"ಮಾಸ್ಟರ್ ಲೋಹಿತ್ ಅಲ್ಪಾಯುಷಿ, ಆಂಜನೇಯನ ಇನ್ನೊಂದು ಹೆಸರೇ ಪುನೀತ್"
ಬೆಂಗಳೂರು, ನ 3: ಕನ್ನಡ ಚಿತ್ರೋದ್ಯಮದ ಯುವರತ್ನ ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವಿನ ಸುತ್ತ ಚರ್ಚೆಗಳಿಗೆ ಫುಲ್ ಸ್ಟಾಪ್ ಬೀಳುತ್ತಿಲ್ಲ. ಐದನೇ ದಿನದ ಕಾರ್ಯಕ್ರಮವನ್ನು ಅವರ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಿದ್ದಾರೆ.
ಪುನೀತ್ ಅವರು ಮನೆಯಿಂದ ಆಸ್ಪತ್ರೆಗೆ ಹೊರಡುವ ಸಿಸಿಟಿವಿ ಫೂಟೇಜ್ ಸಾಮಾಜಿಕ ತಾಣದಲ್ಲಿ ವೈರಲ್ ಆದ ನಂತರ, ಹಲವು ಆಯಾಮಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಇನ್ನೊಂದು ಕಡೆ, ಪುನೀತ್ ರಾಜ್ಕುಮಾರ್ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆನ್ನುವ ಒತ್ತಾಯವೂ ಜೋರಾಗಿದೆ.
ಒಂದು ವರ್ಷದ ಹಿಂದೆ ಪುನೀತ್ ಅವರು ಮಂತ್ರಾಲಯಕ್ಕೆ ಹೋಗಿದ್ದಾಗ, ವೀಣೆ ಮತ್ತು ರಾಘವೇಂದ್ರಸ್ವಾಮಿಗಳ ಪ್ರಭಾವಳಿ ಅಲುಗಾಡಿದ್ದು, ಸಾವಿನ ಮುನ್ಸೂಚನೆ ಎಂದು ಭಾರೀ ಸುದ್ದಿಯಾಗಿತ್ತು. ಕೊನೆಗೆ, ಇದಕ್ಕೆ ಮಂತ್ರಾಲಯ ಶ್ರೀಗಳು ಸ್ಪಷ್ಟನೆಯನ್ನು ನೀಡಿದ್ದರು.
ಈಗ, ಮಾಸ್ಟರ್ ಲೋಹಿತ್ ಎನ್ನುವ ಹೆಸರು ಯಾಕಾಗಿ ಪುನೀತ್ ರಾಜ್ಕುಮಾರ್ ಎಂದು ಬದಲಾಯಿತು ಎನ್ನುವುದರ ಬಗ್ಗೆ ಅವರ ಕುಟುಂಬಸ್ಥರೊಬ್ಬರು ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸತ್ಯ ಹರಿಶ್ಚಂದ್ರನ ಕಥೆಯಲ್ಲಿ ಲೋಹಿತಾಶ್ವ ಮತ್ತೆ ಜೀವಂತವಾಗಿ ಬರುತ್ತಾನೆ, ನೀವ್ಯಾಕೆ ಎದ್ದು ಬರಲ್ಲ ಎಂದು ಸಾಮಾಜಿಕ ತಾಣದಲ್ಲಿ ಪ್ರಶ್ನಿಸಲಾಗುತ್ತಿದೆ.

ಪಾರ್ವತಮ್ಮ ರಾಜ್ಕುಮಾರ್ ಅವರ ಸೋದರ ಎಸ್.ಎ.ಚಿನ್ನೇಗೌಡ
ಖ್ಯಾತ ನಿರ್ಮಾಪಕ ಮತ್ತು ದಿ. ಪಾರ್ವತಮ್ಮ ರಾಜ್ಕುಮಾರ್ ಅವರ ಸೋದರ ಎಸ್.ಎ. ಚಿನ್ನೇಗೌಡ ಅವರು ಪುನೀತ್ ಸಾವಿನ ಬಗ್ಗೆ, ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿರುವ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದರಲ್ಲಿ ಮಾಸ್ಟರ್ ಲೋಹಿತ್ ಎನ್ನುವ ಹೆಸರು ಅಲ್ಪಾಯುಷಿ ಅದಕ್ಕಾಗಿಯೇ ಆ ಹೆಸರನ್ನು ಪುನೀತ್ ಎಂದು ಬದಲಾಯಿಸಲಾಯಿತು ಎಂದು ಚಿನ್ನೇಗೌಡ್ರು ಹೇಳಿದ್ದಾರೆ.

ಪೂಜೆ ಮಾಡಿದಾಗ ಅಕ್ಕವರು (ಪಾರ್ವತಮ್ಮ) ಮತ್ತು ಅಣ್ಣಾವ್ರು (ಡಾ.ರಾಜ್) ಇದ್ದರು
"ಚೌಡೇಶ್ವರಿ ದೇವಾಲಯದ ಪೂಜಾರಿಯೊಬ್ಬರನ್ನು ಕರೆಸಿ ಪುನೀತ್ ರಾಜ್ಕುಮಾರ್ ಅವರ ಫಾರಂಹೌಸಿನಲ್ಲಿ ಪೂಜೆಯನ್ನು ಮಾಡಿಸಿದ್ದೆವು. ಪೂಜೆ ಮಾಡಿದಾಗ ಅಕ್ಕವರು (ಪಾರ್ವತಮ್ಮ) ಮತ್ತು ಅಣ್ಣಾವ್ರುನ್ನು (ಡಾ.ರಾಜ್) ಕೂರಿಸಿಕೊಂಡು, ಲೋಹಿತ್ ಎನ್ನುವ ಹೆಸರನ್ನು ಇಡುವುದು ಬೇಡ, ಪುನೀತ್ ಅಂತ ಹೆಸರಿಡೋಣ. ಲೋಹಿತ್ ಎನ್ನುವುದು ಅಲ್ಪಾಯುಷಿ ಆಗುತ್ತದೆ ಎಂದು ಆ ಪೂಜಾರಿ ಹೇಳಿದ್ದರು" ಎಂದು ಚಿನ್ನೇಗೌಡ್ರು ಹೇಳಿದ್ದಾರೆ.

ಪವನಸುತ ಆಂಜನೇಯನ ಇನ್ನೊಂದು ಹೆಸರೇ ಪುನೀತ್
"ಪವನಸುತ ಆಂಜನೇಯನ ಇನ್ನೊಂದು ಹೆಸರೇ ಪುನೀತ್, ಆದರೂ ಅವನು ನಮ್ಮನ್ನು ಅಗಲಿ ಇಷ್ಟು ಬೇಗ ಹೋಗಿಬಿಟ್ಟ ಎಲ್ಲಾ ದೇವರ ಇಚ್ಚೆ. ನಮ್ಮ ಇಚ್ಚೆ ಒಂದಾದರೆ, ಭಗವಂತನ ಇಚ್ಛೆ ಇನ್ನೊಂದು ಎನ್ನುವುದು ಇಲ್ಲಿ ಸಾಬೀತಾಗಿದೆ. ಅವನು ನಮ್ಮ ಜೊತೆಗಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವಯಸ್ಸಿನಲ್ಲಿ ಇದನ್ನೆಲ್ಲಾ ನೋಡಬೇಕಾದ ದುಃಖ ನಮಗೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಚಿನ್ನೇಗೌಡ್ರು ಕಣ್ಣೀರು ಹಾಕಿದ್ದಾರೆ.
Recommended Video

ಸರಿಯಾದ ಚಿಕಿತ್ಸೆ ಬೇಗ ಸಿಕ್ಕಿದ್ದರೆ ನಮ್ಮ ಜೊತೆಗೆ ಇರುತ್ತಿದ್ದನೇನೋ
"ವಿಧಿಯಾಟಕ್ಕೆ ಯಾರೂ ಹೊಣೆಯಲ್ಲ, ಪುನೀತ್ ಅವರಿಗೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಬೇಗ ಸಿಕ್ಕಿದ್ದರೆ ನಮ್ಮ ಜೊತೆಗೆ ಇರುತ್ತಿದ್ದನೇನೋ ಎಂದು ಮನಸ್ಸಿಗೆ ಅನಿಸುತ್ತಾ ಇತ್ತು. ಈ ವಿಚಾರದಲ್ಲಿ ಮಾತನಾಡಿದರೆ ಸುಮ್ಮನೆ ಗೊಂದಲ ಉಂಟಾಗುತ್ತದೆ. ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಎಲ್ಲಾ ಮುಗಿದಿತ್ತು ಎಂದು ಕೆಲವರು ಹೇಳುತ್ತಾರೆ. ಉತ್ತರಕ್ರಿಯೆ ಶಾಸ್ತ್ರಗಳನ್ನು ಮನೆಯಲ್ಲೇ ಮಾಡಿ, ಹನ್ನೆರಡನೇ ದಿನಕ್ಕೆ ಊಟ ಹಾಕಿಸುವ ಪದ್ದತಿ ನಡೆಯಲಿದೆ"ಎಂದು ಎಸ್.ಎ. ಚಿನ್ನೇಗೌಡ ಅವರು ಹೇಳಿದ್ದಾರೆ.
ಕಳೆದ ವರ್ಷ ಅಂದರೆ 2020ರಲ್ಲಿ ಮಂತ್ರಾಲಯದಲ್ಲಿ ಗುರು ರಾಘವೇಂದ್ರ ವೈಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುನೀತ್ ರಾಜಕುಮಾರ್ ಮುಂದಿನ ವರ್ಷ ಬಂದಾಗ ಎರಡ್ಮೂರು ಭಕ್ತಿಗೀತೆಯನ್ನು ಹಾಡುತ್ತೇನೆ ಎಂದಿದ್ದರು. ಆಗ, ವೀಣೆ ಮತ್ತು ರಾಯರ ಪ್ರಭಾವಳಿ ಅಲ್ಲಾಡಿತ್ತು. ಇದು ಸಾವಿನ ಮುನ್ಸೂಚನೆ ಎಂದು ಸಾಮಾಜಿಕ ಜಾಣದಲ್ಲಿ ಭಾರೀ ಸುದ್ದಿಯಾಗಿತ್ತು. ಕೊನೆಗೆ, ಮಂತ್ರಾಲಯ ಶ್ರೀಗಳು ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದರು.












Click it and Unblock the Notifications