ಸ್ಥಳೀಯ ಸಂಸ್ಥೆ ಫಲಿತಾಂಶ : ಯಾವ ಪಕ್ಷದ ಹಿಡಿತ ಎಷ್ಟು?
ಬೆಂಗಳೂರು, ಸೆಪ್ಟೆಂಬರ್ 04 : 105 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಅಚ್ಚರಿಯನ್ನು ಉಂಟು ಮಾಡಿಲ್ಲ. ರಾಜ್ಯದ ವಿವಿಧ ಭಾಗಗಳ ಫಲಿತಾಂಶವನ್ನು ಹೋಲಿಕೆ ಮಾಡಿದರೆ ಅಂತಹ ವ್ಯತ್ಯಾಸ ಕಂಡು ಬರುವುದಿಲ್ಲ.
ಪುರಸಭೆ, ನಗರ ಸಭೆ, ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 2527 ಸೀಟುಗಳಲ್ಲಿ ಬಿಜೆಪಿ 875, ಕಾಂಗ್ರೆಸ್ 946 ಮತ್ತು ಜೆಡಿಎಸ್ 357 ಸ್ಥಾನಗಳಲ್ಲಿ ಜಯಗಳಿಸಿವೆ. 21 ಕಡೆ ಅತಂತ್ರ ಫಲಿತಾಂಶ ಬಂದಿದೆ. ಉತ್ತರ ಕರ್ನಾಟಕ, ಬಾಂಬೆ ಕರ್ನಾಟಕ, ಕರಾವಳಿ ಭಾಗದಲ್ಲಿಯೂ ಅಂತಹ ವ್ಯತ್ಯಾಸ ಕಂಡುಬಂದಿಲ್ಲ.
ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಮುರಿಯಲು ಸಾಧ್ಯವಾಗಿಲ್ಲ. ಕರಾವಳಿ ಭಾಗದಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಉತ್ತರ ಕರ್ನಾಟಕವನ್ನು ಸಮ್ಮಿಶ್ರ ಸರ್ಕಾರ ಕಡೆಗಣಿಸಿದೆ ಎಂಬ ಆರೋಪವಿತ್ತು. ಅಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ತಂತ್ರ ಫಲ ಕೊಟ್ಟಿಲ್ಲ.
ಮೂರು ಮಹಾನಗರ ಪಾಲಿಕೆಗಳಿಗೂ ಚುನಾವಣೆ ನಡೆದಿತ್ತು. 135 ವಾರ್ಡ್ಗಳ ಪೈಕಿ ಬಿಜೆಪಿ 54, ಕಾಂಗ್ರೆಸ್ 36, ಜೆಡಿಎಸ್ 30 ಸ್ಥಾನಗಳಲ್ಲಿ ಜಯಗಳಿಸಿದೆ. ಶಿವಮೊಗ್ಗ ಪಾಲಿಕೆ ಬಿಜೆಪಿ ಪಾಲಾಗಿದೆ. ಮೈಸೂರು ಮತ್ತು ತುಮಕೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ವಿಭಾಗವಾರು ಫಲಿತಾಂಶದ ಮಾಹಿತಿ ಇಲ್ಲಿದೆ...

ಉತ್ತರ ಮತ್ತು ಹೈದರಾಬಾದ್ ಕರ್ನಾಟಕ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗವನ್ನು ಕಡೆಗಣಿಸಿದೆ ಎಂಬ ಆರೋಪವಿತ್ತು. ಆದರೆ, ಬಿಜೆಪಿ ಈ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ವಿಫಲವಾಗಿದೆ.
ಹೈದರಾಬಾದ್ ಕರ್ನಾಟಕ ಭಾಗದ 24 ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ 13, ಬಿಜೆಪಿ 5 ಕಡೆ ಜಯಗಳಿಸಿವೆ. ಉಳಿದ ಕಡೆ ಯಾವ ಪಕ್ಷಕ್ಕೂ ಬಹುಮತ ಸಿಗದ ಅತಂತ್ರ ಫಲಿತಾಂಶ ಬಂದಿದೆ.

ಬಾಂಬೆ ಕರ್ನಾಟಕದ ಚಿತ್ರಣ
ಬಾಂಬೆ ಕರ್ನಾಟಕದ 5 ಜಿಲ್ಲೆಗಳ 38 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಬಿಜೆಪಿ ಬೆಳಗಾವಿ, ಬಾಗಲಕೋಟೆಯನ್ನು ಗೆದ್ದಿದೆ. ಗದಗ ಮತ್ತು ಹಾವೇರಿ ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದೆ.
ಕೆಪಿಜೆಪಿಯ ಶಾಸಕ ಆರ್.ಶಂಕರ್ ಪ್ರತಿನಿಧಿಸುವ ರಾಣೆಬೆನ್ನೂರಿನಲ್ಲಿ ಕೆಪಿಜೆಪಿಯ 10 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 35 ವಾರ್ಡ್ಗಳಲ್ಲಿ ಬಿಜೆಪಿ 15, ಕಾಂಗ್ರೆಸ್ 9ರಲ್ಲಿ ಜಯಗಳಿಸಿವೆ.

ಒಕ್ಕಲಿಗರ ಪ್ರಾಬಲ್ಯ
ಒಕ್ಕಲಿಗರ ಪ್ರಾಬಲ್ಯವಿರುವ ಹಾಸನ, ಮಂಡ್ಯ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನಗಳನ್ನುಗಳಿಸಿದೆ. ಹಾಸನ ಮತ್ತು ಮಂಡ್ಯದಲ್ಲಿ ಪಕ್ಷದ ಸಾಧನೆ ಉತ್ತಮವಾಗಿದೆ. ಅದರಲ್ಲೂ ಮಂಡ್ಯ ನಗರಸಭೆ, ಮದ್ದೂರು, ಪಾಂಡವಪುರ, ನಾಗಮಂಗಲ ಪುರಸಭೆಯಲ್ಲಿ ಜೆಡಿಎಸ್ ಗೆದ್ದು ಬೀಗಿದೆ.
ಹಾಸನ ನಗರಸಭೆಯ 35 ವಾರ್ಡ್ಗಳಲ್ಲಿ 17 ಜೆಡಿಎಸ್ ಪಾಲಾಗಿದೆ. ಹೊಳೆನರಸೀಪುರದ 23 ವಾರ್ಡ್ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸಾಧನೆ ಶೂನ್ಯ.

ಕರಾವಳಿ ಕರ್ನಾಟಕ
ಬಿಜೆಪಿ ಕರಾವಳಿ ಕರ್ನಾಟಕದಲ್ಲಿ ತನ್ನ ಪ್ರಭಾವ ಎಷ್ಟಿದೆ ಎಂದು ತೋರಿಸಿದೆ. 386 ಸೀಟುಗಳಲ್ಲಿ 193ರಲ್ಲಿ ಕಮಲ ಅರಳಿದೆ. ಕಾಂಗ್ರೆಸ್ 145, ಜೆಡಿಎಸ್ 12ರಲ್ಲಿ ಗೆಲುವು ಸಾಧಿಸಿವೆ. 11 ಸೀಟುಗಳು ಎಸ್ಡಿಪಿಐ ಪಾಲಾಗಿವೆ. ಅಚ್ಚರಿಯ ಸಂಗತಿ ಎಂದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 25 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.












Click it and Unblock the Notifications