ಕರ್ನಾಟಕದಲ್ಲೂ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಕಡ್ಡಾಯ?
ಬೆಂಗಳೂರು, ಮಾರ್ಚ್ 10 : ಖಾದಿ ಬಟ್ಟೆ ಬಳಕೆಗೆ ಉತ್ತೇಜನ ನೀಡಲು ಸರ್ಕಾರಿ ನೌಕರರಿಗೆ ವಾರದಲ್ಲಿ ಒಂದು ದಿನ ಖಾದಿ ವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಇಂತಹ ನಿಯಮ ಜಾರಿಗೆ ತರಲು ಚಿಂತನೆ ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿ ಖಾದಿ ಮತ್ತು ಗ್ರಾಮೋದ್ಯಮವನ್ನು ಉತ್ತೇಜಿಸಲು ಇಂತಹ ನಿಯಮ ಜಾರಿಗೆ ತರಲು ಸರ್ಕಾರ ಮುಂದಾಗಿದೆ. [ಸಭ್ಯತೆ,ಸ್ವಾತಂತ್ರ್ಯ, ರೈತರ ಏಳಿಗೆ 'ಖಾದಿ' ಯಲ್ಲಿದೆ: ಮೋದಿ]

ರಾಜ್ಯ ಸರ್ಕಾರಿ ನೌಕರರು ಕಡ್ಡಾಯವಾಗಿ ವಾರದಲ್ಲಿ ಒಂದು ದಿನ ಖಾದಿಯನ್ನು ಧರಿಸಲು ಪ್ರೇರೇಪಣೆ ನೀಡಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬ್ರಾಂಡ್ ಅಂಬಾಸಿಡರ್ ಆಗಲಿದ್ದು, ತಾವೇ ಮುಂಚೂಣಿಯಲ್ಲಿ ನಿಂತರೆ ಸರ್ಕಾರಿ ನೌಕರರು ಮಾತ್ರವಲ್ಲ, ಜನಸಾಮಾನ್ಯರ ನಡುವೆಯೂ ಖಾದಿ ಜನಪ್ರಿಯವಾಗಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ. [ರೇಡಿಯೋ ಮೂಲಕ ಖಾದಿ ಮಂತ್ರ ಜಪಿಸಿದ ಮೋದಿ]
ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಮಟ್ಟದಲ್ಲಿ ಖಾದಿ ಬಗ್ಗೆ ಒಲವು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಖಾದಿಗೆ ಆದ್ಯತೆ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇನ್ನು ಮುಂದೆ ಪ್ರತಿ ಶುಕ್ರವಾರ ಕೇಂದ್ರ ಸರ್ಕಾರಿ ನೌಕರರು ಕಡ್ಡಾಯವಾಗಿ ಖಾದಿ ವಸ್ತ್ರ ಧರಿಸಬೇಕು ಎಂದು ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. [ಬಾಗಲಕೋಟೆ: 32 ಸಾವಿರ ಜನ ಕೆಲಸ ಕಳೆದುಕೊಳ್ಳುವ ಭೀತಿ]
'ಕೇಂದ್ರ ಸರ್ಕಾರ ಈಗಾಗಲೇ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿದೆ. ಶೀಘ್ರದಲ್ಲೇ ಖಾದಿ ಬಟ್ಟೆ ತೊಡುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ' ಎಂದು ಕೇಂದ್ರ ಖಾದಿ ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ವಿ.ಕೆ.ಸಕ್ಸೇನ ತಿಳಿಸಿದ್ದಾರೆ.
ಪುರುಷರು ಖಾದಿ ಶರ್ಟ್ ಮತ್ತು ಪ್ಯಾಂಟ್ ಹಾಗೂ ಮಹಿಳೆಯರು ಖಾದಿ ಸೀರೆ ಹಾಗೂ ರವಿಕೆ ಧರಿಸಬೇಕು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲಿದ್ದು, ಇದರಿಂದಾಗಿ ಕೇಂದ್ರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎರಡು ಕೋಟಿಗೂ ಹೆಚ್ಚು ನೌಕರರು ಖಾದಿ ಧರಿಸಲಿದ್ದಾರೆ.












Click it and Unblock the Notifications