Greenfield Corridor: ತುಮಕೂರು, ಹಾಸನ, ಚಿತ್ರದುರ್ಗ ಜಿಲ್ಲೆಯ ಜನತೆಗೆ ಸಿಹಿ ಸುದ್ದಿ ಕೊಟ್ಟ ಸಚಿವ ವಿ ಸೋಮಣ್ಣ
ತುಮಕೂರು, ಹಾಸನ, ಚಿತ್ರದುರ್ಗ ಜಿಲ್ಲೆಯ ಜನತೆಗೆ ಕೇಂದ್ರ ಸಚಿವ ವಿ ಸೋಮಣ್ಣ ಖುಷಿ ಸುದ್ದಿ ನೀಡಿದ್ದಾರೆ. ಹಾಸನ - ತಿಪಟೂರು - ಹುಳಿಯಾರು - ಹಿರಿಯೂರು ಹೆದ್ದಾರಿಯಲ್ಲಿ ಗ್ರೀನ್ಫೀಲ್ಡ್ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಜಲಶಕ್ತಿ, ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಮಾಹಿತಿ ನೀಡಿದ್ದಾರೆ.
ತುಮಕೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೀನ್ಫೀಲ್ಡ್ ಯೋಜನೆಯಡಿ ಹಾಸನ- ಹಿರಿಯೂರು ನಡುವೆ ₹4,500 ಕೋಟಿ ವೆಚ್ಚದಲ್ಲಿ 114 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ಯೋಜನೆಯು ಹಾಸನ, ತಿಪಟೂರು, ಹುಳಿಯಾರು ಮತ್ತು ಹಿರಿಯೂರು ಪಟ್ಟಣಗಳ ಅಭಿವೃದ್ಧಿಗೆ ವೇಗ ನೀಡಲಿದೆ ಎಂದು ಹೇಳಿದರು.

ಬೆಂಗಳೂರು - ಪುಣೆ ನಡುವೆ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ ನಿರ್ಮಾಣವಾಗಲಿದ್ದು ಇದು ಅದಕ್ಕೆ ಪೂರಕವಾಗಿರಲಿದೆ ಎಂದು ಹೇಳಲಾಗಿದೆ. ಚಿಕ್ಕನಾಯಕನಹಳ್ಳಿ, ತಿಪಟೂರು, ಹಿರಿಯೂರು ತಾಲೂಕುಗಳ ನಡುವೆ ಸಂಪರ್ಕ ಸುಧಾರಣೆಯಾಗಲಿದ್ದು ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ.
ಪುಣೆ - ಬೆಂಗಳೂರು ಗ್ರೀನ್ಫೀಲ್ಡ್ ಹೆದ್ದಾರಿ ಯೋಜನೆ
ಪುಣೆ - ಬೆಂಗಳೂರು ನಡುವೆ 55 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರೀನ್ಫೀಲ್ಡ್ ಹೆದ್ದಾರಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಯೋಜನೆ ಈಗ ಡಿಪಿಆರ್ ಹಂತದಲ್ಲಿದ್ದು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. 700 ಕಿಲೋ ಮೀಟರ್ ರಸ್ತೆಯಲ್ಲಿ 500 ಕಿಲೋ ಮೀಟರ್ ಕರ್ನಾಟಕದಲ್ಲೇ ಹಾದು ಹೋಗಲಿದ್ದು ರಾಜ್ಯದಲ್ಲಿ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ.
ತುಮಕೂರಿನಲ್ಲಿ ಎರಡನೇ ವಿಮಾನ ನಿಲ್ದಾಣವಾಗಲಿ
ಇನ್ನು ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಳ ಆಯ್ಕೆ ಬಗ್ಗೆ ಮಾತನಾಡಿರುವ ವಿ ಸೋಮಣ್ಣ, ತುಮಕೂರು ಜಿಲ್ಲೆಯಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾಗಲಿ ಎಂದು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಈಗಾಗಲೇ ಇರುವ ಹೆಚ್ಎಎಲ್ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಿ ಬಳಸಬೇಕು ಎಂದು ಕೂಡ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕನ್ನಡಿಗರು ಕೆಲಸ ಪಡೆಯಬೇಕು
ರೈಲ್ವೆ ಇಲಾಖೆಯಲ್ಲಿ ಕೆಲಸ ಪಡೆಯಲು ಕನ್ನಡಿಗರು ಹೆಚ್ಚಾಗಿ ಆಸಕ್ತಿ ತೋರಿಸುತ್ತಿಲ್ಲ ಎಂದು ವಿ ಸೋಮಣ್ಣ ಹೇಳಿದ್ದಾರೆ. ರೈಲ್ವೆ ಇಲಾಖೆಯಲ್ಲಿ 12 ಲಕ್ಷ ನೌರರರಿದ್ದಾರೆ. ಇದರಲ್ಲಿ 99 ಪ್ರತಿಶತ ಉತ್ತರ ಭಾರತೀಯರೇ ಇದ್ದಾರೆ. ಕನ್ನಡಿಗರಿಗೆ ಅವಕಾಶ ಸಿಗಬೇಕು ಎಂದು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಿಸಿದ್ದೇನೆ. ಆದರೆ ಹೆಚ್ಚು ಮಂದಿ ಆಸಕ್ತಿ ತೋರಿಸುತ್ತಿಲ್ಲ, ರೈಲ್ವೆ ಇಲಾಖೆಯದ್ದು 24 ಗಂಟೆ ಕೆಲಸ, ನಮಗೆ ಬೇಡ ಎನ್ನುವವರ ಸಂಖ್ಯೆಯೇ ಹೆಚ್ಚು ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications