Lakshmi Hebbalkar: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿಯಾದ ವಿನಯ್ ಗುರೂಜಿ
ಬೆಳಗಾವಿ, ಜನವರಿ 22: ಇತ್ತೀಚಿಗಷ್ಟೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಸಚಿವೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಅಪಘಾತದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆನ್ನಿನ ಎಲ್ 1 ಮತ್ತು ಎಲ್ 4 ಮೂಳೆ ಮುರಿತವಾಗಿದೆ. ಅಲ್ಲದೇ ಕುತ್ತಿಗೆಗೆ ಪೆಟ್ಟು ಬಿದ್ದ ಕಾರಣ ಮೆದುಳು ಬಾವು ಕಾಣಿಸಿಕೊಂಡಿರುವ ಕಾರಣ ಅವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದೆ.
ಇನ್ನೂ ಒಂದು ತಿಂಗಳ ವಿಶ್ರಾಂತಿ ಅವಶ್ಯಕತೆ ಇರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನೋಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಪುಟದ ಸಚಿವರು, ಕಾಂಗ್ರೆಸ್ ನಾಯಕರು ಭೇಟಿ ನೀಡುತ್ತಿದ್ದು, ಇದೀಗ ಅವದೂತ ವಿನಯ್ ಗುರೂಜಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಬೆನ್ನಿನ ಮೂಳೆಗಳು ಮುರಿದ ಕಾರಣ ಸದ್ಯ ಮಲಗಿದ ಪರಿಸ್ಥಿತಿಯಲ್ಲೇ ಇರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಪಘಾತದ ದಿನ ಏನಾಯ್ತು? ಸದ್ಯ ಆರೋಗ್ಯದ ಸ್ಥಿತಿ ಹೇಗಿದೆ? ಎನ್ನುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು 'ಚಿಕ್ಕಮಗಳೂರಿನ ಗೌರಿಗದ್ದೆಯ ಅವಧೂತರಾದ ವಿನಯ ಗುರೂಜಿ ಅವರು ಬೆಳಗಾವಿಯ ವಿಜಯಾ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗಿ ಜನ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಆಶೀರ್ವದಿಸಿದರು' ಎಂದು ಬರೆದುಕೊಂಡಿದ್ದಾರೆ.
ಇನ್ನು ವಿಧಾನ ಪರಿಷತ್ನ ಸಭಾಪತಿ ಬಸವರಾಜ ಹೊರಟ್ಟಿ ಅವರು ಇಂದು ಬೆಳಗಾವಿ ವಿಜಯಾ ಆಸ್ಪತ್ರೆಗೆ ಭೇಟಿ ನೀಡಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಹುಬ್ಬಳ್ಳಿ ಸಿದ್ದಾರೂಢ ಮಠದ ಪ್ರಸಾದವನ್ನು ನೀಡಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ: ಗಾಯಗೊಂಡವರು ಯಾರ್ಯಾರು?
ಇನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಅಪಘಾತ ಹೇಗೆ ನಡೆಯಿತು ಎನ್ನುವುದರ ಬಗ್ಗೆ ಅಪಘಾತವಾದ ಕಾರಿನಲ್ಲಿದ್ದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾಹಿತಿ ನೀಡಿದ್ದು, 'ನಾವು ಹೋಗುತ್ತಿದ್ದ ಸಮಯದಲ್ಲಿ ನಾಯಿಗಳು ಅಡ್ಡ ಬಂದಿರುವುದು ಹಾಗೂ ಜೊತೆಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ವಾಹನ ಇತ್ತು. ಇದರಿಂದ ಈ ದುರ್ಘಟನೆ ಸಂಭವಿಸಿದೆ. ತಡರಾತ್ರಿ ನಾವು ಹೊರಟಿರುವುದರಿಂದ ಬೆಂಗಾವಲು ವಾಹನ ಇರಲಿಲ್ಲ. ಚಾಲಕ ಹಾಗೂ ಗನ್ ಮ್ಯಾನ್ ಮುಂದೆ ಕುಳಿತಿದ್ದರು. ನಾವಿಬ್ಬರು ಹಿಂದೆ ಕುಳಿತಿದ್ದೆವು. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗನ್ ಮ್ಯಾನ್ಗೆ ಭುಜ ನೋವಾಗಿದೆ ಆದರೆ ಯಾವುದೇ ಅಪಾಯ ಇಲ್ಲ. ಮಂತ್ರಿಯವರನ್ನು ಬಿಟ್ಟು ಬೇರೆ ಯಾರಿಗೂ ಗಂಭೀರ ಗಾಯಗಳಾಗಿಲ್ಲ' ಎಂದು ತಿಳಿಸಿದ್ದಾರೆ.












Click it and Unblock the Notifications