"ಶ್ರೀರಾಮ, ಲಕ್ಷ್ಮಣ ಹಾಗೂ ರಾವಣ ಇವರಲ್ಲಿ ಯಾರೂ ಆದರ್ಶ ವ್ಯಕ್ತಿಗಳಲ್ಲ, ಕ್ರೂರಿಗಳು"
B.T.Lalitha Naik: ಮಾತನಾಡುವ ಭರದಲ್ಲಿ ವಿವಾದಾದಾತ್ಮಕ ಮಾತುಗಳನ್ನಾಡಿ ಹಲವರು ಪೇಚಿಗೆ ಸಿಲುಕಿರುವ ಉದಾಹರಣೆಗಳಿವೆ. ಇದೀಗ ಬಂಡಾಯ ಸಾಹಿತಿ ಬಿ.ಟಿ ಲಲತಾ ನಾಯಕ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ರಾಮಾಯಣ ಮಹಾಕಾವ್ಯದಲ್ಲಿ ಇರುವ ಶ್ರೀರಾಮ, ಲಕ್ಷ್ಮಣ ಹಾಗೂ ರಾವಣ ಆದರ್ಶ ವ್ಯಕ್ತಿಗಳಲ್ಲ, ಕ್ರೂರಿಗಳು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ದಾವಣಗೆರೆಯ ಎ.ವಿ.ಕೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ವಿಚಾರ ಸಂಕಿರಣದ ಸಮಾರೋಪವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ರಾಮಾಯಣ ಮಹಾಕಾವ್ಯದಲ್ಲಿ ಇರುವ ಶ್ರೀರಾಮ, ಲಕ್ಷ್ಮಣ ಹಾಗೂ ರಾವಣ ಕ್ರೂರಿಗಳು. ಶೂರ್ಪನಖಿಯ ಮೂಗು ಕತ್ತರಿಸಿದ ಲಕ್ಷ್ಮಣ, ಸೀತೆಯ ಮೇಲೆ ಸಂಶಯ ವ್ಯಕ್ತಪಡಿಸಿ ನಿರ್ಜನ ಕಾಡಿಗೆ ಕಳುಹಿಸಿದ ಶ್ರೀರಾಮ ಆದರ್ಶರಾಗಲೂ ಸಾಧ್ಯ ಇಲ್ಲ. ಸೀತೆಯನ್ನು ಅಪಹರಿಸಿ ಜೀವನ ಹಾಳು ಮಾಡಿದ ರಾವಣ ಕೂಡ ಕ್ರೂರಿಯೇ. ಭಕ್ತಿಯ ಹೆಸರಿನಲ್ಲಿ ಆದರ್ಶರಂತೆ ಬಿಂಬಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಭಕ್ತಿ ಜೊತೆಗೆ ಬೆರೆತ ಮೌಢ್ಯಗಳು ಜನರ ವಿಚಾರಶಕ್ತಿಯನ್ನು ಹಾಳು ಮಾಡಿವೆ. ದೇಗುಲಗಳು ಜನರನ್ನು ಮೌಢ್ಯತೆಗೆ ತಳ್ಳುತ್ತಿವೆ. ಗ್ರಂಥಾಲಯಗಳು ಜ್ಞಾನಾರ್ಜನೆಯತ್ತ ಕರೆದೊಯ್ಯುತ್ತವೆ. ಮೌಢ್ಯಗಳಿಂದ ಹೊರಬರಲು ಶಿಕ್ಷಣವೇ ಪರಿಹಾರ. ಮನುಷ್ಯನ ತಪ್ಪುಗಳೇ ಸಾಹಿತ್ಯ, ಮಹಾಕಾವ್ಯಗಳಾಗಿ ರೂಪಿತಗೊಂಡಿವೆ ಎಂದು ಹೇಳಿದರು.
ರಾಮಾಯಣ ಹಾಗೂ ಮಹಾಭಾರತ ಸಹ ಇಂತಹದ್ದೇ ಸಾಹಿತ್ಯ. ಶಾಂತಿಯ ಪ್ರತೀಕವಾಗಿರುವ ಬುದ್ಧನ ಕೈಯಲ್ಲಿ ಕತ್ತಿ, ಗುರಾಣಿ, ಖಡ್ಗ ಏನೂ ಇಲ್ಲ. ಮಹಾತ್ಮ ಗಾಂಧೀಜಿ ಕೈಯಲ್ಲಿ ಚರಕ ಮಾತ್ರ ಇದೆ. ಇತ್ತೀಚೆಗೆ ಶ್ರೀರಾಮನ ಕೈಗೆ ಬಿಲ್ಲು, ಬಾಣ ನೀಡಲಾಗಿದೆ ಎಂದು ಬೇಸರ ಹೊರಹಾಕಿದರು.












Click it and Unblock the Notifications