ಧ್ವಜಕ್ಕೆ ಅಗೌರವ ತೋರಿಸುವ ಬಿಜೆಪಿಗರದ್ದು ದೇಶದ್ರೋಹ; ಮಹದೇವಪ್ಪ
1947 ಜುಲೈ 22 ರಂದು ಸಂವಿಧಾನ ರಚನಾ ಸಭೆಯಲ್ಲಿ ಅಂದಿನ ಪ್ರಧಾನಿಗಳಾಗಿದ್ದ ಮೇರು ನಾಯಕ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ನಮ್ಮ ರಾಷ್ಟ್ರ ಧ್ವಜವನ್ನು ದೇಶಕ್ಕೆ ಅರ್ಪಿಸಿದರು.
ನಮ್ಮ ರಾಷ್ಟ್ರದ ಧ್ವಜವು ಕೇವಲ ಕೈ ನೇಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು. ಅದು ಉಣ್ಣೆಯ ಅಥವಾ ರೇಷ್ಮೆಯ ಇಲ್ಲವೇ ಹತ್ತಿಯದಾದರೂ ಅಡ್ಡಿಯಿಲ್ಲವಾದರೂ ಅದು ಕೂಡಾ ಕೈ ನೂಲು ಮತ್ತು ಕೈ ನೇಯ್ಗೆಯದೇ ಆಗಿರಬೇಕು. ಕೇಸರಿ - ಬಿಳಿ - ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿ ಇದ್ದು ನೀಲಿ ಚಕ್ರವು ಹೆಚ್ಚು ಕಡಿಮೆ ಬಿಳಿ ಬಣ್ಣದ ಅಡ್ಡ ಗೆರೆಗಳಷ್ಟಿದ್ದು, ಅದರಲ್ಲಿ 24 ರೇಖೆಗಳಿವೆ.
'ಹರ್ ಘರ್ ತಿರಂಗ' ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್
ಧ್ವಜದ ಉದ್ದ ಮತ್ತು ಅಗಲ 3:2 ಪ್ರಮಾಣದಲ್ಲಿರತಕ್ಕದ್ದು ಎಂದು ತಿಳಿಸಿದೆ. ರಾಷ್ಟ್ರಧ್ವಜವನ್ನು ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಉತ್ತರ ಕರ್ನಾಟಕದಾದ್ಯಂತ ಒಟ್ಟು 52 ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ.
ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಲಾದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ಅನುಗುಣವಾಗಿ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು. ಒಂದು ವೇಳೆ ನಮ್ಮ ರಾಷ್ಟ್ರಧ್ವಜವು ಈ ಮಾನದಂಡಕ್ಕೆ ತಕ್ಕಂತೆ ಇಲ್ಲದೇ ಇದ್ದರೆ ಅಂತಹ ಧ್ವಜವು ತಿರಸ್ಕೃತವಾಗುತ್ತದೆ.
ಇನ್ನು ರಾಷ್ಟ್ರ ಧ್ವಜವನ್ನು ಹಾರಿಸುವುದಕ್ಕೂ ಕೂಡಾ ಅದರದ್ದೇ ಆದ ನಿಯಮಗಳಿದ್ದು, ಧ್ವಜಸ್ಥಂಬ, ಕಟ್ಟೆ ಹಾಗೂ ಧ್ವಜ ಹಾರಿಸುವ ಸಮಯ ಮತ್ತು ರೀತಿಗಳು ಮುಖ್ಯವಾಗುತ್ತದೆ. ಇಷ್ಟೆಲ್ಲಾ ಇದ್ದರೂ ಕೂಡಾ ಕೇಂದ್ರ ಸರ್ಕಾರವು ಹರ್ ಘರ್ ತಿರಂಗಾ ಹೆಸರಿನಲ್ಲಿ ಚೀನಾದಿಂದ ಆಮದು ಮಾಡಿಕೊಂಡ ಕಳಪೆ ಗುಣಮಟ್ಟದ ಪಾಲಿಸ್ಟರ್ ರಾಷ್ಟ್ರ ಧ್ವಜವನ್ನು ವಿತರಿಸಲು ಹೊರಟಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
ದೇಶಪ್ರೇಮದ ಹೆಸರಲ್ಲಿ ಅಸಂವಿಧಾನಿಕ ರೀತಿಯಲ್ಲಿ ದೇಶದ ಧ್ವಜಕ್ಕೆ ಅಗೌರವ ತೋರಿಸುವ ಬಿಜೆಪಿಗರು ನಿಜಕ್ಕೂ ದೇಶದ್ರೋಹದ ಕೃತ್ಯ ಮಾಡುತ್ತಿದ್ದು ದೇಶದ ಲಾಂಛನಗಳನ್ನು ರಾಜಕೀಯ ಕಾರಣಕ್ಕಾಗಿ ಅಪಮಾನ ಮಾಡುತ್ತಿರುವುದು ನಿಜಕ್ಕೂ ಸಂವಿಧಾನ ರಚನಾ ಸಭೆ ಹಾಗೂ ದೇಶದ ಧೈರ್ಯ, ಶೌರ್ಯ, ಶಾಂತಿ ಮತ್ತು ಸಮೃದ್ಧಿಯ ಉದ್ದೇಶವನ್ನೂ ಅವಮಾನಿಸುತ್ತಿದ್ದಾರೆ ಎಂದು ಮಾಜಿ ಸಚಿವರು ಆರೋಪಿಸಿದ್ದಾರೆ.