ಬಿಎಸ್ವೈ ಸಂಪುಟದಲ್ಲಿ ಖಾತೆ ಬದಲಾವಣೆ; ಕಾರಣ ಬಿಚ್ಚಿಟ್ಟ ಡಿಕೆಶಿ!
ಬೆಂಗಳೂರು, ಅಕ್ಟೋಬರ್ 12: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಖಾತೆಗಳ ಬದಲಾವಣೆಯಾಗಿದೆ. ಬಿ. ಶ್ರೀರಾಮುಲು ಅವರ ಬಳಿ ಇದ್ದ ಆರೋಗ್ಯ ಖಾತೆ ಡಾ. ಕೆ. ಸುಧಾಕರ್ ಅವರ ಪಾಲಾಗಿದೆ.
ಸೋಮವಾರ ಯಡಿಯೂರಪ್ಪ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ. ಡಾ. ಕೆ. ಸುಧಾಕರ್ ಅವರಿಗೆ ಆರೋಗ್ಯ ಖಾತೆ ನೀಡಿದ್ದರೆ. ಬಿ. ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಖಾತೆ ಕೊಡಲಾಗಿದೆ. ರಾಜ್ಯಪಾಲರು ಖಾತೆ ಬದಲಾವಣೆ ಸಹಿಯನ್ನು ಸಹ ಹಾಕಿದ್ದಾರೆ.
ಸಮಾಜ ಕಲ್ಯಾಣ ಖಾತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬಳಿ ಇತ್ತು. ಲೋಕೋಪಯೋಗಿ ಖಾತೆ ಅವರ ಬಳಿಯೇ ಇದ್ದು, ಹಿಂದುಳಿದ ವರ್ಗಗಳ ಖಾತೆ ಮುಖ್ಯಮಂತ್ರಿಗಳ ಕೈ ಸೇರಿದೆ.

ಯಡಿಯೂರಪ್ಪ ಸಂಪುಟದಲ್ಲಿ ಖಾತೆಗಳ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಖಾತೆಗಳನ್ನು ಬದಲಾವಣೆ ಮಾಡಿದ್ದು ಏಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
"ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ವಿಫವಾಗಿದೆ. ಅದಕ್ಕಾಗಿಯೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ" ಎಂದು ಡಿ. ಕೆ. ಶಿವಕುಮಾರ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
"ಸರ್ಕಾರ ಪ್ರಾಣ ಹಾನಿ ತಡೆಯಲಿ ವಿಫಲವಾಗಿದೆ ಎಂಬ ನಮ್ಮ ಮಾತನ್ನು ಒಪ್ಪಿಕೊಂಡು ಆರೋಗ್ಯ ಸಚಿವರನ್ನು ಬದಲಾವಣೆ ಮಾಡಲಾಗಿದೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಕೋವಿಡ್ ಪರಿಸ್ಥಿತಿ ಸಮಯದಲ್ಲಿಯೇ ಆರೋಗ್ಯ ಸಚಿವರನ್ನು ಬದಲಾವಣೆ ಮಾಡಿರುವ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಬಿ. ಶ್ರೀರಾಮುಲು ಅವರು ಸಹ ಖಾತೆ ಬದಲಾವಣೆ ಮಾಡಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ ಎಂಬ ಮಾಹಿತಿಯೂ ಇದೆ.
ಕೋವಿಡ್ ಸಂದರ್ಭದಲ್ಲಿ ತಮ್ಮನ್ನು ಬದಲಾವಣೆ ಮಾಡಿದ್ದರಿಂದ ತಾವು ಅಸಮರ್ಥ ಎಂಬ ಸಂದೇಶ ರವಾನೆಯಾಗಲಿದೆ ಎಂಬುದು ಶ್ರೀರಾಮುಲು ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಗೋವಿಂದ ಕಾರಜೋಳ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, "ಸಮಾಜ ಕಲ್ಯಾಣ ಖಾತೆ ನನ್ನ ಬಳಿ ಹೆಚ್ಚುವರಿಯಾಗಿತ್ತು. ಅದನ್ನು ಶ್ರೀರಾಮುಲು ಅವರಿಗೆ ನೀಡಲಾಗಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಒಬ್ಬರಿಗೆ ನೀಡಿರುವ ಕ್ರಮ ಸರಿಯಾಗಿದೆ" ಎಂದು ಹೇಳಿದ್ದಾರೆ.
ಖಾತೆ ಬದಲಾವಣೆ ಮಾಡುವಾಗ ಹಿಂದುಳಿದ ವರ್ಗಗಳ ಖಾತೆಯನ್ನು ಶ್ರೀರಾಮುಲು ಅವರಿಗೆ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಅದನ್ನು ಮುಖ್ಯಮಂತ್ರಿಗಳೇ ಇಟ್ಟುಕೊಂಡು ಸಮಾಜ ಕಲ್ಯಾಣ ಖಾತೆಯನ್ನು ಮಾತ್ರ ಶ್ರೀರಾಮುಲು ಅವರಿಗೆ ನೀಡಲಾಗಿದೆ.












Click it and Unblock the Notifications