ಸಿಎಂ ಯಡಿಯೂರಪ್ಪ ವಿದೇಶ ಪ್ರವಾಸ ರದ್ದುಗೊಳಿಸಿದ್ದು ಈ ಕಾರಣಕ್ಕಾ?
ಸ್ವಿಜರ್ಲೆಂಡ್ ನ ದಾವೋಸ್ ನಲ್ಲಿ, ಜನವರಿ 21-24ರವರೆಗೆ ನಡೆಯುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾಗವಹಿಸುವ ನಿರ್ಧಾರದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಹಿಂದಕ್ಕೆ ಸರಿದಿದ್ದಾರೆ.
ಜನವರಿ 20ಕ್ಕೆ ಮುಖ್ಯಮಂತ್ರಿಗಳು ಪ್ರಯಾಣ ಬೆಳೆಸಬೇಕಾಗಿತ್ತು. ಪ್ರಧಾನಮಂತ್ರಿ ಕಾರ್ಯಾಲಯದಿಂದಲೂ ಸಭೆಯಲ್ಲಿ ಭಾಗವಹಿಸಲು ಯಡಿಯೂರಪ್ಪನವರಿಗೆ ಆಹ್ವಾನವೂ ಬಂದಿತ್ತು. ಇವರೊಂದಿಗೆ ತೆರಳುವ ಹದಿಮೂರು ಜನರ ತಂಡವೂ ಅಂತಿಮವಾಗಿತ್ತು.
ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಮಧ್ಯಪ್ರದೇಶದ ಸಿಎಂ ಕಮಲನಾಥ್ ಮತ್ತು ಕರ್ನಾಟಕದ ಸಿಎಂ ಯಡಿಯೂರಪ್ಪನವರಿಗೆ ಮಾತ್ರ, ಪಿಎಂ ಕಾರ್ಯಾಲಯ ಆಹ್ವಾನ ನೀಡಿತ್ತು. ಆದರೆ, ಯಡಿಯೂರಪ್ಪನವರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ಮೇಲ್ನೋಟಕ್ಕೆ ಸ್ವಿಜರ್ಲೆಂಡ್ ನಲ್ಲಿ ವಿಪರಿಮಿತ ಚಳಿ ಇರುವ ಕಾರಣಕ್ಕಾಗಿ ಸಿಎಂ ಪ್ರವಾಸ ರದ್ದಾಗಿದೆ ಎಂದು ಹೇಳಲಾಗುತ್ತಿದ್ದರೂ, ಅಸಲಿ ಕಾರಣ, ಬೇರೆಯೇ ಇದೆ ಎಂದು ಹೇಳಲಾಗುತ್ತಿದೆ.

ಚಳಿಯ ಕಾರಣಕ್ಕಾಗಿ ಮುಖ್ಯಮಂತ್ರಿಗಳ ಪ್ರವಾಸ ರದ್ದು.
ಚಳಿಯ ಕಾರಣಕ್ಕಾಗಿ ಮುಖ್ಯಮಂತ್ರಿಗಳು ಪ್ರವಾಸಕ್ಕೆ ಹಿಂದೆ ಮುಂದೆ ನೋಡುತ್ತಿದ್ದರಾದರೂ, ಕೊನೆಗೆ, ಸ್ವತಃ ಪ್ರಯಾಣಕ್ಕೆ ಅವರೇ ಒಪ್ಪಿಗೆ ಸೂಚಿಸಿದ್ದರು. ದಾವೋಸ್ ನಲ್ಲಿ ಸದ್ಯ ನಾಲ್ಕು ಡಿಗ್ರಿಗಿಂತಲೂ ಕಮ್ಮಿ ಉಷ್ಣಾಂಶ ಇರುವುದರಿಂದ, ಆರೋಗ್ಯದ ದೃಷ್ಟಿಯಿಂದ, ಯಡಿಯೂರಪ್ಪನವರ ಪ್ರವಾಸ ರದ್ದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ...

ಸಚಿವ ಸ್ಥಾನಕ್ಕೆ ತೀವ್ರ ಒತ್ತಡ
ಮಕರ ಸಂಕ್ರಾಂತಿಯ ನಂತರ ಸಂಪುಟ ವಿಸ್ತರಣೆ/ಪುನರ್ ರಚನೆ ನಿಗದಿಯಾಗಿದೆ. ಧನುರ್ಮಾಸ ಮುಗಿಯವುದನ್ನೇ ಕಾಯುತ್ತಿರುವ ಹೊಸದಾಗಿ ಆಯ್ಕೆಯಾದ ಶಾಸಕರು ಮತ್ತು ಉಪಚುನಾವಣೆಯಲ್ಲಿ ಸೋತ ಇಬ್ಬರು (ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್) ಸಚಿವ ಸ್ಥಾನಕ್ಕೆ ತೀವ್ರ ಒತ್ತಡ ಹೇರುತ್ತಿರುವುದು ಗೊತ್ತಿರುವ ವಿಚಾರ.

ಹಿರಿಯ ಮುಖಂಡರ ಲಾಬಿಯೂ ಜೋರಾಗಿ ನಡೆಯುತ್ತಿದೆ
ಇದರ ಜೊತೆಗೆ, ಬಿಜೆಪಿಯ ಹಿರಿಯ ಮುಖಂಡರ ಲಾಬಿಯೂ ಜೋರಾಗಿ ನಡೆಯುತ್ತಿದೆ. ಉಮೇಶ್ ಕತ್ತಿ, ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರಾಮದಾಸ್, ಅರವಿಂದ ಲಿಂಬಾವಳಿ ಮುಂತಾದ ಪಕ್ಷನಿಷ್ಠರೂ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ, ಉಪಮುಖ್ಯಮಂತ್ರಿ ಹುದ್ದೆಯ ಒತ್ತಡ ಬೇರೆ..

ಸಚಿವ ಸಂಪುಟ ವಿಸ್ತರಣೆ
ಸಚಿವ ಸಂಪುಟ ವಿಸ್ತರಣೆ ಮತ್ತು ಅದರ ನಂತರ ಆಗಬಹುದಾದ ಬೆಳವಣಿಗೆಗಳ ಬಗೆಗಿನ ಸೂಕ್ಷ್ಮತೆಯನ್ನು ಅರಿತಿರುವ ಯಡಿಯೂರಪ್ಪ, ವಿದೇಶ ಪ್ರವಾಸದಿಂದ ಹಿಂದಕ್ಕೆ ಸರಿದಿರಬಹುದು ಎನ್ನುವ ಮಾತೂ ಕೇಳಿಬರುತ್ತಿದೆ. ಡಿಸಿಎಂ ಹುದ್ದೆಯನ್ನು ತೆಗೆದು ಹಾಕಬೇಕು ಎನ್ನುವ ಒತ್ತಡ ಒಂದು ಕಡೆ, ಮುಂದುವರಿಸಿದರೆ, ರಮೇಶ್ ಜಾರಕಿಹೊಳಿ ಅಥವಾ ಶ್ರೀರಾಮುಲು ಅವರಿಗೂ ಡಿಸಿಎಂ ನೀಡಬೇಕೆನ್ನುವ ಕೂಗು, ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಯಡಿಯೂರಪ್ಪನವರು ದಾವೋಸ್ ಪ್ರವಾಸ ರದ್ದು ಮಾಡಿದ್ದಾರೆ
ಸಂಪುಟ ವಿಸ್ತರಣೆಯ ನಂತರ ಸಚಿವ ಸ್ಥಾನ ವಂಚಿತ ಅಸಮಾಧಾನ ಹೆಚ್ಚಾದರೆ, ವಿದೇಶ ಪ್ರವಾಸದಲ್ಲಿ ಇದ್ದರೆ, ಅದನ್ನು ನಿಭಾಯಿಸಲು ಕಷ್ಟವಾಗಬಹುದು ಎನ್ನುವ ಕಾರಣಕ್ಕಾಗಿ ಯಡಿಯೂರಪ್ಪನವರು ದಾವೋಸ್ ಪ್ರವಾಸ ರದ್ದು ಮಾಡಿದ್ದಾರೆ ಎನ್ನುವ ಮಾತೂ ಚಾಲ್ತಿಯಲ್ಲಿದೆ.












Click it and Unblock the Notifications