ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧೆ?
ಮಂಡ್ಯ, ಜನವರಿ 04: 2019 ರ ಲೋಕಸಭಾ ಚುನಾವಣೆಯ ವೇಳೆ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರಂಗು ಜೋರಾಗಿದೆ. ಮಂಡ್ಯ ರಾಜಕಾರಣ ಅಂದರೆ ಇಂಡಿಯಾನೇ ತಿರುಗಿ ನೋಡುತ್ತೆ. ಇದೀಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಕಾವು ಜೋರಾಗಿದೆ.
ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿ ಗೆಲುವು ಕಂಡಿದ್ದ ಸುಮಲತಾ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಬೆಂಬಲವನ್ನ ಸೂಚಿಸಿದ್ದರು. ಆದರೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಬಹುತೇಕ ಜೆಡಿಎಸ್ನಿಂದಲೇ ಅಭ್ಯರ್ಥಿ ಘೋಷಣೆ ಆಗುವ ಸಂಭವ ಕೂಡ ಇದೆ. ಈ ನಡುವೆ ಬಿಜೆಪಿಗೆ ಸಂಪೂರ್ಣ ಬೆಂಬಲ ಘೋಷಿಸಿರೋ ಸಂಸದೆ ಸುಮಲತಾ ನಡೆ ಕುತೂಹಲ ಮೂಡಿಸಿದೆ.

ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕ ಜೊತೆಗೆ ಮೈತ್ರಿ ಮಾತುಕತೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಜೆಡಿಎಸ್ ಭದ್ರಕೋಟೆಯಾದ ಮಂಡ್ಯ ಕ್ಷೇತ್ರವನ್ನ ಮರಳಿ ಪಡೆಯಲು ಕಣ ತೊಟ್ಟಿದ್ದು, ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರವನ್ನ ಜೆಡಿಎಸ್ ನಾಯಕರು ಕೇಳಿದ್ದು, ಬಹುತೇಕ ಮಂಡ್ಯ ಕ್ಷೇತ್ರ ದಳಪತಿಗಳ ತೆಕ್ಕೆಗೆ ಹೋಗಲಿದೆ. ಹೀಗಾಗಿ ಮಂಡ್ಯ ಕ್ಷೇತ್ರ ಈ ಬಾರೀ ಬಿಜೆಪಿ ಬೆಂಬಲಿತ ನಾಯಕಿ ಸುಮಲತಾ ಅವರಿಗೆ ಸಿಗುವುದು ಡೌಟ್ ಎನ್ನಲಾಗಿದೆ.
ಇನ್ನೂ ಮೊನ್ನೆಯಷ್ಟೇ ನಟ ದರ್ಶನ್ ನಟನೆಯ ಕಾಟೇರ ರಿಲೀಸ್ ಬಿಡುಗಡೆಯ ಸಂದರ್ಭದಲ್ಲಿ ಸಂಸದೆ ಸುಮಲತಾ ಮಾತನಾಡಿ, ನಾನು ಮಂಡ್ಯ ಬಿಡಲ್ಲ, ಸ್ವಾಭಿಮಾನ ಬಿಡಲ್ಲ ಎಂಬ ಮಾತುನ್ನ ಹೇಳಿದ್ದು, ಅಲ್ಲಿಂದ ಇಲ್ಲಿಯವರೆಗೂ ಸುಮಲತಾ ಸ್ಪರ್ಧೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇತ್ತ ಮೈತ್ರಿ ಅಭ್ಯರ್ಥಿಯಾಗಿ ಸುಮಲತಾ ಅವರಿಗೆ ಟಿಕೆಟ್ ನೀಡಿದರೇ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರೆ ಗೆಲುವು ಕಷ್ಟಸಾಧ್ಯ ಎಂದು ಹೇಳಲಾಗಿದೆ.
ಹೀಗಾಗಿ ಸುಮಲತಾ ಅವರಿಗೆ ಇರುವ ಆಯ್ಕೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುವುದಾಗಿದೆ. ಈ ಬಗ್ಗೆ ಸಚಿವರಾದ ಚಲುವರಾಯಸ್ವಾಮಿ ಅವರು ಸಹ ಕಾಕತಾಳೀಯ ಎಂಬಂತೆ ನಮ್ಮ ಕುಟುಂಬಸ್ಥರು ಸಹ ಯಾರು ಸ್ಪರ್ಧೆ ಮಾಡಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಂಡ್ಯ ಕ್ಷೇತ್ರದಿಂದ ಸುಮಲತಾ ಅವರನ್ನ ಕಣಕ್ಕಿಳಿಸುವ ಕುರಿತು ಕೈ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಇತ್ತ ಮಂಡ್ಯ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಸಹ ಸುಮಲತಾ ಅವರ ಪರವಾಗಿದ್ದಾರೆ. ಏಕೆಂದರೆ, ನಟರಾದ ದರ್ಶನ್ ಹಾಗೂ ಯಶ್ ಸುಮಲತಾ ಅವರ ಬೆಂಬಲಿಗರಾಗಿದ್ದು, ಇದು ಮುಂದಿನ ದಿನಗಳಲ್ಲಿ ನಮಗೂ ಸಹ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ಶಾಸಕರು ಸಹ ಸುಮಲತಾ ಅವರ ಜೊತೆಗೆ ಉತ್ತಮ ಒಡನಾಟವನ್ನ ಹೊಂದಿದ್ದಾರೆ. ಸುಮಲತಾ ಕಾಂಗ್ರೆಸ್ ಬಂದರೇ ನಮಗೆ ಅನುಕೂಲವಾಗಲಿದೆ ಎಂಬ ಮಾತು ಮಂಡ್ಯ ಕಾಂಗ್ರೆಸ್ ನಾಯಕರಿಂದ ಕೇಳಿ ಬಂದಿದೆ.
ನಟ ಹಾಗೂ ಮಾಜಿ ಸಂಸದರಾದ ಅಂಬರೀಶ್ ಅವರು ಸಹ ಈ ಹಿಂದೆ ಕಾಂಗ್ರೆಸ್ ನಾಯಕರ ಜೊತೆಗೆ ಉತ್ತಮ ಒಡನಾಟವನ್ನ ಹೊಂದಿದ್ದರು. ಅಲ್ಲದೇ ಸುಮಲತಾ ಅಂಬರೀಶ್ ಅವರು ಸಹ ಈಗಲೂ ಕಾಂಗ್ರೆಸ್ ನಾಯಕರ ಜೊತೆಗೆ ಉತ್ತಮ ಸ್ನೇಹ ಸಂಬಂಧವನ್ನ ಹೊಂದಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಕುರಿತು ಸಂಸದೆ ಸಯಮಲತಾ ಅಂಬರೀಶ್ ಮಾತನಾಡಿ, ಮಂಡ್ಯ ಜನ ನನ್ನನ್ನ ಗೆಲ್ಲಿಸಿದ್ದಾರೆ. ಸ್ವಾಭಿಮಾನಕ್ಕೆ ಬೆಲೆ ಕೊಟ್ಟಿದ್ದಾರೆ. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ. ನಾನು ಸ್ಪರ್ಧೆ ಮಾಡೋದಾದರೆ ಮಂಡ್ಯದಿಂದಲೇ ಎಂದು ಸಂಸದೆ ಸುಮಲತಾ ಹೇಳುತ್ತಾನೆ ಇದ್ದಾರೆ. ಆದ್ರೆ, ಈವರೆಗೂ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಮಾತ್ರ ಹೇಳಿಲ್ಲ.
ಒಟ್ನಲಿ, ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆ ಅಸ್ತಿತ್ವದ ಪ್ರಶ್ನೆಯಾದರೇ ದಳಪತಿಗಳಿಗೆ ಮಂಡ್ಯ ಲೋಕಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ. ಇತ್ತ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿರುವ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಯ ಕೊರತೆ ಉಂಟಾಗಿದ್ದು, ಸುಮಲತಾ ಅವರನ್ನ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಪ್ಲಾನ್ ನಡೆಸಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications