ಮಂಗಳೂರು ಇಸ್ಕಾನ್ ಬಿಸಿಯೂಟದಲ್ಲಿ ಹುಳು ಪತ್ತೆ

ನಗರದ ಡಾ. ಅಂಬೇಡ್ಕರ್ ವೃತ್ತದಲ್ಲಿರುವ ಸರಕಾರಿ ಶಾಲೆಯ ಮಕ್ಕಳಿಗೆ ನವೆಂಬರ್ 29ರಂದು ಪೂರೈಸಿದ್ದ ಮಧ್ಯಾಹ್ನದ ಬಿಸಿಯೂಟದಲ್ಲಿ ಭಾರಿ ಸಂಖ್ಯೆಯಲ್ಲಿ ಸಣ್ಣ ಸಣ್ಣ ಬಿಳಿ ಹುಳುಗಳು ಸತ್ತು ಬಿದ್ದಿರುವುದು ಪತ್ತೆಯಾಗಿದೆ.
ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಯೋಜನೆಯಡಿ ನಿನ್ನೆ ಶುಕ್ರವಾರ ಮಧ್ಯಾಹ್ನ ಇಲ್ಲಿನ ಸರಕಾರಿ ಶಾಲೆಯಲ್ಲಿ ಎಂದಿನಂತೆ ಹಂಚಲಾಗುತ್ತಿತ್ತು. ಆಗ ಶಾಲಾ ಬಾಲಕಿಯೊಬ್ಬಳಿಗೆ ತನ್ನ ತಟ್ಟೆಗೆ ಬಡಿಸಿದ್ದ ಅನ್ನದಲ್ಲಿ ಹುಳುಗಳು ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಆಕೆ ಅದನ್ನು ಶಾಲಾ ಸಿಬ್ಬಂದಿಯ ಗಮನಕ್ಕೆ ತರಲಾಗಿ ಅವರು ಇಡೀ ಅಡುಗೆಯನ್ನು ಆಮೂಲಗ್ರವಾಗಿ ಪರೀಕ್ಷಿಸಿದ್ದಾರೆ.
ಆ ವೇಳೆ ಪಾತ್ರೆಗಳಲ್ಲಿದ್ದ ಅಡುಗೆಯಲ್ಲೂ ಹುಳುಗಳು ಕಂಡುಬಂದಿದೆ. ತಕ್ಷಣ ಎಚ್ಚೆತ್ತ ಶಿಕ್ಷಕ ಸಿಬ್ಬಂದಿ ಮಕ್ಕಳಿಗೆ ಊಟ ಮಾಡದಂತೆ ಸೂಚಿಸಿದ್ದಾರೆ. ಜತೆಗೆ, ಬಿಸಿಯೂಟ ಪೂರೈಸಿದ್ದ ಸ್ಥಳೀಯ ಇಸ್ಕಾನ್ ಸಂಸ್ಥೆಯ ಸಿಬ್ಬಂದಿಗೂ ತಕ್ಷಣ ಕರೆ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಇಸ್ಕಾನ್ ಸಿಬ್ಬಂದಿ ಆಹಾರವನ್ನೆಲ್ಲಾ ವಾಪಸ್ ತೆಗೆದುಕೊಂಡು ಹೋಗಿ, ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರ ವಹಿಸುವುದಾಗಿ ಶಿಕ್ಷಕರಿಗೆ ಭರವಸೆ ನೀಡಿದ್ದಾರೆ. ಆದರೆ ಈ ಹಿಂದೆಯೂ ಇದೇ ಶಾಲೆಯಲ್ಲಿ ಇಂತಹುದೇ ಘಟನೆ ನಡೆದಿತ್ತು ಎಂದು ಪೋಷಕರು ತಿಳಿಸಿದ್ದಾರೆ.
ಗಮನಾರ್ಹವೆಂದರೆ ಇತ್ತೀಚೆಗೆ ದೇಶಾದ್ಯಂತ ಕಳಪೆ ಮಧ್ಯಾಹ್ನದ ಬಿಸಿಯೂಟ ಪೂರೈಕೆಯಲ್ಲಿ ಅನಾಹುತಗಳು ಸಂಭವಿಸಿದ ಹಿನ್ನೆಲೆಯಲ್ಲಿ ಶಾಲಾ ಬಿಸಿಯೂಟ ಪೂರೈಕೆಯ ಸಂಪೂರ್ಣ ಜವಾಬ್ದಾರಿಯನ್ನು ಸರಕಾರೇತರ ಧಾರ್ಮಿಕ ಸಂಸ್ಥೆಯಾದ ಇಸ್ಕಾನ್ ಗೆ ವಹಿಸಬೇಕು ಎಂಬುದು ಚರ್ಚೆಗೆ ಬಂದಿತ್ತು.











Click it and Unblock the Notifications