ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ನೋಡಿ
ಮಂಡ್ಯ, ಮಾರ್ಚ್ 09: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉದ್ಯಮಿಯಾದ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಅವರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ. ಕಳೆದ ಮೂರು ಪ್ರಮುಖ ಚುನಾವಣೆಗಳಲ್ಲೂ ಹೊಸ ಮುಖಗಳನ್ನೇ ಪರಿಚಯಿಸಿ ಗೆದ್ದು ಸಫಲವಾಗಿರುವ ಕಾಂಗ್ರೆಸ್, ಈ ಬಾರಿಯ ಮಂಡ್ಯ ಕ್ಷೇತ್ರದಿಂದ ಹೊಸ ಮುಖವನ್ನ ಕಣಕ್ಕಿಳಿಸಿದೆ.
ಮಂಡ್ಯ ಜಿಲ್ಲೆಯ ಸಾಮಾನ್ಯ ರೈತಕುಟುಂಬದಲ್ಲಿ ಜನಿಸಿ ಸ್ವಂತ ದುಡಿಮೆಯಿಂದ ಉದ್ಯಮಿಯಾಗಿ ಬೆಳೆದ ಕ್ರಿಯಾಶೀಲ ಸಾಹಸಿ. ಹಳ್ಳಿಗಾಡಿನಲ್ಲಿ ವಿದ್ಯಾಭ್ಯಾಸ ಮಾಡಿ ಬೆಂಗಳೂರು ನಗರದಲ್ಲಿ ಬದುಕು ಕಟ್ಟಿಕೊಂಡು ಸಾವಿರಾರು ಜನರಿಗೆ ಉದ್ಯೋಗಕಲ್ಪಿಸಿದ್ದಾರೆ.

ಶ್ರೀ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಜನಿಸಿದ್ದು ದಿನಾಂಕ 24.06.1965 ರಂದು, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು, ಬೆಳ್ಳೂರು ಹೋಬಳಿಗೆ ಸೇರಿದ ಕನ್ನಾಘಟ್ಟ ಗ್ರಾಮದ ರೈತಕುಟುಂಬದಲ್ಲಿ. ತಂದೆ ಲೇಟ್ ಹೊನ್ನೇಗೌಡ ಮತ್ತು ತಾಯಿ ಶ್ರೀಮತಿ ಗಂಗಮ್ಮ.
ಆದಿಚುಂಚನಗಿರಿ ತಪೋಭೂಮಿಯ ಪರಿಸರದಲ್ಲಿ ಚಂದ್ರು ಅವರ ಬಾಲ್ಯ ಕಳೆಯಿತು. ಬೆಳ್ಳೂರು ಹೋಬಳಿಯ ಅಗಚಹಳ್ಳಿ ಮತ್ತು ಬೆಳ್ಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಮುಗಿಸಿ ಆದಿಚುಂಚನಗಿರಿಯಲ್ಲಿ ಪಿ ಯು ಸಿ ಶಿಕ್ಷಣ ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಅವರು ವಿವೇಕಾನಂದ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸಿ ಬಿ.ಎಸ್ಸಿ ಪದವಿ ಪಡೆದರು. ತುಂಬ ಕುಟುಂಬದ ನಾಗಮಂಗಲ ತಾಲ್ಲೂಕಿನ ಕನ್ನಾಘಟ್ಟದ ಹೊನ್ನೆಗೌಡರ ಮಗ ಸ್ಟಾರ್ ಚಂದ್ರು'ಆಗಿ ಉದ್ಯಮಿ.
ಪದವಿ ಶಿಕ್ಷಣ ಪಡೆದ ನಂತರ ಸರ್ಕಾರಿ ಉದ್ಯೋಗ ಕೈಬೀಸಿ ಕರೆದರೂ ಅದಕ್ಕೆ ಒಲಿಯದೆ ಹಿರಿಯ ಅಣ್ಣ ಕೆ ಎಚ್ ಪುಟ್ಟಸ್ವಾಮಿಗೌಡ ಅವರು ಆರಂಭಿಸಿದ್ದ ಉದ್ದಿಮೆಯಲ್ಲಿ ಕೈಜೋಡಿಸಿದರು. ಪ್ರಾಮಾಣಿಕತೆ, ಸಜ್ಜನಿಕೆ ಮತ್ತು ಶ್ರಮದ ಆಧಾರದಿಂದ ಉದ್ದಿಮೆಗಳನ್ನು ಬೆಳೆಸಿ ಯಶಸ್ಸು ಕಂಡ ವೆಂಕಟರಮಣೇಗೌಡ, ನಮ್ಮ 'ಸ್ಟಾರ್ ಚಂದ್ರು' ತಮ್ಮ ಅನುಭವಗಳನ್ನೇ ಬಂಡವಾಳ ಮಾಡಿಕೊಂಡು ತಮ್ಮದೇ ಸ್ವತಂತ್ರ ಉದ್ದಿಮೆ 'ಸ್ಟಾರ್ ಇನ್ಫ್ರಾಟೆಕ್' ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದರು.
'ಸ್ಟಾರ್ ಇನ್ಫ್ರಾಟೆಕ್' ಸಂಸ್ಥೆಯು ಈಗ ಬೆಂಗಳೂರಿನಲ್ಲಿ ಸುಮಾರು ನಾಲ್ಕು ಸಾವಿರ ಮಂದಿಗೆ ಉದ್ಯೋಗ ನೀಡಿದೆ. ಕರ್ನಾಟಕ ಸರ್ಕಾರದ ಅನೇಕ ನಿರ್ಮಾಣದ ಕಾಮಗಾರಿಗಳನ್ನು, ಮೂಲಭೂತ ಸೌಲಭ್ಯಗಳನ್ನು ನಿರ್ಮಿಸಿರುವ ಸಂಸ್ಥೆಯು ರಾಜ್ಯದ ಅಭಿವೃದ್ಧಿಯಲ್ಲಿ ತನ್ನದೇ ಪಾಲನ್ನು ನೀಡಿದೆ. ಗುಣಮಟ್ಟದ ಕಾಮಗಾರಿ, ಸಮರ್ಥ ಆರ್ಥಿಕ ನಿರ್ವಹಣೆ, ಸಮಯಮಿತಿಯಲ್ಲಿ ಯೋಜನೆಗಳ ಅನುಷ್ಠಾನದ ಬದ್ಧತೆಗೆ ಹೆಸರಾಗಿರುವ ಸಂಸ್ಥೆಯ ಯಶಸ್ಸಿಗೆ ಚಂದ್ರು ಅವರ ಮನ್ನೋಟ ಮತ್ತು ಕ್ರಿಯಾಶೀಲ ನಾಯಕತ್ವವೇ ಆಧಾರ. ಅವರು ಈಗ ಚಂದ್ರಣ್ಣ ಮಾತ್ರವಾಗಿ ಉಳಿದಿಲ್ಲ. 'ಸ್ಟಾರ್ ಚಂದ್ರು' ಎಂದೇ ಖ್ಯಾತಿಯಾಗಿದ್ದಾರೆ.
ಆಯ್ಕೆ ಮಾಡಿದ ಕಾಂಗ್ರೆಸ್ ವರಿಷ್ಠರಿಗೆ ಆಭಾರಿ: ವೆಂಕಟರಮಣೇಗೌಡ
ಮಂಡ್ಯ ಜಿಲ್ಲಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಶಾಸಕರು, ಎಲ್ಲ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರುಗಳು, ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಒಕ್ಕೊರಲಿನಿಂದ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಲು ಕೆಪಿಸಿಸಿಗೆ ಶಿಫಾರಸು ಮಾಡಿದ್ದರು. ಹಾಗಾಗಿ ಇಂದು ನನ್ನನ್ನು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ. ಇದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರು ತಿಳಿಸಿದ್ದಾರೆ.
ನನ್ನನ್ನು ಆಯ್ಕೆ ಮಾಡಿದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರಿಗೆ ಮತ್ತು ಮಂಡ್ಯ ಜಿಲ್ಲೆಯ ಜನತೆಗೆ ಕೃತಜ್ಞತೆಯನ್ನು ಹೇಳಬಯಸುತ್ತೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಹೇಗೆ ಮತದಾರರು ಕಾಂಗ್ರೆಸ್ ಪಕ್ಷವನ್ನು ಕೈಹಿಡಿದರೋ, ಹಾಗೆಯೇ ಈಗ ಸಂಸತ್ ಚುನಾವಣೆಯಲ್ಲಿಯೂ ನನ್ನನ್ನು ಆಯ್ಕೆ ಮಾಡಲಿದ್ದಾರೆ ಎಂಬ ಭರವಸೆ ನನಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳೇ ನನಗೆ ಶ್ರೀರಕ್ಷೆಯಾಗಿದೆ ಎಂದು ಹೇಳಿದರು.












Click it and Unblock the Notifications