ಬಿಟ್ ಕಾಯಿನ್ ಹಗರಣ ಹೊರ ಬಂದ ಬಳಿಕ ಬೊಮ್ಮಾಯಿ 'ಮಂದಹಾಸ' ಮರೆ ಆಯಿತೇ?
ಬೆಂಗಳೂರು, ನ. 15: ಬಿಟ್ ಕಾಯಿನ್ ಪ್ರಕರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೋಬಲವನ್ನೇ ಕಸಿದು ಕೊಂಡಂತೆ ಕಾಣುತ್ತಿದೆ. ಸಿಎಂ ಎಂದರೆ ಕಾಮನ್ ಮ್ಯಾನ್ ಎಂದು ವ್ಯಾಖ್ಯಾನ ಮಾಡಿ ಮಂದಹಾಸದ ನಗು ಬೀರಿ ಅಧಿಕಾರ ಸ್ವೀಕರಿಸಿದ್ದ ಬಸವರಾಜ ಬೊಮ್ಮಾಯಿ ನೂರು ದಿನದ ಆಡಳಿತವನ್ನು ಚಾಣಾಕ್ಷ ರೀತಿಯಲ್ಲಿ ಪೂರೈಸಿದ್ದರು. ಅಪ್ಪು ನಿಧನದ ವೇಳೆಯಂತೂ ಲಕ್ಷಾಂತರ ಮಂದಿ ಜಮಾಯಿಸಿದರೂ ಸಣ್ಣ ಗಲಭೆಯೂ ಇಲ್ಲದಂತೆ ನಿರ್ವಹಿಸಿದ ಪರಿ ವಿರೋಧಿಗಳ ಪ್ರಶಂಸೆಗೂ ಪಾತ್ರರಾಗಿದ್ದರು. ಆದರೆ, ಬಿಟ್ಕಾಯಿನ್ ಪ್ರಕರಣ ಹೊರ ಬಂದ ದಿನದಿಂದ ಬಸವರಾಜ ಬೊಮ್ಮಾಯಿ ಅವರ ಮುಖದ ಭಾವನೆಯೇ ಬದಲಾಗಿ ಹೋಗಿದೆ. ಒಂದೆಡೆ ದ್ವಂದ ಹೇಳಿಕೆ ! ಇನ್ನೊಂದೆಡೆ ಎದುರಾಳಿಗಳ ಆರೋಪಕ್ಕೆ ಸಮರ್ಥ ದಾಖಲೆಗಳನ್ನು ಮುಂದಿಟ್ಟು ಜನರ ಮನ ಗೆಲ್ಲಲಾಗದೇ ಸೋಲುತ್ತಿದ್ದಾರೆ ! ಬೊಮ್ಮಾಯಿ ಅವರ ಈ ಮೌನದ ಮರ್ಮ ಏನು?
ಮೌನದಲ್ಲಿ ಸಿಎಂ:
ಬಿಟ್ಕಾಯಿನ್ ಹಗರಣ ದೊಡ್ಡ ಸದ್ದು ಮಾಡುತ್ತಿರುವಾಗಲೇ ದೆಹಲಿಗೆ ತೆರಳಿದ್ದ ಬಸವರಾಜ ಬೊಮ್ಮಾಯಿ ಕೊಟ್ಟ ಹೇಳಿಕೆ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿತ್ತು. ನಾನು ಬಿಟ್ಕಾಯಿನ್ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದೆ, ಪ್ರಧಾನಿ ಮೋದಿ ಅವರೇ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ಹೇಳಿದ್ದಾಗಿ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದರು. ಅದನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಸಮರಕ್ಕೆ ನಿಂತ ಕಾಂಗ್ರೆಸ್ ನಾಯಕರು, ಮೋದಿ ಬಿಟ್ಟುಬಿಡಿ ಅಂದ್ರೆ ನಾವು ಬಿಡೋಕೆ ಆಗುತ್ತಾ ಎಂದು ಬಿಟ್ ಕಾಯಿನ್ ಅಕ್ರಮದ ಬಗ್ಗೆ ಸಮರ ಸಾರಿದರು. ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವರಿ ಸರ್ಜೇವಾಲ ಕೈಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಷ್ಟ್ರಮಟ್ಟದಲ್ಲಿ ವಿವಾದ ಎಬ್ಬಿಸಿದರು. ಇಲ್ಲಿಯವರಗೂ ಮೌನವಾಗಿದ್ದ ಬಸವರಾಜ ಬೊಮ್ಮಾಯಿ ವರಸೆ ಬದಲಾಯಿಸಿದ್ದಾರೆ.
ಬಿಟ್ ಕಾಯಿನ್ ವಿಚಾರ; ಮೌನ ಮುರಿದ ಮುಖ್ಯಮಂತ್ರಿಗಳು!
ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ. ಯಾರನ್ನೂ ಬಿಡುವುದಿಲ್ಲ. ನಿಮ್ಮದನ್ನು ನೀವು ಬಚ್ಚಿಟ್ಟುಕೊಳ್ಳಲು ಇಲ್ಲದವರ ಹೆಸರನ್ನು ತೇಲಿ ಬಿಡುತ್ತಿದ್ದೀರಾ? ರಾಷ್ಟ್ರ, ರಾಜ್ಯದಲ್ಲಿ ಯಾರಿಗೆ ಮೋಸ ಆಗಿದ್ದರೂ ಆರೋಪಿಗಳನ್ನು ಪತ್ತೆ ಮಾಡುತ್ತೇವೆ. ಎಷ್ಟೇ ಪ್ರಭಾವಿಗಳನ್ನಾದರೂ ಮುಲಾಜಿಲ್ಲದೇ ಕ್ರಮ ಜರುಗಿಸುತ್ತೇವೆ. ಆಧಾರ ರಹಿತ ಮಾತನಾಡುವರು ದಾಖಲೆಗಳ್ನು ಇಡಿ, ಇಂಟರ್ ಪೋಲ್ ತನಿಖಾ ಸಂಸ್ಥೆಗಳಿಗೆ ದಾಖಲೆಗಳನ್ನು ನೀಡಲಿ ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ.
ಸಿಎಂ ಅವರ ಈ ಹೇಳಿಕೆ ಮತ್ತೆ ನಾನಾ ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ. ಶನಿವಾರಷ್ಟೇ ಬಿಟ್ಕಾಯಿನ್ ಪ್ರಕರಣದ ಬಗ್ಗೆ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದರು. ಹ್ಯಾಕರ್ ಶ್ರೀಕಿಯಿಂದ ಯಾವ ಬಿಟ್ಕಾಯಿನ್ ವಶಪಡಿಸಕೊಂಡಿಲ್ಲ. ಪಾರದರ್ಶಕ ತನಿಖೆ ನಡೆಸಿದ್ದೇವೆ. ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದೇವೆ. ನಮ್ಮನ್ನು ಯಾವ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳು ಸಂಪರ್ಕಿಸಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರೇ ಸ್ಪಷ್ಟನೆ ನೀಡಿದ್ದರು. ಒಂದಡೆ ಪ್ರಕರಣವನ್ನು ಇಡಿ ಮತ್ತು ಇಂಟರ್ ಪೋಲ್ ಗೆ ತನಿಖೆಗೆ ವಹಿಸಲಾಗಿದೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಇದರ ಮದ್ಯೆ ಏನೂ ನಡೆದೇ ಇಲ್ಲ ಎಂದು ಪೊಲೀಸರು ಹೇಳಿಕೆ ನೀಡುತ್ತಿದ್ದಾರೆ. ಈ ಗೊಂದದ ಹೇಳಿಕೆಗಳ ಕಾಂಗ್ರೆಸ್ ಪಾಲಿಗೆ ದೊಡ್ಡ ಅಸ್ತ್ರವಾಗಿದೆ.
ಬಿಟ್ಕಾಯಿನ್: ದೆಹಲಿಯಿಂದ ಸಿಎಂ ಬೊಮ್ಮಾಯಿಗೆ ಸುರ್ಜೇವಾಲ 6 ಪ್ರಶ್ನೆಗಳು
ಸಿಎಂ ಕಾಂಗ್ರೆಸ್ ವಿರುದ್ಧ ದಾಳಿ:
ಕರ್ನಾಟಕದಲ್ಲಿ ನಡೆದಿರುವ ಬಿಟ್ ಕಾಯಿನ್ ಅಕ್ರಮ ಐದು ಸಾವಿರ ಕೋಟಿ ಮೌಲ್ಯದ್ದು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿಕೆ ನೀಡಿದ್ದರು. ಇದಕ್ಕೆ ಕಿಡಿಕಾರಿರುವ ಬಸವರಾಜ ಬೊಮ್ಮಾಯಿ, ಒಂದು ಟ್ವಿಟ್ಟರ್ ಹೇಳಿಕೆ ಇಟ್ಟುಕೊಂಡು ಗಂಭೀರ ಆರೋಪ ಮಾಡಿದ್ದೀರಿ. 2016 ರಲ್ಲಿ ಈ ಹಗರಣ ನಡೆದಿದೆ ಎಂದು ಹೇಳಿದ್ದೀರಿ. ಆಗ ನಿಮ್ಮ ಸಚಿವರು ಸಿಎಂ, ಸರ್ಕಾರವೇ ಇತ್ತು. ಯಾಕೆ ಕೇಳಲಿಲ್ಲ? ಯಾಕೆ ತನಿಖೆ ನಡೆಸಲಿಲ್ಲ? ಆಗ ಮುಖ್ಯಮಂತ್ರಿಯನ್ನು ನೀವು ಕೇಳಬೇಕಿತ್ತು. ಬಿಟ್ಕಾಯಿನ್ ಪ್ರಕರಣ ಪತ್ತೆ ಮಾಡಿದವರು ನಾವು. ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ. ಶ್ರೀಕಿ ವಿರುದ್ಧ ಕೇಸು ದಾಖಲಿಸಿ ತನಿಖೆಗೆ ಒಳಪಡಿಸಿದ್ದೇ ನಮ್ಮ ಸರ್ಕಾರ. ಇಡಿ, ಇಂಟರ್ ಫೋಲ್ ತನಿಖೆಗೆ ಶಿಫಾರಸು ಮಾಡಿದ್ದೇವೆ. ಆಧಾರ ರಹಿತ ಮಾತು ಆಡುವುದನ್ನು ಬಿಟ್ಟು ದಾಖಲೆಗಳು ಇದ್ದರೆ ತನಿಖಾ ಸಂಸ್ಥೆಗಳಿಗೆ ನೀಡಿ ಎಂದು ಸವಾಲು ಹಾಕಿದ್ದಾರೆ.
ಸಿಎಂ ಇಂಟರ್ ಪೋಲ್, ಸಿಬಿಐ ತನಿಖೆಗೆ ವಹಿಸಿದ್ದೇವೆ ಎಂದ ಹೇಳುತ್ತಿದ್ದಾರೆ. ಇತ್ತ ಬೆಂಗಳೂರು ಪೊಲೀಸರು ನಮ್ಮನ್ನು ಯಾವ ತನಿಖಾ ಸಂಸ್ಥೆಗಳು ಮಾಹಿತಿ ಕೇಳಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದು ಬಿಟ್ ಕಾಯಿನ್ ವಿವಾದದಲ್ಲಿ ಮತ್ತೊಷ್ಟು ಗೊಂದಲ ಸೃಷ್ಟಿಸಿದೆ.
ಕಾಂಗ್ರೆಸ್ ಮತ್ತೆ ರಣ ತಂತ್ರ:
ಬಿಟ್ ಕಾಯಿನ್ ಅಕ್ರಮದ ಬಗ್ಗೆ ದಾಖಲೆಗಳನ್ನು ಕಲೆ ಹಾಕಿ ಸಾರ್ವಜನಿಕರ ಮಂದಿಡಲು ಕಾಂಗ್ರೆಸ್ ಹೊಸ ತಂತ್ರ ರೂಪಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಹ್ಯಾಕಿಂಗ್ ಕುರಿತ ನುರಿತ ತಜ್ಞರನ್ನು ಸಂಪರ್ಕಿಸಿ, ಬಿಟ್ ಕಾಯಿನ್ ಅಕ್ರಮ ಕುರಿತು ಸ್ವತಂತ್ರವಾಗಿ ತನಿಖೆ ನಡೆಸಿ ಒಂದಷ್ಟು ದಾಖಲೆಗನ್ನು ಸಂಗ್ರಹಿಸಿ ಸಾರ್ವಜನಿಕರ ಮುಂದಿಡುವ ಸಾಹಸಕ್ಕೆ ಕೈ ನಾಯಕರು ಕೈ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವಲ್ಪ ದಿನ ಕಾದು ನೋಡಿ, ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಒಬ್ಬ ಹ್ಯಾಕರ್ನ ಕೈಚಳಕದಿಂದ ಇಡೀ ಸರ್ಕಾರವೇ ನಡುವಂತಾಗಿದೆ. ಮುಂದಿನ ದಿನಗಳಲ್ಲಿ ಬೇರೆಯದ್ದೇ ಸ್ವರೂಪ ಪಡೆದುಕೊಳ್ಳಲಿರುವ ಬಿಟ್ ಕಾಯಿನ್ ಯಾರ ಪಾಲಿಗೆ ಮುಳುವಾಗಲಿದೆ ಎಂಬುದು ಕೇಂದ್ರೀಯ ತನಿಖಾ ಸಂಸ್ಥೆಗಳು ತನಿಖೆಗೆ ಇಳಿದಾಗಲೇ ಸತ್ಯ ಹೊರ ಬರುತ್ತದೆ. ಸದ್ಯದ ಮಟ್ಟಿಗೆ ಸಿಎಂ ಬಸವರಾಜ ಬೊಮ್ಮಾಯಿ ಪಾಲಿಗೆ ಮಾತ್ರ ರಾಜಕೀಯವಾಗಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
Recommended Video