ಜೆಡಿಎಸ್ ಬಿಟ್ಟು ಹೋಗುವವರು ಸಂತೋಷದಿಂದ ಹೋಗಿ
ಹಾಸನ, ನ.4 : 'ಪಕ್ಷ ಬಿಟ್ಟು ಹೋಗುವವರೆಲ್ಲ ಸಂತೋಷದಿಂದ ಹೋಗಿ, ಯಾರು ಪಕ್ಷ ಬಿಟ್ಟರೂ ತಲೆ ಕೆಡಿಸಿಕೊಳ್ಳಲ್ಲ. ಕಾಂಗ್ರೆಸ್, ಬಿಜೆಪಿ ಸೇರಿದ ಮುಖಂಡರು ಈಗ ಯಾವ ಸ್ಥಿತಿಯಲ್ಲಿದ್ದಾರೆ ಎಂಬುದೂ ಗೊತ್ತಿದೆ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಹಾಸನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಿರುವ ಅಬ್ದುಲ್ ಅಜೀಂ, ಸುನೀಲ್ ಹೆಗಡೆ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಯಾವ ನಾಯಕರು ಬೇಕಾದರೂ ಪಕ್ಷ ಬಿಟ್ಟು ಸಂತೋಷದಿಂದ ಹೋಗಿ ಎಂದರು.

ಜೆಡಿಎಸ್ ತೊರೆದು ಕಾಂಗ್ರೆಸ್, ಬಿಜೆಪಿ ಸೇರಿದ ನಾಯಕರು ಇಂದು ಎಂತಹ ಸ್ಥಿತಿಯಲ್ಲಿದ್ದಾರೆ ಎಂಬುದು ತಮಗೆ ತಿಳಿದಿದೆ. ಆದ್ದರಿಂದ ಪಕ್ಷ ಬಿಡುವವರು ಸಂತೋಷದಿಂದ ಬಿಟ್ಟು ಹೋಗಿ, ತಾವು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಗೌಡರು ಕಡ್ಡಿ ಮುರಿದಂತೆ ಹೇಳಿದರು. [ಜೆಡಿಎಸ್ ತೊರೆದ ಇಬ್ಬರು ನಾಯಕರು]
'ಜನತಾ ಪರಿವಾರದಲ್ಲಿ ತಮ್ಮೊಂದಿಗೆ ದುಡಿದವರನ್ನು ಮತ್ತೆ ಪಕ್ಷಕ್ಕೆ ಕರೆತರುತ್ತೇನೆ ಎಂದು ಹೇಳಿದ ಅವರು, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ ಎರಡೆರಡು ದಿನ ಪ್ರವಾಸ ಹಮ್ಮಿಕೊಂಡು ಪಕ್ಷ ಸಂಘಟಿಸುತ್ತೇನೆ' ಎಂದರು.
ಮುಂದಿನ ಚುನಾವಣೆಗಳಲ್ಲಿ ಯೋಗ್ಯರಿಗೆ ಮತ್ತು ಪಕ್ಷವನ್ನು ಉಳಿಸಿಕೊಳ್ಳಲು ಕಟಿಬದ್ಧರಾದವರಿಗೆ ಮಾತ್ರ ಟಿಕೆಟ್ ನೀಡಲಾಗುವುದು ಎಂದು ಗೌಡರು ಘೋಷಿಸಿದರು. ಅಂದಹಾಗೆ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ ಮತ್ತು ಹಳಿಯಾಳದ ಮಾಜಿ ಶಾಸಕ ಸುನೀಲ್ ಹೆಗಡೆ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ. ಅಬ್ದುಲ್ ಅಜೀಂ ಈಗಾಗಲೇ ಜೆಡಿಎಸ್ ಪಕ್ಷದ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದಾರೆ.












Click it and Unblock the Notifications