ಆ 'ಗಂಡು' ಸಚಿವರಿಗೂ ಚಿಲುಮೆ ಸಂಸ್ಥೆಗೂ ಇರುವ ನಂಟು ಏನು: ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು, ನವೆಂಬರ್ 19: ಮತದಾರರ ಮಾಹಿತಿ ಕಳ್ಳತನ ಪ್ರಕರಣದಲ್ಲಿ ಸರ್ಕಾರ ಕಳ್ಳಾಟದ ಹೇಳಿಕೆ ನೀಡುತ್ತಾ ದಿಕ್ಕು ತಪ್ಪಿಸುತ್ತಿದೆ. ಚಿಲುಮೆ ಸಂಸ್ಥೆಯ ಅಕ್ರಮ ಬೆಳಕಿಗೆ ಬಂದಿರುವುದಕ್ಕೂ, ಮತದಾರ ಪಟ್ಟಿಯಲ್ಲಿ ಮತದಾರರ ಹೆಸರು ಕಾಣೆಯಾಗಿರುವುದಕ್ಕೂ ಸಂಬಂಧವಿರುವುದು ನಿಶ್ಚಿತ. ಸಿಎಂ ಬೊಮ್ಮಾಯಿ ಅವರು ಉಡಾಫೆ ಉತ್ತರ ಕೊಟ್ಟು ಜಾರಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆಯ ಕೆಲಸಗಾರರನ್ನು ಬಂಧಿಸಿ ಕಣ್ಣೊರೆಸುತ್ತಾ ಕಿಂಗ್ ಪಿನ್ಗಳ ರಕ್ಷಣೆಗೆ ನೀತಿರುವವರು ಯಾರು?.. ಚಿಲುಮೆಗೆ ಯಾರ ಒಲುಮೆ..? ಬರ್ತ್ಡೇ ಪಾರ್ಟಿಗೆ ಹೋಗಿದ್ದ ಕ್ಯಾಷ್ಲ್ಲೇ ಅಭಿವೃದ್ಧಿಯಾದ ಸಚಿವರೇ..? ಜನಕ್ರೋಶದಿಂದ ಖಾಲಿ ಕುರ್ಚಿ ದರ್ಶನ ಪಡೆಯುತ್ತಿರುವ ಬಿಜೆಪಿ ಮತದಾರರನ್ನೇ ಖಾಲಿ ಮಾಡಿಸುವ ಹುನ್ನಾರ ನಡೆಸಿದೆ ಎಂದು ಕಿಡಿಕಾರಿದೆ.

ಚಿಲುಮೆ ಸಂಸ್ಥೆಯ ಅಸಲಿ ಚಟುವಟಿಕೆಗಳೇನು..?
ಚಿಲುಮೆ ಸಂಸ್ಥೆಗೆ 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಂದೀಶ್ ರೆಡ್ಡಿ ಕಡೆಯಿಂದ ಹಣ ಸಂದಾಯವಾಗಿದೆ. ಹಾಗೂ ಸಂಸ್ಥೆಯ ಮುಖ್ಯಸ್ಥನೊಂದಿಗೆ ಸಚಿವ ಅಶ್ವತ್ಥ್ ನಾರಾಯಣ್ ಅವರ ಸಂಪರ್ಕವಿದೆ. ಬಿಜೆಪಿಯ ನಾಯಕರೊಂದಿಗೆ ಚಿಲುಮೆ ಸಂಸ್ಥೆಗೆ ನೇರ ಸಂಪರ್ಕವಿರುವುದು ಜಗಜ್ಜಾಹೀರಾಗಿದೆ. ಹೀಗಿರುವಾಗ ಅದೇ ಸಂಸ್ಥೆಯ ಉಚಿತ ಸೇವೆಗೆ ಸರ್ಕಾರ ಒಪ್ಪಿಗೆ ಕೊಟ್ಟಿದ್ದೇಕೆ..? ಚಿಲುಮೆ ಸಂಸ್ಥೆಯ ಅಸಲಿ ಚಟುವಟಿಕೆಗಳೇನು..? ಅದರ ಹಿಂದಿರುವ ಬಂಡವಾಳ ಯಾರದ್ದು..? ಅದರ ಹಿನ್ನೆಲೆ ಏನು..? ಈ ಎಲ್ಲಾ ರಹಸ್ಯಗಳೊಂದಿಗೆ ಈಗ ಆ ಸಂಸ್ಥೆಯಲ್ಲಿ ದೊರಕಿದ ದಾಖಲೆಗಳು ಯಾವ ಸಚಿವರಿಗೆ ಸಂಬಂಧಿಸಿದ್ದು..? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.

ಬಿಬಿಎಂಪಿ ಸರ್ಕಾರದ ಹಿಡಿತದಲ್ಲಿ ಇಲ್ಲವೇ..?
ಆ 'ಗಂಡು' ಸಚಿವರಿಗೆ ಚಿಲುಮೆಯೊಂದಿಗಿರುವ ನಂಟು ಏನು..? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀವೇ ಉತ್ತರಿಸುವಿರಾ..? ನ್ಯಾಯಾಂಗ ತನಿಖೆಗೆ ವಹಿಸುವಿರಾ..? ಚಿಲುಮೆ ಸಂಸ್ಥೆಗೆ ಅನುಮತಿ ನೀಡಿದ್ದು ಚುನಾವಣಾ ಆಯೋಗ, ಸರ್ಕಾರಕ್ಕೆ ಸಂಬಂಧವಿಲ್ಲ ಎನ್ನುತ್ತಾರೆ ಸಿಎಂ & ಬಿಜೆಪಿ. ಸಮೀಕ್ಷೆಗೆ ನಾವು ಅನುಮತಿ ನೀಡಿಲ್ಲ ಎನ್ನುತ್ತದೆ ಚುನಾವಣಾ ಆಯೋಗ. ಸುಳ್ಳು ಯಾರದ್ದು, ಸತ್ಯ ಯಾರದ್ದು
ಬಿಬಿಎಂಪಿ ಸರ್ಕಾರದ ಹಿಡಿತದಲ್ಲಿ ಇಲ್ಲವೇ..? ಕಂದಾಯ ಅಧಿಕಾರಿಗಳ ಸಹಕಾರ ಸಿಕ್ಕಿದ್ದು ಹೇಗೆ..? ಯಾಕೆ..? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸಚಿವರ ಲೆಟರ್ ಹೆಡ್ಗೆ ಅಲ್ಲೇನು ಕೆಲಸ..?
ಚಿಲುಮೆ ಸಂಸ್ಥೆಯವರು ಸಮೀಕ್ಷೆಗೆ ಭೇಟಿ ನೀಡಿದ ಮರುದಿನವೇ ಪಟ್ಟಿಯಿಂದ ಮತದಾರರ ಹೆಸರು ಮಾಯವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಸರ್ಕಾರದ ಸಹಕಾರವಿಲ್ಲದೆ ಹೆಸರು ಮಾಯ ಮಾಡಲು ಹೇಗೆ ಸಾಧ್ಯ? ಆ ಸಂಸ್ಥೆಗೆ ಸಮೀಕ್ಷೆಯ ಅನುಮತಿ ಇಲ್ಲ ಎಂದಾದರೆ ಅವರೇಕೆ ಸಮೀಕ್ಷೆ ಮಾಡಲು ಮುಂದಾಗಿದ್ದರು, ಯಾರ ಹಿತಾಸಕ್ತಿಗೆ ಸಮೀಕ್ಷೆ ನಡೆಸುತ್ತಿದ್ದರು? ಚಿಲುಮೆ ಸಂಸ್ಥೆಯಲ್ಲಿ ಸಚಿವರಿಗೆ ಸಂಬಂಧಿಸಿದ ಚೆಕ್ ದೊರಕಿದ್ದೇಕೆ..? ಸಚಿವರ ಲೆಟರ್ ಹೆಡ್ಗೆ ಅಲ್ಲೇನು ಕೆಲಸ? ಆ ಗಂಡು ಸಚಿವರಿಗೂ ಚಿಲುಮೆ ಸಂಸ್ಥೆಗೂ ಯಾವ ವ್ಯವಹಾರ..? ಸಿಎಂ ಇದಕ್ಕೆಲ್ಲ ಉತ್ತರ ಬೇಕಲ್ಲವೇ..? ಸಾಕ್ಷಿ ನಾಶಕ್ಕಾಗಿ ಕೇವಲ ಪೊಲೀಸ್ ತನಿಖೆಗೆ ಬಿಟ್ಟಿದ್ದೀರಾ..? ನ್ಯಾಯಾಂಗ ತನಿಖೆಗೆ ಹಿಂದೇಟು ಏಕೆ..? ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿಕಾರಿದೆ.

ಮತದಾರರ ಮಾಹಿತಿ ಕಳ್ಳತನದ ವಿಚಾರವಾಗಿ ದೂರು ನೀಡಿದ ಕಾಂಗ್ರೆಸ್
ಮತದಾರರ ದತ್ತಾಂಶ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ. ಬೆಂಗಳೂರಿನಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಆಗಮಿಸಿದ ಕಾಂಗ್ರೆಸ್ನ ರಾಜ್ಯ ಘಟಕದ ನಾಯಕರು, ಮತದಾರರ ಮಾಹಿತಿ ಕಳ್ಳತನದ ವಿಚಾರವಾಗಿ ದೂರು ನೀಡಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಶಾಸಕರಾದ ಕೃಷ್ಣ ಬೈರೇಗೌಡ, ಸೌಮ್ಯ ರೆಡ್ಡಿ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಹಾಜರಿದ್ದರು.












Click it and Unblock the Notifications