಲ್, ಕೆ. ಗೋಪಾಲಯ್ಯ, ಶಿವರಾಂ ಹೆಬ್ಬಾರ್, ಆನಂದ್ ಸಿಂಗ್, ಸಿ. ಸಿ. ಪಾಟೀಲ್ ಖಾತೆಗಳು ಬದಲಾವಣೆಯಾಗಿವೆ. ಖಾತೆ ಹಂಚಿಕೆ ಗೊಂದಲಕ್ಕೆ ತೆರೆ ಬಿದ್ದು, ಸರ್ಕಾರ ಆಡಳಿತದ ಕಡೆ ಗಮನ ಹರಿಸಲಿದೆಯೇ? ಎಂದು ಕಾದು ನೋಡಬೇಕು.

ಖಾತೆಗಳ ಮರು ಹಂಚಿಕೆ
ಇಂದು ಯಡಿಯೂರಪ್ಪ ರಾಜಭವನಕ್ಕೆ ಸಲ್ಲಿಕೆ ಮಾಡಿರುವ ಪಟ್ಟಿಯಲ್ಲಿ ಹಲವು ಸಚಿವರ ಖಾತೆ ಬದಲಾಗಿದೆ.
* ಬಿ. ಸಿ. ಪಾಟೀಲ್ - ಕೃಷಿ
* ಕೆ. ಗೋಪಾಲಯ್ಯ - ಆಹಾರ ಮತ್ತು ನಾಗರಿಕ ಸರಬರಾಜು
* ಶಿವರಾಂ ಹೆಬ್ಬಾರ್ - ಕಾರ್ಮಿಕ ಜೊತೆಗೆ ಸಕ್ಕರೆ
* ಆನಂದ್ ಸಿಂಗ್ - ಅರಣ್ಯ ಹಾಗೂ ಜೈವಿಕ ಪರಿಸರ
* ಸಿ. ಸಿ. ಪಾಟೀಲ್ - ಗಣಿ ಮತ್ತು ಭೂ ವಿಜ್ಞಾನ ಜೊತೆಗೆ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ

ಸೋಮವಾರ ನೀಡಿದ್ದ ಖಾತೆಗಳು
ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವಾಗ ಬಿ. ಸಿ. ಪಾಟೀಲ್ಗೆ ಅರಣ್ಯ, ಶಿವರಾಂ ಹೆಬ್ಬಾರ್ಗೆ ಕಾರ್ಮಿಕ, ಕೆ. ಗೋಪಾಲಯ್ಯಗೆ ಸಣ್ಣ ಕೈಗಾರಿಕೆ, ಆನಂದ್ ಸಿಂಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಗಳನ್ನು ನೀಡಲಾಗಿತ್ತು.

ಅಸಮಾಧಾನ ಬಗೆಹರಿಸಬೇಕು
ಖಾತೆ ಹಂಚಿಕೆಯಲ್ಲಿ ಆಗಿರುವ ಅಸಮಧಾನವನ್ನು ಮೊಳಕೆಯಲ್ಲಿ ಚಿವುಟಿ ಹಾಕಬೇಕು ಎಂದು ಬಿ. ಎಸ್. ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಆದ್ದರಿಂದ, ತಕ್ಷಣವೇ ಎಲ್ಲಾ ಸಚಿವರ ಖಾತೆಯನ್ನು ಬದಲಾವಣೆ ಮಾಡಿದ್ದಾರೆ. ಖಾತೆಗಳ ಬದಲಾವಣೆಗೆ ರಾಜ್ಯಪಾಲರ ಒಪ್ಪಿಗೆ ಬಾಕಿ ಇದೆ.

ಜಿಲ್ಲಾ ಉಸ್ತುವಾರಿ ಹಂಚಿಕೆ
ಸಚಿವರ ಖಾತೆಯನ್ನು ಬದಲಾವಣೆ ಮಾಡಿದರೆ ಸಾಲದು ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಸಹ ಆಗಬೇಕಿದೆ. ಹೊಸ ಸಚಿವರಿಗೆ ಯಾವ ಜಿಲ್ಲೆಯ ಉಸ್ತುವಾರಿ ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications