'ಕಾರ್ತಿಕ ಮಾಸ'ದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ರಥಯಾತ್ರೆಯ ಪೈಪೋಟಿ
Recommended Video
ದೀಪಾವಳಿ ಬಲಿಪಾಡ್ಯಮಿ ದಿನದಿಂದ ಕಾರ್ತಿಕ ಮಾಸ ಆರಂಭವಾಗಿದೆ. ಹಿಂದೂ ನಂಬಿಕೆಯ ಪ್ರಕಾರ ಕಾರ್ತಿಕ ಮಾಸದಲ್ಲಿ ಶಿವನನ್ನು ಆರಾಧಿಸುತ್ತಾ ಶುರು ಮಾಡುವ ಕೆಲಸಗಳು ಹೆಚ್ಚು ಫಲಪ್ರದವಾಗುತ್ತದೆ. ಹಾಗಾಗಿ, ಕರ್ನಾಟಕದ ಮೂರೂ ಪ್ರಮುಖ ಪಕ್ಷಗಳು ಆಸಿಕ್ತ, ನಾಸ್ತಿಕ ತತ್ವಗಳನ್ನು ಊರಿಂದಾಚೆಗಿಟ್ಟು ಕಾರ್ತಿಕ, ಮಾರ್ಗಶಿರ ಮಾಸದಲ್ಲಿ ಯಾತ್ರೆ ನಡೆಸಲು ಸಜ್ಜಾಗಿವೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳಿಗೆ ಮತದಾರರ ಮೇಲೆ ಇನ್ನಿಲ್ಲದ ಪ್ರೀತಿ ಉಕ್ಕಿ ಬರುವುದು ಸಹಜ. ನಾವು ಅಧಿಕಾರದಲ್ಲಿದ್ದಾಗ ಏನೇನು ಮಾಡಿದ್ವಿ (ಅಭಿವೃದ್ದಿ ಕೆಲಸ), ಮತ್ತೆ ಅಧಿಕಾರಕ್ಕೆ ಬಂದರೆ ಏನೇನು ಮಾಡುತ್ತೇವೆ ಎನ್ನುವ ಭರವಸೆಯ ಮಹಾಪೂರವನ್ನೇ ಹೊತ್ತುತರಲು ಮೂರೂ ಪಕ್ಷಗಳು ಸಜ್ಜಾಗುತ್ತಿವೆ.
ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆಗೆ ಗುದ್ದಲಿ ಪೂಜೆ
ರಥಯಾತ್ರೆ ಎನ್ನುವ ಪದ ಮತ್ತು ಉದ್ದೇಶ, ವಿಶೇಷ ಮಹತ್ವಕ್ಕೆ/ ಚರ್ಚೆಗೊಳಗಾಗಿದ್ದು, ಸದ್ಯ ಬಿಜೆಪಿ ಮಾರ್ಗದರ್ಶಕ ಮಂಡಳಿ ಎನ್ನುವ 'ವೃದ್ದಾಶ್ರಮ'ದಲ್ಲಿರುವ ಲಾಲ್ ಕೃಷ್ಣ ಅಡ್ವಾಣಿಯವರಿಂದ. ಈಗ ಉದ್ದೇಶ/ಗುರಿ ಒಂದೇ ಆಗಿದ್ದರೂ, ಯಾತ್ರೆಗೆ ಬೇರೆ ಬೇರೆ ಹೆಸರುಗಳನ್ನು ಇಟ್ಟುಕೊಂಡು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಜನರ ಬಳಿ ಹೋಗಲು ದಿನ ನಿಗದಿಪಡಿಸಿಕೊಂಡಿದೆ.
ತಿಂಗಳ ಹಿಂದೆಯೇ ನಿಗದಿಯಾಗಿದ್ದ ಬಿಜೆಪಿಯ ಯಾತ್ರೆಗೆ ಒಂದು ದಿನ್ನ ಮುನ್ನ ಜೆಡಿಎಸ್ ಯಾತ್ರೆ ನಡೆಸಲು ಸಜ್ಜಾಗಿದ್ದರೆ, ಎರಡು ಪಕ್ಷಗಳ ಕಾರ್ಯತಂತ್ರವನ್ನು ನೋಡಿ ಕಾಂಗ್ರೆಸ್ ಯಾತ್ರೆ ನಡೆಸಲು ಮುಂದಾಗಿದೆ. ಗಮನಿಸಬೇಕಾದ ಅಂಶವೇನಂದರೆ, ಮೂರು ಪಕ್ಷಗಳು ತಮಗೆ ಠೇವಣಿ ಸಿಗುವುದು ಕಷ್ಟ ಎನ್ನುವ ಅಸೆಂಬ್ಲಿ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಲು ಮುಂದಾಗಿರುವುದು.
ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಆರಂಭವಾಗುವ ರಥಯಾತ್ರೆ ಪರ್ವಕ್ಕೆ ವಿಶೇಷ ಬಸ್ ಸಿದ್ದಪಡಿಸಲಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಐಷಾರಾಮಿ ಬಸ್ ಫೈನಲ್ ಟಚ್ ಪಡೆಯುತ್ತಿದೆ. ಯಾತ್ರೆಗೆ ಕಾಂಗ್ರೆಸ್ ವಿಶೇಷ ವಾಹನ ಏನಾದರೂ ವ್ಯವಸ್ಥೆ ಮಾಡುತ್ತಾ ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಮುಂದೆ ಓದಿ..
ನವಕರ್ನಾಟಕ ಪರಿವರ್ತನಾ ಯಾತ್ರೆಯ ನ. 2ರಿಂದ
'ನವಕರ್ನಾಟಕ ಪರಿವರ್ತನಾ ಯಾತ್ರೆ' ಎನ್ನುವ ಹೆಸರಿನಲ್ಲಿ ಬಿಜೆಪಿಯ ಯಾತ್ರೆ ನಡೆಯಲಿದೆ. ಯಾತ್ರೆಯ ಶುಭಾರಂಭಕ್ಕೆ ಭಾನುವಾರ (ಅ 22) ಗುದ್ದಲಿಪೂಜೆ ನೆರವೇರಿಸಲಾಗಿದೆ. ನವೆಂಬರ್ 2ರಿಂದ ಯಾತ್ರೆ ಆರಂಭವಾಗಲಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ಮೋದಿ 73ದಿನದ ಯಾತ್ರೆಯಲ್ಲಿ ಭಾಗವಹಿಸುವವರಿದ್ದಾರೆ, ದಿನಾಂಕ ಇನ್ನೂಅಂತಿಮವಾಗಿಲ್ಲ.
ಕುಮಾರಸ್ವಾಮಿ ನೇತೃತ್ವದಲ್ಲಿ ನ. 1ರಿಂದ ಯಾತ್ರೆ ಆರಂಭ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನವೆಂಬರ್ 1ರಿಂದ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಹೆಚ್ಚಿನ ಅಸೆಂಬ್ಲಿ ಕ್ಷೇತ್ರಗಳಲ್ಲೂ ಸಂಚರಿಸುವ ಉದ್ದೇಶವನ್ನು ಇಟ್ಟುಕೊಂಡಿರುವ ಕುಮಾರಸ್ವಾಮಿ, ಸಿದ್ದರಾಮಯ್ಯನವರಿಗೆ ಟಾಂಗ್ ನೀಡಲು ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಯಾತ್ರೆ ಆರಂಭಿಸಲು ನಿರ್ಧರಿಸಿದ್ದಾರೆ. (ಚಿತ್ರದಲ್ಲಿ, ಜೆಡಿಎಸ್ ಯಾತ್ರೆಗೆ ಸಜ್ಜಾಗಿರುವ ಬಸ್)
ಕುಮಾರಸ್ವಾಮಿ ರಾಜ್ಯ ಪ್ರವಾಸಕ್ಕೆ ಹೈಟೆಕ್ ಬಸ್, ವಿಶೇಷತೆ ಏನು?
ಬಹುತೇಕ ಡಿಸೆಂಬರ್ ಹದಿನೈದರಿಂದ ಯಾತ್ರೆ
ಕಾಂಗ್ರೆಸ್ ತನ್ನ ಯಾತ್ರೆಯ ರೂಪುರೇಷೆಗಳನ್ನು ಇನ್ನೂ ಅಂತಿಮಗೊಳಿಸಲಿಲ್ಲ, ಆದರೆ ಡಿಸೆಂಬರ್ ಹದಿನೈದರಿಂದ ಯಾತ್ರೆ ಆರಂಭಿಸಲು ದಿನಾಂಕ ನಿಗದಿಯಾಗಿದೆ. ಎರಡು ಪಕ್ಷಗಳ ಯಾತ್ರೆಗೆ ಜನರ ಸ್ಪಂದನೆ ನೋಡಿ, ಕಾಂಗ್ರೆಸ್ ಮುಂದಿನ ವಿಸ್ಕ್ರುತ ಯಾತ್ರೆಯ ಯೋಜನೆ ಹಾಕಿಕೊಳ್ಳಲಿದೆ.
ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆ 73 ದಿನ
ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆ 73 ದಿನ ಇಡೀ ರಾಜ್ಯ ಸಂಚರಿಸಲಿದ್ದು, ಇದಕ್ಕಾಗಿ ಹಲವು ಸಮಿತಿಗಳನ್ನು ಈಗಾಗಲೇ ರಚಿಸಿದೆ. ಕೇಂದ್ರ ಸರಕಾರದ ಉತ್ತಮ ಯೋಜನೆಗಳ ಜೊತೆಗೆ ಸಿದ್ದರಾಮಯ್ಯ ಸರಕಾರದ ಆಡಳಿತ ವೈಫಲ್ಯವನ್ನು ಜನರ ಮುಂದಿಡಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ನಿರ್ಧರಿಸಿದೆ.
ಟ್ವೆಂಟಿ ಟ್ವೆಂಟಿ ಸರಕಾರದ ವೇಳೆ, ಕುಮಾರಸ್ವಾಮಿಯವರ ಜನಪರ ಕೆಲಸ
ಕುಮಾರಸ್ವಾಮಿ ನೇತೃತ್ವದಲ್ಲಿ ಯಾತ್ರೆ ಸಾಗಲಿದ್ದು, ಅಲ್ಲಲ್ಲಿ ದೇವೇಗೌಡರು ಸೇರಿಕೊಳ್ಲಲಿದ್ದಾರೆ. ಟ್ವೆಂಟಿ ಟ್ವೆಂಟಿ ಸರಕಾರದ ವೇಳೆ, ಕುಮಾರಸ್ವಾಮಿಯವರ ಜನಪರ ಕೆಲಸ, ಸಿದ್ದರಾಮಯ್ಯ ಸರಕಾರದ ದುರಾಡಳಿತ, ಅಧಿಕಾರಕ್ಕೆ ಬಂದರೆ ಅಭಿವೃದ್ದಿ ಯೋಜನೆಗಳ ಬಗ್ಗೆ ಯಾತ್ರೆಯ ವೇಳೆ ಎಚ್ಡಿಕೆ ವಿವರಿಸಲಿದ್ದಾರೆ.