ಸುರೇಶ್ ಕುಮಾರ್ ಕೊಟ್ಟ ಶಾಕ್ ಟ್ರೀಟ್ ಮೆಂಟ್ಗೆ ಡಿಸಿಎಂ ಅಶ್ವಥ ನಾರಾಯಣ ಥಂಡಾ!
ಬೆಂಗಳೂರು, ಜು. 21: ಪ್ರಧಾನಿ ಮೋದಿ ಅವರಿಂದ ಶಹಬ್ಬಾಸ್ ಗಿರಿ ಗಿಟ್ಟಿಸಲು ರಾಜ್ಯದಲ್ಲಿ ಪದವಿ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಕಟ್ಟಪ್ಪಣೆ ಮಾಡಿದ್ದಾರೆ. ಮೂರು ವರ್ಷದ ಪದವಿಯನ್ನು ನಾಲ್ಕು ವರ್ಷಕ್ಕೆ ಮಾಡಲಾಗಿದೆ. ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯಕ್ರಮ ಸಿದ್ಧಗೊಂಡಿಲ್ಲ. ಪಠ್ಯ ಪುಸ್ತಕ ಮುದ್ರಣವಾಗಿಲ್ಲ. ಕಾಲೇಜುಗಳನ್ನು ಆರಂಭಿಸಿಲ್ಲ. ಹೀಗೆ ಸಮಸ್ಯೆಗಳ ಸರಮಾಲೆ ನಡುವೆ ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರಿಗೆ ಶಾಕ್ ವೇವ್ ನೀಡಿದ್ದಾರೆ.
ಡಿಸಿಎಂ ಸ್ಥಿತಿ ಅಯೋಮಯ: ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 5 ರಿಂದ 6 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದರು. ಅದರಲ್ಲಿ ಶೇ. 30 ರಷ್ಟು ವಿದ್ಯಾರ್ಥಿಗಳು ಅನುತ್ತಿರ್ಣರಾಗಿ 4 ಲಕ್ಷ ಮಂದಿಯಷ್ಟೇ ಉತ್ತೀರ್ಣರಾಗುತ್ತಿದ್ದರು. ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ವರ್ಷ 6.66 ಲಕ್ಷ ವಿದ್ಯಾರ್ಥಿಗಳು ಪಿಯುಸಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಹೊರ ಬಂದಿದ್ದಾರೆ. ಪಿಯುಸಿಗೆ ದಾಖಲಾಗಿದ್ದ ಅಷ್ಟು ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಹಬ್ಬಾಸ್ಗಿರಿಯೂ ಗಿಟ್ಟಿಸಿ ಆಯಿತು. ಇದೀಗ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಿ ಭೇಷ್ ಎನಿಸಿಕೊಳ್ಳುವ ಕಾತುರದಲ್ಲಿದ್ದಾರೆ. ಈ ಬಾರಿ ಉತ್ತೀರ್ಣರಾಗಿರುವ ಪಿಯುಸಿ ಅಷ್ಟೂ ವಿದ್ಯಾರ್ಥಿಗಳ ಮುಂದಿನ ಕಲಿಕೆಗೆ ಅವಕಾಶ ಕೊಡಬೇಕಿರುವುದು ಉನ್ನತ ಶಿಕ್ಷಣ ಇಲಾಖೆಯ ಜವಾಬ್ಧಾರಿ. ರಾಜ್ಯದಲ್ಲಿ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇರುವ ಅವಕಾಶ.
ಪಠ್ಯಪುಸ್ತಕವಿಲ್ಲ, ಸಿಲಬಸ್ ಇಲ್ಲ
ಪಿಯುಸಿ ಫಲಿತಾಂಶ ಹೊರ ಬೀಳುತ್ತಿದ್ದಂತೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ನಿದ್ದೆಗೆಡಿಸಿದೆ. ಯಾವ ಪೂರ್ವ ತಯಾರಿ ಇಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಹೊರಟಿರುವ ಉನ್ನತ ಶಿಕ್ಷಣ ಇಲಾಖೆಗೆ ಇದೀಗ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕೆ ಅವಕಾಶ ಕಲ್ಪಿಸುವುದು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕೇವಲ ಅತಿಥಿ ಉಪನ್ಯಾಸಕರ ಮೇಲೆ ಕಾಲೇಜುಗಳನ್ನು ನಡೆಸುತ್ತಿರುವ ಇಲಾಖೆ ಈ ವರ್ಷ ರಾಜ್ಯದಲ್ಲಿ ಎರಡು ಪಟ್ಟು ಕಾಲೇಜು ಆರಂಭಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಇದ್ಯಾವುದರ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿಲ್ಲ. ಹೀಗಾಗಿ ಪದವಿ ಶಿಕ್ಷಣ ಅಧ್ಯಯನದ ಬಗ್ಗೆ ದೊಡ್ಡ ಗೊಂದಲವೇ ಏರ್ಪಟ್ಟಿದೆ.
ದೊಡ್ಡ ಸವಾಲಾಗಿ ಪರಿಣಮಿಸಿದೆ
ರಾಜ್ಯದಲ್ಲಿ ವೈದ್ಯಕೀಯ ( ಎಂಬಿಬಿಎಸ್ ) ವ್ಯಾಸಂಗಕ್ಕೆ ಅವಕಾಶ ಇರುವುದು ಸುಮಾರು 15 ಸಾವಿರ. ರಾಜ್ಯದ ವಿಟಿಯು , ಖಾಸಗಿ ಇಂಜಿನಿಯರಿಂಗ್ ಕಾಲೇಜು, ಡೀಮ್ಡ್ ವಿವಿಯಲ್ಲಿ ಇರುವ ಇಂಜಿನಿಯರಿಂಗ್ ಸೀಟುಗಳು 1 ಲಕ್ಷ . ಕಳೆದ ವರ್ಷ ತುಂಬಿದ್ದು ಕೇವಲ 35 ಸಾವಿರ, ಈ ವರ್ಷ ಎಲ್ಲಾ ಭರ್ತಿಯಾದರೂ ಒಂದು ಲಕ್ಷ. ಇನ್ನು ವೃತ್ತಿಪರ ಕೋರ್ಸ್ ಗಳಿಗೆ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ಸೇರ್ಪಡೆಯಾದರೂ ದುಬಾರಿಯೇ. ಇನ್ನು ಬಿಎಸ್ ಸಿ, ಬಿಬಿಎ, ಬಿಕಾಂ, ಬಿಬಿಎಂ, ಬಿಎ ಪದವಿ ಅಧ್ಯಯನ ವ್ಯಾಸಂಗ ಮಾಡಲಿಕ್ಕೆ ಬರೋಬ್ಬರಿ ನಾಲ್ಕೂವರೆ ಲಕ್ಷ ವಿದ್ಯಾರ್ಥಿಗಳು ಉಳಿದುಕೊಳ್ಳಲಿದ್ದಾರೆ. ಇಷ್ಟು ವಿದ್ಯಾರ್ಥಿಗಳಿಗೆ ಪದವಿ ಸೇರಲು ಅವಕಾಶ ನೀಡಲು ಸಾಧ್ಯವೇ ? ರಾಜ್ಯದಲ್ಲಿ ಪದವಿ ವ್ಯಾಸಂಗಕ್ಕೆ ಅವಕಾಶ ಇರುವುದು ಎರಡು ಲಕ್ಷ ವಿದ್ಯಾರ್ಥಿಗಳು. ಉಳಿದ ಎರಡೂವರೆ ಲಕ್ಷ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಯಾವ ರೀತಿ ಉನ್ನತ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಲಿದೆ ಎಂಬುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ
ಕೊರೊನಾದಿಂದ ಬಹುತೇಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪಿಯುಸಿ ಫಲಿತಾಂಶ ನೋಡಿ ಖಾಸಗಿ ಕಾಲೇಜುಗಳು ಕುಣಿದಾಡುತ್ತಿವೆ. ಸಹಜವಾಗಿ ಇಂಜಿನಿಯರಿಂಗ್ ಪದವಿಯ ಶುಲ್ಕ ಹೆಚ್ಚಳವಾಗಲಿದೆ. ಇದರ ಜತೆಗೆ ಪದವಿ ಕಾಲೇಜುಗಳು ಕೂಡ ಈ ವರ್ಷ ಶುಲ್ಕ ಹೆಚ್ಚಳಕ್ಕೆ ಅದಾಗಲೇ ಅಡಿಗಲ್ಲು ಹಾಕಲಿವೆ. ಎರಡು ಲಕ್ಷ ವಿದ್ಯಾರ್ಥಿಗಳು ವಿವಿಧ ಪದವಿ ಕೋರ್ಸ್ ಗಳಿಗೆ ಸೇರಲು ಅವಕಾಶವಿದೆ. ಅನಿವಾರ್ಯವಾಗಿ ಪದವಿ ಕೋರ್ಸ್ ತೆಗೆದುಕೊಳ್ಳಬೇಕಿರುವರು 4.66 ಲಕ್ಷ ವಿದ್ಯಾರ್ಥಿಗಳು. ಈ ಅವಕಾಶವನ್ನೇ ಬಳಸಿಕೊಂಡು ಬಹುತೇಕ ಖಾಸಗಿ ಕಾಲೇಜುಗಳು ಶುಲ್ಕ ಹೆಚ್ಚಳ ಮಾಡಲಿವೆ. ಹೀಗಾಗಿ ಉನ್ನತ ಶಿಕ್ಷಣ ಕೂಡ ಬಡವರ ಪಾಲಿಗೆ ಕೈಗೆಟುದ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡಬೇಕಿಲ್ಲ.
ಥರಾತುರಿ ತಯಾರಿ ಯಶಸ್ಸು ಸಾಧ್ಯವೇ
ಶುಲ್ಕ ಹೆಚ್ಚಳ ಹಾಗೂ ಹೆಚ್ಚುವರಿ ಎರಡೂವರೆ ಲಕ್ಷ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಪಾಸಾಗಿರುವ ಕಾರಣ ಸರ್ಕಾರಿ ಪದವಿ ಕಾಲೇಜುಗಳತ್ತ ಎಲ್ಲರೂ ಮುಖ ಮಾಡಲಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸರ್ಕಾರಿ ಪದವಿ ಕಾಲೇಜುಗಳಿಗೆ ಬಹು ಬೇಡಿಕೆ ಉಂಟಾಗಿದೆ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಓದಿಸಲಾಗದ ಬಡ ಮಕ್ಕಳು ಸರ್ಕಾರಿ ಕಾಲೇಜುಗಳ ಮೊರೆ ಹೋಗಲಿದ್ದಾರೆ. ವಾಸ್ತವದಲ್ಲಿ ರಾಜ್ಯದಲ್ಲಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಪರಿಶ್ರಮದ ಮೇಲೆ ನಡೆಯುತ್ತಿವೆ. ಅನೇಕ ವರ್ಷಗಳಿಂದ ಕಾಲೇಜು ಉಪನ್ಯಾಸಕರ ನೇಮಕಾತಿ ನಡೆದಿಲ್ಲ. ಪದವಿ ಕಾಲೇಜುಗಳನ್ನು ಸ್ಥಾಪಿಸಿಲ್ಲ. ರಾತ್ರೋ ರಾತ್ರಿ ಈಗ ಪದವಿ ಕಾಲೇಜು ಸ್ಥಾಪನೆ ಮಾಡಲೂ ಸಾಧ್ಯವಿಲ್ಲ. ಹೀಗಾಗಿ ಕಾಲೇಜುಗಳಲ್ಲಿ ರಾತ್ರಿ ಕಾಲೇಜು ಆರಂಭಿಸಲು ಉನ್ನತ ಶಿಕ್ಷಣ ಮಂತ್ರಿ ಅಶ್ವತ್ಥ್ ನಾರಾಯಣ ಎಲ್ಲಾ ವಿವಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ನೈಟ್ ಕಾಲೇಜುಗಳ ಪರ್ವ ಆರಂಭವಾಗಲಿದೆ. ಆದರೆ, ಹಗಲು ಕೆಲಸ ಮಾಡಿದ ಉಪನ್ಯಾಸಕರೇ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಇದು ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದು ಕಾದು ನೋಡಬೇಕಿದೆ.
Recommended Video
ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ವಿದ್ಯಾರ್ಥಿಗಳ ಹೆಚ್ಚಳ
ರಾಜ್ಯದಲ್ಲಿ ಇದೇ ವರ್ಷ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ. ಅದರ ಪ್ರಕಾರ ಪದವಿಯನ್ನು ನಾಲ್ಕು ವರ್ಷಗಳ ಕಲಿಕೆಗೆ ಅವಕಾಶ ಕಲ್ಪಿಸಬೇಕು. ಇದಕ್ಕೆ ಪಠ್ಯಪುಸ್ತಕ ಮುದ್ರಿಸಬೇಕು. ಪಠ್ಯಕ್ರಮ ತಯಾರು ಮಾಡಬೇಕು. ಇದೀಗ ಪಿಯುಸಿ ಫಲಿತಾಂಶ ಬಂದಗಿದೆ. ಆರೂವರೆ ಲಕ್ಷ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಕಾಲೇಜುಗಳನ್ನು ಸಜ್ಜುಗೊಳಿಸುವುದಾ? ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವುದಾ? ಮುಂದಿನ ಒಂದು ತಿಂಗಳಲ್ಲಿ ಇಷ್ಟೆಲ್ಲಾ ಕೆಲಸಗಳು ಯಾವ ಪೂರ್ವ ತಯಾರಿ ಇಲ್ಲದೇ ನಡೆಯಲು ಸಾಧ್ಯವೇ? ಪದವಿ ಸೇರುವ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮುದ್ರಣಕ್ಕೆ ತಿಂಗಳು ಗಟ್ಟಲೇ ಕಾಲಾವಕಾಶ ಬೇಕು. ಪದವಿ ಪೂರ್ಣ ಶಿಕ್ಷಣ ಇಲಾಖೆ ಪಿಯುಸಿ ಫಲಿತಾಂಶ ಡಿಸಿಎಂ ಅಶ್ವತ್ಥ್ ನಾರಾಯಣ ಅವರಿಗೆ ನಿದ್ದೆಗೆಡಿಸಿರುವುದು ಮಾತ್ರ ಸತ್ಯ.