ನಾನಾಗಲಿ, ನನ್ನ ಮಗನಾಗಲಿ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ವೀರಪ್ಪ ಮೊಯ್ಲಿ
ಮಂಗಳೂರು,ಜನವರಿ 2 : 2023 ರ ವಿಧಾನಸಭಾ ಚುನಾವಣೆಯಲ್ಲಿ ನಾನೂ ಸ್ಪರ್ಧಿಸುವುದಿಲ್ಲ, ನನ್ನ ಮಗನೂ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಒಕ್ಕಕಲಿಗ ಮತ್ತು ಲಿಂಗಾಯತರಿಗೆ ಮೀಸಲಾತಿ ನೀಡಲು ವಿಚಾರದಲ್ಲಿ ಸರ್ಕಾರ ರಾಜಕೀಯ ಸಮಯಸಾಧಕತನವನ್ನು ಪ್ರದರ್ಶಿಸಿದೆ. ಈ ನಿರ್ಧಾರ ಸಾಮಾಜಿಕ ಸುಸ್ಥಿರತೆಯನ್ನ ಕದಡಲಿದೆ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಬಸವರಾಜ ಬೊಮ್ಮಾಯಿ
ಇನ್ನೂ ಮೀಸಲಾತಿ ಪರಿಷ್ಕರಣೆ ವಿಚಾರದಲ್ಲಿ ಯಾವ ರೀತಿಯಾಗಿ ನಡೆದುಕೊಳ್ಳಬೇಕು ಎಂಬ ಬಗ್ಗೆ ನಾನು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ಸ್ಪಷ್ಟ ನೀತಿಯನ್ನು ರೂಪಿಸಿತ್ತು, ಅಲ್ಲದೇ ಅದೇ ಮಾದರಿಯ ವ್ಯವಸ್ಥೆ ರೂಪಿಸುವಂತೆ ಸುಪ್ರೀಂ ಕೋರ್ಟ್ ಕೂಡಾ ಆದೇಶ ಮಾಡಿದೆ. ಸಾಮಾಜಿಕ, ಆರ್ಥಿಕ, ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಆಧರಿಸಿ ಕೇಂದ್ರದ ಅಥವಾ ರಾಜ್ಯದ ಶಾಶ್ವತ ಆಯೋಗಗಳೇ ಈ ಬಗ್ಗೆ ನಿರ್ಧಾರ ಮಾಡಬೇಕು ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಮುಖವೇ ಇಲ್ಲ. ಸಂವಿಧಾನದ ಆಶಯಗಳಿಗೆ ತಿಲಾಂಜಲಿ ಇಟ್ಟು 12 ರಾಜ್ಯಗಳಲ್ಲಿ ಅಧಿಕಾರವನ್ನು ಅಕ್ರಮವಾಗಿ ಬಿಜೆಪಿ ಕಬಳಿಸಿದೆ, ಅವರಿಗೆ ರಾಷ್ಟ್ರದ ಹಿತ ಬೇಕಿಲ್ಲ ಎಂದರು.
ಇನ್ನೂ 2023 ರ ವಿಧಾನಸಭೆ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಏನು ಕಾರ್ಯತಂತ್ರ ರೂಪಿಸಬೇಕು ಎಂಬ ಬಗ್ಗೆ ಈಗಾಗಲೇ ಹೈಕಮಾಂಡ್ ಗೆ ವರದಿ ಸಲ್ಲಿಸಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗೆ ರಾಷ್ಟ್ರೀಯ ಹಿತ ಚಿಂತನೆ ಮುಖ್ಯ. ನಾವು ಜಾತಿ, ಮತ ಹಾಗೂ ಪ್ರಾದೇಶಿಕತೆಯನ್ನು ಆಧರಿಸಿ ಆಲೋಚಿಸಲು ಬರುವುದಿಲ್ಲ. ಜನರ ಆಲೋಚನೆಗಳನ್ನೂ ದಿಕ್ಕಿನಲ್ಲಿ ಕೊಂಡೊಯ್ಯುವ ಮೂಲಕ ಸಾಮಾಜಿಕ ಸುಸ್ಥಿರತೆ ಹೊಣೆ ನಮ್ಮ ಮೇಲಿದೆ ಎಂದು ಹೇಳಿದರು.
ಕಾಂಗ್ರೆಸ್ ಯಾವುದೇ ಮೃದು ಹಿಂದುತ್ವವನ್ನು ಪ್ರತಿಪಾದಿಸಿಲ್ಲ. ಸರ್ವರ ಹಿತವೇ ಪಕ್ಷದ ಧ್ಯೇಯ. ಭಾರತೀಯತೆ ಬೆಳೆಯಬೇಕು, ಸರ್ವ ಧರ್ಮ ಸಮನ್ವಯದ ತಾಣವಾಗಬೇಕು ಎಂದು ತಿಳಿಸಿದರು.
ಅವಿವೇಕತನದ ಹೆಜ್ಜೆ ಒಕ್ಕೂಟವನ್ನು ಶಿಥಿಲಗೊಳಿಸಲು ಮಾಡುತ್ತಿದ್ದಾರೆ. ಸಹಕಾರಿ ಒಕ್ಕೂಟವನ್ನು ಶಿಥಿಲ ಮಾಡಲು ಅಮಿತ್ ಷಾ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಮುಲ್ ಜೊತೆಗೆ ನಂದಿನಿ ವಿಲೀನ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅಧಿಕಾರ ವಿಕೇಂದ್ರೀಕರಣದ ಉದಾಹರಣೆ ಸಹಕಾರಿ ಚಳವಳಿ. ಅವರಿಗೆ ಈ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲ. ಫೆಡರಲ್ ಸಿಸ್ಟಮ್ ಬಗ್ಗೆ ಗೃಹ ಸಚಿವರಿಗೆ ಅರಿವು ಇಲ್ಲ ಸಂವಿಧಾನದ ಆಶಯಕ್ಕೆ ಮಾರಕ, ದೇಶದ ಸುಸ್ಥಿತಿ ಬಗ್ಗೆ ಚಿಂತನೆ ಇಲ್ಲ ಎಂದು ಕಿಡಿಕಾರಿದರು.
ಬಿಜೆಪಿಯವರು ಗಲಭೆಯ ಕೂಪದಲ್ಲಿ ದೇಶವನ್ನು ದಬ್ಬಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ರಾಷ್ಟ್ರದ ಹಿತ, ಅಭಿವೃದ್ಧಿ ಬೇಕಾಗಿಲ್ಲ. ಸಂವಿಧಾನದ ಆಶಯಗಳನ್ನು ಮುರಿಯುವ ವಾದಕ್ಕೆ ಕಾಂಗ್ರೆಸ್ನ್ನು ಎಳೆಯುವ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಕಾಂಗ್ರೆಸ್ ಬಲಿಯಾಗಬಾರದು. ಈ ಮೂಲಕ ರಾಷ್ಟ್ರೀಯ, ಪ್ರಾದೇಶಿಕ, ಅಭಿವೃದ್ಧಿ, ರಾಜಕೀಯ ಸುಸ್ಥಿರ, ಸಾಮಾಜಿಕ ಸುಸ್ಥಿರ, ಆರ್ಥಿಕ ಸುಸ್ಥಿರ ಸಂವಾದದಿಂದ ಕಾಂಗ್ರೆಸ್ ವಿಚಲಿತವಾಗಬಾರದು. ಇದನ್ನು ಕಾಂಗ್ರೆಸ್ ನಾಯಕರು ಕಾಯ್ದುಕೊಂಡು ಬರಬೇಕು ಎಂದರು.
ಕದಡಿದ ನೀರಿನಲ್ಲಿ ಮೀನು ಹಿಡಿಯುವ ಕೆಲಸವನ್ನು ಮಾಡುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿಯ ಮತೀಯ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡೋದನ್ನು ಕಾಂಗ್ರೆಸ್ ನಿಲ್ಲಿಸಿ, ಜನರನ್ನು ತಲುಪುವ ಕಾರ್ಯ ಮಾಡಿದ್ದಲ್ಲಿ ಕಾಂಗ್ರೆಸ್ಗೆ ಜಯ ಲಭಿಸುತ್ತದೆ ಎಂದರು.ಜಿಡಿಪಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇಡೀ ದೇಶದಲ್ಲಿ ಆಗಿರುವ ಅಭಿವೃದ್ಧಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ನಡೆದಿರುವುದು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.