ಜಾರಕಿಹೊಳಿ ಬ್ರದರ್ಸ್ ಅಂದರ್ ಬಾಹರ್ ಗೇಮ್ ಅಸಲಿಯತ್ತೇನು?
Recommended Video
ಬೆಂಗಳೂರು, ಸೆಪ್ಟೆಂಬರ್ 18: ರಾಜ್ಯ ರಾಜಕಾರಣದಲ್ಲಿ ಕಳೆದ ಎರಡೂವರೆ ದಶಕಗಳಿಂದ ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದರೂ ತಮ್ಮ ಹಿಡಿತವನ್ನು ಸಾಧಿಸುತ್ತಾ ಬಂದಿರುವ ಬೆಳಗಾವಿ ಜಿಲ್ಲೆಯ ಜಾರಕಿಹೊಳಿ ಬ್ರದರ್ಸ್ ಇದೀಗ ಮತ್ತೊಂದು ಸುತ್ತಿನ ರಾಜಕೀಯ ಮೇಲಾಟಕ್ಕೆ ಅಂದರ್ ಬಾಹರ್ ಆಟ ಆಡುತ್ತಿದ್ದಾರೆ ಎಂಬ ಗುಮಾನಿ ಕಾಂಗ್ರೆಸ್ ಹಾಗೂ ಬಿಜೆಪಿ ವಲಯದಲ್ಲಿ ಹಬ್ಬಿದೆ.
ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳು ಅಸ್ವಿತ್ವಕ್ಕೆ ಬಂದಾಗಲೆಲ್ಲ ಕನಿಷ್ಠ ಪಕ್ಷ ಒಂದು ಸಚಿವ ಹುದ್ದೆಯನ್ನು ಪಡೆದು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸುತ್ತೇಲೇ ತಮ್ಮ ರಾಜಕೀಯ ಸಾಮರ್ಥ್ಯವನ್ನು ವಿಸ್ತರಿಸಿಕೊಂಡು ಬಂದಿರುವ ಜಾರಕಿಹೊಳಿ ಸಹೋದರರು ಕಳೆದ ಒಂದೂವರೆ ದಶಕಗಳಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಎನ್ನುವುದು ಜಗಜ್ಜಾಹೀರಾತಾಗಿದೆ.
'ಸಚಿವರಾಗಿ ಡಿಕೆಶಿ ಬೆಳಗಾವಿಗೆ ಬರಲಿ, ಆದರೆ ರಾಜಕೀಯ ಹಸ್ತಕ್ಷೇಪ ಮಾಡುವಂತಿಲ್ಲ'
ರಾಜಕೀಯ ಅಂದರ್ ಬಾಹರ್ ಗೇಮ್ ನಲ್ಲಿ ಎರಡು ವಿಕೆಟ್ ಗಳ ನಂತರವೂ ಜಾರಕಿಹೊಳಿಯ ಪಾರಮ್ಯವೇ ಮುಂದುವರೆಯಲಿದೆಯೇ ಎಂಬುದು ಸದ್ಯದ ಕುತೂಹಲ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರ್ಕಾರ, ಸಚಿವರಾಗ್ತಾರೆ ಜಾರಕಿಹೊಳಿ ಸಾವಕಾರ
ಒಂದೂವರೆ ದಶಕಗಳ ಬಳಿಕ ರಾಜಕೀಯ ಸ್ಥಿತ್ಯಂತರಕ್ಕೆ ಸ್ವತಃ ಜಾರಕಿಹೊಳಿ ಬ್ರದರ್ಸ್ ಮುಂದಾಗಿರುವುದರ ಹಿಂದಿನ ಗುಟ್ಟೇನು ಎನ್ನುವುದು ಎಲ್ಲರನ್ನೂ ಕಾಡುತ್ತಿದೆ. ಬೆಳಗಾವಿ ಜಿಲ್ಲೆಯ ರಾಜಕಾರಣ ಬಲ್ಲವರಿಗೆ ಜಾರಕಿಹೊಳಿ ಸಹೋದರರ ಪಟ್ಟುಗಳು ದೂರಾಲೋಚನೆಯಿಂದ ಕೂಡಿರುತ್ತದೆ ಎಂಬುದು ಗೊತ್ತು.
ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಐದು ವರ್ಷಗಳಿಂದ ಜಾರಕಿಹೊಳಿ ಸಹೋದರರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅನಾಥ ಪ್ರಜ್ಞೆ ಸ್ವತಃ ಜಾರಕಿಹೊಳಿ ಸಹೋದರರನ್ನು ಕಾಡುತ್ತಿದೆ.
ನಿರ್ಲಕ್ಷ್ಯ ಮಾಡಿದೆಯಾ ಕಾಂಗ್ರೆಸ್ ಹೈಕಮಾಂಡ್
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಬೇರುಗಳನ್ನು ಗಟ್ಟೆಪಡಿಸಿಕೊಳ್ಳಲು ಜಾರಕಿಹೊಳಿ ಸಹೋದರರು ರಾಜಕೀಯ ಅಂದರ್ ಬಾಹರ್ ಆಟ ಆಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಧ್ಯದ ಮಾಸ್ಟರ್ ಪ್ಲ್ಯಾನ್ ಪ್ರಕಾರ ಜಾರಕಿಹೊಳಿ ಸಹೋದರರಲ್ಲಿ ಹಿರಿಯರಾದ ರಮೇಶ್ ಜಾರಕಿಹೊಳಿ ಇಡೀ ನಾಯಕರ ಸಮುದಾಯದ ಶಾಸಕರನ್ನು ಒಗ್ಗೂಡಿಸಿಕೊಂಡು ಹೈಕಮಾಂಡ್ ಮುಂದೆ ಸಹೋದರ ಸತೀಶ್ ಜಾರಕಿಹೊಳಿಯನ್ನು ಡಾ ಜಿ ಪರಮೇಶ್ವರ್ ಅವರ ಸರಿಸಮನಾಗಿ ಡಿಸಿಎಂ ಹುದ್ದೆ ಬೇಕೆಂಬ ಬೇಡಿಕೆ ಇಡುವ ಮೂಲಕ ಕಾಂಗ್ರೆಸ್ ನಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವುದನ್ನು ಹೈಕಮಾಂಡ್ ಗೆ ಮನದಟ್ಟು ಮಾಡಲು ಯತ್ನಿಸುತ್ತಿದ್ದಾರೆ.
ಒಂದು ವೇಳೆ ಕಾಂಗ್ರೆಸ್ ಪಕ್ಷ ಇವರನ್ನು ನಿರ್ಲಕ್ಷ್ಯಿಸಿದ್ದೇ ಆದರೆ ಕಾಂಗ್ರೆಸ್ ನಿಂದ ತಾವು ಹೊರ ಹೋಗಿ ಬಿಜೆಪಿ ಜೊತೆ ಸೇರಿಕೊಂಡು ರಾಜ್ಯದಲ್ಲಿ ಮತ್ತೊಂದು ಸರ್ಕಾರ ರಚನೆಯಾದರೆ ಆ ವೇಳೆ ತಾವು ಸೇರಿದಂತೆ ಈಗಾಗಲೇ ಬಿಜೆಪಿಯಲ್ಲಿರುವ ಮತ್ತೊಬ್ಬ ಸಹೋದರ ಬಾಲಚಂದ್ರ ಜಾರಕಿಹೊಳಿ ಸಹಿತ ಸಚಿವರಾಗುತ್ತಾರೆ ಎಂಬುದು ಅವರ ವಿಶ್ವಾಸವಾಗಿದೆ.
ಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ 5 ಪ್ರಶ್ನೆಗಳು
ಕಾಂಗ್ರೆಸ್ ನಲ್ಲಿ ಇದ್ದರೂ ಲಾಭ, ಬಿಜೆಪಿ ಹೋದರೆ ಡಬ್ಬಲ್ ಪ್ರಾಫಿಟ್!
ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತೊಡೆ ತಟ್ಟಿರುವ ಈ ಕಾಳಗದಲ್ಲಿ ಏನೇ ಆದರೂ ಜಾರಕಿಹೊಳಿ ಸಹೋದದರಿಗೆ ಲಾಭವೇ ಆಗಲಿದೆ. ಹೈಕಮಾಂಡ್ ತಲೆ ಬಾಗಿ ಸತೀಶ್ ಜಾರಕಿಹೊಳಿಗೆ ಡಿಸಿಎಂ ಪಟ್ಟ ನೀಡಿದರೆ ಅದು ಗೆಲುವೆ, ಒಂದು ವೇಳೆ ಕಾಂಗ್ರೆಸ್ ನಿರ್ಲಕ್ಷ್ಯ ಮುಂದುವರೆಸಿ ಜಾರಕಿಹೊಳಿ ಸಹೋದರರನ್ನು ಕೈಬಿಟ್ಟರೆ ಅತ್ತ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದರೆ ಎರಡೂ ಸ್ಥಾನಗಳು ಬರುತ್ತವೆ ಎಂಬುದು ಕೂಡ ಲಾಭದ ವಿಚಾರವೇ ಆಗಿದೆ.
ಹೀಗಾಗಿ ಈ ರಾಜಕೀಯ ಅಂದರ್ ಬಾಹರ್ ನಲ್ಲಿ ಏನೇ ಆದರೂ ತಮಗೆ ಲಾಭವೇ ಆಗಲಿದೆ ಎಂಬುದು ಮಾಸ್ಟರ್ ಪ್ಲ್ಯಾನ್ ಹಿಂದಿನ ಉದ್ದೇಶ, ಈ ಎಲ್ಲಾ ಸಾಧ್ಯತೆಗಳನ್ನು ಬಲ್ಲ ಕಾಂಗ್ರೆಸ್ ಪಕ್ಷ ಜಾರಕಿಹೊಳಿ ಸಹೋದರರನ್ನು ಅಷ್ಟು ಸುಲಭವಾಗಿ ನಿರ್ಲಕ್ಷ್ಯಿಸುವುದಿಲ್ಲ ಎನ್ನಲಾಗುತ್ತಿದೆ. ಡಿಕೆ ಶಿವಕುಮಾರ್ ಮೇಲಿನ ಕೋಪವನ್ನು ತಮ್ಮ ರಾಜಕೀಯ ಏಳಿಗೆಗೆ ದಾಳವಾಗಿಸಿಕೊಂಡು ಒಂದೆಡೆ ಸಿದ್ದರಾಮಯ್ಯ ವಿರೋಧಿಯಾದ ಡಿಕೆ ಶಿವಕುಮಾರ್, ಮತ್ತೊಂದೆಡೆ ಸಿದ್ದರಾಮಯ್ಯ ಅವರಿಗೂ ಪಕ್ಷದಲ್ಲಿ ಮಹತ್ವ ಬರುವಂತೆ ಮಾಡಿ ತಾವೂ ಕೂಡ ರಾಜಕೀಯವಾಗಿ ಬಲಿಷ್ಠವಾಗುವುದು ಜಾರಕಿಹೊಳಿ ಬ್ರದರ್ಸ್ ಮಾಸ್ಟರ್ ಪ್ಲ್ಯಾನ್ ನ ಆಧಾರ ಸ್ತಂಭವಾಗಿದೆ.
ರಮೇಶ್ ಜಾರಕಿಹೊಳಿ ನನ್ನ ಆಪ್ತ ಸ್ನೇಹಿತರು : ಡಿ.ಕೆ.ಶಿವಕುಮಾರ್
ಬೆಂಗಳೂರಿನಲ್ಲಿ ಅಧಿಕಾರ ಇದ್ದರೆ ಬೆಳಗಾವಿಯಲ್ಲಿ ಹಿಡಿತ ಸುಲಭ
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಜಾರಕಿಹೊಳಿ ಸಹೋದರರ ಅಂದರ್ ಬಾಹರ್ ಆಟದಲ್ಲಿ ಯಾವುದಾದರೊಂದು ಫಲಿತಾಂಶ ಬರಲೇ ಬೇಕಿದೆ.
ಆದರೆ ಒಂದು ವೇಳೆ ಕಾಂಗ್ರೆಸ್ ನಿರ್ಲಕ್ಷ್ಯಿಸಿದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರಲು ಜಾರಕಿಹೊಳಿ ಸಹೋದರರು ಯಾವ ರೀತಿ ರಣತಂತ್ರ ರೂಪಿಸಬಹುದು, ಎಷ್ಟು ಶಾಸಕರನ್ನು ಸೆಳೆಯಬಹುದು ಮುಂದಿನ ಭವಿಷ್ಯವನ್ನು ನಿರ್ದರಿಸಲಿದೆ.
ಹೀಗಾಗಿ ಬೆಳಗಾವಿ ಜಿಲ್ಲೆಯ ಜಿದ್ದಾಜಿದ್ದಿ ರಾಜಕಾರಣದಲ್ಲಿ ಜಾರಕಿಹೊಳಿ ಸಹೋದರರು ಮತ್ತೊಮ್ಮೆ ತಮ್ಮ ಅಸ್ತಿತ್ವವನ್ನು ಸಾಭೀತುಪಡಿಸಲು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಾರಿರುವ ಸಮರ ಎಲ್ಲಿಗೆ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕು.