ಬಿಎಸ್ವೈ ಆಡಿಯೋ ಲೀಕ್ ಮಾಡಿದವರ 'ಸ್ಪೋಟಕ' ಹೆಸರು ಬಹಿರಂಗ
Recommended Video
ಬೆಳಗಾವಿ, ನ 4: ಮುಖ್ಯಮಂತ್ರಿ ಯಡಿಯೂರಪ್ಪ ಹುಬ್ಬಳ್ಳಿಯ ಪಕ್ಷದ ಸಭೆಯಲ್ಲಿ ಆಡಿದ ಮಾತು, ಆಡಿಯೋ ರೂಪದಲ್ಲಿ ಲೀಕ್ ಆಗಿ, ದಿನಕ್ಕೊಂದು ಹೊಸಹೊಸ ತಿರುವನ್ನು ಪಡೆಯುತ್ತಿದೆ.
ಸರ್ವೋಚ್ಚ ನ್ಯಾಯಾಲಯ ಈ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಲು ಒಪ್ಪಿಕೊಂಡಿರುವುದರಿಂದ, ಅನರ್ಹ ಶಾಸಕರ ಅರ್ಜಿ ವಿಲೇವಾರಿ ಆಗುವುದು ಇನ್ನಷ್ಟು ತಡವಾಗುವ ಸಾಧ್ಯತೆಯಿದೆ.
ಈ ನಡುವೆ, ನಗರದಲ್ಲಿ ಮಾತನಾಡುತ್ತಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಆಡಿಯೋ ಬಹಿರಂಗದ ಹಿಂದೆ, ಬಿಜೆಪಿಯವರ ಕೈವಾಡವಿದೆ ಎನ್ನುವ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
"ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಹೇಳಿದ ಮಾತುಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದಕ್ಕೆ ಬಿಜೆಪಿ ಒಳಗಿನವರೇ ಕಾರಣ" ಎಂದು ಸಿದ್ದರಾಮಯ್ಯ ಈಗಾಗಲೇ ಆರೋಪಿಸಿದ್ದಾರೆ. ದಿನೇಶ್, ಬಹಿರಂಗ ಪಡಿಸಿದ ಹೆಸರು ಯಾರು?

ಅಮಿತ್ ಶಾ ಅವರೇ ನೇರ ಇದಕ್ಕೆ ಜವಾಬ್ದಾರಿ
"ಭಾರತೀಯ ಜನತಾ ಪಕ್ಷ, ಒಂದು ಸರಕಾರವನ್ನು ಉರುಳಿಸಲು ಸಂವಿಧಾನ ಬಾಹಿರವಾದ ಕೆಲಸವನ್ನು ಮಾಡಿದೆ. ಅಮಿತ್ ಶಾ ಅವರೇ ನೇರ ಇದಕ್ಕೆ ಜವಾಬ್ದಾರಿ ಎನ್ನುವ ಮಾತನ್ನು ಯಡಿಯೂರಪ್ಪನವರೇ ಹೇಳಿದ್ದಾರೆ. ಇದಕ್ಕೆ ಪ್ರೂಫ್ ಅನ್ನು ಬಿಜೆಪಿಯವರೇ ಕೊಟ್ಟಿದ್ದಾರೆ" ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಯಡಿಯೂರಪ್ಪನವರಿಗೆ ಆಗದ ಬಿಜೆಪಿಯೊಳಗಿನ ಆಂತರಿಕ ಟೀಂ
"ಯಡಿಯೂರಪ್ಪನವರಿಗೆ ಆಗದ ಬಿಜೆಪಿಯೊಳಗಿನ ಆಂತರಿಕ ಟೀಂನ ಸದಸ್ಯರು ವ್ಯವಸ್ಥಿತವಾಗಿ ಈ ಆಡಿಯೋವನ್ನು ಲೀಕ್ ಮಾಡಿದ್ದಾರೆ. ಅನರ್ಹ ಶಾಸಕರಿಗೆ ಟಿಕೆಟ್ ಕೊಡಬಾರದೆನ್ನುವ ಕೂಗು ಬಿಜೆಪಿಯೊಳಗೆ ಜಾಸ್ತಿಯಾಗುತ್ತಿದೆ" ಎಂದು ದಿನೇಶ್ ಹೇಳಿದರು.

ಆಡಿಯೋ ಲೀಕ್ ಮಾಡಿದ್ದು ನಳಿನ್ ಕುಮಾರ್ ಕಟೀಲ್
"ಯಡಿಯೂರಪ್ಪನವರ ವಿರುದ್ದ ದೊಡ್ಡ ಲಾಬಿ ನಡೆಯುತ್ತಿದೆ. ನನ್ನ ಅನಿಸಿಕೆಯ ಪ್ರಕಾರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಅವರ ತಂಡ, ಈ ಆಡಿಯೋವನ್ನು ಲೀಕ್ ಮಾಡಿದೆ" ಎನ್ನುವ ಸ್ಪೋಟಕ ಹೇಳಿಕೆಯನ್ನು ದಿನೇಶ್ ಗುಂಡೂರಾವ್ ನೀಡಿದ್ದಾರೆ.

ದಿನೇಶ್ ಗುಂಡೂರಾವ್ ಸ್ಪೋಟಕ ಹೇಳಿಕೆ
"ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಪಕ್ಷದ ಸಭೆ ಉನ್ನತ ಮಟ್ಟದಾಗಿತ್ತು, ಅದು ಕಾರ್ಯಕರ್ತರ ಸಭೆಯಾಗಿರಲಿಲ್ಲ. ಅವರು (ಕಟೀಲ್) ಬಿಟ್ಟರೆ, ಇನ್ಯಾರು ಇದನ್ನು ಲೀಕ್ ಮಾಡಲು ಸಾಧ್ಯ. ಹಾಗಾಗಿ, ಇದರಲ್ಲಿ ಅನುಮಾನವೇ ಬೇಡ" ಎನ್ನುವ ಮಾತನ್ನು ದಿನೇಶ್ ಆಡಿದ್ದಾರೆ.

ಸಿದ್ದರಾಮಯ್ಯ ಟ್ವೀಟ್
ಆಡಿಯೋ ಬಹಿರಂಗಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ, "ಬಿಜೆಪಿ ಒಳಗೆ ಯಡಿಯೂರಪ್ಪ ಅವರಿಗೆ ಬಹಳ ವೈರಿಗಳಿದ್ದಾರೆ. ಅವರಲ್ಲಿಯೇ ಒಬ್ಬರು ಅವರ ಮಾತುಗಳನ್ನು ಧ್ವನಿ ಮುದ್ರಿಸಿ ಬಹಿರಂಗಪಡಿಸಿದ್ದಾರೆ" ಎನ್ನುವ ಹೇಳಿಕೆಯನ್ನು ನೀಡಿದ್ದರು.












Click it and Unblock the Notifications