ಶತಕದತ್ತ ಟೊಮೆಟೊ ಬೆಲೆ; ಭಾರಿ ಮಳೆಯಿಂದ ಹೆಚ್ಚುತ್ತಲೇ ಇದೆ ತರಕಾರಿ ಬೆಲೆ
ಈಗಾಗಲೇ ಪೆಟ್ರೋಲ್, ಡೀಸೆಲ್ ಅಂತಹ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನತೆಗೆ ತರಕಾರಿ ಬೆಲೆ ಏರಿಕೆ ಹೊಸ ತಲೆನೋವಾಗಿದೆ. ಕಳೆದ ಕೆಲವು ದಿನಗಳಿಂದ ತರಕಾರಿಬೆಲೆ ಗಗನಕ್ಕೇರುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸೂಚನೆ ಸಿಕ್ಕಿದೆ.
ಹದಿನೈದು ದಿನಗಳ ಹಿಂದೆ 50-60 ರೂಪಾಯಿ ಇದ್ದ ಟೊಮೆಟೊ ಬೆಲೆ, ಸದ್ಯ 80-90 ರೂಪಾಯಿಗೆ ಏರಿಕೆಯಾಗಿದೆ. ಕಳೆದ ತಿಂಗಳು 30 ರೂಪಾಯಿ ಇದ್ದ ಬೆಂಡೆಕಾಯಿ ಬೆಲೆ ಈಗ 80 ರುಪಾಯಿ ಆಗಿದೆ. ಸೋರೆಕಾಯಿ ಮತ್ತು ಕುಂಬಳಕಾಯಿ ಬೆಲೆ ಕೂಡ 60-80 ರೂಪಾಯಿ ಆಗಿದೆ. ಹೂಕೋಸು, ಕ್ಯಾಪ್ಸಿಕಂ, ಅವರೆಕಾಯಿ, ಸೌತೆಕಾಯಿ ಬೆಲೆ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಭಾರಿ ಮಳೆಯಿಂದಾಗಿ ತರಾಕರಿ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಕಾರಣ ಕೆಲವು ರಾಜ್ಯಗಳಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಒಂದೇ ವಾರದಲ್ಲಿ ಮೂರು ನಾಲ್ಕು ಪಟ್ಟು ಹೆಚ್ಚಾಗಿದೆ.
ಮಳೆ ಕಡಿಮೆಯಾಗುವವರೆಗೆ ತರಕಾರಿ ಬೆಲೆ ಇದೇ ರೀತಿ ಇರಲಿದೆ ಎಂದು ಹೇಳಲಾಗಿದೆ. ಮಳೆ ಹೆಚ್ಚಾದರೆ ಬೆಳೆ ಕೂಡ ನಷ್ಟವಾಗಲಿದ್ದು, ಬೆಲೆ ಮತ್ತಷ್ಟು ಹೆಚ್ಚುವ ಆತಂಕ ಕೂಡ ಇದೆ.
ಬೆಲೆ ಏರಿಕೆಗೆ ಕಾರಣಗಳು
ಮುರಾದಾಬಾದ್ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಟೊಮೆಟೊ ಬೆಳೆಗಳು ಹಾನಿಗೊಳಗಾಗಿರುವುದು ಟೊಮೆಟೊ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ರೈತರು ಹೇಳಿದ್ದಾರೆ.
ಇದು ಟೊಮೆಟೊ ಕೃಷಿಗೆ ಹೆಸರುವಾಸಿಯಾಗಿದೆ, ಇಲ್ಲಿಂದ ಟೊಮೆಟೊಗಳು ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ ಎನ್ಸಿಆರ್ ಮತ್ತು ಹರಿಯಾಣವನ್ನು ತಲುಪುತ್ತವೆ. ಆದರೆ, ಇತ್ತೀಚೆಗೆ ಮುರಾದಾಬಾದ್ನಲ್ಲಿ ಸುರಿದ ಭಾರಿ ಮಳೆಗೆ ಜಮೀನಿನಲ್ಲಿದ್ದ ಟೊಮೇಟೊ ನಾಶವಾಗಿದೆ.
ಭಾರಿ ಮಳೆಯಿಂದಾಗಿ ಟೊಮೆಟೋ ಬೆಳೆಗಳು ಜಲಾವೃತವಾಗಿದ್ದು, ಟೊಮೆಟೊ ಗಿಡಗಳಲ್ಲೇ ಕೊಳೆಯುತ್ತಿದ್ದು, ಇದರಿಂದ ರೈತರು ತಮ್ಮ ಟೊಮೇಟೊ ಬೆಳೆಗಳನ್ನು ಕಿತ್ತು ಇತರೆ ಬೆಳೆ ಬೆಳೆಯಲು ಮುಂದಾಗಿದ್ದಾರೆ.
ರಾಜ್ಯದಲ್ಲೂ ಬೆಲೆ ಏರಿಕೆ ಬಿಸಿ
ಕರ್ನಾಟಕದಲ್ಲಿ ಕೂಡ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು ತರಕಾರಿ ಬೆಲೆ ಹೆಚ್ಚಳವಾಗುವ ಆತಂಕ ಶುರುವಾಗಿದೆ. ಹಲವು ತಿಂಗಳಿನಿಂದ ಬೀನ್ಸ್ ಬೆಲೆ 100 ರೂಪಾಯಿ ಆಸುಪಾಸಿನಲ್ಲೇ ಇದೆ.
ಟೊಮೆಟೊ ಬೆಲೆ ಸದ್ಯ 50-60 ರೂಪಾಯಿ ಇದ್ದು, ವಿವಿಧ ತರಕಾರಿಗಳು 50-60 ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿವೆ. ಈರುಳ್ಳಿ ಬೆಲೆ ಈಗಾಗಲೇ 40-50 ರೂಪಾಯಿ ಇದ್ದು, ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.












Click it and Unblock the Notifications