Get Updates
Get notified of breaking news, exclusive insights, and must-see stories!

BK Hariprasad: ಜಾತಿ ಜನಗಣತಿ ವರದಿ ಜಾರಿಗೆ ತಂದೇ ತರುತ್ತೇವೆ: ಬಿ ಕೆ ಹರಿಪ್ರಸಾದ್‌

ಜಾತಿ ಜನಗಣತಿ ವರದಿ ಜಾರಿಗೆ ಕೆಲವು ಶಕ್ತಿಗಳು ವಿರೋಧ ವ್ಯಕ್ತಪಡಿಸುತ್ತಿವೆ. ಆದರೂ ನಾವು ವರದಿಯನ್ನು ಜಾರಿಗೆ ತಂದೇ ತರುತ್ತೇವೆ. ಏಕೆಂದರೆ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜಾತಿ ಜನಗಣತಿ ವರದಿ ಜಾರಿಗೆ ಮತ್ತು ಸಂವಿಧಾನ ರಕ್ಷಣೆಗೆ ಬದ್ಧರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರಾದ ಹಾಗು ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಹೇಳಿದರು.

ದೆಹಲಿಯಲ್ಲಿ ನಡೆದ 'ದಿ ಕಾಸ್ಟ್ ಸೆನ್ಸೆಸ್, ವೇಮೆನ್ ರೈಟ್ಸ್ ಅಂಡ್ ರೇಸರ್ವೇಶನ್ಸ್; ದಿ ಫಿಲ್ಲರ್ಸ್ ಆಫ್ ಸೋಶಿಯಲ್ ಜಸ್ಟಿಸ್' 3ನೇ ರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಬಿ.ಕೆ. ಹರಿಪ್ರಸಾದ್ ಅವರು, ಜಾತಿ ವ್ಯವಸ್ಥೆಯಲ್ಲಿ ಶತಮಾನಗಳಿಂದ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಎಲ್ಲಾ ರೀತಿಯಲ್ಲೂ ಫಲ ಉಣ್ಣುತ್ತಿರುವರಿಗೆ ಜಾತಿಜನಗಣತಿ ಬಗ್ಗೆ ಭಯವಾಗುತ್ತಿದೆ. ಅದಕ್ಕಾಗಿ ಜಾತಿಜನಗಣತಿ ಬಗ್ಗೆ ಮಾತನಾಡುವವರನ್ನು 'ಇವರು ಸಮಾಜವನ್ನು ಒಡೆಯುತ್ತಿದ್ದಾರೆ' ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ. ಈ ಅಡೆತಡೆಗಳ ನಡುವೆಯೂ ಜಾತಿಜನಗಣತಿ ವರದಿ ಜಾರಿಯಾಗಲೇಬೇಕು ಎಂದು ಆಗ್ರಹಿಸಿದರು.

We Will Implement The Caste Census Report Says MLC BK Hariprasad

ಬಹಳ ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷ SC, ST ಮತ್ತು OBC ವರ್ಗಗಳಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇಕಡಾ 75ಕ್ಕೆ ಏರಿಸಬೇಕು ಮತ್ತು ಅದಕ್ಕಾಗಿ ಜಾತಿ ಜನಗಣತಿ ಆಗಬೇಕು ಎಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಾದಿಸುತ್ತಿದೆ. ಜಾತಿಜನಗಣತಿ ಆಗುವುದಷ್ಟೇ ಮುಖವಲ್ಲ, ಅದು ತಮಿಳುನಾಡು ಮಾದರಿಯಲ್ಲಿ ಸಂವಿಧಾನದ 9ನೇ ಪರಿಚ್ಛೇದ ಸೇರಬೇಕು. ಇಲ್ಲದಿದ್ದರೆ ನ್ಯಾಯಾಲಯ ಅದನ್ನು ಅಸಿಂಧು ಮಾಡುವ ಸಾಧ್ಯತೆ ಇದೆ ಎಂದು ಹರಿಪ್ರಸಾದ್ ಆತಂಕ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳಾದ ಈ ಸಂದರ್ಭದಲ್ಲಿ ಸಂವಿಧಾನವನ್ನು ಅಭಿವೃದ್ಧಿ ಪಡಿಸುವ ಮತ್ತು ಬಲಪಡಿಸುವ ಬಗ್ಗೆ ಕಾರ್ಯಕ್ರಮ ರೂಪಿಸಬೇಕಿತ್ತು.ಆದರೆ ನಾವೆಲ್ಲಾ ಈಗ ಸಂವಿಧಾನವನ್ನು ಉಳಿಸುವ ಬಗ್ಗೆ ಮಾತನಾಡುತ್ತಿದ್ದೇವೆ ಎನ್ನುವುದು ದುರಾದೃಷ್ಟಕರ. ಮೀಸಲಾತಿ ಎನ್ನುವುದು ಭಿಕ್ಷೆ ಅಲ್ಲ. ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮ ಅಲ್ಲ. ಮೀಸಲಾತಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಅಲ್ಲ. ಮೀಸಲಾತಿ ಎಂದರೆ ಸಮಾಜದಲ್ಲಿ ಸಮಾನತೆ ಸಾಧಿಸುವ ಸಾಧನ ಎಂದು ಪರಿಗಣಿಸಬೇಕು. ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇನ್ನೂ ಬಹಳಷ್ಟಿದೆ ಎಂದು ಹೇಳಿದರು.

ವಿಪರ್ಯಾಸ ಎಂದರೆ, ಮೀಸಲಾತಿಯನ್ನು ಪ್ರತಿಭೆ ಮತ್ತು ಸಾಮರ್ಥ್ಯದ ವಿರೋಧಿ ಎಂದು ಬಿಂಬಿಸಲಾಗುತ್ತಿದೆ.ಮೀಸಲಾತಿ ಎನ್ನುವುದು ಶೋಷಿತ ಸಮುದಾಯಗಳಿಗೆ ಸ್ವಲ್ಪ ಮಟ್ಟದ ರಿಯಾಯಿತಿ ನೀಡುತ್ತದೆ. ಮೀಸಲಾತಿಯು ಎಲ್ಲಾ ವರ್ಗಗಳಿಗೆ ನ್ಯಾಯದ ಸಮಾನ ಹಂಚಿಕೆ ಮಾಡುತ್ತದೆ. ಆದ್ದರಿಂದ ಮೀಸಲಾತಿ ಮತ್ತು ಪ್ರತಿಭೆಯನ್ನು ಬೇರ್ಪಡಿಸಿಯೇ ನೋಡಬೇಕಾಗಿದೆ. ಹೀಗಾಗಿ ಮೀಸಲಾತಿ ಹಕ್ಕು ನೀಡುವ ಸಂವಿಧಾನದ ಆರ್ಟಿಕಲ್ 335 ಅನ್ನು ತಿದ್ದುಪಡಿ ಮಾಡಬೇಕಾದ ಅಗತ್ಯವಿದೆ.

ಮೀಸಲಾತಿ ವಿರುದ್ಧ ಬಹಳ ವ್ಯವಸ್ಥಿತವಾದ ಅಭಿಯಾನ ನಡೆಯುತ್ತಿದೆ. ಮೀಸಲಾತಿಯಿಂದ ಪ್ರತಿಭೆ ಇದ್ದವರಿಗೆ ಅವಕಾಶ ಸಿಗುತ್ತಿಲ್ಲ. ಸಾಮರ್ಥ್ಯ ಇದ್ದವರಿಗೆ ಅವಕಾಶ ಸಿಗುತ್ತಿಲ್ಲ ಎನ್ನುವುದಾದರೆ ಅತಿಹೆಚ್ಚು ಅಂದರೆ ಶೇಕಡಾ 69ರಷ್ಟು ಮೀಸಲಾತಿ ನೀಡುವ ತಮಿಳುನಾಡು ನಿರ್ನಾಮವಾಗಬೇಕಿತ್ತು. ಆದರೆ ತಮಿಳುನಾಡು ಇವತ್ತು ಇಡೀ ದೇಶಕ್ಕೆ ಮಾದರಿಯಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ. ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಕೂಡ ಮುಂದೆ ಇದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ನನಗೆ 19 ರಾಜ್ಯಗಳಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ನನಗೆ ಆ 19 ರಾಜ್ಯಗಳ ಸ್ಥಿತಿಗತಿಗಳು ಗೊತ್ತು, ಅದರಲ್ಲೂ ವಿಶೇಷವಾಗಿ ಉತ್ತರ ಭಾರತದ ಪರಿಸ್ಥಿತಿ ಗೊತ್ತು. ಕೇರಳದಲ್ಲಿ ಹಿಂದುಳಿದ ಜಾತಿಗಳಿಗೆ ಒಳ ಮೀಸಲಾತಿ ಕೂಡ ಇದೆ. ಒಂದೊಮ್ಮೆ ನಿಜಕ್ಕೂ ಮೀಸಲಾತಿ ಅಭಿವೃದ್ಧಿಗೆ ವಿರೋಧಿ ಎನ್ನುವುದಾದರೆ ಕೇರಳ ನಾಶವಾಗಬೇಕಿತ್ತು. ಮೀಸಲಾತಿ ಇರುವುದರಿಂದಾಗಿ ಕೇರಳ ಇಡೀ ದೇಶದಲ್ಲೇ ಪೂರ್ಣ ಪ್ರಮಾಣದ ಸಾಕ್ಷರತೆಯನ್ನು ಸಾಧಿಸಲು ಸಾಧ್ಯವಾಗಿದೆ. ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದೆ ಎಂದು ಹರಿಪ್ರಸಾದ್ ವಿವರಿಸಿದರು.

ಕರ್ನಾಟಕ ಮೀಸಲಾತಿಯ ಪ್ರವರ್ತಕ ರಾಜ್ಯ. ನಮ್ಮ ರಾಜ್ಯದಲ್ಲಿ 1879ರಲ್ಲೇ ಪರಿಶಿಷ್ಟ ಜಾತಿಯ ಜನರಿಗೆ ಮೀಸಲಾತಿಯನ್ನು ನೀಡಲಾಗಿತ್ತು. 1918ರಲ್ಲಿ ಮೈಸೂರು ರಾಜರು SC, ST ಮತ್ತು OBC ವರ್ಗಗಳಿಗೆ ಶೇಕಡಾ 75ರಷ್ಟು ಮೀಸಲಾತಿ ನೀಡಿದ್ದರು. ಮೀಸಲಾತಿಯಿಂದ ಬೆಳವಣಿಗೆ ಇಲ್ಲ ಎನ್ನುವುದಾದರೆ ಕರ್ನಾಟಕದ ಅಭಿವೃದ್ಧಿಯು ಕುಂಠಿತವಾಗಬೇಕಿತ್ತು. ಆದರೆ ಇವತ್ತು ಕರ್ನಾಟಕ ಅತಿಹೆಚ್ಚು ಪ್ರಗತಿ ಹೊಂದಿರುವ ರಾಜ್ಯ ಮತ್ತು ಸಿಲಿಕಾನ್ ವ್ಯಾಲಿ ಇರುವ ಎರಡನೇ ರಾಜ್ಯವಾಗಿದೆ ಎಂದು ಹರಿಪ್ರಸಾದ್ ಹೇಳಿದರು.

ಅತಿಹೆಚ್ಚು ಜಿಎಸ್ ಟಿ ನೀಡುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ರಾಜ್ಯ. ನಾವು ಒಂದು ರೂಪಾಯಿ ತೆರಿಗೆ ಕಟ್ಟಿ 35 ಪೈಸೆ ವಾಪಸ್ ಪಡೆಯುತ್ತಿದ್ದೇವೆ. ತಮಿಳುನಾಡು ಒಂದು ರೂಪಾಯಿ ತೆರಿಗೆ ಕಟ್ಟಿ 26 ಪೈಸೆ ಪಡೆಯುತ್ತಿದೆ. ಇದಕ್ಕೆ ವಿರುದ್ಧವಾಗಿ ಉತ್ತರ ಪ್ರದೇಶ 100 ರೂಪಾಯಿ ತೆರಿಗೆ ಕಟ್ಟಿ 700 ರೂಪಾಯಿ ವಾಪಸ್ ಪಡೆಯುತ್ತಿದೆ. ಬಿಹಾರ 100 ರೂಪಾಯಿ ತೆರಿಗೆ ಕಟ್ಟಿ 440 ರೂಪಾಯಿ ವಾಪಸ್ ಪಡೆಯುತ್ತಿದೆ. ಇದರಿಂದ ನಮಗೆ ಸಮಸ್ಯೆ ಇಲ್ಲ. ನಾವಿದನ್ನು ನೀಡಲು ಸಿದ್ದ. ಆದರೆ ಶಿಕ್ಷಣ ಮತ್ತು ಆರೋಗ್ಯದ ವಿಷಯಕ್ಕೆ ಬಂದರೆ ಉತ್ತರದಾಯಿತ್ವ ಎಲ್ಲಿದೆ? ಸಮಾನತೆ, ಸಾಮಾಜಿಕ ನ್ಯಾಯ ಎಲ್ಲಿದೆ? 'ಮೀಸಲಾತಿಯಿಂದ ಪ್ರಗತಿ ಸಾಧ್ಯವಿಲ್ಲ' ಎನ್ನುವ ಸುಳ್ಳು ಗೊತ್ತಾಗಬೇಕು ಎಂದು ಹರಿಪ್ರಸಾದ್ ತಿಳಿಸಿದರು.

ಬಹಳ ಹಿಂದಿನಿಂದಲೂ ಹೆಚ್ಚು ಮೀಸಲಾತಿ ಕೊಡುತ್ತಿರುವ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಕೇಂದ್ರ ಸರ್ಕಾರದ ತಿಜೋರಿಗೆ ಅತಿಹೆಚ್ಚು ಜಿಎಸ್ ಟಿ ಮತ್ತು ಇತರೆ ತೆರಿಗೆ ನೀಡುವ ರಾಜ್ಯಗಳಾಗಿವೆ. ಈ ರಾಜ್ಯಗಳ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಕಡಿಮೆ ಪ್ರಮಾಣದ ಮೀಸಲಾತಿ ಇರುವ ಉತ್ತರದ ರಾಜ್ಯಗಳಿಗೆ ಹಂಚುತ್ತಿದೆ. ಕಡಿಮೆ ಪ್ರಮಾಣದ ಮೀಸಲಾತಿ ಇರುವ ರಾಜ್ಯಗಳು ಹೆಚ್ಚು ಅಭಿವೃದ್ಧಿ ಹೊಂದುತ್ತವೆ ಎನ್ನುವುದರಲ್ಲಿ ಹುರುಳಿಲ್ಲ. ಉತ್ತರದ ರಾಜ್ಯಗಳು ಕೆಲವು 'ಭೀಮಾರು' ರಾಜ್ಯಗಳು, 'ಸಿಕ್ ಸ್ಟೇಟ್ಸ್' ಎಂದು ವಿವರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+