ಪ್ರೇಯಸಿಗಾಗಿ ಐಸಿಐಸಿಐ ಬ್ಯಾಂಕ್ಗೆ 79 ಕೋಟಿ ಪಂಗನಾಮ!
ವಿಜಯಪುರ, ಫೆಬ್ರವರಿ, 10: ಗೆಳತಿಗಾಗಿ ಏನೇನೋ ಮಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಈಗ ಅದೇ ಸಾಲಿಗೆ ಮತ್ತೊಂದು ವಂಚನೆ ಪ್ರಕರಣ ಸೇರ್ಪಡೆ. ಇದು ಅಂತಿಂಥ ವಂಚನೆಯಲ್ಲ.
ಖಾಸಗಿ ವಲಯದ ಹೆಸರಾಂತ ಬ್ಯಾಂಕ್ ಐಸಿಐಸಿಐಗೆ ಬರೋಬ್ಬರಿ 79 ಕೋಟಿ ರು. ಪಂಗನಾಮ ಹಾಕಿದ ಪ್ರಕರಣ. ಬ್ಯಾಂಕಿಗೆ ವಂಚನೆ ಮಾಡಿ ವಿದೇಶಕ್ಕೆ ಹಾರಲು ಹೊರಟಿದ್ದವ ನೇಪಾಳದ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾನೆ.[ಉಡುಪಿ ಶಾಸಕರಿಗೆ ಟೋಪಿ ಹಾಕಿದ ವಿದ್ಯಾರ್ಥಿಗಳು]

ಪ್ರಕರಣದ ರೂವಾರಿ ವಿಜಯಸಾರಥಿ ಜೊನ್ನಲಗಡ್ಡ ನನ್ನು ಭಾರತ ಮತ್ತು ನೇಪಾಳ ಗಡಿ ಭಾಗದ ಸನೋಲಿ ಗ್ರಾಮದ ಹೋಟೆಲ್ ನಲ್ಲಿ ಬಂಧಿಸಿ ಕರೆತರಲಾಗಿದೆ. ಇನ್ನುಳಿದ ಆರೋಪಿಗಳಾದ ಸಚಿನ್ ಅಣ್ಣಪ್ಪ ಪಾಟೀಲ್ ಮತ್ತು ಪ್ರಮುಖ ಆರೋಪಿಯ ಪ್ರೇಯಸಿ ರೇಣುಕಾಶೆಟ್ಟಿ ಎಂಬುವರನ್ನು ಬಂಧಿಸಲಾಗಿದೆ.
ವಿವಿಧ ಸಂಘ ಸಂಸ್ಥೆಗಳು ನೀಡಿದ ಕ್ಯಾನ್ಸಲ್ ಆದ ಚೆಕ್ ಗಳೇ ಇವರ ಅಕ್ರಮಕ್ಕೆ ಆಧಾರ. ಹಣವನ್ನು ತಾನು ಕಬಳಿಸಿದ್ದು ಮಾತ್ರ ಅಲ್ಲದೇ ತನ್ನ ಪ್ರೇಯಸಿಗೂ ವಿಜಯಸಾರಥಿ ಭರ್ಜರಿ ಕೊಡುಗೆಗಳನ್ನೇ ನೀಡಿದ್ದ.
ಆರೋಪಿಗಳಿಂದ ರೂ 1.5 ಕೋಟಿ ನಗದು ಹಣ, ಪ್ರೇಯಸಿ ರೇಣುಕಾಶೆಟ್ಟಿಯ ಬ್ಯಾಂಕ್ ಖಾತೆಯಲ್ಲಿದ್ದ 51 ಲಕ್ಷ ರು. ಮತ್ತು 6 ಐಷಾರಾಮಿ ಕಾರುಗಳನ್ನು ಜಫ್ತಿ ಮಾಡಲಾಗಿದೆ.[ಬೆಂಗಳೂರಲ್ಲಿ ಭದ್ರಾವತಿಯ ವಂಚಕಿಯರು]
ಪ್ರಕರಣವೇನು?
ವಿಜಯಪುರ ಲಿಂಗದ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್ ನ ಕ್ಲಸ್ಟರ್ ಮ್ಯಾನೇಜರ್ ವಿಜಯಸಾರಥಿ ಮತ್ತು ಕಸ್ಟಮ್ ಸರ್ವೀಸ್ ಆಫೀಸರ್ ಸಚಿನ್ ಅಣ್ಣಪ್ಪ ಪಾಟೀಲ್ ಅನಧಿಕೃತವಾಗಿ 1.5 ಕೋಟಿ ರು. ಹಣವನ್ನು ಡ್ರಾ ಮಾಡಿ ನಾಪತ್ತೆಯಾಗಿದ್ದರು. ಇದಾದ ಮೇಲೆ ಬ್ಯಾಂಕ್ ನ ರೀಜನಲ್ ಮ್ಯಾನೇಜರ್ ರಂಜಿತ ದೂರು ನೀಡಿದ್ದರು. ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.
ಇಷ್ಟು ಮೊತ್ತದ ಹಣ ಡ್ರಾ ಮಾಡಿದ್ದು ಹೇಗೆ?
ಕ್ಯಾನ್ಸಲ್ ಆದ ಚೆಕ್ ಗಳೇ ಹಣ ಲಪಟಾಯಿಸಲು ಆರೋಪಿಗಳಿಗೆ ನೆರವಾಗಿದ್ದು. ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸಿದ್ದೇಶ್ವರ ಸಹಕಾರಿ ಬ್ಯಾಂಕ್, ಎನ್.ಹೆಚ್.ಎ.ಐ, ಕಿರಾಣಾ ಮರ್ಚೆಂಟ್ಸ್ ಅಸೋಷಿಯೇಷನ್ಸ್, ಮಹಾನಗರ ಪಾಲಿಕೆ ವಿಜಯಪುರ, ನೀರು ಸರಬರಾಜು ಇಲಾಖೆ, ವಿಜಯಪುರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳು ನೀಡಿದ್ದ ಕ್ಯಾನ್ಸಲ್ ಚೆಕ್ ಗಳನ್ನು ಬಳಸಿಕೊಂಡು ಅಪಾರ ಪ್ರಮಾಣದ ಹಣ ಡ್ರಾ ಮಾಡಿದ್ದರು.
ಭರ್ಜರಿ ಖರೀದಿ
ಆರೋಪಿ ವಿಜಯಸಾರಥಿ ತನ್ನ ಹೆಸರಿನಲ್ಲಿ ವಿಜಯಪುರದಲ್ಲಿ ಮನೆ, ದಕ್ಷಿಣ ಕನ್ನಡ ಜಿಲ್ಲೆಯ ನಿಟ್ಟೆಯಲ್ಲಿ 6 ಎಕೆರೆ ಕೃಷಿ ಜಮೀನು, ತನ್ನ ಪ್ರೇಯಸಿ ರೇಣುಕಾಶೆಟ್ಟಿ ಹೆಸರಿನಲ್ಲಿ ಬೆಂಗಳೂರಿನ ಜೆ.ಪಿ.ನಗರದಲ್ಲಿ ರೂ 2 ಕೋಟಿಯ ಮನೆ, ರೇಣುಕಾಶೆಟ್ಟಿಯ ಅಣ್ಣ ಸುದೀಪ್ ಶೆಟ್ಟಿ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಭೂಮಿ, ಆರೋಪಿ ಸಚಿನ್ ಅಣ್ಣಪ್ಪ ಪಾಟೀಲ್ ಹೆಸರಿನಲ್ಲಿ ಸಂಕೇಶ್ವರದಲ್ಲಿ 3.5 ಎಕೆರೆ , ವಿಜಯಪುರದಲ್ಲಿ 1.25 ಎಕೆರೆ ಜಮೀನು ಖರೀದಿ ಮಾಡಿದ್ದರು.












Click it and Unblock the Notifications