ತಿ.ನರಸಿಪುರ ಕ್ಷೇತ್ರದ ಬಿಜೆಪಿ ಟಿಕೇಟ್ ಮೇಲೆ ಎಸ್. ಶಂಕರ್ ಕಣ್ಣು?!
ಮೈಸೂರು, ಮಾರ್ಚ್ 06: ವಿಧಾನಸಭಾ ಚುನಾವಣೆ ಬರುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ಮುಖಂಡರು ಎಂಬ ಸ್ವಘೋಷಿತ ನಾಯಕರು ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ಗಾಗಿ ಮುಗಿಬೀಳುವುದು ಮಾಮೂಲಿಯಾಗಿದೆ.
ಕೆಲವು ಮುಖಂಡರು ತಾವಿರುವ ಪಕ್ಷದಿಂದ ಟಿಕೆಟ್ ಪಡೆಯಲು ಹರಸಾಹಸ ಮಾಡುತ್ತಾರೆ. ತಮ್ಮ ಜಾತಿಯ ಪ್ರಭಾವವನ್ನು ಬೀರುತ್ತಾರೆ, ಬೆಂಬಲಿಗರ ಮೂಲಕ ಒತ್ತಡ ಹೇರುತ್ತಾರೆ. ಅಷ್ಟೇ ಅಲ್ಲದೆ ಹಿರಿಯ ನಾಯಕರ ಮೂಲಕ ಶಿಫಾರಸ್ಸು ಮಾಡಿಸುತ್ತಾರೆ. ಇಷ್ಟಾದರೂ ಟಿಕೆಟ್ ಸಿಗಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ಬೇರೆ ಪಕ್ಷಗಳತ್ತ ವಲಸೆ ಹೋಗುತ್ತಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಮಾಮೂಲಾಗಿದೆ.
ವಿಧಾನಸಭಾ ಚುನಾವಣೆ: ಮೈಸೂರಿನ 11 ಕ್ಷೇತ್ರಗಳಲ್ಲಿ ಗೆಲ್ಲುವವರ್ಯಾರು..?
ಇಂತಹ ನಾಯಕರ ನಡುವೆ ಬನ್ನೂರಿನ ಎಸ್.ಶಂಕರ್ ಒಬ್ಬರು. ಇವರು ಆರು ತಿಂಗಳಲ್ಲಿ ಎರಡು ಪಕ್ಷವನ್ನು ತೊರೆದು ಮೂರನೇ ಪಕ್ಷದ ಬಾಗಿಲು ತಟ್ಟಿದ್ದಾರೆ.
ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಶಂಕರ್ ಹಲವು ರೀತಿಯ ಸಮಾಜಸೇವೆಗಳನ್ನು ಮಾಡುತ್ತಾ ಸಮಾಜ ಸೇವಕ ಎಂಬ ಹೆಸರನ್ನು ತಮ್ಮ ಮುಂದೆ ಸಿಕ್ಕಿಸಿಕೊಂಡಿದ್ದರು.
ಜೆಡಿಎಸ್ ಸೇರಿದ್ದ ಎಸ್ ಶಂಕರ್
ತಿ.ನರಸೀಪುರ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ನಲ್ಲಿ ಅದು ಸಾಧ್ಯವಿಲ್ಲ ಎಂಬುದು ತಿಳಿದು ಹೋಗಿತ್ತು. ಏಕೆಂದರೆ ನರಸೀಪುರದಿಂದ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಗೆ ಟಿಕೆಟ್ ಎಂಬುದು ಖಾತರಿಯಾಗುತ್ತಿದ್ದಂತೆಯೇ ಅಲ್ಲಿಂದ ಕಾಲ್ತೆಗೆದ ಶಂಕರ್ ಬನ್ನೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಿ ಸಹಸ್ರಾರು ಕಾರ್ಯಕರ್ತರು, ಬೆಂಬಲಿಗರ ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದರು.
ಜೆಡಿಎಸ್ ನಲ್ಲೂ ದಕ್ಕಲಿಲ್ಲ ಟಿಕೇಟ್!
ತಮ್ಮ ಹಿಂದೆ ಇರುವ ಜನ ಬೆಂಬಲವನ್ನು ನೋಡಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ತಿ.ನರಸೀಪುರದಿಂದ ಟಿಕೆಟ್ ನೀಡುತ್ತಾರೆ ಎಂಬ ಬಲವಾದ ನಂಬಿಕೆ ಅವರಲ್ಲಿತ್ತು. ಆದರೆ ಆಗಿದ್ದೇ ಬೇರೆ. ಬಾವುಟ ಕೊಟ್ಟು ಪಕ್ಷಕ್ಕೆ ಕರೆದುಕೊಂಡ ನಾಯಕರು ಮತ್ತೆ ಶಂಕರ್ ಅವರನ್ನು ಮರೆತೇ ಬಿಟ್ಟರು. ಅಲ್ಲಿ ಅವರು ನಗಣ್ಯರಾಗಿಬಿಟ್ಟರು. ಜತೆಗೆ ಅವರ ಬದಲಿಗೆ ಟಿಕೆಟ್ ಅನ್ನು ಅಶ್ವಿನ್ ಕುಮಾರ್ ಎಂಬುವರಿಗೆ ನೀಡಲಾಯಿತು.
ಬಿಜೆಪಿಯಲ್ಲಿ ನೆಲೆ ಕಂಡುಕೊಳ್ಳುವ ಇರಾದೆ!
ಇಷ್ಟಾಗುತ್ತಿದ್ದಂತೆಯೇ ಕುದ್ದು ಹೋದ ಶಂಕರ್ ತಮ್ಮ ತೀರ್ಮಾನವನ್ನೇ ಬದಲಿಸಿಬಿಟ್ಟರು. ಶೀಘ್ರವೇ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಕಮಲದ ಕಡೆಗೆ ಒಲವು ತೋರಿಬಿಟ್ಟರು. ಹಾಗೆನೋಡಿದರೆ ಬಿಜೆಪಿಗೂ ಈ ಕ್ಷೇತ್ರದಲ್ಲಿ ಹಿಂದುಳಿದ ಪ್ರಬಲ ನಾಯಕನ ಅಗತ್ಯ ಇತ್ತು. ಹೀಗಾಗಿ ಅವರು ಒಪ್ಪಿಗೆ ನೀಡಿದ್ದಾರೆ. ಅವರ ನಡುವೆ ಏನು ಮಾತುಕತೆ ನಡೆದಿದೆಯೋ ಗೊತ್ತಿಲ್ಲ. ಟಿಕೆಟ್ ಆಕಾಂಕ್ಷಿಯಾಗಿರುವ ಎಸ್.ಶಂಕರ್ ಇದೀಗ ಜೆಡಿಎಸ್ ತೊರೆದು ಮತ್ತೆ ಭಾರೀ ಕಾರ್ಯಕರ್ತರ ಸಮಾಗಮದೊಂದಿಗೆ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ.
ಬಿಜೆಪಿ ಟಿಕೇಟ್ ಸಿಗುತ್ತಾ?
2018ನೇ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದಲ್ಲಿ ಎಡಗೈ ಕೋಮಿಗೆ ಸೇರಿದವರಿಗೆ ಟಿಕೇಟ್ ನೀಡದೆ ವಂಚನೆ ಮಾಡಿದ್ದಾರೆ. ಹೀಗಾಗಿ ಬಿಜೆಪಿಯನ್ನು ಸೇರಿ ತಕ್ಕ ಪಾಠ ಕಲಿಸುವುದಾಗಿ ಹೇಳಿದ್ದಾರೆ. ಬನ್ನೂರು, ಸೋಸಲೆ, ತಲಕಾಡು, ಮುಲಗೂಡು ಹೋಬಳಿಯ ಸುತ್ತಮುತ್ತಲಿನ ಗ್ರಾಮದ ಎಲ್ಲ್ಲ ಮುಖಂಡರು, ಹಿರಿಯ ವ್ಯಕ್ತಿಗಳು, ಯುವ ಮುಖಂಡರನ್ನು ಸಂಪರ್ಕ ಮಾಡಿ ಎರಡು ಸುತ್ತು ಅವರೊಂದಿಗೆ ಮಾತುಕತೆ ನಡೆಸಿ ತಮ್ಮ ಬೆಂಬಲಿಗರನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾಗಿ ಹೇಳಲಾಗುತ್ತಿದೆ.