ವಿಶ್ವಾಸಮತ, ನಮಗೆ ಗೆಲುವಿನ ಸಿಗ್ನಲ್ ಸಿಕ್ಕಿದೆ: ಡಿ ಕೆ ಶಿವಕುಮಾರ್
ಬೆಂಗಳೂರು, ಜುಲೈ 14: ಸತತ ಹದಿನಾರು ಗಂಟೆ ಮಾತುಕತೆ ನಡೆಸಿ, ರಾಜೀನಾಮೆಯನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದ ಎಂಟಿಬಿ ನಾಗರಾಜ್, ಬೆಳಗಾಗುವಷ್ಟರಲ್ಲಿ ಮುಂಬೈಗೆ ವಿಮಾನ ಹತ್ತಿದ್ದಾರೆ. ಆದರೆ, ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್, ಅತೃಪ್ತರೇ ನಮ್ಮ ಸರಕಾರವನ್ನು ಉಳಿಸಲಿದ್ದಾರೆಂದು ಹೇಳಿದ್ದಾರೆ.
ANI ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಡಿಕೆಶಿ, ಅತೃಪ್ತರೆಲ್ಲರೂ ನಮ್ಮವರೇ, ಅವರು ನಮ್ಮ ಸರಕಾರವನ್ನು ಸೇವ್ ಮಾಡಲಿದ್ದಾರೆ ಎನ್ನುವ ಸಿಗ್ನಲ್ ನಮಗೆ ಸಿಕ್ಕಿದೆ ಎನ್ನುವ ವಿಶ್ವಾಸದ ಮಾತನ್ನಾಡಿದ್ದಾರೆ.
ವಿಶ್ವಾಸಮತಯಾಚನೆಯ ವೇಳೆ ಯಾವ ರೀತಿ ಇರಬೇಕು ಎನ್ನುವ ಕಾನೂನು ಅವರಿಗೂ ಅರಿತಿದೆ. ಕಾನೂನು ಅತ್ಯಂತ ಸ್ಪಷ್ಟವಾಗಿದೆ, ವಿಶ್ವಾಸಮತದ ವಿರುದ್ದ ಮತಚಲಾಯಿಸಿದರೆ, ಅವರು ಶಾಸಕ ಸ್ಥಾನ ಕಳೆದುಕೊಳ್ಳಲಿದ್ದಾರೆಂದು ಡಿ ಕೆ ಶಿವಕುಮಾರ್ ಎಚ್ಚರಿಕೆಯನ್ನು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ಅವರ ಎಲ್ಲಾ ಡಿಮಾಂಡ್ ಗಳನ್ನು ಈಡೇರಿಸಲು ಸಿದ್ದವಾಗಿದೆ. ನಮಗೆ ಸದ್ಯಕ್ಕೆ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಅವರೆಲ್ಲಾ ಸಮ್ಮಿಶ್ರ ಸರಕಾರವನ್ನು ಉಳಿಸಲಿದ್ದಾರೆಂದು ಡಿ ಕೆ ಶಿವಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.
ಅವರೆಲ್ಲಾ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದವರು ಮತ್ತು ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲೂ ತೊಡಗಿದ್ದಾರೆ. ಅವರವರ ಕ್ಷೇತ್ರದಲ್ಲಿ ಹುಲಿಯಂತೆ ಕೆಲಸ ಮಾಡಿದವರು ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಶನಿವಾರ (ಜುಲೈ 13) ಬೆಳಗ್ಗಿನ ಸೂರ್ಯೋದಯಕ್ಕೂ ಮೊದಲೇ ವಸತಿ ಸಚಿವ ಎಂಟಿಬಿ ನಾಗರಾಜ್ ಮನೆಯಲ್ಲಿ ಠಿಕಾಣಿ ಕೂತಿದ್ದ ಡಿ ಕೆ ಶಿವಕುಮಾರ್, ಅವರನ್ನು ಒಂದು ಹಂತಕ್ಕೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಈಗ ಎಂಟಿಬಿ ಉಲ್ಟಾ ಹೊಡೆದಂತೆ ಕಾಣುತ್ತಿದೆ.












Click it and Unblock the Notifications