Voter Data Theft: 'ಚಿಲುಮೆ' ಬೇಡಿಕೆಗೆ ರಾಜಕಾರಣಿಗಳ ಒಪ್ಪಿಗೆ- ಮೇಲ್ನಲ್ಲೇ ಮುಗಿದ ಡೀಲಿಂಗ್
ಬೆಂಗಳೂರು, ನವೆಂಬರ್ 19: 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಮೂರು ಪಕ್ಷಗಳ ಜಟಾಪಟಿ ಜೋರಾಗಿದೆ. ಬಹುಮತದೊಂದಿಗೆ ಈ ಬಾರಿಯೂ ಅಧಿಕಾರ ಹಿಡಿಯಬೇಕೆಂಬ ಆಸೆಯಲ್ಲಿ ಬಿಜೆಪಿ ಚುನಾವಣೆ ಸಿದ್ಧತೆ ನಡೆಸುತ್ತಿದ್ದರೆ, ಶತಾಯಗತಾಯ ಈ ಬಾರಿ ಬಿಜೆಪಿಯನ್ನು ಹಿಂದಿಕ್ಕಲು ಕಾಂಗ್ರೆಸ್ ಪಣತೊಟ್ಟಿದೆ. ಇತ್ತ ಜೆಡಿಎಸ್ ಕೂಡ ಚುನಾವಣೆ ಸಿದ್ಧತೆ ಆರಂಭಿಸಿದ್ದು, ರಾಷ್ಟ್ರೀಯ ಪಕ್ಷಗಳ ಹಂಗಿಲ್ಲದೇ, ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ.
ರಾಜಕೀಯ ಚಟುವಟಿಕೆ ಗರಿಗೆದರಿರುವ ಬೆನ್ನಲ್ಲೇ ಸರ್ಕಾರದ ವಿರುದ್ಧ ಹೊಸ ಆರೋಪವೊಂದು ಕೇಳಿ ಬಂದಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದ ಮತದಾರರ ಮೇಲೆ ರಾಜಕೀಯ ನಾಯಕರ ಸಂಪೂರ್ಣ ಗಮನವಿದ್ದು, ಸದ್ಯ ಪಕ್ಷಗಳ ಮೇಲೆ ಜನರ ಅಭಿಪ್ರಾಯ ಹೇಗಿದೆ..? ಈ ಬಾರಿ ಮತದಾರರು ಯಾರ ಮೇಲೆ ಒಲವು ತೋರಲಿದ್ದಾರೆ ಎನ್ನುವ ಮಾಹಿತಿಯನ್ನು ಪಡೆಯುವ ಪ್ರಯತ್ನ ಮಾಡಲಾಗಿದೆ ಎನ್ನಲಾಗಿದೆ.
ಮತದಾರರ ಮಾಹಿತಿ ಕಳವು ಪ್ರಕರಣ: ಇಬ್ಬರ ಬಂಧನ, ಎನ್ಜಿಒ ಮುಖ್ಯಸ್ಥ ಪರಾರಿ
ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ಆ ಮೂಲಕ ಬೆಂಗಳೂರಿನ ಮತದಾರರ ಮಾಹಿತಿಯನ್ನು ಕಳವು ಮಾಡಲಾಗಿದೆ ಎಂಬ ಆರೋಪ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕೇಳಿಬಂದಿದೆ. ಈ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ.
ಬಿಬಿಎಂಪಿ ಆದೇಶವನ್ನು ದುರುಪಯೋಗ ಪಡಿಸಿಕೊಂಡ ಚಿಲುಮೆ
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿ ಪರಿಷ್ಕರಿಸಲು ಚುನಾವಣಾ ಆಯೋಗ ಮುಂದಾಗಿತ್ತು. ಈ ಬಗ್ಗೆ ವಿಶೇಷ ಮತದಾರರ ಜಾಗೃತಿ ಅಭಿಯಾನ ನಡೆಸಲು ಚಿಲುಮೆ ಎಂಬ ಸಂಸ್ಥೆಗೆ ಬಿಬಿಎಂಪಿ ಅನುಮತಿ ನೀಡಿದೆ. ಆದರೆ, ಈ ಚಿಲುಮೆ ಸಂಸ್ಥೆ ಆದೇಶವನ್ನು ದುರುಪಯೋಗಪಡಿಸಿಕೊಂಡಿದೆ ಎನ್ನುವ ಆರೋಪ ಕೇಳಿಬಂದಿದೆ. ಚಿಲುಮೆ ಸಂಸ್ಥೆ ಮತದಾರರಿಗೆ ಯಾವುದೇ ಸಂಶಯ ಬರಬಾರದಂತೆ ತನ್ನ ಫೀಲ್ಡ್ ಏಜೆಂಟರನ್ನೇ ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಮತದಾರರ ಹಲವು ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿಕೊಂಡಿದೆ ಎನ್ನುವುದು ತನಿಖಾ ವರದಿಯಲ್ಲಿ ಬಹಿರಂಗವಾಗಿದೆ.
Voter Data Theft: ತೀವ್ರಗತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು: ಸಿಎಂ ಬಸವರಾಜ ಬೊಮ್ಮಾಯಿ
ಇ-ಮೇಲ್ ಮೂಲಕವೇ ರಾಜಕಾರಣಿಗಳ ಸಂಪರ್ಕ
ಬಿಬಿಎಂಪಿ ನೀಡಿದ್ದ ಅನುಮತಿಯನ್ನು ದುರುಪಯೋಗ ಪಡಿಸಿಕೊಂಡ ಸಂಸ್ಥೆ, ಹಲವು ರಾಜಕೀಯ ನಾಯಕರನ್ನು ಸಂಪರ್ಕಿಸಿ ಮತದಾರರ ಬಗ್ಗೆ ಮಾಹಿತಿ ನೀಡಿ ಬದಲಿಗೆ ಹಣ ನೀಡುವಂತೆ ಬೇಡಿಕೆ ಇಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮತದಾರರ ಪಟ್ಟಿ ಕಳವು ಪ್ರಕರಣದಲ್ಲಿ ರಾಜಕಾರಣಿಗಳು ಕೂಡ ಶಾಮಿಲಾಗಿರುವ ಬಗ್ಗೆ ಕೂಡ ವರದಿಯಾಗುತ್ತಿದ್ದು, ಇ-ಮೇಲ್ ಮೂಲಕವೇ ರಾಜಕಾರಣಿಗಳು ಹಾಗೂ ಚಿಲುಮೆ ಸಂಸ್ಥೆ ನಡುವೆ ವ್ಯವಹಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಚಿಲುಮೆ ಬೇಡಿಕೆಗೆ ರಾಜಕಾರಣಿಗಳ ಒಪ್ಪಿಗೆ
ತನ್ನ ಏಜೆಂಟರಿಗೆ ಬಿಎಲ್ಒ ಎಂದು ನಕಲಿ ಗುರುತಿನ ಚೀಟಿ ನೀಡಿ ಮಾಹಿತಿ ಸಂಗ್ರಹಿಸಿದ ಚಿಲುಮೆ ಸಂಸ್ಥೆ, ಬಳಿಕ ಈ ಮಾಹಿತಿಯನ್ನೇ ತನ್ನ ಬಂಡವಾಳವಾಗಿಸಿಕೊಂಡಿದೆ. ಸುಮಾರು 20ಕ್ಕೂ ಹೆಚ್ಚು ಪ್ರಭಾವಿ ರಾಜಕಾರಣಿಗಳಿಗೆ ಇ- ಮೇಲ್ ಮಾಡಿರುವ ಚಿಲುಮೆ ಸಂಸ್ಥೆ, ಸರ್ವೇ ಮಾಡಿ ಮತದಾರರ ಮಾಹಿತಿ ಬಗ್ಗೆ ನಿಮಗೆ ಸಹಾಯ ಮಾಡುತ್ತೇವೆ. ನಮ್ಮ ಕೆಲಸಕ್ಕೆ ಹಣ ಪಡೆದುಕೊಳ್ಳುತ್ತೇವೆ ಎಂದು ನಿರಂತರವಾಗಿ ಸಂಪರ್ಕಿಸಿದೆ. ಇದಕ್ಕೆ ಒಂದಷ್ಟು ರಾಜಕಾರಣಿಗಳು ಪ್ರತಿಕ್ರಿಯಿಸಿರುವುದು ಕೂಡ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಮೂಲಕ ರಾಜಕಾರಣಿಗೂ ಕೂಡ ಅಕ್ರಮವಾಗಿ ಮತದಾರರ ಮಾಹಿತಿ ಪಡೆದುಕೊಳ್ಳಲು ಪ್ರಯತ್ನಿಸಿದ್ದಾರೆ.
ಚಿಲುಮೆ ಸಂಸ್ಥೆ ಆಡಳಿತಾಧಿಕಾರಿ ಪರಾರಿ
ಇನ್ನು ಬೆಂಗಳೂರಿನಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಕಳವು ಪ್ರಕರಣದ ಸಂಬಂಧ ಚಿಲುವೆ ಸಂಸ್ಥೆ ವಿರುದ್ಧ ಹಲಸೂರು ಗೇಟ್ ಮತ್ತು ಕಾಡುಗೋಡಿ ಪೊಲೀಸ್ ಠಾಣೆಗಳಲ್ಲಿ ಬಿಬಿಎಂಪಿ ದೂರು ದಾಖಲಿಸಿತ್ತು. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು, ಚಿಲುಮೆ ಸಂಸ್ಥೆಯ ನಿರ್ದೇಶಕ ರೇಣುಕಾ ಪ್ರಸಾದ್ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ಧರ್ಮೇಶ್ ಎನ್ನುವರನ್ನು ಬಂಧಿಸಿದ್ದಾರೆ. ಈ ವೇಳೆ ಬಿಬಿಎಂಪಿ ಹಾಗೂ ಚಿಲುಮೆ ಸಂಸ್ಥೆಯ ಕಚೇರಿಯ ಕೆಲವು ಮಹತ್ವದ ದಾಖಲೆಗಳನ್ನು ಕೂಡ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಇನ್ನು ಚಿಲುಮೆ ಸಂಸ್ಥೆ ಆಡಳಿತಾಧಿಕಾರಿ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.