ಡಿಕೆಶಿಗೆ ಅಭಯ ಹಸ್ತ: ರಾಜ್ಯಕ್ಕೆ ವಿದ್ಯುತ್ ಭಯ ದೂರ

ಚುನಾವಣೆ ಕಾವಿನಲ್ಲಿ ತಂಪೆರೆದ ಯುಪಿಎ:
ಇಂತಹ ಸಂದರ್ಭದಲ್ಲಿ, ಅದೂ ರಾಜ್ಯವನ್ನು ಹೈರಾಣಗೊಳಿಸಲು ಸುಡು ಬೇಸಿಗೆ ಕಾಲಿಡುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರಕಾರವು ರಾಜ್ಯಕ್ಕೆ ತಂಪನೆಯ ಸುದ್ದಿಯೊಂದನ್ನು ನೀಡಿದೆ. ತನ್ಮೂಲಕ ಇಂಧನ ಸಚಿವ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ಸಿಗೆ ಭರಪೂರ್ ಶಕ್ತಿ ತುಂಬಿದೆ.
ರಾಜ್ಯವನ್ನು ಬೇಸಿಗೆಗಿಂತ ಹೆಚ್ಚಾಗಿ ಕಾಡಲಿರುವುದು ವಿದ್ಯುತ್ ಕ್ಷಾಮ. ಏಕೆಂದರೆ ರಾಜ್ಯದಲ್ಲಿ ವಿದ್ಯುತ್ ಕೊರತೆ ಎಂಬುದು ಆ ಪರಿ ಇದೆ. ಪರಿಸ್ಥಿತಿ ಹೀಗಿರುವಾಗ ಈ ಬೇಸಿಗೆಯಲ್ಲಿ ಪ್ರತಿ ಸಲದಂತೆ ವಿದ್ಯುತ್ ಕೈಕೊಟ್ಟಿದ್ದರೆ ಜನ ತಮ್ಮ ಕಾಂಗ್ರೆಸ್ಸಿಗೂ ಕೈಕೊಡುವುದರಲ್ಲಿ ಸಂಶಯವಿಲ್ಲ ಎಂದು ತರ್ಕಿಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಚುನಾವಣೆ ಸಮಯದಲ್ಲಿ ರಾಜ್ಯದತ್ತ ಭರಪೂರ ವಿದ್ಯುತ್ ಹರಿಸುವುದಕ್ಕೆ ಮುಂದಾಗಿದೆ.
ತತ್ ಕ್ಷಣಕ್ಕೆ ಎದುರಾಗುವ ವಿದ್ಯುತ್ ಸಮಸ್ಯೆ ನಿವಾರಿಸಲು ರಾಜ್ಯಕ್ಕೆ 892 ಮೆಗಾ ವ್ಯಾಟ್ ವಿದ್ಯುತ್ ಖರೀದಿಗೆ ಅನುವು ಮಾಡಿಕೊಟ್ಟಿದೆ. Kudankulam nuclear power plant ಮತ್ತು Damodar Valley Corporation of India ಸಂಸ್ಥೆಗಳು ಈ ವಿದ್ಯುತ್ ಮಾರಾಟ ಮಾಡಲಿವೆ. ಹಾಗಾಗಿ, ಈ ಬೇಸಿಗೆಯಲ್ಲಿ ವಿದ್ಯುತ್ ಕೈಕೊಡುವ ಪ್ರಮೇಯವೇ ಇಲ್ಲ ಎಂದು ಸ್ವತ: ಇಂಧನ ಸಚಿವ ಶಿವಕುಮಾರ್ ಅವರೇ ಹರ್ಷ ವ್ಯಕ್ತಪಡಿಸಿದ್ದಾರೆ.
ಅಭಯ ಹಸ್ತ: ಇದರ ಹೊರತಾಗಿ, ಇದುವರೆಗೂ ಬಿಜೆಪಿ ಸರಕಾರವಿದ್ದಾಗ ಕಲ್ಲಿದ್ದಲು ಪೂರೈಕೆಯಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಕೇಂದ್ರ ಸರಕಾರ ಈಗ ಭಾರಿ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಗೆ ಅಸ್ತು ಅಂದಿದೆ.
ಗುಲ್ಬರ್ಗದಲ್ಲಿ 1320 ಮೆವ್ಯಾ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಅಗತ್ಯವಿರುವ ಕಲ್ಲಿದ್ದಲನ್ನು ಒರಿಸ್ಸಾದಿಂದ ಪೂರೈಸುವುದಕ್ಕೆ ಕೇಂದ್ರ ಅಸ್ತು ಅಂದಿದೆ. ಹಾಗೆಯೇ ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರಕ್ಕೂ ( 800 ಮೆವ್ಯಾ ಸಾಮರ್ಥ್ಯದ 3ನೇ ಘಟಕ) ತಕ್ಷಣ ಕಲ್ಲಿದ್ದಲು ಪೂರೈಸುವಂತೆ Coal India ಸಂಸ್ಥೆಗೆ ಕೇಂದ್ರ ಆದೇಶಿಸಿದೆ.
ಜತೆಗೆ, 2 ನೂತನ ಉಷ್ಣ ವಿದ್ಯುತ್ ಸ್ಥಾವರ ತೆರೆಯಲೂ ಸಹ ರಾಜ್ಯ ಮುಂದಾಗಿದ್ದು, ಅದಕ್ಕೂ ಕೇಂದ್ರ ಅಭಯ ಹಸ್ತ ನೀಡಿದೆ. ಸ್ಥಾವರ ಆರಂಭಿಸಲು ಇನ್ನಷ್ಟೇ ಸ್ಥಳ ನಿಗದಿಯಾಗಬೇಕಿದೆ. ರಾಜ್ಯದಲ್ಲಿ ಎಲ್ಲಿ ಬೇಕಾದರೂ ಈ ಸ್ಥಾವರಗಳು ತಲೆಯೆತ್ತುವ ಅಂದಾಜಿದೆ.












Click it and Unblock the Notifications