ಮುಜರಾಯಿ ದೇವಾಲಯ: ಕ್ರಾಂತಿಕಾರಿ ನಿರ್ಧಾರಕ್ಕೆ ಮುಂದಾದ ಸರಕಾರ
Recommended Video

ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ತಂದುಕೊಡುತ್ತಿರುವ ಮುಜರಾಯಿ ವ್ಯಾಪ್ತಿಯ ದೇವಾಲಯಗಳ ಅರ್ಚಕರ ನೇಮಕಾತಿ ವಿಚಾರದಲ್ಲಿ ಸಿದ್ದರಾಮಯ್ಯ ಸರಕಾರ ಕ್ರಾಂತಿಕಾರಿ ಹೆಜ್ಜೆಯಿಡಲು ಮುಂದಾಗಿದೆ.
ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಕಾನೂನಿನಲ್ಲಿ ಅವಕಾಶವಿರುವಂತೆ, ಮುಜರಾಯಿ ವ್ಯಾಪ್ತಿಯಡಿಯಲ್ಲಿ ಬರುವ ದೇವಾಲಯಗಳಿಗೆ ದಲಿತ ಅರ್ಚಕರನ್ನು ನೇಮಿಸಲು ಸರಕಾರ ತಯಾರಿ ಮಾಡಿಕೊಂಡಿದೆ. ಕೆಲವೇ ದಿನಗಳ ಹಿಂದೆ ಕೇರಳ ಸರಕಾರ ಕೂಡಾ, ದಲಿತ ಅರ್ಚಕರನ್ನು ನೇಮಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು.
ಈ ಸಂಬಂಧ ಹೇಳಿಕೆ ನೀಡಿರುವ ಮುಜರಾಯಿ ಖಾತೆಯ ಸಚಿವ ರುದ್ರಪ್ಪ ಲಮಾಣಿ, ರಾಜ್ಯಾದ್ಯಂತ ಈಗಾಗಲೇ 38 ಆಗಮ ಶಾಲೆಗಳನ್ನು ತೆರೆಯಲಾಗಿದೆ ಮತ್ತು 18 ರಿಂದ 40 ವರ್ಷ ವಯೋಮಿತಿಯವರು ಇಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ಧರ್ಮಸಂಸತ್ ನಲ್ಲೂ ದಲಿತ ಅರ್ಚಕರ ನೇಮಕಾತಿಗೆ ಬೆಂಬಲ ವ್ಯಕ್ತವಾಗಿತ್ತು ಎಂದಿರುವ ಸಚಿವರು, ಆಗಮ ಶಾಲೆಗಳ ಉಸ್ತುವಾರಿಯನ್ನು ಮುಜರಾಯಿ ಸಚಿವಾಲಯವೇ ವಹಿಸಿಕೊಳ್ಳಲಿದೆ. ಕೆಲವು ದಲಿತ ಯುವಕರು ಹೆಸರನ್ನು ನೊಂದಾಯಿಸಿಕೊಂಡಿದ್ದಾರೆಂದು ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮುಜರಾಯಿ ವ್ಯಾಪ್ತಿಯಲ್ಲಿ ಸುಮಾರು 38ಸಾವಿರ ದೇವಾಲಯಗಳಿದ್ದು, ಆದಾಯದ ಲೆಕ್ಕಾಚಾರದಲ್ಲಿ ಅದನ್ನು ಎ,ಬಿ,ಸಿ ಮತ್ತು ಡಿ ಎಂದು ವರ್ಗೀಕರಿಸಲಾಗಿದೆ. ಆಗಮ ಶಾಸ್ತ್ರದ ಕೋರ್ಸ್ ಮುಗಿಸುವ ದಲಿತ ಅರ್ಚಕರನ್ನು ಯಾವ ಶ್ರೇಣಿಯ ದೇವಾಲಯಗಳಲ್ಲಿ ನೇಮಿಸಲಾಗುವುದು ಎನ್ನುವುದರ ಬಗ್ಗೆ ಸಚಿವರು ಸ್ಪಷ್ಟನೆ ನೀಡಿಲ್ಲ.

ವಿದ್ವತ್, ಪ್ರವೀಣ ಮತ್ತು ಪ್ರವರ ಶಾಸ್ತ್ರವನ್ನು ಕಲಿಯುವುದು ಕಡ್ಡಾಯ
ಆಗಮ ಶಾಲೆಯಲ್ಲಿ ಕಲಿಯುವ ಅಭ್ಯರ್ಥಿಗಳು ವಿದ್ವತ್, ಪ್ರವೀಣ ಮತ್ತು ಪ್ರವರ ಶಾಸ್ತ್ರವನ್ನು ಕಲಿಯುವುದು ಕಡ್ಡಾಯ. ಕೋರ್ಸ್ ಮುಗಿಸಿದ ಅಭ್ಯರ್ಥಿಗಳಿಗೆ ಮುಜರಾಯಿ ಇಲಾಖೆ 'ಅರ್ಚಕರು' ಎನ್ನುವ ಪ್ರಮಾಣಪತ್ರವನ್ನು ನೀಡುತ್ತದೆ. ಆನಂತರ, ಇಲಾಖೆಯೇ ಅವರನ್ನು ತನ್ನ ವ್ಯಾಪ್ತಿಯ ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸುತ್ತದೆ.

ಉಡುಪಿಯಲ್ಲಿ ನಡೆದ ಧರ್ಮಸಂಸದ್ ನಲ್ಲಿ ದಲಿತರನ್ನು ನೇಮಿಸುವುದಕ್ಕೆ ಬೆಂಬಲ
ದಲಿತರನ್ನು ಅಸ್ಪ್ರಶ್ಯರು ಎಂದು ಇನ್ನೂ ನೋಡಲಾಗುತ್ತಿರುವ ಈ ದಿನಗಳಲ್ಲಿ, ಉಡುಪಿಯಲ್ಲಿ ನಡೆದ ಧರ್ಮಸಂಸದ್ ನಲ್ಲಿ ಧಾರ್ಮಿಕ ಮುಖಂಡರು, ದಲಿತರನ್ನು ಅರ್ಚಕರನ್ನಾಗಿ ನೇಮಿಸುವುದಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ದಲಿತ ನೇಮಕಾತಿ ಪ್ರಕ್ರಿಯೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ವೇಗ ನೀಡಲು ನಿರ್ಧರಿಸಿದೆ ಎಂದು ಸಚಿವ ಲಮಾಣಿ ಹೇಳಿದ್ದಾರೆ.

ಸಚಿವ ರುದ್ರಪ್ಪ ಲಮಾಣಿ
ಹಲವು ಕಾರಣಗಳಿಂದ ಅರ್ಚಕ ವೃತ್ತಿಗೆ ಬ್ರಾಹ್ಮಣ ಸಮುದಾಯದವರನ್ನು ಬಿಟ್ಟರೆ ಮಿಕ್ಕ ಜಾತಿಯವರು ಅಷ್ಟೇನೂ ಉತ್ಸಾಹ ತೋರುತ್ತಿರಲಿಲ್ಲ. ಈಗ ಇತರ ನಿಧಾನವಾದರೂ, ಇತರ ಸಮುದಾಯದವರೂ ಈ ವೃತ್ತಿಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ - ಸಚಿವ ರುದ್ರಪ್ಪ ಲಮಾಣಿ.

ಸುಮಾರು 1.2ಲಕ್ಷ ಅರ್ಚಕರನ್ನು ಹೊಂದಿರುವ ಇಲಾಖೆ
ಸುಮಾರು 1.2ಲಕ್ಷ ಅರ್ಚಕರನ್ನು ಹೊಂದಿರುವ ಮುಜರಾಯಿ ಇಲಾಖಾ ವ್ಯಾಪ್ತಿಯ ದೇವಾಲಯಗಳಲ್ಲಿನ ಅರ್ಚಕರ ನೇಮಕಾತಿ ವಿಚಾರದಲ್ಲಿ ಯಾವುದೇ ಮೀಸಲಾತಿಯಿರುವುದಿಲ್ಲ. ಹಲವು ದೇವಾಲಯಗಳಲ್ಲಿ ವಂಶ ಪಾರಂಪರ್ಯವಾಗಿ, ಕುಟುಂಬದ ಸದಸ್ಯರೇ ಅರ್ಚಕರಾಗಿ ಮುಂದುವರಿಯುತ್ತಿದ್ದಾರೆ.

ಕೋಟ್ಯಾಂತರ ಆದಾಯ ತಂದುಕೊಡುವ ದೇವಾಲಯಗಳು
ಆಗಮ ಶಾಲೆಯಲ್ಲಿ ತರಬೇತಿ ಪಡೆದುಕೊಂಡು ಬರುವ ಅರ್ಚಕರನ್ನು ಯಾವ ಶ್ರೇಣಿಯ ದೇವಾಲಯಕ್ಕೆ ನೇಮಿಸಲಾಗುವುದು ಎನ್ನುವುದರ ಬಗ್ಗೆ ಸ್ಪಷ್ಟನೆಯಿಲ್ಲ. ಕೋಟ್ಯಾಂತರ ಆದಾಯ ತಂದುಕೊಡುವ ದೇವಾಲಯಗಳಲ್ಲಿ ಪ್ರಮುಖವಾದದ್ದು, ಕುಕ್ಕೆ ಸುಬ್ರಮಣ್ಯ, ಮಲೈ ಮಹಾದೇಶ್ವರ, ಕೊಲ್ಲೂರು, ಕಟೀಲು, ಮಂದರ್ತಿ, ನಂಜನಗೂಡು ಮುಂತಾದ ದೇವಾಲಯಗಳಿವೆ.












Click it and Unblock the Notifications