ಹಳೇ ಹುಬ್ಬಳ್ಳಿ ಗಲಭೆಯ 111 ಆರೋಪಿಗಳಿಗೆ ಜಾಮೀನು: ಕೆಂಡಾಮಂಡಲರಾದ ಕೇಂದ್ರ ಸಚಿವ
ಹುಬ್ಬಳ್ಳಿ, ಫೆಬ್ರವರಿ 17: ರಾಜ್ಯ ಸರ್ಕಾರದ ಬೇಜವಾಬ್ದಾರಿಂದ ಹಳೇ ಹುಬ್ಬಳ್ಳಿ ಗಲಭೆಕೋರರಿಗೆ ಜಾಮೀನು ಮಂಜೂರಾಗಿದೆ. ಮುಂಬರುವ ದಿನಗಳಲ್ಲಿ ಸರಿಯಾದ ಪರಿಣಾಮ ಎದುರಿಸಲಿದೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾನಾಡಿದ ಅವರು, ಗಲಭೆ ಕೋರರ ಮೇಲೆ ಕಾಂಗ್ರೆಸ್ ನಾಯಕರಿಗೆ ಮೊದಲಿಂದಲೂ ಸಿಂಪತಿ ಇದೆ. ಅವರ ಸರ್ಕಾರ ಬಂದ ಮೇಲೆ ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಾಡದೇ ಜಾಮೀನು ಮಂಜೂರಾಗುವಂತೆ ನೋಡಿಕೊಂಡಿದ್ದಾರೆ. ಈ ಹಿಂದೆಯೂ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಗೊಳಿಸುವಂತೆ ಮತ್ತು ಪ್ರಕರಣದಿಂದ ಅವರನ್ನು ಖುಲಾಸೆಗೊಳಿಸುವಂತೆ ಕೆಲ ನಾಯಕರು ಪತ್ರ ಮುಖೇಣ ಮನವಿ ಮಾಡುಕೊಂಡಿದ್ದರು ಎಂದರು.

ದೇಶ ದ್ರೋಹ ಸೇರಿದಂತೆ ಹಲವು ಆರೋಪಗಳು ಬಂಧಿತರ ಮೇಲೆ ಇದ್ದವು. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿಸಿದ ಕಾಂಗ್ರೆಸ್ ಸರ್ಕಾರ, ಮುಂಬರುವ ದಿನಗಳಲ್ಲಿ ಸರಿಯಾದ ಪರಿಣಾಮ ಎದುರಿಸಲಿದೆ ಎಂದು ಭವಿಷ್ಯ ನುಡಿದರು.
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಹೊರತುಪಡಿಸಿ ಉಳಿದ 105 ಜನರಿಗೆ ಬೆಂಗಳೂರಿನ ಹೈಕೋರ್ಟ್ನಿಂದ ಇಂದು ಜಾಮೀನು ಮಂಜೂರು ಮಾಡಲಾಗಿದೆ. ಕಳೆದ ಒಂದು ವರ್ಷ ಹತ್ತು ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ಗಲಾಟೆಯಾಗಿತ್ತು. ವಾಟ್ಸಪ್ ಸ್ಟೇಟಸ್ ವಿಚಾರವಾಗಿ ಎರಡು ಕೋಮುಗಳ ನಡುವೆ ಗಲಾಟೆಯಾಗಿತ್ತು. ಗಲಾಟೆ ವೇಳೆ ಕೆಲವರು ಪೊಲೀಸ್ ಠಾಣೆಗೆ ಕಲ್ಲು ಎಸೆದಿದ್ದರು. ಅಲ್ಲದೇ ಪೊಲೀಸ್ ಠಾಣೆ ಮುಂಭಾಗದಲ್ಲಿ ಬಂದು ಗಲಾಟೆ ಮಾಡಿದ್ದರು. ಪೊಲೀಸ್ ವಾಹನಗಳನ್ನ ಜಖಂ ಮಾಡಿದ್ದರು. ಏಪ್ರೀಲ್ 16-2022 ರಂದು ಡಿಜೆ ಹಳ್ಳಿ ಕೆಜಿ ಹಳ್ಳಿ ಮಾದರಿಯಲ್ಲಿ ಗಲಾಟೆ ನಡೆದಿತ್ತು.
ಒಟ್ಟು 152 ಜನರ ಬಂಧನವಾಗಿತ್ತು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 12 ಪ್ರಕರಣಗಳು ದಾಖಲಾಗಿದ್ದವು. ಇಂದು 105 ಜನ ಯುವಕರಿಗೆ ಜೈಲಿನಿಂದ ಮುಕ್ತಿ ನೀಡಲಾಗಿದೆ. ಇನ್ನು ಮೂವರ ಪ್ರಕರಣ ಸುಪ್ರೀಂ ಕೋರ್ಟ್ ವಿಚಾರಣೆ ಹಂತದಲ್ಲಿರುವುದರಿಂದ ಜಾಮೀನು ವಿಳಂಬವಾಗಿದೆ.
ಗಲಾಟೆಯಲ್ಲಿ 10 ಕ್ಕೂ ಹೆಚ್ಚು ಪೊಲೀಸ್ ವಾಹನ ಜಖಂ ಆಗಿದ್ದವು. ಗಲಭೆಕೋರರು ಪೊಲೀಸ್ ಇನ್ಸಪೆಕ್ಟರ್ ಸೇರಿ ಏಳು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಈ ಹಿಂದೆ 152 ಜನರಲ್ಲಿ ಕೆಲ ಬಾಲಾಪರಾಧಿಗಳು ಸೇರಿ 10 ಕ್ಕೂ ಹೆಚ್ಚು ಜನರಿಗೆ ಜಾಮೀನು ಮಂಜೂರ ಮಾಡಲಾಗಿತ್ತು. ನಂತರ ಅಂದರೆ ಕಳೆದ ಎರಡೂ ತಿಂಗಳ ಹಿಂದೆ 35 ಜನರಿಗೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಮಂಜೂರಾಗಿತ್ತು. ಈಗ ಮೂವರನ್ನ ಹೊರತುಪಡಿಸಿ ಉಳಿದವರೆಲ್ಲರಿಗೂ ಜಾಮೀನು ನೀಡಲಾಗಿದೆ.
ಫೆ. 5 ರಂದು ಅಂಜುಮನ್ ಸಂಸ್ಥೆಯ ಚುನಾವಣೆ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಮಕ್ಕಳಿಗಾಗಿ ಕುಟುಂಬಸ್ಥರು ಕಣ್ಣೀರು ಹಾಕಿದ್ದರು. ನಮ್ಮ ಮಕ್ಕಳನ್ನ ಜೈಲಿನಿಂದ ಬಿಡುಗಡೆ ಮಾಡಿ ನಂತರ ನೀವು ಚುನಾವಣೆ ಮಾಡಿ. ನಮ್ಮ ಮಕ್ಕಳು ಜೈಲಿನಲ್ಲಿದ್ದಾರೆ. ಈ ಸಮಯದಲ್ಲಿ ಚುನಾವಣೆ ಬೇಡ ಎಂದು ಮುಸ್ಲಿಂ ಸಮುದಾಯದ ಮುಖಂಡರನ್ನ ಪೋಷಕರು ತರಾಟೆಗೆ ತೆಗೆದುಕೊಂಡಿದ್ದರು.












Click it and Unblock the Notifications