ಕೇಂದ್ರ ಬಜೆಟ್ 2018-19 : ದೇವೇಗೌಡರು ಹೇಳಿದ್ದೇನು?
ಬೆಂಗಳೂರು, ಫೆಬ್ರವರಿ 01 : ಗುರುವಾರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2018-19ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಬಜೆಟ್ ಬಗ್ಗೆ ಕರ್ನಾಟಕದ ವಿವಿಧ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಲೋಕಸಭೆಯಲ್ಲಿ ಅರುಣ್ ಜೇಟ್ಲಿ ಅವರು ಸಾಮಾನ್ಯ ಮತ್ತು ರೈಲ್ವೆ ಬಜೆಟ್ ಮಂಡಿಸಿದರು.
ಬಜೆಟ್ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರತಿಕ್ರಿಯೆ ನೀಡಿದ್ದು,'ರೈತರು ಹಾಗೂ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡುವುದು ಉತ್ತಮ ಬೆಳವಣಿಗೆ. ಆದರೆ, ಗ್ರಾಮೀಣ ಪ್ರದೇಶದ ಸಮಸ್ಯೆಗಳು ಅಗಾಧ' ಎಂದು ಹೇಳಿದ್ದಾರೆ.
'ಹಣಕಾಸು ಸಚಿವರು ರೈತರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದ ಜನರು ಮತ್ತು ರೈತರ ಸಮಸ್ಯೆಗಳು ಅಗಾಧ. ಕೈಗೊಳ್ಳಲಾದ ಸುಧಾರಣಾ ಕ್ರಮಗಳು ಸಮರ್ಥವಲ್ಲ' ಎಂದು ದೇವೇಗೌಡರು ಹೇಳಿದರು.
'ಕೇಂದ್ರ ಬಜೆಟ್ನಿಂದ ಕರ್ನಾಟಕಕ್ಕೆ ಸಿಕ್ಕಿರುವುದು ದೊಡ್ಡ ಸೊನ್ನೆ. ಮೋದಿ ಕರ್ನಾಟಕಕ್ಕೆ ದೊಡ್ಡ ಸೊನ್ನೆ ಕೊಟ್ಟಿದ್ದಾರೆ. ಆ ಸೊನ್ನೆ ನೋಡಿ ಜನರು ಮರುಳಾಗುತ್ತಿದ್ದಾರೆ. ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕಕ್ಕೆ ದೊಡ್ಡ ಕೊಡುಗೆ ಸಿಗಲಿದೆ ಎಂದು ಮಾಧ್ಯಮಗಳು ಹೇಳಿದ್ದವು. ಏನು ಸಿಕ್ಕಿತು?' ಎಂದು ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಸಮಸ್ಯೆಗಳು ಅಗಾಧ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಜೆಟ್ ಪ್ರತಿಕ್ರಿಯೆ ನೀಡಿದ್ದು,'ರೈತರು ಹಾಗೂ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡುವುದು ಉತ್ತಮ ಬೆಳವಣಿಗೆ. ಆದರೆ, ಗ್ರಾಮೀಣ ಪ್ರದೇಶದ ಸಮಸ್ಯೆಗಳು ಅಗಾಧ. ಕೈಗೊಳ್ಳಲಾದ ಸುಧಾರಣಾ ಕ್ರಮಗಳು ಸಮರ್ಥವಲ್ಲ' ಎಂದು ದೇವೇಗೌಡರು ಹೇಳಿದರು.

ಪರಿವರ್ತನೆಯ ಮುಂಗಡ ಪತ್ರ
ಕೇಂದ್ರ ಕಾನೂನು ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಅವರು, 'ಇದು ಪರಿವರ್ತನೆಯ ಮುಂಗಡ ಪತ್ರ ಎಂದು ಹೇಳಿದ್ದಾರೆ. ಬಡವರು, ಕೂಲಿ ಕಾರ್ಮಿಕರು, ರೈತರು, ಯುವಕರ ಪರವಾದ ಬಜೆಟ್ ಇದಾಗಿದೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಭಿನಂದನೆ ಸಲ್ಲಿಸುತ್ತೇನೆ
ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಬಜೆಟ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. 'ಅರುಣ್ ಜೇಟ್ಲಿ ಅವರು ಭಾರತದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸಾಮಾಜಿಕ ಸುರಕ್ಷತೆಗೆ ಒತ್ತು ನೀಡಿದ್ದಾರೆ. ಪರಿಶಿಷ್ಟ ಜಾತಿ, ಮಹಿಳೆ, ಬಡವರಿಗಾಗಿ ಮಾಡಿದ ಬಜೆಟ್ ಇದಾಗಿದೆ. ಇದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದರು.

ನಿರಾಶಾದಾಯಕ ಬಜೆಟ್
ಕೇಂದ್ರ ಬಜೆಟ್ ನಿರಾಶಾದಾಯಕವಾಗಿದೆ. ಅಭಿವೃದ್ಧಿಗೆ ಪೂರಕವಾಗಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದರು. 'ರೈತರ ಸಾಲ ಮನ್ನಾ ಮಾಡಬೇಕು ಎಂದು ಎಲ್ಲಾ ರಾಜ್ಯಗಳ ರೈತರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಆರೋಪಿಸಿದರು.

ಬೆಂಬಲ ಬೆಲೆ ಸಾಕಾಗುವುದಿಲ್ಲ
'ರೈತರಿಗೆ ಅನುಕೂಲ ಮಾಡಿಕೊಡಲು ಬೆಂಬಲ ಬೆಲೆ ಘೋಷಣೆ ಸಾಕಾಗುವುದಿಲ್ಲ. ಶಾಸನ ಬದ್ಧ ಬೆಲೆ ನಿಗದಿ ಮಾಡಬೇಕಿತ್ತು. ಬೆಂಬಲ ಬೆಲೆ ಹೆಚ್ಚಳ ಮಾಡಿದರೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ರೈತರಿಗೆ ಅನುಕೂಲವಾಗುವುದಿಲ್ಲ' ಎಂದು ರೈತ ಮುಖಂಡ ಕುರುಬೂರು ಶಾಂತ ಕುಮಾರ್ ಹೇಳಿದರು.












Click it and Unblock the Notifications