ವಿಪ್ ಬಗ್ಗೆ ಸಿದ್ದರಾಮಯ್ಯ ಗುಡುಗು, ಎಲ್ಲರೂ ಗಪ್ ಚುಪ್!
ಬೆಂಗಳೂರು, ಜುಲೈ 23: 15ನೇ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿ ಮಂಡಿಸಿದ ವಿಶ್ವಾಸಮತ ನಿಲುವಳಿ ಬಗ್ಗೆ ಮಂಗಳವಾರ(ಜುಲೈ 22)ವು ಚರ್ಚೆ ಮುಂದವರೆದಿದೆ. ವಿಪ್ ಕುರಿತಂತೆ ಸದನದ 'ಅಂಪೈರ್' ರಮೇಶ್ ಕುಮಾರ್ ಅವರು ಮಹತ್ವದ ರೂಲಿಂಗ್ ನೀಡಿದ್ದರೂ, ಇಂದು ಕೂಡಾ ವಿಪ್ ಬಗ್ಗೆ ಚರ್ಚೆ ಜೋರಾಗಿ ನಡೆದು, ಸಿದ್ದರಾಮಯ್ಯ ಎದ್ದು ಗುಡುಗಿದ ಬಳಿಕ ತಣ್ಣಗಾಯಿತು.
"ವಿಪ್ ನೀಡಬೇಡಿ ಎಂದು ಸುಪ್ರೀಂ ಕೋರ್ಟ್ ಎಲ್ಲೂ ಹೇಳಿಲ್ಲ. ಸುಪ್ರೀಂ ಎದುರು ಅರ್ಜಿ ಸಲ್ಲಿಸಿರುವ ಶಾಸಕರನ್ನು ಒತ್ತಾಯ ಮಾಡಬಾರದು ಎಂದಿದ್ದಾರೆ ಅಷ್ಟೆ. ಆದರೆ ನಾನು ವಿಪ್ ನೀಡುವ ಎಲ್ಲ ಅಧಿಕಾರವನ್ನೂ ಹೊಂದಿದ್ದೇನೆ" ಎಂದು ಮಾಜಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹೇಳಿದರು.
"ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ವಿಪ್ ನೀಡುವ ಅಧಿಕಾರವಿಲ್ಲ" ಎಂದ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ, "ಸುಪ್ರೀಂ ಕೋರ್ಟ್ ಆದೇಶ ಉಲ್ಲೆಖಿಸಿ, 15 ಜನರ ಬಗ್ಗೆ ಯಾವುದೇ ಕಾರಣಕ್ಕೂ ಸದನಕ್ಕೆ ಬರುವಂತೆ ಒತ್ತಾಯಿಸುವಂತಿಲ್ಲ" ಎಂದು ಹೇಳಿದೆ. ಸುಪ್ರೀಂ ಕೋರ್ಟ್ ಆದೇಶದಂತೆ 15 ಜನ ಬಂದು ಸ್ಪೀಕರ್ನ್ನು ಕಂಡು ರಾಜೀನಾಮೆ ಪತ್ರವನ್ನು ಕೊಟ್ಟು ಹೋಗಿದ್ದಾರೆ. ನಿಮ್ಮ ವಿಪ್ಗೆ ಯಾವುದೇ ಕಾರಣಕ್ಕೆ ಅನ್ವಯವಾಗುವುದಿಲ್ಲ. ವಿಪ್ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದರು.

ಯಾವರೀತಿ ಕಾನೂನನ್ನು ಅರ್ಥೈಸಿಕೊಂಡಿದ್ದಾರೋ
ಯಡಿಯೂರಪ್ಪ ಈ ರೀತಿ ಹೇಳುತ್ತಿದ್ದಂತೆ ಎದ್ದು ನಿಂತ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಎಸ್ವೈ ಯಾವರೀತಿ ಕಾನೂನನ್ನು ಅರ್ಥೈಸಿಕೊಂಡಿದ್ದಾರೋ ಗೊತ್ತಿಲ್ಲ. ನಾನು ಅರ್ಥೈಸಿಕೊಂಡಿರುವ ಪ್ರಕಾರ 10 ಶೆಡ್ಯೂಲ್ 1985ರ ನಂತರ ಜಾರಿಗೆ ಬಂದು ಸಂವಿಧಾನದಲ್ಲಿ ಸೇರಿಸಲಾಯಿತು. ಆ ಮುಂಚೆ ಜನಪ್ರತಿನಿಧಿ ಕಾಯ್ದೆ ಇರಲಿಲ್ಲ, ರಾಜೀವ್ ಗಾಂಧಿ ಕಾಲದಲ್ಲಿ ಕಾನೂನು ಬಂದಿದ್ದು, 10ನೇ ಶೆಡ್ಯೂಲ್ ನ ಪ್ಯಾರಗ್ರಾಫ್ 2ಎ ಮತ್ತು 1ಎ,ಬಿ ಎಂಬ ಕ್ಲಾಸ್ಗಳಿವೆ. ಒಂದರಲ್ಲಿ ವಿಪ್, ರಾಜೀನಾಮೆ ಕೊಡಬೇಕಾಗಿಲ್ಲ. ಪಕ್ಷ ವಿರೋಧಿ ಚಟುವಟಿಕೆಗಳು ನಡೆದರೆ ಅನರ್ಹತೆಗೆ ಅವಕಾಶವಿದೆ. 2ಎ ಬಿನಲ್ಲಿ ಕೂಡ ಅನರ್ಹತೆಗೆ ಅವಕಾಶವಿದೆ ಎಂದರು.

ಶಾಸಕರಿಗೆ ವಿಪ್ ನೀಡಬೇಡಿ ಎಂದು ಕೋರ್ಟ್ ಹೇಳಿಲ್ಲ
ಕೋರ್ಟ್ ಆದೇಶದಲ್ಲೂ ಹೇಳಿಲ್ಲ: 15 ಜನ ಶಾಸಕರಿಗೆ ವಿಪ್ ನೀಡಬೇಡಿ ಎಂದು ಸುಪ್ರೀಂ ಕೋರ್ಟ್ ಎಲ್ಲೂ ಹೇಳಿಲ್ಲ. ಶಾಸಕರ ಮೇಲೆ ಬಲವಂತ ಪ್ರಯೋಗ ಮಾಡಬಾರದು ಎಂದು ಹೇಳಲಾಗಿದೆ. ಆದರೆ ನಾನು ವಿಪ್ ನೀಡುವ ಎಲ್ಲ ಅಧಿಕಾರವನ್ನು ಹೊಂದಿದ್ದೇನೆ. ಶೆಡ್ಯೂಲ್ 10ರ ಪ್ರಕಾರ ವಿಪ್ ಜಾರಿ ಮಾಡಬಹುದು. ಹಾಗಾಗಿ ನಾನು ಪಾಯಿಂಟ್ ಆಫ್ ಆರ್ಡರ್ನ್ನು ಸ್ಪೀಕರ್ ಮುಂದಿಟ್ಟಿದ್ದೇನೆ ಎಂದರು. ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿ, ವಿಪ್ ಜಾರಿಗೊಳಿಸುವುದು, ಶಾಸಕರ ನಡವಳಿಕೆಯನ್ನು ನಿಯಂತ್ರಿಸುವುದರ ಬಗ್ಗೆ, ಸಂವಿಧಾನದ 10ನೇ ಶೆಡ್ಯೂಲ್ ಬಳಸುವುದರ ಬಗ್ಗೆ, ಶಾಸಕರ ಅನರ್ಹತೆ ಬಗ್ಗೆ ನಿರ್ಣಯ ಕೈಗೊಳ್ಳುವ ಅಧಿಕಾರವನ್ನೇ ಕಸಿದರೆ ಹೇಗೆ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. ಈಗ ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿದ ರೂಲಿಂಗ್ ನೀಡಿದ್ದರಿಂದ ಕಾಂಗ್ರೆಸ್ ವಾದಕ್ಕೆ ಪುಷ್ಟಿ ಸಿಕ್ಕಿದೆ.

ವಿಪ್ ಜಾರಿಗೊಳಿಸುವ ಅಧಿಕಾರವಿದೆ
* ವಿಶ್ವಾಸಮತಯಾಚನೆ ಪ್ರಕ್ರಿಯೆ ವಿಳಂಬದ ವಿಷಯದಲ್ಲಿ ನನ್ನನ್ನು ಬಲಿಪಶು ಮಾಡಬೇಡಿ: ಸ್ಪೀಕರ್ ರಮೇಶ್ ಕುಮಾರ್.
* "ಸಂವಿಧಾನದ 10ನೇ ಶೆಡ್ಯೂಲ್ ಅನ್ವಯ ವಿಪ್ ಜಾರಿ ಮಾಡುವ ಅಧಿಕಾರ ಶಾಸಕಾಂಗ ಪಕ್ಷದ ನಾಯಕರಿಗೆ ಇದೆ. ಆದರೆ, ವಿಪ್ ಜಾರಿಗೊಳಿಸುವುದು, ವಿಶ್ವಾಸಮತ ಯಾಚನೆ, ಸದನದ ಕಲಾಪದಲ್ಲಿ ಹಾಜರಾಗುವಂತೆ ಸೂಚಿಸುವುದು ಆಯಾ ಪಕ್ಷಕ್ಕೆ ಬಿಟ್ಟ ವಿಚಾರ" ಎಂದು ಸದನಕ್ಕೆ ತಿಳಿಸಿದ ರಮೇಶ್ ಕುಮಾರ್.
* ಮುಂಬೈನಲ್ಲಿರುವ ಶಾಸಕರಿಗೆ ನಾನು ಯಾವುದೇ ಸಂದೇಶ ಕಳಿಸುವುದಿಲ್ಲ. ರಾಜೀನಾಮೆ ಸಂಬಂಧವಾಗಿ ವಿಚಾರಣೆಗಾಗಿ ಹಾಜರಾಗುವಂತೆ ಸೂಚಿಸಿದ್ದೇನೆ.
* "ಸುಪ್ರೀಂಕೋರ್ಟಿನ ಆದೇಶವನ್ನು ಪರಿಶೀಲನೆ ಮಾಡುತ್ತಿದ್ದರಿಂದ ವಿಶ್ವಾಸಮತಯಾಚನೆ ಪ್ರಕ್ರಿಯೆ ವಿಳಂಬವಾಗಿದೆ": ರಮೇಶ್ ಕುಮಾರ್.

ವಿಪ್ ಬಗ್ಗೆ ಮಧ್ಯಕಾಲೀಕ ತೀರ್ಪು ಬಂದಿಲ್ಲ
"ಎಲ್ಲಾ ರಾಜಕೀಯ ಪಕ್ಷಗಳಿಗೂ ಅನ್ವಯವಾಗುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಇದು ಈ ಪ್ರಕರಣದ ಮಧ್ಯಂತರ ತೀರ್ಪು ಮಾತ್ರ, ಮಧ್ಯಕಾಲೀಕ ತೀರ್ಪಲ್ಲ. ತೀರ್ಪಿನ ಅನ್ವಯ ಅತೃಪ್ತ ಶಾಸಕರು ಸದನಕ್ಕೆ ಹಾಜರಾಗುವ ಬಗ್ಗೆ ಸ್ವಂತ ನಿರ್ಧಾರ ಕೈಗೊಳ್ಳಬಹುದು. ವಿಪ್ ಜಾರಿ ಅವರ ಕರ್ತವ್ಯ, ಸದನಕ್ಕೆ ಹಾಜರಾಗುವುದು ನೈತಿಕ ಹಕ್ಕು, ವಿಪ್ ಉಲ್ಲಂಘನೆ ಹಾಗೂ ಅದರ ಪರಿಣಾಮ ಮುಂದಿನ ಕ್ರಮಗಳ ಬಗ್ಗೆ ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಹೇಳಬಹುದು, ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಸ್ಪೀಕರ್ ಏನು ಮಾಡಬೇಕು ಎಂಬುದನ್ನು ಸುಪ್ರೀಂಕೋರ್ಟ್ ಹೇಳಿಲ್ಲ, ಈ ಪ್ರಕ್ರಿಯೆ ಸ್ಪೀಕರ್ ಇಚ್ಛೆಯಂತೆ ನಡೆಸಬಹುದು" ಎಂದು ಮಾಜಿ ಅಡ್ವೋಕೇಟ್ ಜನರಲ್ ಎಸ್ ದೊರೈರಾಜು ಅವರು ಖಾಸಗಿ ವಾಹಿನಿ ಜೊತೆ ಮಾತನಾಡುತ್ತಾ ಹೇಳಿದರು.












Click it and Unblock the Notifications