ಕರ್ನಾಟಕದಲ್ಲಿ ಹೊಸದಾಗಿ 2 ಭಾರತೀಯ ಮೀಸಲು ಪಡೆ ಸ್ಥಾಪನೆ
ಬೆಂಗಳೂರು, ಆಗಸ್ಟ್ 06: ಕರ್ನಾಟಕದಲ್ಲಿ ಹೊಸದಾಗಿ 2 ಭಾರತೀಯ ಮೀಸಲು ಪಡೆಗಳನ್ನು ಸೃಜಿಸುವ ಬಗ್ಗೆ ಪತ್ರವನ್ನು ಬರೆಯಲಾಗಿದೆ. ಯಾವ ಪ್ರದೇಶಗಳಲ್ಲಿ ಇವುಗಳನ್ನು ಸ್ಥಾಪನೆ ಮಾಡಬೇಕು ಎಂಬ ಕುರಿತು ಕೆಲವು ದಿನಗಳ ಹಿಂದೆ ಚರ್ಚೆ ನಡೆದಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಪಡೆಯನ್ನು ಕೋಲಾರಕ್ಕೆ ಸ್ಥಳಾಂತರ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದರು.
ಈ ಕುರಿತು ಡಾ. ಬಿ. ಆರ್. ರವಿಕಾಂತೇಗೌಡ, ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಪರವಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ, ವಿಧಾನಸೌಧ, ಬೆಂಗಳೂರು ಇವರಿಗೆ ಪತ್ರವನ್ನು ಬರೆದಿದ್ದಾರೆ. ಸರ್ಕಾರದ ಪತ್ರ ದಿನಾಂಕ 3/7/2024, ದಿನಾಂಕ 18/6/2024 ಮತ್ತು 7/6/2024ರ ಪತ್ರವನ್ನು ಉಲ್ಲೇಖ ಮಾಡಿದ್ದಾರೆ.

ಪತ್ರದ ವಿವರಗಳು: ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ 2 ಭಾರತೀಯ ಮೀಸಲು ಪಡೆಗಳನ್ನು ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸೃಜಿಸುವ ಪ್ರಸ್ತಾವನೆಯನ್ನು ಏಕೆ ಮಾರ್ಪಡಿಸಲಾಗಿದೆ ಎಂಬುದರ ಕುರಿತು ಸ್ಪಷ್ಟೀಕರಣವನ್ನು ಹಾಗೂ ಹಾಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೀಸಲು ಪಡೆಗಳ ವಿವರಗಳನ್ನು ಒದಗಿಸುವಂತೆ ಸರ್ಕಾರದ ಪತ್ರದಲ್ಲಿ ಕೋರಲಾಗಿತ್ತು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ 4 ಕೆ.ಎಸ್.ಆರ್.ಪಿ. ಘಟಕಗಳು ಬೆಂಗಳೂರು ನಗರ ದಕ್ಷಿಣ ಭಾಗದ ವ್ಯಾಪ್ತಿಯಲ್ಲಿರುತ್ತವೆ. ದೇವನಹಳ್ಳಿ ತಾಲ್ಲೂಕಿನ ಆವತಿ ಹಳ್ಳಿ ಬೆಂಗಳೂರು ಉತ್ತರ ಭಾಗದಲ್ಲಿದ್ದು, ಸದರಿ ಪ್ರದೇಶವು ವೇಗವಾಗಿ ಬೆಳೆಯುತ್ತಿದ್ದು ಕೈಗಾರಿಕಾ ಪ್ರದೇಶಗಳು, ವ್ಯಾಪಾರ ವ್ಯವಹಾರ, ಐಟಿ-ಬಿಟಿ ಉದ್ಯಮಗಳು ಕಾಲಕ್ರಮೇಣ ಹೆಚ್ಚಾಗುತ್ತಿದ್ದು, ಈ ಪ್ರದೇಶವು ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಇನ್ನಿತರ ಸ್ಥಳಗಳಿಗೆ ಹತ್ತಿರದಲ್ಲಿರುತ್ತದೆ.
ಬೆಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಂದೋಬಸ್ತ್ ಕರ್ತವ್ಯ, ವಿಮಾನ ನಿಲ್ದಾಣದ ಭದ್ರತೆಗೆ, ವಿವಿಐಪಿ ಭದ್ರತೆಗೆ ಮತ್ತು ನಗರದ ಸುರಕ್ಷತೆ ಉಪಲಬ್ದಗಳನ್ನು ಗಮನದಲ್ಲಿಟ್ಟುಕೊಂಡು ತುರ್ತಾಗಿ ತುಕಡಿಗಳ ಅಗತ್ಯವಿದ್ದಲ್ಲಿ ಸಕಾಲದಲ್ಲಿ ನಿಯೋಜಿಸಲು ಸುಲಭವಾಗುವುದರಿಂದ ದೇವನಹಳ್ಳಿ ತಾಲ್ಲೂಕಿನ ಆವತಿ ಹಳ್ಳಿಯಲ್ಲಿ ಭಾರತೀಯ ಮೀಸಲು ಪಡೆಯನ್ನು ಸ್ಥಾಪಿಸಿದರೆ ಬೆಂಗಳೂರು ಉತ್ತರ ಭಾಗ, ವಾಯುವ್ಯ ಭಾಗ, ಈಶಾನ್ಯ ಭಾಗ ಹಾಗೂ ಕರ್ನಾಟಕ-ಆಂಧ್ರಪ್ರದೇಶ ಗಡಿ ಭಾಗದ ಪ್ರದೇಶಗಳಿಗೂ ಅನುಕೂಲವಾಗಲಿದೆ.
ಕೆ.ಜಿ.ಎಫ್. ತಾಲ್ಲೂಕು, ಕೋಲಾರ ಜಿಲ್ಲೆಯಲ್ಲಿ ಭಾರತೀಯ ಮೀಸಲು ಪಡೆಯನ್ನು ಸ್ಥಾಪಿಸುವುದರಿಂದ ಕೋಲಾರ ಗಣಿ ಪ್ರದೇಶ, ಕೋಲಾರ ಜಿಲ್ಲೆ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಗೂ ಕರ್ನಾಟಕ-ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಗಡಿ ಭಾಗದ ಪ್ರದೇಶಗಳಲ್ಲಿ ಕಾನೂನು & ಸುವ್ಯವಸ್ಥೆ, ಬಂದೋಬಸ್ತ್ ಕರ್ತವ್ಯ ಹಾಗೂ ನಗರ & ಗಡಿ ಭಾಗದ ಸುರಕ್ಷತೆ ಉಪಲಬ್ಧಗಳಿಗೆ ತುಕಡಿಗಳನ್ನು ನಿಯೋಜಿಸಲು ಅನುಕೂಲವಾಗುತ್ತದೆ.
ಪ್ರಸ್ತುತ, ತಮಕೂರು ಜಿಲ್ಲೆಯಲ್ಲಿ 12ನೇ ಪಡೆ, ಕೆ.ಎಸ್.ಆರ್.ಪಿ. ಘಟಕವು ಸ್ಥಾಪಿತಗೊಂಡು ಕಾರ್ಯನಿರ್ವಹಿಸುತ್ತಿರುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ 2 ಭಾರತೀಯ ಮೀಸಲು ಪಡೆಗಳು ಕ್ರಮವಾಗಿ ಮುನಿರಾಬಾದ್, ಕೊಪಳ್ಳ ಜಿಲ್ಲೆ ಮತ್ತು ಅರಕೇರಿ, ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ.
ಮೇಲೆ ವಿವರಿಸಲಾದ ಕಾರಣಗಳಿಗಾಗಿ ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳ ಬದಲಿಗೆ ನೂತನವಾಗಿ 2 ಭಾರತೀಯ ಮೀಸಲು ಪಡೆಗಳನ್ನು ಕ್ರಮವಾಗಿ 1ನೇ ಪಡೆ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಘಟಕದ ಅಧೀನದಲ್ಲಿ ಬರುವ ನಂದಿ ಬೆಟ್ಟದ ಬಳಿಯ ಆವತಿ ಗ್ರಾಮದ ಕೂಡುಗುರ್ಕಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ)ಯಲ್ಲಿ ಲಭ್ಯವಿರುವ 218.2 ಎಕರೆ ಮತ್ತು ಕೆಜಿಎಫ್ ಇಂಡಸ್ಟ್ರಿಯಲ್ ಕಾರಿಡಾರ್/ ಇಂಡಸ್ಟ್ರಿಯಲ್ ಟೌನ್ಶಿಪ್ ಪ್ರದೇಶದಲ್ಲಿ ಪೊಲೀಸ್ ಇಲಾಖೆಯ ಹೆಸರಿಗೆ ಕಾಯ್ದಿರಿಸಲಾದ 100 ಎಕರೆ ಸ್ಥಳದಲ್ಲಿ ಸೃಜಿಸಿ ಸರ್ಕಾರದ ಮಂಜೂರಾತಿ ಆದೇಶ ನೀಡುವಂತೆ ಕೋರಿದೆ ಎಂದು ಪತ್ರ ಹೇಳಿದೆ.












Click it and Unblock the Notifications