ರಾಜೀನಾಮೆ ನೀಡಲು ಮುಂದಾಗಿದ್ದ ಶ್ರೀರಾಮುಲು ಸದ್ಯಕ್ಕೆ ಶಾಂತ: ಇದಕ್ಕೆ ಒಂದೇ ಒಂದು ಕಾರಣ
ಆರೋಗ್ಯ ಇಲಾಖೆಯನ್ನು ತನ್ನಿಂದ ಕಿತ್ತುಕೊಂಡು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಸಿಟ್ಟಾಗಿದ್ದ, ಶ್ರೀರಾಮುಲು ಸದ್ಯದ ಮಟ್ಟಿಗೆ ತಣ್ಣಗಾಗಿದ್ದಾರೆ. ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆಯನ್ನು ನೀಡಲಾಗಿದೆ.
ಸಿಎಂ ಕ್ರಮದ ವಿರುದ್ದ, ಒಂದು ಹಂತದಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದ ಶ್ರೀರಾಮುಲು ಸದ್ಯದ ಮಟ್ಟಿಗೆ ಶಾಂತವಾಗಿರಲು, ವರಿಷ್ಠರಿಂದ ಬಂದ ಸಂದೇಶವೇ ಕಾರಣ ಎನ್ನುವ ಮಾತು ಬಿಜೆಪಿ ಪಡಶಾಲೆಯಲ್ಲಿ ಓಡಾಡುತ್ತಿದೆ.
ದೇವರಿಗೇ ಪತ್ರ ಬರೆದಿದ್ದ ಶ್ರೀರಾಮುಲುಗೆ ಇದ್ದದ್ದನ್ನೂ ಉಳಿಸಿಕೊಳ್ಳಲಾಗಲಿಲ್ಲ!
ಸಮಾಜ ಕಲ್ಯಾಣ ಇಲಾಖೆಯೂ ದೊಡ್ಡ ಖಾತೆಯಾಗಿದ್ದರೂ, ಕೊರೊನಾ ಹಾವಳಿ ತೀವ್ರವಾಗಿ ಹೆಚ್ಚುತ್ತಿರುವ ಈ ವೇಳೆ, ಆರೋಗ್ಯ ಖಾತೆಯನ್ನು ತನ್ನಿಂದ ಕಿತ್ತುಕೊಂಡಿದ್ದಕ್ಕೆ ಶ್ರೀರಾಮುಲುಗೆ ಸಿಟ್ಟುಬರಲು ಕಾರಣ ಇಲ್ಲದಿಲ್ಲ. ಎಲ್ಲಿ, ರಾಜ್ಯದ ಜನತೆ ತನ್ನನ್ನು ಅಸಮರ್ಥ ಎಂದು ಕೊಳ್ಳುತ್ತಾರೋ ಎನ್ನುವ ಭಯ ಇದ್ದಿರಬಹುದು.
ಕೊರೊನಾ ವೈದ್ಯಕೀಯ ಉಪಕರಣ ಖರೀದಿಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವ ಗೋಲ್ಮಾಲ್ ವಿಚಾರದಲ್ಲಿ ವಿರೋಧ ಪಕ್ಷಗಳು, ಕಳೆದ ಅಧಿವೇಶನದಲ್ಲಿ, ಆಡಳಿತ ಪಕ್ಷದ ವಿರುದ್ದ ಮುಗಿಬಿದ್ದಿದ್ದವು. ಆದರೆ, ಅದನ್ನು ಅಷ್ಟೇ ಸಮರ್ಥವಾಗಿ ಸಚಿವ ಡಾ.ಸುಧಾಕರ್ ನಿಭಾಯಿಸಿದ್ದರು. ಇದು ಕೂಡಾ, ಸಿಎಂ ಬಿಎಸ್ವೈ, ಆರೋಗ್ಯ ಖಾತೆಯನ್ನು ಸುಧಾಕರ್ ಗೆ ನೀಡಲು ಕಾರಣವಾದ ಅಂಶ. ವರಿಷ್ಠರಿಂದ ಬಂದ ಸಂದೇಶ, ಮುಂದೆ ಓದಿ..
ಖಾತೆ ಬದಲಾವಣೆ ಕುರಿತು ಆರೋಗ್ಯ ಸಚಿವ ಡಾ. ಸುಧಾಕರ್ ಮಹತ್ವದ ಹೇಳಿಕೆ!
ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ಆರಂಭದ ದಿನ
ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ಆರಂಭದ ದಿನದಲ್ಲಿ, ಕಳೆದ ಅಸೆಂಬ್ಲಿ ಚುನಾವಣೆಯ ವೇಳೆ ನೀಡಿದ್ದ ಉಪಮುಖ್ಯಮಂತ್ರಿ ಕನಸು ಈಡೇರದ ನಂತರ, ಶ್ರೀರಾಮುಲು, ಸಮಾಜ ಕಲ್ಯಾಣ ಖಾತೆಯನ್ನೇ ಬಯಸಿದ್ದರು. ಆದರೆ, ಅದನ್ನು ಗೋವಿಂದ ಕಾರಜೋಳ ಅವರಿಗೆ ಸಿಎಂ ಹಂಚಿದ್ದರು. ಒಲ್ಲದ ಮನಸ್ಸಿನಿಂದಲೇ ಶ್ರೀರಾಮುಲು ಆರೋಗ್ಯ ಖಾತೆಯನ್ನು ಒಪ್ಪಿಕೊಂಡಿದ್ದರು.
ಆರೋಗ್ಯ ಇಲಾಖೆಯ ಕಾರ್ಯವೈಖರಿ ನೇರವಾಗಿ ಸಾರ್ವಜನಿಕರ ಮೇಲೆ ಪರಿಣಾಮ
ಆದರೆ, ಕೊರೊನಾ ಹಾವಳಿಯ ನಂತರ, ಆರೋಗ್ಯ ಇಲಾಖೆಯ ಕಾರ್ಯವೈಖರಿ ನೇರವಾಗಿ ಸಾರ್ವಜನಿಕರ ಮೇಲೆ ಪರಿಣಾಮ ಬೀರಲಾರಂಭಿಸಿತು. ಇಲಾಖೆಯ ಕೆಲಸವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಶ್ರೀರಾಮುಲು ಆರಂಭದಲ್ಲಿ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಸಂವಹನದ ಕೊರತೆಯಿಂದಾಗಿ, ಇಲಾಖೆಯ ಕೆಲಸಗಳು ಹಳಿತಪ್ಪಲು ಆರಂಭವಾಯಿತು. ಆ ಕಾರಣಕ್ಕಾಗಿ, ಇಲಾಖೆಯನ್ನು ಸಿಎಂ, ಡಾ.ಸುಧಾಕರ್ ಸುಪರ್ದಿಗೆ ವಹಿಸಿದರು. ಇದರಿಂದ ಸಿಟ್ಟಾದ ಶ್ರೀರಾಮುಲು, ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಸಂಪರ್ಕಿಸಿದರು.
ಶ್ರೀರಾಮುಲು ಅವರ ಸಂತೋಷ್ ಜೊತೆಗಿನ ಮಾತುಕತೆ
ಒಂದು ಹಂತದಲ್ಲಿ ರಾಜೀನಾಮೆಗೆ ಮುಂದಾಗಿದ್ದ ಶ್ರೀರಾಮುಲು ಅವರು ಸಂತೋಷ್ ಜೊತೆಗಿನ ಮಾತುಕತೆ ನಂತರ, ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದರು ಎಂದು ಹೇಳಲಾಗುತ್ತಿದೆ. ಅವರ ಜೊತೆಗಿನ ಮಾತುಕತೆಯ ವೇಳೆ, ಒಂದು ತಿಂಗಳ ಮಟ್ಟಿಗೆ, ತಾಳ್ಮೆ, ಸಂಯಮದಿಂದ ಇರುವಂತೆ ಸಂತೋಷ್ ಅವರು ಶ್ರೀರಾಮುಲುಗೆ ಸೂಚಿಸಿದ್ದರು ಎಂದು ಹೇಳಲಾಗುತ್ತಿದೆ.
ಸಿಎಂ ಬಿಎಸ್ವೈ ಅವರ ಮಾತಿಗೆ ಚಕಾರವಿಲ್ಲ
ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆ ಕರ್ನಾಟಕ ಬಿಜೆಪಿಯಲ್ಲಿ ನಡೆಯಲಿದೆ. ಉಪಚುನಾವಣೆ ಮತ್ತು ಬಿಹಾರದ ಚುನಾವಣೆ ಇರುವುದರಿಂದ, ಪಕ್ಷದ ಇಮೇಜಿಗೆ ಧಕ್ಕೆ ಬರಬಾರದು. ಕೊಟ್ಟ ಖಾತೆಯನ್ನು ನಿಭಾಯಿಸಿಕೊಂಡು, ಮುಂದಿನ ತಿಂಗಳಲ್ಲಿ ಎಲ್ಲಾ ಸರಿಪಡಿಸೋಣ ಎನ್ನುವ ಭರವಸೆ ಸಂತೋಷ್ ಅವರಿಂದ ಸಿಕ್ಕಿದ್ದರಿಂದ, ಶ್ರೀರಾಮುಲು, ಸಿಎಂ ಬಿಎಸ್ವೈ ಅವರ ಮಾತಿಗೆ ಚಕಾರವೆತ್ತದೇ, ಹೊಸ ಖಾತೆಯನ್ನು ಒಪ್ಪಿಕೊಂಡರು ಎನ್ನುವ ಸುದ್ದಿ ಹರಿದಾಡುತ್ತಿದೆ.