ಮತಪಟ್ಟಿ ಅಕ್ರಮ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅಮಾನತಿಗೆ ಕಾಂಗ್ರೆಸ್ ಆಗ್ರಹ
ಬೆಂಗಳೂರು, ನವೆಂಬರ್ 25: ಚಿಲುಮೆ ಸಂಸ್ಥೆಯಿಂದ ನಡೆದ ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರ ಅಮಾನತಿಗೆ ಕಾಂಗ್ರೆಸ್ ಆಗ್ರಹಿಸಿದ್ದು, ಈ ವಿಚಾರವಾಗಿ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು (ಗುರುವಾರ) ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ, ಸಚಿವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡುವ, ತಮಗೆ ಅನುಕೂಲವಾಗುವ ಮತದಾರರ ಹೆಸರು ಸೇರಿಸಲಾಗಿದೆ.
ನಕಲಿ ಬಿಎಲ್ಒ ಗುರುತಿನ ಚೀಟಿ ವಿತರಣೆ ಹೊಣೆಯನ್ನು ತುಷಾರ್ ಗಿರಿನಾಥ್ ಅವರೇ ಹೊರಬೇಕು. ಹೀಗಾಗಿ ಕೇಂದ್ರ ಚುನಾವಣಾ ಆಯೋಗ ತುಷಾರ್ ಗಿರಿನಾಥ್ ಅವರನ್ನು ಚುನಾವಣಾಧಿಕಾರಿ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು. ಅವರು ಹಿರಿಯ ಐಎಎಸ್ ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ವಿಚಾರಣೆ ಬಾಕಿಗೆ ಒಳಪಟ್ಟು ಅವರನ್ನು ಅಮಾನತು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಪರವಾಗಿ ಒತ್ತಾಯಿಸುತ್ತೇವೆ ಎಂದಿದ್ದಾರೆ.

ಇನ್ನು ಇಡೀ ದೇಶದ ಚುನಾವಣಾ ವ್ಯವಸ್ಥೆ ತಲೆತಗ್ಗಿಸುವಂತೆ ಅಧಿಕಾರ ದುರುಪಯೋಗ ಮಾಡಿಕೊಂಡು ಮತದಾರರ ಮಾಹಿತಿ ಕದ್ದು ಖಾಸಗಿಯವರಿಗೆ ನೀಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ನಮ್ಮ ನಾಯಕರು ಮಾಧ್ಯಮಗಳಲ್ಲಿ ಚರ್ಚೆ ಮಾಡಿದ್ದಾರೆ. ನಿನ್ನೆ ನಮ್ಮ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು, ನಮ್ಮ ಮನವಿಗೆ ಸ್ಪಂದಿಸಿ ಕೇಂದ್ರ ಚುನಾವಣಾ ಆಯೋಗ ಒಬ್ಬ ಅಧಿಕಾರಿಯನ್ನು ನೇಮಕ ಮಾಡಿದೆ.
ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಬಿಜೆಪಿಯವರು ವರ್ತಿಸಿದ್ದಾರೆ. ಕಾಂಗ್ರೆಸ್ ನಾಯಕರು ಮೊದಲೇ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದೆವು. ಆದರೆ ಬಿಜೆಪಿಯವರು ತರಾತುರಿಯಲ್ಲಿ ಫ್ಯಾಕ್ಸ್ ಮೂಲಕ ಕೇಂದ್ರ ಆಯೋಗಕ್ಕೆ ದೂರು ನೀಡಿ, ಸುದ್ದಿ ಮಾಡಿಕೊಂಡಿದ್ದಾರೆ. ಬಿಜೆಪಿಗಿಂತ ಮುಂಚಿತವಾಗಿ ನಾನು ಕೇಂದ್ರ ಚುನಾವಣಾ ಆಯೋಗಕ್ಕೆ ಇ ಮೇಲ್ ಮೂಲಕ ದೂರು ಸಲ್ಲಿಕೆ ಮಾಡಿದ್ದೇನೆ. ನಮ್ಮ ನಾಯಕರು ಅವರನ್ನು ಭೇಟಿ ಮಾಡಿ ದೂರು ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ಈ ವಿಚಾರವನ್ನು ನಾವು ಬಹಿರಂಗಪಡಿಸಿರಲಿಲ್ಲ.
ಸಂವಿಧಾನದ 324ನೇ ಆರ್ಟಿಕಲ್ ಅನ್ವಯ ನಾವು ಸ್ವಾತಂತ್ರ್ಯ ಚುನಾವಣಾ ಆಯೋಗ ರಚನೆ ಮಾಡಿಕೊಂಡಿದ್ದೇವೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಸ್ವಾಯತ್ತ ಸಂಸ್ಥೆ ಸ್ಥಾಪಿಸಲಾಗಿದೆ. ಇನ್ನು ಜನಪ್ರತಿನಿಧಿ ಕಾಯ್ದೆ ಅನುಗುಣವಾಗಿ ಸೆಕ್ಷನ್ 13ಎ ಪ್ರಕಾರ ಜಿಲ್ಲಾ ಮಟ್ಟದಲ್ಲಿ ಡಿಇಒ ನೇಮಕ ಮಾಡಲಾಗಿದೆ. ಇವರು ಬಿಎಲ್ಒ (ಬೂತ್ ಚುನಾವಣಾಧಿಕಾರಿ) ಹಾಗೂ ಎಎಲ್ಒ (ಕ್ಷೇತ್ರ ಚುನಾವಣಾಧಿಕಾರಿ) ಗಳ ನೇಮಕ ಮಾಡುತ್ತಾರೆ.

ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆ ಮಾಡಲು ಸಾಧ್ಯವಿಲ್ಲ, ಅದನ್ನು ಕೇಂದ್ರ ಚುನಾವಣಾ ಆಯೋಗ ಮಾಡಬೇಕಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ತಿಳಿಸಿದರು. ನಾವು ಅದನ್ನು ಒಪ್ಪಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಇದರಲ್ಲಿ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯಾದ ತುಷಾರ್ ಗಿರಿನಾಥ್ ಅವರು ಬೆಂಗಳೂರು ವ್ಯಾಪ್ತಿಗೆ ಸಂಬಂಧಿಸಿದಂತೆ 28 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಆಗಿದ್ದಾರೆ. ಅವರ ಕೆಳಗೆ 28 ಎಆರ್ ಒಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಅವರು ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಅದರಿಂದ ತಪ್ಪಿಸಿಕೊಳ್ಳಲು ಮೂವರು ಎಆರ್ ಒಗಳನ್ನು ವಜಾ ಮಾಡಿ ತನಿಖೆ ಮಾಡುವುದಾಗಿ ಹೇಳಿದ್ದಾರೆ. ಇಲ್ಲಿ ನಿಜಕ್ಕೂ ವಜಾಗೊಳ್ಳಬೇಕಾಗಿರುವುದು ತುಷಾರ್ ಗಿರಿನಾಥ್ ಅವರು.
ಚುನಾವಣಾ ಆಯೋಗದ ಕಾನೂನು ಪ್ರಕಾರ 1950ರ ಜನಪ್ರತಿನಿಧಿ ಕಾಯ್ದೆ ಕಲಂ 32ರ ಅಡಿಯಲ್ಲಿ ಯಾವುದೇ ಚುನಾವಣಾ ಅಧಿಕಾರಿ ಅಕ್ರಮಗಳಿಗೆ ಶಾಮೀಲಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕನಿಷ್ಠ 3 ತಿಂಗಳಿಂದ 2 ವರ್ಷಗಳ ವರೆಗೂ ಶಿಕ್ಷೆ ನೀಡಬೇಕಾಗುತ್ತದೆ. ಇದನ್ನು ಚುನಾವಣಾ ಆಯೋಗವೇ ಮಾಡಬೇಕಾಗುತ್ತದೆ. ಆ ಕಾರಣಕ್ಕಾಗಿ ನಾನು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ ಎಂದರು.












Click it and Unblock the Notifications