ನಮ್ಮ ನೆಲವನ್ನು ಮರೆಯದಿದ್ದರೆ ಒಳಿತು ನಮ್ಮನ್ನು ಬಿಟ್ಟು ಹೋಗಲ್ಲ
ಬೆಂಗಳೂರು, ಫೆ 20: ಎಲ್ಲೆಲ್ಲೂ ನಾವು ನಮ್ಮ ಸಂಸ್ಕೃತಿ, ನಮ್ಮ ದೇಶವನ್ನು ಕಾಣಬೇಕು. ಎಲ್ಲಿಯವರೆಗೆ ನಮ್ಮ ನೆಲ ಹಾಗೂ ನಮ್ಮ ನೆಲೆಯನ್ನು ಮರೆಯೋದಿಲ್ವೋ ಅಲ್ಲಿಯವರೆಗೆ ಒಳಿತು ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿಶ್ರೀಗಳು ಹೇಳಿದ್ದಾರೆ.
ಶನಿವಾರ (ಫೆ 20) ನಗರದ ವಿಜಯನಗರದಲ್ಲಿನ ಭಾರತಿ ವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ರಾಘವೇಶ್ವರ ಶ್ರೀಗಳು, ಈ ಸ್ಥಳ ಸಮಾಜಕ್ಕೆ ಪೂರ್ವಗುರುಗಳ ಅನುಗ್ರಹ.
ಈ ಜಾಗ ಮೊದಲು ಹಾಗೆ ಖಾಲಿ ಇತ್ತು, ಇಂದು ಎಷ್ಟು ಬೆಳವಣಿಗೆಗೊಂಡಿದೆ ನೋಡಿ, ಈ ಎಲ್ಲಾ ಯಶಸ್ಸುಗಳು ಹಿಂದೆ ಮಠದ ಭದ್ರ ಅಡಿಪಾಯ ಇದೆ. ಇದು ಗುರುಸ್ಥಾನ ಎನ್ನುವುದು ಎಲ್ಲರ ನೆನಪಿನಲ್ಲಿರಬೇಕು ಎಂದು ಶ್ರೀಗಳು ನುಡಿದಿದ್ದಾರೆ. (ಗೋ ರಕ್ತದ ಹೊಳೆಯ ಬದಲು ಗೋವಿನ ಹಾಲು ಹರಿಯಲಿ)
ಶ್ರೀಮಠದ ವಿದ್ಯಾ ವಿಭಾಗದಿಂದ ಅನೇಕ ಉತ್ತಮ ಕೆಲಸಗಳು ಆಗಿವೆ. ಇತ್ತೀಚೆಗಷ್ಟೇ ಹಿಂದುಳಿದ ಸಮಾಜ ಎಂದು ಯಾವುದು ಕರೆಯಲ್ಪಡುತ್ತದೆಯೋ , ಅ ಸಮಾಜದ ಸುಮಾರು 64 ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಶ್ರೀಮಠ ವಹಿಸಿಕೊಂಡಿದೆ. ಕಳೆದೆರಡು ವರ್ಷದಲ್ಲಿ ಸುಮಾರು 35ಲಕ್ಷ ರೂಪಾಯಿ ವಿದ್ಯಾನಿಧಿಯನ್ನು ಹಂಚಿದೆ ಎಂದು ಶ್ರೀಗಳು ಈ ಸಂದರ್ಭದಲ್ಲಿ ಹೇಳಿದರು.
ಈ ಶಾಲೆಯಲ್ಲಿ ಒಳ್ಳೆಯ ಸುಸಂಸ್ಕೃತ ವಿದ್ಯಾಭ್ಯಾಸ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಕಲೆಗಳ ವಿಕಾಸ ಆಗುತ್ತಿದೆ. ಆದರೆ ಇಲ್ಲಿ ಎಲ್ಲಿ ನೋಡಿದರೂ ಭಾರತದ ಸಂಸ್ಕೃತಿ ಕಾಣಬೇಕು. ಮಕ್ಕಳು ಭಾರತರಾಗಬೇಕು. ಇದು ಮಠದ್ದೇ ವಿಸ್ತರಣೆ. ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ ಎಂದು ರಾಘವೇಶ್ವರ ಶ್ರೀಗಳು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಖ್ಯಾತ ಜಾನಪದ ವಿದ್ವಾಂಸ ಹಾಗೂ ಬರಹಗಾರರಾದ ಗೊ.ರು.ಚನ್ನಬಸಪ್ಪ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀಗಳು ಸಾನ್ನಿಧ್ಯವನ್ನು ವಹಿಸಿರುವುದರಿಂದ ಈ ಶಾಲೆಗೇ ಶ್ರೀರಕ್ಷೆಯಾಗಲಿದೆ. ಬೆಂಗಳೂರಿನಲ್ಲಿ ಎಷ್ಟೊಂದು ಶಾಲೆಗಳಿದ್ದರೂ ಈ ಶಾಲೆಯಲ್ಲಿ 800-900 ವಿದ್ಯಾರ್ಥಿಗಳಿದ್ದಾರೆ ಎಂಬುದೇ ಇಲ್ಲಿನ ಶಿಕ್ಷಣ ಗುಣಮಟ್ಟವನ್ನು ತೋರಿಸುತ್ತಿದೆ ಎಂದಿದ್ದಾರೆ.
ಸಮಾಜ ಇಂದು ಗೊಂದಲದಲ್ಲಿದೆ. ನಾವೂ ಕೂಡ ಗೊಂದಲದಲ್ಲಿದ್ದೇವೆ. ನಾವೇ ಪಡೆದಂತಹ ಸ್ವಾತಂತ್ರ್ಯ, ನಾವೇ ರೋಪಿಸಿದಂತಹ ಕಾನೂನು, ನಾವೇ ರಚಿಸಿದಂತಹ ಸರ್ಕಾರ, ನಾವೇ ಅರಿಸಿದಂತಹ ಪ್ರತಿನಿಧಿಗಳು. ಆದರೆ ಈ ನಮ್ಮ ವ್ಯವಸ್ಥೆಯಲ್ಲಿ ಅದನ್ನು ಅನುಭವಿಸುವಂತಿಲ್ಲ ಬಿಡುವಂತಿಲ್ಲ.
ಯಾವುದು ಸತ್ಯ ಯಾವುದು ಮಿಥ್ಯ ಎಂದು ತಿಳಿಯಲಾರದ ಮಟ್ಟಿಗೆ ಕಂಗೆಟ್ಟು ಹೋಗಿದ್ದೇವೆ. ಅಷ್ಟರಮಟ್ಟಿಗೆ ವ್ಯವಸ್ಥೆ ಹದಗೆಟ್ಟಿದೆ. ಶಿಕ್ಷಣದ ಆಶಯ ಜೀವನ ಪ್ರಜ್ಞೆಯನ್ನು ತುಂಬುವುದು, ಅದಿಲ್ಲದೆ ಪ್ರಜ್ಞಾಹೀನವಾಗಿ ದೇಶದ ಪರಿಸ್ಥಿತಿ ಕಂಗೆಟ್ಟುಹೋಗಿದೆ.
ಅವರಲ್ಲಿ ಯಾವುದು ಸರಿ-ಯಾವುದು ತಪ್ಪು ಎಂದು ನಿರ್ಧರಿಸುವ ವಿವೇಚನಾ ಶಕ್ತಿಯನ್ನು ತುಂಬವ ಕೆಲಸವಾಗ ಬೇಕಾಗಿದೆ ಎಂದು ಬೇಕು ಗೊ.ರು.ಚನ್ನಬಸಪ್ಪ ಅಭಿಪ್ರಾಯ ಪಟ್ಟಿದ್ದಾರೆ. (ಯತಿಗಳು ಒಂದಾದರೆ ಸಮಾಜಕ್ಕೆ ಒಳ್ಳೆಯ ಸಂದೇಶ)
ಬೋಧನೆಯಲ್ಲಿ ಬದುಕಿನ ಸ್ವಾಸ್ಥ್ಯ ಇರಬೇಕು, ಸಂಸ್ಕೃತಿಯ ಸಂಸ್ಕಾರ ಇರಬೇಕು ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯ. ಈ ಕೆಲಸವನ್ನು ಭಾರತಿ ವಿದ್ಯಾಲಯ ಈಗಾಗಲೇ ಮಾಡುತ್ತಾ ಇದೆ ಎಂಬುದನ್ನ ಕೇಳಿ ಸಂತೋಷವಾಯಿತು.
ಇಂದಿನ ಮಕ್ಕಳನ್ನು ನಮ್ಮ ಪರಂಪರೆಯ ಸಾಂಸ್ಕೃತಿಕ ಸಂಪತ್ತನ್ನಾಗಿ ಉಳಿಸಬೇಕು ಎಂಬ ಉದ್ದೇಶ ಇದ್ದಲ್ಲಿ, ನಮ್ಮ ಕೆಂದ್ರೀಕೃತ ದೃಷ್ಟಿ ನಮ್ಮ ಮಕ್ಕಳ ಮೇಲಿರಬೇಕು. ಇವತ್ತಿನ ಮಕ್ಕಳನ್ನು ಸೂಕ್ತ ರೀತಿಯಲ್ಲಿ ನಾವು ತಯಾರು ಮಾಡಿಲ್ಲ ಅಂದ್ರೆ ಅದರಷ್ಟು ದೊಡ್ಡ ದೇಶದ್ರೋಹದ ಕೆಲಸ ಇನ್ನೊಂದಿಲ್ಲ.
ಇದರಲ್ಲಿ ಶಿಕ್ಷಕರ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಪಾಲಕರದ್ದೂ ಇದೆ. ಇದನ್ನರಿತು ನಾವು ಕೆಲಸ ಮಾಡಬೇಕು ಇಲ್ಲದಿದ್ದರೆ ನಾವು ರಾಕ್ಷಸರ ಕೈಗೆ ದೇಶವನ್ನು ಕೊಡಬೇಕಾಗುತ್ತದೆ ಎಂದು ಗೊ.ರು.ಚನ್ನಬಸಪ್ಪ ಎಚ್ಚರಿಸಿದ್ದಾರೆ.
ಭಾರತಿ ವಿದ್ಯಾಲಯದ ಚೇರ್ ಮ್ಯಾನ್ ಎಂ ಜಿ ಹೆಗಡೆ ಮಾತನಾಡುತ್ತಾ, ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಹಾಗೂ ಅವರಲ್ಲಿರುವ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹದಾಯಕವಾದಂತಹ ವಾತಾವರಣ ಹಾಗೂ ಬೆನ್ನು ತಟ್ಟಿ ಬೆಳೆಸುವಂತಹ ಕ್ರಮ ನಡೆದುಕೊಂಡು ಬರುತ್ತಾ ಇದೆ. ಮುಂದೆಯೂ ನಡೆದುಕೊಂಡು ಹೋಗುತ್ತದೆ.
ಮುಂದಿನ ವರ್ಷಕ್ಕೆ ಎರಡು ಪ್ರಮುಖ ಯೋಜನೆಗಳನ್ನು ಹಾಕಿಕೊಂಡಿದ್ದು, ಮೊದಲನೆಯದಾಗಿ ಲಲಿತಕಲೆಗಳ ತರಬೇತಿಗಾಗಿ ಸ್ಥಳಾವಕಾಶ ಒದಗಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಭಾರತೀಯ ಮೌಲ್ಯಗಳನ್ನು ತುಂಬಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಹೆಗಡೆ ಹೇಳಿದ್ದಾರೆ.