ಸಂಪುಟ ವಿಸ್ತರಣೆ ವಿಳಂಬ: ಮಾರ್ಮಿಕ ಹೇಳಿಕೆ ಕೊಟ್ಟ ಸಿಎಂ ಯಡಿಯೂರಪ್ಪ!
ಬೆಂಗಳೂರು, ನ. 29: ರಾಜ್ಯ ಸಚಿವ ಸಂಪುಟ ವಿಸ್ತರಣೆ ಇನ್ನೂ ಗೊಂದಲದ ಗೂಡಾಗಿದೆ. ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಪಟ್ಟಿ ಕಳುಹಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೂರವಾಣಿ ಮಾಡಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಅದಾಗಿ ಮೂರು ದಿನಗಳು ಕಳೆದಿವೆ. ಹೈಕಮಾಂಡ್ ಕಡೆಯಿಂದ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಯಾವುದೇ ಸೂಚನೆಗಳು ಯಡಿಯೂರಪ್ಪ ಅವರಿಗೆ ಬಂದಿಲ್ಲ.
ಉಪ ಚುನಾವಣೆಯ ಗೆಲವುನ ಬಳಿಕವೂ ಸಿಎಂ ಯಡಿಯೂರಪ್ಪ ಅವರಿಗೆ ಪೂರಕವಾದ ವಾತಾವರಣ ರಾಜ್ಯ ಬಿಜೆಪಿಯಲ್ಲಿ ಆಗುತ್ತಿಲ್ಲ. ಸಂಪುಟ ವಿಸ್ತರಣೆಗೆ ಹೈಕಮಾಂಡ್ ಈ ವರೆಗೆ ಒಪ್ಪಿಗೆ ಕೊಡದಿರವುದು ಮತ್ತೊಂದೆಡೆ ನಿಗೂಢ ಕಾರಣಕ್ಕಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಯಡಿಯೂರಪ್ಪ ಅವರ ಹತ್ತಿರದ ಸಂಬಂಧಿ ಎನ್. ಆರ್. ಸಂತೋಷ್ ಆತ್ಮಹತ್ಯೆ ಪ್ರಯತ್ನ ಮಾಡಿರುವುದು ಸಿಎಂ ನೆಮ್ಮದಿ ಕೆಡಿಸಿವೆ ಎನ್ನಲಾಗುತ್ತಿದೆ.
ಯೋಗೇಶ್ವರ್ ಗೆ ಸಚಿವ ಸ್ಥಾನ: ರಮೇಶ್ ಜಾರಕಿಹೊಳಿ ಹಠ ಸಾಧಿಸುತ್ತಿರುವುದಕ್ಕೆ ಇದೊಂದೇ ಕಾರಣ
ಈ ಮಧ್ಯೆ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಿಎಂ ಯಡಿಯೂರಪ್ಪ ಅವರು ಅಧೀಕೃತ ನಿವಾಸ ಕಾವೇರಿಯಿಂದ ಚಿತ್ರದುರ್ಗಕ್ಕೆ ತೆರಳಿದ್ದಾರೆ. ಅದಕ್ಕೂ ಮೊದಲು ಕಾವೇರಿಯಲ್ಲಿ ಮಾತನಾಡಿರುವ ಅವರು, ಸಂಪುಟ ವಿಸ್ತರಣೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಸಾಲಿನ ಮಾತು ಹೇಳಿ ಹೋಗಿದ್ದಾರೆ. ಅಮಿತ್ ಶಾ ಅವರು ಭರವಸೆ ಕೊಟ್ಟ ಬಳಿಕವೂ ಸಂಪುಟ ವಿಳಂಬವಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಯಡಿಯೂರಪ್ಪ ಅವರು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಸಂಪುಟ ವಿಸ್ತರಣೆಗೆ ನಾವು ನೀವು ಇಬ್ಬರೂ ಕಾಯಬೇಕು ಎಂದು ಮಾಧ್ಯಮಗಳಿಗೆ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಸಿಎಂ ಯಡಿಯೂರಪ್ಪ ಅವರು ಈ ಮಾತು ಕುತೂಹಲ ಮೂಡಿಸಿದ್ದು, ಹೈಕಮಾಂಡ್ ಸಂಪುಟ ವಿಸ್ತರಣೆ ಕುರಿತು ಒಪ್ಪಿಗೆ ಕೊಡದಿರುವುದು ಅವರ ಮೇಲಿನ ಒತ್ತಡವನ್ನು ಪರೋಕ್ಷವಾಗಿ ತೋರಿಸಿದೆ. ಸಂಪುಟ ಸೇರಲು ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಸಂಪುಟ ರಚಿಸಲು ಹೈಕಮಾಂಡ್ ಒಪ್ಪಿಗೆ ಕೊಡುತ್ತಿಲ್ಲ. ಹೀಗಾಗಿ ಸಹಜವಾಗಿಯೆ ಬಿಜೆಪಿಯಲ್ಲಿನ ಗೊಂದಲಗಳು ಮುಂದುವರೆದಿವೆ.