ಮಂಗಳೂರು ಗಲಭೆ: ಪೊಲೀಸ್ ವೇಷ ಹಾಕಿಸಿ ಕುಮಾರಸ್ವಾಮಿ ಸಿಡಿ ರೆಡಿ ಮಾಡಿಸಿದ್ರಾ?
ಬೆಂಗಳೂರು, ಜ 10: ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋ ಬಗ್ಗೆ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
"ಕುಮಾರಸ್ವಾಮಿ ವಿಡಿಯೋ ಬಿಡುಗಡೆ ಮಾಡಿರುವ ಬಗ್ಗೆ ಹೆಚ್ಚಿನ ಮಾಹಿತಿ ನನಗಿಲ್ಲ. ಆದರೆ, ವಿಡಿಯೋ ಎನ್ನುವುದು ಕೆಲವರಿಗೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದೊಡ್ಡ ಸಾಧನವಾಗಿದೆ" ಎಂದು ಡಿವಿಎಸ್ ವ್ಯಂಗ್ಯವಾಡಿದ್ದಾರೆ.
"ಯಾವುದೋ ಫೇಕ್ ಸಿಡಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡುವುದು ಅವರ ಹವ್ಯಾಸ. ಕರ್ನಾಟಕದಲ್ಲಿ ಬಿಡುಗಡೆಯಾದ ಸಿಡಿಯನ್ನು ಅವಲೋಕಿಸುತ್ತಾ ಹೋದರೆ, ಹಲವಾರು ಜನ ಜೈಲಿಗೆ ಹೋಗಬೇಕಿತ್ತು. ಜನರನ್ನು ತಪ್ಪುದಾರಿಗೆ ಎಳೆಯಲು ಇಂತಹ ಸಿಡಿ ಬಿಡುಗಡೆಯಾಗುತ್ತದೆ" ಎಂದು ಸದಾನಂದ ಗೌಡ ಪ್ರತಿಕ್ರಿಯಿಸಿದ್ದಾರೆ.

"ಇಂತಹ ಕೆಲಸ ಮಾಡುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು. ಹಾಗಾಗಿ, ಇದರ ಸತ್ಯಾಸತ್ಯತೆಯ ಬಗ್ಗೆ ಹೆಚ್ಚೇನೂ ಹೇಳುವ ಅವಶ್ಯಕತೆಯಿಲ್ಲ. ಮಂಗಳೂರು ಗಲಭೆ ನಡೆದು ಎಷ್ಟು ದಿನವಾಯಿತು. ಸಿಡಿ ರೆಡಿಮಾಡಲು ಕುಮಾರಸ್ವಾಮಿಗೆ ಇಷ್ಟು ದಿನ ಬೇಕಾಯಿತಾ" ಎಂದು ಸದಾನಂದ ಗೌಡ ಲೇವಡಿ ಮಾಡಿದ್ದಾರೆ.
"ಅವರದ್ದೇ ಜನವನ್ನು ಕಳುಹಿಸಿ, ಸಿಡಿ ತಯಾರಿಸಿರಬಹುದು" ಎಂದಿರುವ ಡಿವಿಎಸ್, "ಪೊಲೀಸ್ ವೇಷವನ್ನು ಅವರೇ ಹಾಕಿ ಕಳುಹಿಸಿದ್ದಾರೋ ಏನೋ, ಗೊತ್ತಿಲ್ಲ" ಎಂದು ಹೇಳಿದ್ದಾರೆ.
"ಸಿಡಿ ಬಿಡುಗಡೆಗೆ ಇಷ್ಟು ದಿನ ಯಾಕೆ ಆಯಿತು ಎನ್ನುವುದನ್ನು ಕುಮಾರಸ್ವಾಮಿ ರಾಜ್ಯದ ಜನತೆಗೆ ಮೊದಲು ವಿವರಿಸಲಿ. ಸಿಡಿ ಬಿಡುಗಡೆಯ ಹಿಂದೆ ದೊಡ್ಡ ಹುನ್ನಾರವಿದೆ" ಎಂದು ಸದಾನಂದ ಗೌಡ್ರು, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications