ನನ್ನ ಬಿಟ್ರೆ ಇನ್ನಾರಿದ್ದಾರೆ? ಹೈಕಮಾಂಡಿಗೆ ಯಡಿಯೂರಪ್ಪ ಸ್ಪಷ್ಟ ಸಂದೇಶ
Recommended Video
ಬೆಂಗಳೂರು, ನವೆಂಬರ್ 07 : ಶಿವಮೊಗ್ಗ ಕ್ಷೇತ್ರದಲ್ಲಿ ಮಗನನ್ನು ಗೆಲ್ಲಿಸುವುದಕ್ಕಾಗಿಯೇ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು, ಉಳಿದ ನಾಲ್ಕು ಕ್ಷೇತ್ರಗಳಾದ ಮಂಡ್ಯ, ಬಳ್ಳಾರಿ, ಜಮಖಂಡಿ ಮತ್ತು ರಾಮನಗರಗಳಿಗೆ ತಿಲಾಂಜಲಿ ಇಟ್ಟರಾ?
ಇದು ಸದ್ಯಕ್ಕೆ ಚರ್ಚಿತವಾಗುತ್ತಿರುವ ಸಂಗತಿ. ಯಡಿಯೂರಪ್ಪನವರಿಗೆ ಶಿವಮೊಗ್ಗದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಾಗಿದ್ದರೆ, ಉಳಿದ ಕ್ಷೇತ್ರಗಳಲ್ಲಿ ಕೂಡ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಏಕೆ ಸಾಧ್ಯವಾಗಲಿಲ್ಲ ಅಥವಾ ಏಕೆ ಪ್ರಯತ್ನಿಸಲಿಲ್ಲ ಎಂಬುದು ಕಾಡುತ್ತಿರುವ ಮತ್ತೊಂದು ಪ್ರಶ್ನೆ.
ಸದ್ಯಕ್ಕಂತೂ ಮೈತ್ರಿ ಸರಕಾರದ ತಳಪಾಯ ಗಟ್ಟಿಯಾಗಿದೆ. ಲೋಕಸಭೆ ಚುನಾವಣೆ ಇನ್ನೇನು ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ಮೇಲಿನೆರಡು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ ಮತ್ತು ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನೂ ಬಿಜೆಪಿ ಹೈಕಮಾಂಡ್ ಮಾಡಲಿಕ್ಕಿಲ್ಲ.
ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ನಂತರ ಯಾರು?
ಆದರೆ, ಎಪ್ಪತ್ತೈದು ವರ್ಷದ ಸಫಾರಿಧಾರಿ, ಕುಂಕುಮಧಾರಿ, ಲಿಂಗಾಯತ ಸಮುದಾಯದ ಸರ್ವಸಮ್ಮತ ನಾಯಕ ಯಡಿಯೂರಪ್ಪನವರು, ಈ ಉಪ ಚುನಾವಣೆಯ ಮುಖಾಂತರವಾದರೂ ತಾವೆಂಥ ನಾಯಕ, ತಮ್ಮ ಸಾಮರ್ಥ್ಯವೇನು ಎಂಬುದನ್ನು ಬಿಜೆಪಿ ಹೈಕಮಾಂಡಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಸಾಕು ಪಕ್ಕಕ್ಕೆ ಸರೀರಿ ಅಂತ ಹೇಳುವ ತಾಕತ್ತಿದೆಯೆ?
ಭಾರತೀಯ ಜನತಾ ಪಕ್ಷದಲ್ಲಿ ಒಂದು ರೂಲ್ ಇದೆ. ಅದೇನೆಂದರೆ, ವಯಸ್ಸು 75 ದಾಟುತ್ತಿದ್ದಂತೆ ಅವರು ಮಹತ್ವ ಕಳೆದುಕೊಳ್ಳಲು ಆರಂಭಿಸುತ್ತಾರೆ, ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸುವುದಿಲ್ಲ ಇತ್ಯಾದಿ ಇತ್ಯಾದಿ. ಯಡಿಯೂರಪ್ಪನವರೂ ಇದೇ ಕೆಟಗರಿಯಲ್ಲಿ ಬರುತ್ತಿದ್ದರೂ ಅವರನ್ನು ಪಕ್ಕಕ್ಕೆ ಸರಿ ಎಂದು ಹೇಳುವಂಥ ಧೈರ್ಯವಾಗಲಿ ಬಿಜೆಪಿಯ ಹಿರಿಯ ನಾಯಕರಿಗೆ ಇಲ್ಲವೇ ಇಲ್ಲ. ಆ ಮಟ್ಟದ ವರ್ಚಸ್ಸನ್ನು, ಸಾಮರ್ಥ್ಯವನ್ನು, ತಾವಿಲ್ಲದಿದ್ದರೆ ಪಕ್ಷಕ್ಕೆ ಉಳಿವೇ ಇಲ್ಲ ಎಂಬ ಭಾವವನ್ನು ಅವರು ಇನ್ನೂ ಉಳಿಸಿಕೊಂಡಿದ್ದಾರೆ. ಅವರು ಭಾರೀ ವಾಕ್ಪಟುತ್ವವಿರುವ ನಾಯಕರಲ್ಲದಿರಬಹುದು, ಆದರೆ ಅವರ ಮಾತನ್ನು ಕೇಳದಿರಲು ಸಾಧ್ಯವೇ ಇಲ್ಲ ಎಂಬಂತಹ ವಾತಾವರಣ ಬಿಜೆಪಿಯಲ್ಲಿದೆ.
ಬಿಜೆಪಿ ವರಿಷ್ಠರ ಕನಸನ್ನು ಮಕಾಡೆ ಮಲಗಿಸಿದ ಚುನಾವಣೆ ಫಲಿತಾಂಶ
ಅದು ಯಡಿಯೂರಪ್ಪನವರ ತಾಕತ್ತು
ಯಡಿಯೂರಪ್ಪನವರಲ್ಲಿ ಇರುವುದು ಅತಿಯಾದ ಪುತ್ರ ಪ್ರೇಮವೇ ಇರಬಹುದು. ಆದರೆ, ಅವರ ಉತ್ಸಾಹ ಇಪ್ಪತ್ತೈದರ ಯುವಕರನ್ನೂ ನಾಚಿಸುವಂತಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ 23 ಸ್ಥಾನಗಳನ್ನು ಗೆದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ ಅರ್ಪಿಸುತ್ತೇನೆ ಎಂದು ಶಿವಮೊಗ್ಗ ಚುನಾವಣೆಯಲ್ಲಿ ಅವರ ಮಗ ಬಿವೈ ರಾಘವೇಂದ್ರ ಅವರು ಜಯಭೇರಿ ಬಾರಿಸಿದ ನಂತರ ಅಬ್ಬರಿಸಿದ್ದಾರೆ. ಕೆಲವೇ ದಿನಗಳಲ್ಲಿ ಇಡೀ ರಾಜ್ಯದುದ್ದಕ್ಕೂ ಸುತ್ತುತ್ತೇನೆ (ತನ್ನ ಜೊತೆ ಯಾರಾದರೂ ಬರಲಿ ಬಿಡಲಿ) ಎಂದು ಸಾರಿದ್ದಾರೆ. ಈ ಛಲದಿಂದಾಗಿಯೇ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 104 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿದ್ದು. ಇಂಥ ತಾಕತ್ತು ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್ ನಾಯಕರಲ್ಲೂ ಇಲ್ಲ. ಒಬ್ಬರಾದರೂ ಯಡಿಯೂರಪ್ಪನವರಂತೆ ಅಬ್ಬರಿಸಿ ಬೊಬ್ಬಿರಿಯಲಿ ನೋಡೋಣ.
5 ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣಗಳು
ರೆಡ್ಡಿ ಬ್ರದರ್ಸ್ ಸೋಲಲೆಂದೇ ಸುಮ್ಮನಿದ್ದರೆ?
ಯಡಿಯೂರಪ್ಪನವರು ಮನಸ್ಸು ಮಾಡಿದ್ದರೆ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಮತ್ತು ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಅನುಕ್ರಮವಾಗಿ ಚಂದ್ರಶೇಖರ ಮತ್ತು ಜೆ ಶಾಂತಾ ಅವರನ್ನು ಗೆಲ್ಲಿಸಿಕೊಡುವ ತಾಕತ್ತಿತ್ತು. ರಾಮನಗರದಲ್ಲಿ ಚಂದ್ರಶೇಖರ್ ಅವರನ್ನು ಸಿಪಿ ಯೋಗೇಶ್ವರ ಅವರ ಶಿಫಾರಸಿನ ಮೇರೆಗೆ ಆಯ್ಕೆ ಮಾಡಿದ್ದು ಯಡಿಯೂರಪ್ಪ ಅವರೇ. ಆದರೆ, ಅಲ್ಲಿ ಯಡಿಯೂರಪ್ಪ ಕಾಲಿಡಲೂ ಇಲ್ಲ, ಇತರ ನಾಯಕರು ಪ್ರಖರವಾಗಿ ಪ್ರಚಾರ ಮಾಡುವಂತೆ ಕ್ರಮ ತೆಗೆದುಕೊಳ್ಳಲೂ ಇಲ್ಲ. ಬಳ್ಳಾರಿಯಲ್ಲೂ ಅಷ್ಟೇ, ಶ್ರೀರಾಮುಲು ಅವರು ಏಕಾಂಗಿಯಾಗಿ ಪ್ರಚಾರ ಕೈಗೊಂಡರು. ಯಡಿಯೂರಪ್ಪ ಬಳ್ಳಾರಿ ಉದ್ದಗಲಕ್ಕೂ ಪ್ರಚಾರ ಮಾಡಿದ್ದರೆ, ಅಲ್ಲಿನ ಲಿಂಗಾಯತ ಮತಗಳನ್ನು ಸೆಳೆಯುವುದು ಅವರಿಗೆ ಕಷ್ಟವೇನಿರಲಿಲ್ಲ. ಆದರೆ, ರೆಡ್ಡಿ ಬ್ರದರ್ಸ್ ಸೋಲಲೆಂದೇ ಶಸ್ತ್ರಾಸ್ತ್ರವನ್ನು ತ್ಯಾಗ ಮಾಡಿದರೆ ಯಡಿಯೂರಪ್ಪ?
ಬಳ್ಳಾರಿ ಸೋಲು: ಶ್ರೀರಾಮುಲು ರಾಜಕೀಯ ಭವಿಷ್ಯ ಏನು?
ಹೈಕಮಾಂಡಿಗೆ ಸ್ಪಷ್ಟ ಸಂದೇಶ ರವಾನೆ
ಒಂದು ಸ್ಪಷ್ಟ ಸಂದೇಶವಂತೂ ಭಾರತೀಯ ಜನತಾ ಪಕ್ಷಕ್ಕೆ ರವಾನೆಯಾಗಿದೆ. ಅದೇನೆಂದರೆ, ತನ್ನನ್ನೇನಾದರೂ ಕಡೆಗಣಿಸಿದರೆ, ತನ್ನನ್ನು ಪಕ್ಕಕ್ಕೆ ಸರಿಸಿದರೆ, ತನ್ನ ಜಾಗಕ್ಕೆ ಮತ್ತೊಬ್ಬರನ್ನು ತಂದು ಕೂರಿಸಲು ಯತ್ನಿಸಿದರೆ ಪಕ್ಷಕ್ಕೆ ಕರ್ನಾಟಕದಲ್ಲಿ ಉಳಿಗಾಲವಿಲ್ಲ ಎಂಬುದು. ಲೋಕಸಭೆ ಚುನಾವಣೆ ಇನ್ನೇನು ಹತ್ತಿರದಲ್ಲಿಯೇ ಇದೆ. ಯಡಿಯೂರಪ್ಪನವರ ಮುಂದಾಳತ್ವವಿಲ್ಲದೆ ಕರ್ನಾಟಕದಲ್ಲಿ ಹತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದನ್ನು ಊಹಿಸುವುದೂ ಸಾಧ್ಯವಿಲ್ಲ. ಈ ಕಾರಣದಿಂದಾಗಿಯೇ, ಬಿಜೆಪಿ ಕೈಕಮಾಂಡ್ ಕೂಡ ಬಾಯಿಮುಚ್ಚಿಕೊಂಡಿದೆ. ಈ ಕಾರಣದಿಂದಲಾದರೂ ಲೋಕಸಭೆ ಚುನಾವಣೆ ಮುಗಿಯುವುದರೊಳಗಾಗಿಯೇ ತನ್ನನ್ನು ಮುಖ್ಯಮಂತ್ರಿ ಪಟ್ಟದ ಮೇಲೆ ಕುಳ್ಳಿರಿಸಬೇಕೆಂದು ಹೈಕಮಾಂಡ್ ಮೇಲೆ ಯಡಿಯೂರಪ್ಪ ಮತ್ತೆ ಒತ್ತಡ ತಂದರೂ ಅಚ್ಚರಿಯಿಲ್ಲ.
ಉಪ ಚುನಾವಣೆ ಫಲಿತಾಂಶ : ದೆಹಲಿ ಬಿಜೆಪಿ ಚಾಣಕ್ಯರ ಅಹಂಕಾರಕ್ಕೆ ಕೊಡಲಿ ಏಟು
ಯಾವ ನಾಯಕನಿಗಿದೆ ಗೆಲ್ಲಿಸುವ ಸಾಮರ್ಥ್ಯ?
ಬಿಜೆಪಿಯನ್ನು ಈ ಉಪ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಕೆಲ ನಾಯಕರಿಗೆ ಉಸ್ತುವಾರಿ ನೀಡಲಾಗಿತ್ತು. ಆದರೆ, ಅವರು ಮಾಡಿದ್ದಾದರೂ ಏನು? ಕೆಲವರು ತಮ್ಮಿಂದ ತಪ್ಪಾಯಿತು, ಇನ್ನು ಹಾಗೆ ಆಗುವುದಿಲ್ಲ ಅಂತ ಒಪ್ಪಿಕೊಂಡರೆ, ಇನ್ನು ಕೆಲವರು ಮೌನವ್ರತ ಆಚರಿಸುತ್ತಿದ್ದಾರೆ. ಇನ್ನು ಕೆಲವರು ಬಾಯಿ ಬಿಡುತ್ತಾರಾದರೂ ಅವರಿಗೆ ತಮ್ಮ ಕ್ಷೇತ್ರದಲ್ಲಿ ತಾವೇ ಗೆಲ್ಲುವ ವಿಶ್ವಾಸ ಉಳಿಸಿಕೊಂಡಿಲ್ಲ, ಇನ್ನು ಬೇರೆಯವರನ್ನು ಗೆಲ್ಲುಸಿವುದೆಲ್ಲಿಂದ ಬಂತು? ಎರಡನೇ ಸಾಲಿನಲ್ಲಿದ್ದ ಕೆಲವರು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದ್ದಾರೆ. ಅವರ ಮಾತು ಅವರ ಜಿಲ್ಲೆಯಿಂದಾಚೆಗೆ ಹೋಗುತ್ತಲೇ ಇಲ್ಲ. ಒಂದು ಮಾತಂತೂ ಸತ್ಯ. ಯಡಿಯೂರಪ್ಪನವರ ಆಟ ಇನ್ನೂ ಮುಗಿದಿಲ್ಲ, ಸದ್ಯಕ್ಕೆ ಮುಗಿಯುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಪಿಚ್ಚರ್ ಇನ್ನೂ ಬಾಕಿಯಿದೆ.