'ಕರ್ನಾಟಕದ ಕಾಶ್ಮೀರ' ಕೊಡಗುಪ್ರವಾಸಿಗರಿಲ್ಲದೆ ಖಾಲಿ..ಖಾಲಿ
ಬಿಸಿಲಿಗೂ ಬಗ್ಗದೆ ಸಣ್ಣಗೆ ನಡುಕ ಹುಟ್ಟಿಸುವ ಚಳಿ..ಇಬ್ಬನಿಯಿಂದ ತೊಯ್ದ ಮರಗಿಡಗಳು..ಹಸಿರು ಕಾನನದ ಮೇಲಿಂದ ಎಳೆಬಿಸಿಲಿಗೆ ನಾಚಿ ಪಟ ಪಟನೆ ಉದುರುವ ಮಂಜಿನ ಹನಿಗಳು..ಭಾನು ಭುವಿಗೆ ಸೇತುವೆ ಕಟ್ಟಿ ಸಂಭ್ರಮಿಸುವ ಮಂಜಿನ ಮುಸುಕು..ಅದರ ನಡುವೆಯೇ ನಿತ್ಯದ ಬದುಕು ಆರಂಭಿಸುವ ಜನರು..ಮಂಜಿನ ತೆರೆಯನ್ನು ಸೀಳಿ ಬರುವ ವಾಹನಗಳ ಬೆಳಕು..ಇದೆಲ್ಲ 'ಕರ್ನಾಟಕದ ಕಾಶ್ಮೀರ' ಎಂದೇ ಕರೆಸಿಕೊಳ್ಳುವ ಕೊಡಗಿನ ಮಡಿಕೇರಿಯಲ್ಲಿ ಕಾಣಸಿಗುವ ನಿಸರ್ಗ ಸುಂದರ ನೋಟಗಳು..
ಮಳೆಗಾಲದ ಜಿಟಿ ಜಿಟಿ ಮಳೆಯ ಬಳಿಕ ಕೊಡಗು ನಿಸರ್ಗ ಸುಂದರ ದೃಶ್ಯ ಕಾವ್ಯಕ್ಕೆ ಸಾಕ್ಷಿಯಾಗುತ್ತದೆ. ಇದನ್ನು ನೋಡಲೆಂದೇ ದೂರದ ಊರಿನ ಪ್ರವಾಸಿಗರು ದೌಡಾಯಿಸಿ ಬರುತ್ತಿದ್ದರು. ಕೊಡಗಿನ ಚಿಕ್ಕ ಹಳ್ಳಿಗಳಿಂದ ಹಿಡಿದು ಪಟ್ಟಣದವರೆಗೆ... ಹೋಂಸ್ಟೇನಿಂದ ಆರಂಭಗೊಂಡು ಲಾಡ್ಜ್ ತನಕ, ಎಲ್ಲೆಂದರಲ್ಲಿ ಪ್ರವಾಸಿಗರ ದಂಡು ಕಂಡು ಬರುತ್ತಿತ್ತು.
ಸಾಮಾನ್ಯವಾಗಿ ಅಕ್ಟೋಬರ್ ನಂತರದ ದಿನಗಳು ಕೊಡಗಿಗೆ ಅತಿಥಿಗಳು ಬರುವ ಕಾಲ ಎಂದೇ ಪರಿಗಣಿತವಾಗಿವೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಮೇ ತಿಂಗಳಿನಿಂದ ಆರಂಭವಾದ ಮಳೆ ಅಕ್ಟೋಬರ್ ತಿಂಗಳ ವೇಳೆಗೆಲ್ಲ ಬಿಡುವು ನೀಡುತ್ತಿತ್ತು. ಇದೇ ತಿಂಗಳಲ್ಲಿ ದಸರಾ, ತಲಕಾವೇರಿಯಲ್ಲಿ ತೀರ್ಥೋದ್ಭವ ನಡೆಯುತ್ತಿತ್ತು. ಇದರಿಂದಾಗಿ ದೂರದ ಜನ ಇಲ್ಲಿಗೆ ಇಷ್ಟಪಟ್ಟು ಬರುತ್ತಿದ್ದರು.[ಕೊಡಗಿನಲ್ಲಿ ನವೆಂಬರ್ 26ರಂದು ಹುತ್ತರಿ ಹಬ್ಬ ಆಚರಣೆ]
ಇನ್ನು ಪಟ್ಟಣದ ಜಂಜಾಟದಲ್ಲಿದ್ದವರಿಗೆ ಒಂದಷ್ಟು ದಿನ ಪ್ರಕೃತಿ ಮಡಿಲ ಪ್ರಶಾಂತ ವಾತಾವರಣದಲ್ಲಿ ಸಣ್ಣಗೆ ನಡುಕ ಹುಟ್ಟಿಸುವ ಚಳಿಗೆ ಮೈಯೊಡ್ಡಿ ಖುಷಿಪಡುವ ಆಸೆಯಾಗುತ್ತಿತ್ತು ಹಾಗಾಗಿ ಅವರು ಬಂದರೆ, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳುತ್ತಿದ್ದರು.
ಮೊದಲೆಲ್ಲಾ ದೂರದಿಂದ ಬರುವವರಿಗೆ ವಸತಿ ಸಮಸ್ಯೆ ಕಾಡುತ್ತಿತ್ತು. ಕಳೆದೊಂದು ದಶಕದಿಂದ ಆ ಸಮಸ್ಯೆ ನೀಗಿದೆ. ಕೊಡಗಿನಾದ್ಯಂತ ಎಲ್ಲೆಂದರಲ್ಲಿ ಹುಟ್ಟಿಕೊಂಡಿರುವ ಹೋಂಸ್ಟೇಗಳು ಪ್ರವಾಸಿಗರನ್ನು ಸ್ವಾಗತಿಸುತ್ತಿವೆ. ಹೀಗಾಗಿ ವೀಕೆಂಡ್ ಬಂತೆಂದರೆ ಕೊಡಗಿನಲ್ಲಿ ವಾಹನ ದಟ್ಟಣೆ ಕಾಣುತ್ತಿತ್ತು. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದರು.[ಮಡಿಕೇರಿಯ ಎರಡು ಶತಮಾನದ ನಾಲ್ಕುನಾಡು ಅರಮನೆ]
ಕಳೆದ ವರ್ಷವೆಲ್ಲ ಈ ವೇಳೆಗೆ ಇಡೀ ಕೊಡಗು ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಆದರೆ ಈ ಬಾರಿ ಕೊಡಗಿನತ್ತ ದೌಡಾಯಿಸುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಹೋಂಸ್ಟೇ, ಲಾಡ್ಜ್ ಗಳು ಖಾಲಿಯಾಗಿವೆ. ಕೊಡಗಿನ ಸಾಂಬಾರ ಪದಾರ್ಥಗಳ ಅಂಗಡಿಗಳು ಖಾಲಿ ಹೊಡೆಯುತ್ತಿವೆ. ಹಾಗಾದರೆ ಬನ್ನಿ ಯಾಕೆ ಸುಂದರ ಮಡಿಕೇರಿ, ಕೊಡಗು ಖಾಲಿ..ಖಾಲಿ ಎಂದು ನೋಡ್ಕೊಂಡು ಬರೋಣ...

ಮಡಿಕೇರಿ ಬಿಕೋ ಎನ್ನಲು ಮೊದಲ ಕಾರಣ
ನಿಸರ್ಗಕ್ಕೆ ಸರಿಸಾಟಿಯಾಗಿ ಕಾಣಬರುವ ಮಡಿಕೇರಿ ಬಿಕೋ ಎನ್ನಲು ಎರಡು ಕಾರಣವಿದೆ. ಒಂದು ನ.10ರ ಮಂಗಳವಾರದಂದು ಟಿಪ್ಪು ಜಯಂತಿ ಸಂದರ್ಭ ನಡೆದ ಗುಂಪು ಘರ್ಷಣೆಯಿಂದ ಆದ ಅವಾಂತರಗಳು ಹಾಗೂ ಆ ನಂತರ ಜಾರಿ ಮಾಡಿರುವ 144ಸೆಕ್ಷನ್. ಇದರಿಂದ ಜನರು ಭಯದ ವಾತಾವರಣದಿಂದ ದೂರವಾಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಕೊಡಗು, ಮಡಿಕೇರಿ ನಿಂತಿದೆ.[ಕೊಡವರು ಟಿಪ್ಪುವನ್ನು ವಿರೋಧಿಸುವುದೇಕೆ?]

ಮಡಿಕೇರಿ ಬಿಕೋ ಎನ್ನಲು ಎರಡನೇ ಕಾರಣ
ಬಂಗಾಳಕೊಲ್ಲಿಯಲ್ಲಿ ಆಗಿರುವ ವಾಯುಭಾರ ಕುಸಿತದಿಂದ ಸೃಷ್ಠಿಯಾಗಿರುವ ಮೋಡಕವಿದ ವಾತಾವರಣ ಹಾಗೂ ಜಿಟಿ ಜಿಟಿ ಮಳೆ.ರೋನೋ ಚಂಡ ಮಾರುತದಿಂದಾಗಿ ಪ್ರವಾಸಿಗರಿಗೆ ಮುದ ನೀಡುವ ದೃಶ್ಯ ವೈಭವ ಕಾಣೆಯಾಗಿದೆ. ಸದಾ ಮೋಡದ ಮುಸುಕು, ಜಿಟಿಜಿಟಿ ಮಳೆ ಪ್ರವಾಸಿಗರ ಉತ್ಸಾಹಕ್ಕೆ ತಣ್ಣೀರು ಎರಚುತ್ತಿದೆ.['ರೋನು' ಅಬ್ಬರಕ್ಕೆ ರೋದಿಸುತ್ತಿರುವ ತಮಿಳುನಾಡು]

ಮಡಿಕೇರಿ, ಕೊಡಗಿಗೆ ಆಗಿರುವ ನಷ್ಟ ಎಷ್ಟು?
ಟಿಪ್ಪು ಜಯಂತಿ ಗಲಾಟೆ, ಕೊಡಗಿಗೆ ಪ್ರವಾಸಿಗರು ಬರಲು ಹಿಂದೇಟು ಹಾಕಿದ್ದರಿಂದಾಗಿ ಕೋಟ್ಯಂತರ ರೂ. ನಷ್ಟವಾಗಿದೆ. ಇಲ್ಲಿನ ಹೋಟೆಲ್, ಟ್ಯಾಕ್ಸಿ, ಆಟೋಗಳಿಗೂ ಅದರ ಬಿಸಿ ತಟ್ಟಿದೆ. ಇನ್ನು ಪ್ರವಾಸಿಗರನ್ನೇ ನಂಬಿ ನಡೆಯುತ್ತಿರುವ ಹೋಂಸ್ಟೇಗಳು ಖಾಲಿ ಖಾಲಿಯಾಗಿವೆ.

ಪ್ರವಾಸಿಗರ ಆಶಯವೇನು?
ನವೆಂಬರ್ 25ರ ತನಕವೂ 144ಸೆಕ್ಷನ್ ಜಾರಿಯಲ್ಲಿದ್ದು, ಅದನ್ನು ಹಿಂಪಡೆದ ನಂತರವಾದರೂ ಕೊಡಗು ಎಂದಿನ ಸ್ಥಿತಿಗೆ ಮರಳುತ್ತಾ ಎಂಬುವುದೇ ಪ್ರಶ್ನೆಯಾಗಿದ್ದು, ಕೊಡಗು ಮತ್ತೆ ಯಥಾ ಸ್ಥಿತಿಗೆ ಮರಳಲಿ ಎಂಬುವುದು ಪ್ರವಾಸಿಗರ ಆಶಯವಾಗಿದೆ. ಇದು ಮುಂದುವರೆದರೆ ಹೊಸವರ್ಷವನ್ನು ಕೊಡಗಿನಲ್ಲಿ ಆಚರಿಸುವ ಸಂಭ್ರಮದಲ್ಲಿರುವ ಮಂದಿಯ ಆಸೆಗೂ ತಣ್ಣೀರು ಎರಚುವ ಸಾಧ್ಯತೆಯಿದೆ.[ಮಡಿಕೇರಿಯಲ್ಲಿ ನವೆಂಬರ್ 25ರ ತನಕ ನಿಷೇಧಾಜ್ಞೆ]

ಬೆರಳೆಣಿಕೆಯ ಮಂದಿ ಕೊಡಗಿನಲ್ಲಿ
ಯಾವಾಗಲೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಕೊಡಗಿನಲ್ಲಿ ನಾವು ಈಗ ಎಷ್ಟು ಮಂದಿ ಇದ್ದಾರೆ ಎಂದು ಸುಲಭವಾಗಿ ಲೆಕ್ಕ ಹಾಕಬಹುದು.












Click it and Unblock the Notifications