ಮೈಸೂರು: ಜಗತ್ತಿನ ಏಕೈಕ ಸಂಸ್ಕೃತ ದಿನಪತ್ರಿಕೆ 'ಸುಧರ್ಮಾ' ಉಳಿಯಲಿ...
ಒಳ್ಳೆ ಕನ್ನಡ ಬರುವುದಕ್ಕೆ ಸಂಸ್ಕೃತ ಜ್ಞಾನ ಮುಖ್ಯ ಎಂಬುದು ಸಾಹಿತಿ ಎಸ್.ಎಲ್.ಭೈರಪ್ಪನವರ ನಂಬಿಕೆ. ಅವರು ವಾಸಿಸುವ ಮೈಸೂರಿನಲ್ಲೇ ಪ್ರಕಟವಾಗುವ ಜಗತ್ತಿನ ಏಕೈಕ ಸಂಸ್ಕೃತ ದಿನಪತ್ರಿಕೆ ಸುಧರ್ಮಾ ಸಂಕಷ್ಟದಲ್ಲಿದೆ. ಈ ಪತ್ರಿಕೆ ಉಳಿಯಬೇಕಿದೆ.
ಮೈಸೂರು, ಡಿಸೆಂಬರ್ 3: ಭಾರತದ ಏಕೈಕ ಸಂಸ್ಕೃತ ದಿನಪತ್ರಿಕೆ 'ಸುಧರ್ಮಾ' ತೊಂದರೆಯಲ್ಲಿದೆ. ಸುಧರ್ಮಾ ಪತ್ರಿಕೆಗೆ ಎದುರಾಗಿರುವ ತೊಂದರೆ ಏನು? ಪತ್ರಿಕೆ ಮುದ್ರಣಕ್ಕೆ ತಗುಲುವ ವೆಚ್ಚ ಹೆಚ್ಚುತ್ತಿದ್ದು, ಜಾಹೀರಾತಿನ ಮೂಲಕ ಬರುವ ಆದಾಯ ಕುಸಿದಿರುವುದರಿಂದ ತನ್ನ ಉಳಿವಿಗಾಗಿಯೇ ಹೋರಾಟ ನಡೆಸುವಂಥ ಸ್ಥಿತಿ ಬಂದಿದೆ.
ಈ ಪತ್ರಿಕೆ ಹೊರಬರುವುದು ಮೈಸೂರಿನಿಂದ. ಕೆ.ವಿ.ಸಂಪತ್ ಕುಮಾರ್ ಸಂಪಾದಕರು. ಸದ್ಯಕ್ಕೆ ಇರುವ ಮೂರು ಸಾವಿರ ಚಂದಾದಾರರಿಗೆ ಅಂಚೆ ಮೂಲಕ ಪತ್ರಿಕೆ ತಲುಪಿಸಲಾಗುತ್ತಿದೆ. ಅಷ್ಟೇ ಅಲ್ಲ, ಈ ಪತ್ರಿಕೆಯ ಆನ್ ಲೈನ್ ಆವೃತ್ತಿ ಸಹ ಇದ್ದು, ಅದರಿಂದ ಯಾವುದೇ ಆದಾಯ ಆಗುತ್ತಿಲ್ಲ. ಆದರೆ ಇದರಿಂದ ಜಗತ್ತಿನಾದ್ಯಂತ 1.25 ಲಕ್ಷ ಜನರನ್ನು ತಲುಪಲು ಸಾಧ್ಯವಾಗುತ್ತಿದೆ. ಸದ್ಯಕ್ಕಂತೂ ಪ್ರತಿ ದಿನದ ಹೋರಾಟವು ಪತ್ರಿಕೆಯನ್ನು ಉಳಿಸಿಕೊಳ್ಳುವುದಕ್ಕಷ್ಟೇ ಎಂಬಂತಾಗಿದೆ.[ರಾಷ್ಟ್ರೀಯ ಸಂಸ್ಕೃತ ವಿವಿಗೆ ಕನ್ನಡಿಗ ಕುಲಪತಿ]
ನಲವತ್ತೇಳು ವರ್ಷಗಳಿಂದ ಎರಡು ಪುಟಗಳ ಈ ಪತ್ರಿಕೆ ಬರುತ್ತಲೇ ಇದೆ. 'ನನಗೆ ಈ ಪತ್ರಿಕೆಯನ್ನು ಮುಚ್ಚಲು ಮನಸ್ಸಿಲ್ಲ. ಯಾರಾದರೂ ಆಸಕ್ತರು ಜಗತ್ತಿನ ಏಕೈಕ ಸಂಸ್ಕೃತ ದಿನಪತ್ರಿಕೆಯನ್ನು ಮುಂದುವರಿಸಬೇಕು. ಈ ಅಫ್ ಸೆಟ್ ಮಶೀನ್ ಗಳು ನಿತ್ಯವೂ ಚಾಲನೆಯಲ್ಲಿ ಇರಬೇಕು' ಎನ್ನುತ್ತಾರೆ ಸಂಪತ್ ಕುಮಾರ್.[ಸಂಸ್ಕೃತವೆಲ್ಲೋ ಜರ್ಮನಿಯೆಲ್ಲೋ, ಏನಿದು ಸಂಬಂಧ?]
ಸರಕಾರದ ಸಬ್ಸಿಡಿ, ಜಾಹೀರಾತು ಆದಾಯ ಏನೇನೂ ಸಾಕಾಗುವುದಿಲ್ಲ. ಎರಡು ಡಜನ್ ನಷ್ಟು ಇರುವ ಸಂಸ್ಕೃತ ವಿದ್ಯಾಲಯವೂ ಸೇರಿದಂತೆ ಶಿಕ್ಷಣ ಸಂಸ್ಥೆಗಳಿಂದಲೂ ಅಂಥ ಬೆಂಬಲವಿಲ್ಲ. ಕೇಂದ್ರ-ರಾಜ್ಯ ಸರಕಾರದ ಜಾಹೀರಾತುಗಳೂ ತುಂಬ ಕಮ್ಮಿ. 'ಯಾವುದೇ ಲಾಭವಿಲ್ಲ-ನಷ್ಟವಿಲ್ಲ ಎಂಬಂತೆ ನಡೆಸಿಕೊಂಡು ಹೋಗುವುದು ಕೂಡ ಭಯವಾಗುತ್ತೆ' ಅಂತಾರೆ ಸಂಪಾದಕರು.
ವರ್ಷಕ್ಕೆ ಹದಿನೆಂಟು ಲಕ್ಷ ರುಪಾಯಿ ಹಣ ಈ ಪತ್ರಿಕೆಗೆ ಬೇಕಾಗುತ್ತದೆ. ನಿವೃತ್ತ ರಾಜ್ಯಪಾಲರಾದ ರಾಮಾ ಜೋಯಿಸ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜ್ ನಾಥ್ ಸಿಂಗ ಅವರಿಗೆ ಅನುದಾನಕ್ಕಾಗಿ ಮನವಿ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. 'ಸುಧರ್ಮ' ಓದುಗರು ಸಂಸ್ಕೃತ ವಿದ್ಯಾಪೀಠದಲ್ಲಿ ಇರುವಂಥವರು, ಕೇಂದ್ರೀಯ ವಿದ್ಯಾಲಯ, ಸಾರ್ವಜನಿಕ ಗ್ರಂಥಾಲಯಕ್ಕೆ ಬರುವಂಥವರು.[ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದವರಾರು?]
ನಾನು ಪತ್ರಿಕೆಯಲ್ಲಿ ಭಾರತೀಯರ ಸಂಯೋಜಕರ ಸಂಸ್ಕೃತ ಕೃತಿಗಳನ್ನು ಅರ್ಥಸಹಿತ ಹಾಕ್ತೀನಿ. ಅದರಿಂದ ಸಂಗೀತಗಾರರು ನಮ್ಮ ಚಂದಾದಾರರಾಗಿ ಸಿಗ್ತಾರೆ ಅಂತ ಎನ್ನುತ್ತಾರೆ ವರದಿಗಾರ, ಸಂಪಾದಕ ಹಾಗೂ ಪ್ರಕಾಶಕ-ಹೀಗೆ ಆ ಪತ್ರಿಕೆಗೆ ಎಲ್ಲವೂ ಆಗಿರುವ ಸಂಪತ್ ಕುಮಾರ್. ಈ ಬಗ್ಗೆ 'ದ ಹಿಂದೂ' ಪತ್ರಿಕೆಯಲ್ಲಿ ರಂಜನಿ ಗೋವಿಂದ್ ವರದಿ ಮಾಡಿದ್ದಾರೆ.[ಮಕ್ಕಳಿಗೆ ಸಂಸ್ಕೃತ ಜ್ಞಾನವೂ ಅಗತ್ಯ : ಪೇಜಾವರ ಶ್ರೀ]
ಪತ್ರಿಕೆಯ ಸ್ಥಾಪಕ ಸಂಪಾದಕರಾಗಿದ್ದ ಪಂಡಿತ್ ಕೆ.ಎನ್.ವರದರಾಜ ಅಯ್ಯಂಗಾರ್ ಅವರು, ಸಾರ್ವಜನಿಕ ಜೀವನದಲ್ಲಿ ಬಳಕೆಯಲ್ಲಿಲ್ಲದ ಸಂಸ್ಕೃತ ಮತ್ತೆ ಪ್ರಚಲಿತಕ್ಕೆ ಬರಲಿ ಎಂಬ ಆಶಯದೊಂದಿಗೆ ಈ ಪತ್ರಿಕೆ ಆರಂಭಿಸಿದ್ದರು. ಸುಧರ್ಮ ಉಳಿಯಲಿ, ಸಂಸ್ಕೃತವೂ ಉಳಿಯಲಿ. ಏಕೆಂದರೆ ಯಾವುದೇ ಪತ್ರಿಕೆ ಹಾಗೂ ಭಾಷೆ ಉಳಿಯಬೇಕು.