20 ವರ್ಷವಾದ್ರು ಭಾನಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡದ ಅಮರಾವತಿ ಎಕ್ಸ್ಪ್ರೆಸ್
ಕೊಪ್ಪಳ: ಜಿಲ್ಲೆಯಲ್ಲಿ ಕೆಲವು ಬಾಲಿವುಡ್ ಮತ್ತು ಸ್ಯಾಂಡಲ್ವುಡ್ ಸಿನಿಮಾಗಳು ಚಿತ್ರೀಕರಣಗೊಂಡಿವೆ. ಶೂಟಿಂಗ್ಗೆ ಇಲ್ಲಿಗೆ ಬಂದಿದ್ದ ನಟರಾದ ಜಾಕಿ ಚಾನ್, ಸಂಜಯ್ ದತ್ ಜೊತೆಗಿನ ಕ್ಷಣಗಳನ್ನು ಗ್ರಾಮಸ್ಥರು ಸ್ಮರಿಸಿದ್ದಾರೆ. 'ಗುರು' ಸಿನಿಮಾ ಶೂಟಿಂಗ್ ಕಾರಣಕ್ಕಾಗಿ ಇಲ್ಲಿನ ರೈಲು ನಿಲ್ದಾಣದಲ್ಲಿ ನೀಲುಗಡೆ ನೀಡುತ್ತಿದ್ದ ಅಮರಾವತಿ ಎಕ್ಸ್ಪ್ರೆಸ್ ರೈಲು (17225/26) ತನ್ನ ನಿಲುಗಡೆ ರದ್ದುಗೊಳಿಸಿದೆ. ಎರಡು ದಶಕವಾದರೂ ನಿಲುಗಡೆ ನೀಡುತ್ತಿಲ್ಲ ಎಂದು ಭಾನಾಪುರ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಭಾನಾಪುರ ರೈಲು ನಿಲ್ದಾಣದಲ್ಲಿನ ನಿಲುಗಡೆ ರದ್ದಾಗಿದ್ದರಿಂದ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಹಳ್ಳಿಗಳ ನಿವಾಸಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಭಾನಾಪುರವು ಕೊಪ್ಪಳದ ಉಪನಗರ ಕೇಂದ್ರವಾಗಿದೆ. ಬೆಂಗಳೂರು, ಹುಬ್ಬಳ್ಳಿ, ಗುಂತಕಲ್, ಹೈದರಾಬಾದ್ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಗರಗಳಿಗೆ ರೈಲು ಹತ್ತಿ-ಇಳಿಯಲು ಜನರಿಗೆ ಅತ್ಯಗತ್ಯ ಕೇಂದ್ರ ನಿಲ್ದಾಣವು ಆಗಿದೆ. ಹೀಗಿದ್ದಾಗ ಪ್ರಮುಖ ರೈಲು ನಿಲುಗಡೆ ನೀಡುವುದು ಮುಖ್ಯವಾಗಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

2006ರಲ್ಲಿ ಮಣಿರತ್ನಂ ನಿರ್ದೇಶನದ 'ಗುರು' ಹಿಂದಿ ಸಿನಿಮಾದ ಚಿತ್ರೀಕರಣಕ್ಕೆ ಭಾನಾಪುರ ಆಯ್ಕೆಯಾಗಿತ್ತು. ಚಿತ್ರದಲ್ಲಿ "ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ನಟಿಸಿದ್ದಾರೆ. ಇಡೀ ಚಿತ್ರತಂಡವೇ ಇಲ್ಲಿಗೆ ಬಂದಿತ್ತು. ಶೂಟಿಂಗ್ಗಾಗಿ ಆಗ ನೈಋತ್ಯ ರೈಲ್ವೆ (SWR) ಅಮರಾವತಿ ಎಕ್ಸ್ಪ್ರೆಸ್ ನಿಲುಗಡೆಯನ್ನು ಒಂದು ವಾರದ ಮಟ್ಟಿಗೆ ರದ್ದುಗೊಳಿಸಿತ್ತು. ಅಲ್ಲಿಂದ ಈವರೆಗೆ 2026ರಲ್ಲೂ ದಶಕಗಳ ಬಳಿಕವೂ ನಿಲುಗಡೆ ಪುನರಾರಂಭವಾಗಿಲ್ಲ ಎಂದು ಉಪನ್ಯಾಸಕ ನಾಗರಾಜ್ ತಳವಾರ್ ಮಾಹಿತಿ ನೀಡಿದರು.
ಗಾಂಧೀಜಿ ಭೇಟಿ ನೀಡಿದ್ದ ಸ್ಥಳ
ಭಾನಾಪುರ ರೈಲು ನಿಲ್ದಾಣದ ಮತ್ತೊಂದು ವಿಶೇಷತೆ ಏನೆಂದರೆ ಮಹಾತ್ಮ ಗಾಂಧೀಜಿಯವರು 1934ರ ಮಾರ್ಚ್ 3ರಂದು ಇಲ್ಲಿಗೆ ಭೇಟಿ ನೀಡಿ ಸಾರ್ವಜನಿಕ ಸಭೆ ನಡೆಸಿದ್ದರು. ಅಲ್ಲದೇ ಭಾನಾಪುರ ಸಮೀಪ ಕೊಪ್ಪಳ ವಿಶ್ವ ವಿದ್ಯಾಲಯ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ವಿಟಿಯು ಸ್ನಾತಕೋತ್ತರ ಕೇಂದ್ರ ಮತ್ತು ಆಟಿಕೆ ಕಾರ್ಖಾನೆಗಳು ಈ ಪ್ರದೇಶ ಹಾಗೂ ಪಕ್ಕದ ತಳಕಲ್ ಗ್ರಾಮಗಳು ಇವೆ.
ರಾಷ್ಟ್ರೀಯ ಹೆದ್ದಾರಿಗಳ ಜಂಕ್ಷನ್
ಇನ್ನೂ ಬಳ್ಳಾರಿ-ಹುಬ್ಬಳ್ಳಿ ಮತ್ತು ಭಾನಾಪುರ-ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿಗಳ ಜಂಕ್ಷನ್ ಹತ್ತಿರವಿದ್ದು, ಅಮರಾವತಿ ಎಕ್ಸ್ಪ್ರೆಸ್ ಮಾತ್ರವಲ್ಲದೆ, ಹರಿಪ್ರಿಯ, ಕರ್ನಾಟಕ ಸಂಪರ್ಕ ಕ್ರಾಂತಿ, ವಾಸ್ಕೋ-ಡಾ-ಗಾಮಾ ಅಮರಾವತಿ, ಮೈಸೂರು ಸ್ಪೆಷಲ್ ಫೇರ್, ಡಾ-ಗಾಮಾ-ಜಸಿದಿಹ್ ವೀಕ್ಲಿ, ಯಶವಂತಪುರ, ಚೆನ್ನೈ ಸೆಂಟ್ರಲ್ ಸೇರಿದಂತೆ ಹಲವು ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೂ ಬೇಡಿಕೆ ಇದೆ ಎಂದು ಅವರು ಒತ್ತಾಯಿಸಿದರು.
ಸ್ಪಂದಿಸದ ನಾಯಕರು, ರೈಲ್ವೆ ಅಧಿಕಾರಿಗಳು
'ಗುರು' ಚಿತ್ರತಂಡದಿಂದ ಎತ್ತಿನಗಾಡಿ ಓಡಿಸಲು ನೇಮಕವಾಗಿದ್ದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಹಮಾನ್ಸಾಬ್ ಅಲ್ಲಾಖಾನ್ ನಾದಾಫ್, ಕೊಪ್ಪಳದ ಮಾಜಿ ಸಂಸದ ಕರಡಿ ಸಂಗಣ್ಣ ಮತ್ತು ಹಾಲಿ ಸಂಸದ ಕೆ ರಾಜಶೇಖರ್ ಹಿಟ್ನಾಳ್ ಅವರಿಗೆ ಹಲವು ಮನವಿಗಳನ್ನು ಸಲ್ಲಿಸಲಾಗಿದೆ. ಆದರೆ ಈವರೆಗೆ ಅವರು ಯಾರು ತಲೆಕೆಡಿಸಿಕೊಂಡಿಲ್ಲ. ರೈಲ್ವೆ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ.
ದಶಕಗಳ ಕಾಲ ರೈಲ್ವೆ ಕಲ್ಲಿದ್ದಲು ಗುತ್ತಿಗೆದಾರ ಶಾಂತವೀರಯ್ಯ ಲಖಮಾಪುರಮಠ, ಬೆಳಗ್ಗೆ 8 ರಿಂದ ಮಧ್ಯಾಹ್ನ 3:45 ರವರೆಗೆ ಗದಗ ಮತ್ತು ಹುಬ್ಬಳ್ಳಿ ಕಡೆಗೆ ರೈಲು ಸೌಲಭ್ಯವಿರಲಿಲ್ಲ ಎಂದು ಗಮನಸೆಳೆದಿದ್ದಾರೆ. "ಭಾನಾಪುರ ಕುಕನೂರು, ಯಲಬುರ್ಗಾ, ಮುಂಡರಗಿ ತಾಲ್ಲೂಕುಗಳಿಗೆ ಪ್ರವೇಶದ್ವಾರವೂ ಹೌದು. ಇದೆಲ್ಲ ಗಮನಿಸಿ ಇನ್ನು ಮುಂದಾದರೂ ಅಮರಾವತಿ ಎಕ್ಸ್ಪ್ರೆಸ್ ರೈಲು ಸೇರಿದಂತೆ ಅಗತ್ಯ ರೈಲುಗಳ ನಿಲುಗಡೆ ಇಲ್ಲಿ ಆದರೆ ಜನರಿಗೆ ಅನುಕೂಲವಾಗುತ್ತದೆ ಎಂಬ ಒತ್ತಾಯ ಜೋರಾಗಿದೆ.














Click it and Unblock the Notifications