ರಾಜ್ಯದ ಈ 3 'ಎಚ್ಎಂಟಿ' ಕ್ಷೇತ್ರದ ಫಲಿತಾಂಶದ ಮೇಲೆ ಊರಿಗೆಲ್ಲಾ ಕಣ್ಣು
ದೇಶದ 542 ಲೋಕಸಭಾ ಕ್ಷೇತ್ರಗಳ ಪೈಕಿ, ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ಕ್ಷೇತ್ರಗಳ ಪಟ್ಟಿಯಲ್ಲಿ ರಾಜ್ಯದ ಮೂರು ಕ್ಷೇತ್ರಗಳೂ ಇವೆ. ಅದಕ್ಕೆ ಕಾರಣ ಅತ್ಯಂತ ಸ್ಪಷ್ಟ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ್ರು ಮತ್ತು ಅವರಿಬ್ಬರು ಮೊಮ್ಮಕ್ಕಳು ಕಣಕ್ಕಿಳಿದಿರುವುದರಿಂದ, ಜೊತೆಗೆ ಮೈತ್ರಿಧರ್ಮದ ಪ್ರಕಾರ ಕಾಂಗ್ರೆಸ್ ಅಲ್ಲಿ ಅಭ್ಯರ್ಥಿಯನ್ನು ಹಾಕದೇ ಇದ್ದರೂ, ಸ್ಥಳೀಯ ಮಟ್ಟದಲ್ಲಿ ಎರಡು ಪಕ್ಷಗಳ ನಡುವಿನ ಗೊಂದಲದಿಂದ, ಫಲಿತಾಂಶ ಏನಾಗಬಹುದು ಎನ್ನುವ ಕೌತುಕ ಇದಕ್ಕೆ ಕಾರಣ.
ಹಿಂದೆ 'ಎಚ್ಎಂಟಿ' ಅಂದರೆ ಹೆಗಲಮೇಲೆ ಟವೆಲ್ ಎಂದು ಹಾಸ್ಯಮಾಡಲಾಗುತ್ತಿತ್ತು, ಈಗ ಬದಲಾದ ಪರಿಸ್ಥಿತಿಯಲ್ಲಿ 'ಎಚ್ಎಂಟಿ' ಎಂದರೆ ಹಾಸನ, ಮಂಡ್ಯ, ತುಮಕೂರು ಎಂದಾಗಿದೆ. ಈ ಮೂರು ಕ್ಷೇತ್ರಗಳ ಚುನಾವಣೆ ಮತ್ತು ಅದರ ಫಲಿತಾಂಶದ ಬಗ್ಗೆ ಚರ್ಚೆ ಮಾಡಲು ಈ ಪದವನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ.
ನಾಮಪತ್ರ ಸಲ್ಲಿಸಲು ಕೆಲವೇ ದಿನ ಇರುವವರೆಗೂ ಬೆಂಗಳೂರು ಉತ್ತರದಿಂದ ಸ್ಪರ್ಧಿಸಬೇಕೋ ಅಥವಾ ತುಮಕೂರಿನಿಂದ ಸ್ಪರ್ಧಿಸಬೇಕೋ ಎನ್ನುವ ಗೊಂದಲ ದೇವೇಗೌಡರಿಗೆ ಇದ್ದದ್ದು, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯ ವಿಚಾರದಲ್ಲಿ, ಕಾಂಗ್ರೆಸ್ ಮುಖಂಡರು ಬಂಡಾಯ ಎದ್ದಿದ್ದರಿಂದ, 'ಎಚ್ಎಂಟಿ' ಫಲಿತಾಂಶ ಇನ್ನಿಲ್ಲದಂತೇ ಕುತೂಹಲ ಹುಟ್ಟುಹಾಕಿದೆ. ಏನಿದೆ 'ಎಚ್ಎಂಟಿ'ಯ ಲೋಕಲ್ ಟಾಕ್..

ಕೆಲವು ಮುಖಂಡರನ್ನು ಸಮಾಧಾನಗೊಳಿಸಲು ಕಾಂಗ್ರೆಸ್ಸಿಗೆ ಸಾಧ್ಯವೇ ಆಗಿಲ್ಲ
ತಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವ ಗೊಂದಲ, ಟೆನ್ಸನ್, ಬಹುಷಃ ದೇವೇಗೌಡರಿಗೆ ತಮ್ಮ ವೃತ್ತಿಜೀವನದಲ್ಲಿ ಈ ಚುನಾವಣೆಯಷ್ಟು ಹಿಂದೆ ಕಾಡಿತ್ತೋ, ಇಲ್ಲವೋ? ತುಮಕೂರು, ಮಂಡ್ಯ ಮತ್ತು ಹಾಸನದ ಸ್ಥಳೀಯ ಕಾರ್ಯಕರ್ತರ ಮತ್ತು ಮುಖಂಡರ ಭಿನ್ನಮತವನ್ನು ಒಂದು ಹಂತಕ್ಕೆ ಶಮನಗೊಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರಿಗೆ ಸಾಕುಸಾಕಾಗಿ ಹೋಗಿತ್ತು. ಆದರೂ, ಕೆಲವು ಮುಖಂಡರನ್ನು ಸಮಾಧಾನಗೊಳಿಸಲು ಇವರುಗಳಿಗೆ ಸಾಧ್ಯವೇ ಆಗಿಲ್ಲ.

ದೇವೇಗೌಡರು ತುಮಕೂರಿನಿಂದ, ಪ್ರಜ್ವಲ್ ಹಾಸನದಿಂದ ಮತ್ತು ನಿಖಿಲ್ ಮಂಡ್ಯ
ದೇವೇಗೌಡರು ತುಮಕೂರಿನಿಂದ, ಪ್ರಜ್ವಲ್ ಹಾಸನದಿಂದ ಮತ್ತು ನಿಖಿಲ್ ಮಂಡ್ಯದಿಂದ ಸ್ಪರ್ಧಿಸುತ್ತಾರೆ ಎನ್ನುವ ವಿಷಯ ಮೊದಲು ಬಂದಾಗ, ಮೂವರಿಗೆ ಇದು ಕೇಕ್ ವಾಕ್ ಎಂದೇ ಹೇಳಲಾಗುತ್ತಿತ್ತು. ಆದರೆ, ಬದಲಾದ ಸನ್ನಿವೇಶ, ಜೆಡಿಎಸ್ ಮುಖಂಡರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತ್ತು. ತಾವು ಊಹಿಸಲೂ ಅಸಾಧ್ಯವಾದ ಎದುರಾಳಿಗಳ ಪೈಪೋಟಿ, ಕಾಂಗ್ರೆಸ್ ಕಾರ್ಯಕರ್ತರ ಮತ್ತು ಸ್ಥಳೀಯ ಮುಖಂಡರ ಅಪಸ್ವರದಿಂದ, ಚುನಾವಣಾ ಫಲಿತಾಂಶ ಯಾವರೀತಿ ಬೇಕಾದರೂ ತಿರುಗಬಹುದು ಎನ್ನುವ ಹಂತಕ್ಕೆ ಬಂದು ನಿಂತಿದೆ.

ಭಾರೀ ಬೆಟ್ಟಿಂಗ್ ನಡೆಯುತ್ತಿರುವ ಮಂಡ್ಯದಲ್ಲಿ ನಿಖಿಲ್ ಮೇಲೆ ಸ್ವಲ್ಪಮಟ್ಟಿನ ಒಲವು ಜಾಸ್ತಿಯಿದೆ
ಮಂಡ್ಯದಲ್ಲಿ ಮೊದಮೊದಲು ಸುಮಲತಾ ಪ್ರಚಾರ ನಿಖಿಲ್ ಅವರನ್ನು ಅಕ್ಷರಸಃ ಹಿಂದಿಕ್ಕಿತ್ತು. ಆದರೆ, ಕೊನೆಯ ಹಂತದಲ್ಲಿ ಜೆಡಿಎಸ್ ಕೂಡಾ ಉತ್ತಮ ಪ್ರಚಾರವನ್ನು ಕೈಗೊಂಡಿತ್ತು. ಪ್ರಚಾರದ ವೇಳೆ ವ್ಯಕ್ತವಾದ ಜನಸ್ಪಂದನೆಯನ್ನು ನೋಡುವುದಾದರೆ, ಸುಮಲತಾ ಅವರ ಕೈ ಮೇಲು. ಇದರ ಜೊತೆಗೆ, ಗುಪ್ತಚರ ವರದಿ ಕೂಡಾ ಕುಮಾರಸ್ವಾಮಿಯವರ ನಿದ್ದೆಗೆಡಿಸಿದೆ ಎನ್ನುವ ಮಾಹಿತಿಯಿದೆ. ಭಾರೀ ಬೆಟ್ಟಿಂಗ್ ನಡೆಯುತ್ತಿರುವ ಮಂಡ್ಯದಲ್ಲಿ ನಿಖಿಲ್ ಮೇಲೆ ಸ್ವಲ್ಪಮಟ್ಟಿನ ಒಲವು ಜಾಸ್ತಿಯಿದೆ.

ಯಾರೇ ಗೆದ್ದರೂ ಗೆಲುವಿನ ಅಂತರ ಹೆಚ್ಚು ಇರುವುದಿಲ್ಲ ಎನ್ನುವ ಮಾತು ತುಮಕೂರು ಕ್ಷೇತ್ರದಲ್ಲಿದೆ
ತುಮಕೂರಿನಲ್ಲಿ ಮುದ್ದಹನುಮೇಗೌಡ್ರು ಮತ್ತು ಕೆ ಎನ್ ರಾಜಣ್ಣ ಅವರನ್ನು ಸಮಾಧಾನ ಪಡಿಸಲು ಕಾಂಗ್ರೆಸ್ ಮುಖಂಡರು ಹರಸಾಹಸಪಟ್ಟಿದ್ದು ಗೊತ್ತೇಯಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನದಂದು ಮುದ್ದಹನುಮೇಗೌಡ್ರು ಹಿಂದಕ್ಕೆ ಸರಿದಿದ್ದರು. ಆದರೆ, ದೇವೇಗೌಡರ ಚುನಾವಣಾ ಪ್ರಚಾರಕ್ಕೆ ಅವರು ಹೋಗಿರಲಿಲ್ಲ. ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಅವರು ತೀವ್ರ ಸ್ಪರ್ಧೆ ದೇವೇಗೌಡರಿಗೆ ನೀಡಿದ್ದು, ಯಾರೇ ಗೆದ್ದರೂ ಗೆಲುವಿನ ಅಂತರ ಹೆಚ್ಚು ಇರುವುದಿಲ್ಲ ಎನ್ನುವ ಮಾತು ತುಮಕೂರು ಕ್ಷೇತ್ರದಲ್ಲಿದೆ.

ಹಾಸನದ ಮತದಾರರಿಗೆ ಒಲವು, ಬಿಜೆಪಿಗೆ ಹೋಲಿಸಿದರೆ, ಸ್ವಲ್ಪಜಾಸ್ತಿ
ಇನ್ನು, ಹಾಸನದಲ್ಲಿ, ಕಾಂಗ್ರೆಸ್ ನಲ್ಲಿದ್ದ ಮತ್ತು ಗೌಡ್ರ ಕುಟುಂಬದ ಕಟ್ಟಾ ವಿರೋಧಿ ಎ ಮಂಜು ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಭಾರೀ ಪ್ರಚಾರವನ್ನೇ ಬಿಜೆಪಿ ಇಲ್ಲಿ ಮಾಡಿದೆ, ಸ್ಥಳೀಯ ಕಾಂಗ್ರೆಸ್ ಮುಖಂಡರ ಕೋಪವನ್ನೂ ಬಿಜೆಪಿ ಒಂದು ಹಂತಕ್ಕೆ ಎನ್ ಕ್ಯಾಷ್ ಮಾಡಿಕೊಂಡಿದೆ. ಬಿಜೆಪಿ ಪರವಾಗಿ ಪ್ರೀತಂ ಗೌಡ, ಹಗಲುರಾತ್ರಿ ದುಡಿದಿದ್ದಾರೆ. ಆದರೂ, ದೇವೇಗೌಡರ ಕುಟುಂಬದ ಮೇಲೆ, ಹಾಸನದ ಮತದಾರರಿಗೆ ಒಲವು, ಬಿಜೆಪಿಗೆ ಹೋಲಿಸಿದರೆ, ಸ್ವಲ್ಪಜಾಸ್ತಿಯಿದೆ ಎನ್ನುವುದು ಇಲ್ಲಿನ ಲೋಕಲ್ ಟಾಕ್.












Click it and Unblock the Notifications