ದೈವಾರಾಧನೆ: ಈ ದೈವ ಮುಟ್ಟಿದರೆ ವರ್ಷದೊಳಗೆ ಸಾವು ಖಚಿತ!
ನಾಗಾರಾಧನೆ, ಭೂತಾರಾಧನೆ ತುಳುನಾಡು ಸಂಸ್ಕೃತಿಯ ಪ್ರಮುಖ ಧಾರ್ಮಿಕ ಪದ್ದತಿ. ಈ ಭಾಗದ ಪ್ರತಿ ಮನೆಯಲ್ಲೂ ಭೂತ ಮತ್ತು ನಾಗನನ್ನು ನಂಬುವ ಪದ್ದತಿ, ವಾರ್ಷಿಕ ನೇಮ, ಕೋಲ, ನಾಗಮಂಡಲ, ತಂಬಿಟ್ಟು ಸೇವೆ ಮುಂತಾದವು ಇಂದಿಗೂ ಚಾಲ್ತಿಯಲ್ಲಿದೆ.
ಈ ಭಾಗದಲ್ಲಿ ನಡೆಯುವ ಈ ಧಾರ್ಮಿಕ ಪದ್ದತಿ ಕೆಲವೊಂದು ಉಡುಪಿ ಪರ್ಯಾಯದ ಅವಧಿಯಲ್ಲಿ ಮತ್ತು ಕೆಲವೊಂದು ಪರ್ಯಾಯದ ಮುಂದಿನ ವರ್ಷಗಳಲ್ಲಿ ನಡೆಯುವುದು ವಾಡಿಕೆ. (ಬುದ್ಧಿ ಜೀವಿಗಳಿಗೆ ಪೇಜಾವರ ಸ್ವಾಮಿ ಸವಾಲ್)
ಉದಾಹರಣೆಗೆ ಪರ್ಯಾಯ ಶ್ರೀಗಳು ಪೀಠವನ್ನೇರುವ ವರ್ಷದಲ್ಲಿ ದೈವಾರ್ಷಿಕವಾಗಿ ನಡೆಯುವ ಕೋಲ, ಪರ್ಯಾಯದ ಮರುವರ್ಷ ಉಡುಪಿ ಜಿಲ್ಲೆ ಪಡುಬಿದ್ರೆಯಲ್ಲಿ ನಡೆಯುವ ನಾಗಾರಾಧನೆಯ 'ಢಕ್ಕೆಬಲಿ' ಸೇವೆ ಪ್ರಮುಖವಾದದ್ದು.
ಪರ್ಯಾಯ ಪೀಠಾರೋಹಣ ವರ್ಷದಲ್ಲಿ ಉಡುಪಿ ಗ್ರಾಮಾಂತರ ಕಾಪುವಿನಲ್ಲಿ ನಡೆಯುವ ಪಿಲಿಕೋಲ (ಹುಲಿಕೋಲ) ಕೂಡಾ ಒಂದು. ಕಾಪು ಮಾರಿಗುಡಿ ದೇವಾಲಯದ ಸಮ್ಮುಖದಲ್ಲಿ ಮಟಮಟ ಮಧ್ಯಾಹ್ನ ನಡೆಯುವ ಈ ಪಿಲಿಕೋಲ ಹತ್ತು ಹಲವಾರು ವಿಚಾರದಲ್ಲಿ ಇತರ ಕೋಲಗಳಿಗಿಂತ ವಿಭಿನ್ನ, ಭೀಕರ, ಭಯಂಕರ.
ಶತಮಾನಗಳ ಇತಿಹಾಸವಿರುವ ಈ ಪಿಲಿಕೋಲ, ಮಾಧ್ಯಮಗಳು ಪ್ರಭಲವಾಗುತ್ತಿದ್ದಂತೇ ಹೆಸರುವಾಸಿಯಾಗುತ್ತಿದೆ. ಹೆಚ್ಚಾಗಿ ವೃಷಭ ಸಂಕ್ರಮಣದ ವೇಳೆ ನಡೆಯುವ ಈ ಕೋಲ ಶನಿವಾರ (ಮೇ 14) ಸಂಪನ್ನಗೊಂಡಿದೆ. (ಪೇಜಾವರ ಶ್ರೀಗಳ ಪಂಚಮ ಪರ್ಯಾಯ ಹೈಲೆಟ್ಸ್)
ಪಿಲಿಕೋಲದ ಸಮಯದಲ್ಲಿ ನಡೆಯುವ ದೈವದ ದರ್ಶನದ ವೇಳೆ ಭೂತ ಪಾತ್ರಧಾರಿ ಯಾರನ್ನಾದರೂ ಮುಟ್ಟಿದರೆ ಒಂದು ವರ್ಷದೊಳಗೆ ಅವರ ಸಾವು ಖಚಿತ ಎನ್ನುವ ನಂಬಿಕೆ ಈ ಭಾಗದಲ್ಲಿದೆ. ಕುತೂಹಲಕಾರಿಯಾಗಿರುವ ಈ ಪಿಲಿಕೋಲದ ಬಗ್ಗೆ ಹೆಚ್ಚಿನ ಮಾಹಿತಿ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.. (ಚಿತ್ರಕೃಪೆ: ತುಳು ಒರಿಪಾಗ)
ಈ ದೈವಾರಾಧನೆಯ ಬಗ್ಗೆ ಎರಡು ಮಾತು
ಕಾರ್ಕಳ ಪ್ರಾಂತ್ಯದ ಅರಸ ತನ್ನ ಸಾಮ್ರಾಜ್ಯದಲ್ಲಿ ಹುಲಿ ಮತ್ತು ಕಾಡುಪ್ರಾಣಿಗಳ ಹಾವಳಿ ವಿಪರೀತವಾದಾಗ ಮಾರುವೇಷದಲ್ಲಿ ಭೇಟೆಗೆ ತೆರಳುತ್ತಾನೆ. ಭೇಟೆಯಾಡುವ ವೇಳೆ ಎರಡು ಹುಲಿಗಳನ್ನು ಸೆರೆಹಿಡಿದು ಅರಮನೆಯ ಪಂಜರದಲ್ಲಿ ಬಂಧಿಸಿಡುತ್ತಾನೆ.
ರಾತ್ರಿ ಕನಸಿನಲ್ಲಿ ಆದೇಶ ನೀಡುವ ಚಂಡಿಕಾ ದೇವಿ
ನನ್ನ ವಾಹನದ ಹುಲಿಯನ್ನು ನೀನು ಹಿಡಿದು ತಂದಿರುವೆ, ಪವಿತ್ರ ಸ್ನಾನಕ್ಕೆಂದು ಹೊರಟಿರುವ ದೈವಗಳ ಜೊತೆ ಅವುಗಳನ್ನು ವಾಪಸ್ ಕಳುಹಿಸು ಎಂದು ಕಾರ್ಕಳ ಅರಸರ ಆರಾಧ್ಯದೈವ ಚಂಡಿ ಕನಸಿನಲ್ಲಿ ಅರಸನಿಗೆ ಆದೇಶ ನೀಡುತ್ತಾಳೆ. ಅರಸ ಅದರಂತೆ ನಡೆಯುತ್ತಾನೆ.
ಪವಿತ್ರ ಸ್ನಾನ ಮುಗಿಸಿ ಬರುವ ದೈವಗಳು
ಪವಿತ್ರ ಸ್ನಾನ ಮುಗಿಸಿ ಬರುವ ದೈವಗಳು ಮತ್ತು ಚಂಡಿ ದೇವಿಯ ಹುಲಿಗಳು ಕಾಪುವಿನಲ್ಲಿರುವ ಜನಾರ್ಧನ ಸ್ವಾಮಿ ಮತ್ತು ಮಾರಿಗುಡಿ ದೇವಾಲಯದಲ್ಲಿ ಗುಡಿಕಟ್ಟಿ ಪೂಜಿಸಿ, ದೈವಾರ್ಷಿಕಕ್ಕೊಮ್ಮೆ ಕೋಲ ನಡೆಸಬೇಕೆಂದು ಅರಸನಿಗೆ ಆದೇಶ ನೀಡುತ್ತವೆ. ಬ್ರಹ್ಮ ಬೈದರ್ಕಳ (ಕೋಟಿ ಚನ್ನಯ್ಯ) ಸಹೋದರರು ಅರಸನ ಆದೇಶದಂತೆ ಗುಡಿಕಟ್ಟುತ್ತಾರೆ. ಅಂದಿನಿಂದ ಎರಡು ವರ್ಷಕ್ಕೊಮ್ಮೆ ಇಲ್ಲಿ ಈ ಧಾರ್ಮಿಕ ಪದ್ದತಿ ಜಾರಿಯಲ್ಲಿದೆ.
ಹಳೇ ಮಾರಿಗುಡಿಯಲ್ಲಿ ನಿರ್ಧಾರ
ಭೂತ ಪಾತ್ರಧಾರಿಯನ್ನು ಕಾಪುವಿನಲ್ಲಿರುವ ಹಳೇ ಮಾರಿಯಮ್ಮ ದೇವಿಯ ಸನ್ನಿಧಾನದಲ್ಲಿ (ಇಲ್ಲಿ ಹೊಸ, ಹಳೇ ಮಾರಿಗುಡಿ ಎನ್ನುವ ಎರಡು ದೇವಾಲಯಗಳಿವೆ) ವೀಳ್ಯದಎಲೆ ನೀಡುವ ಮೂಲಕ ಪಿಲಿಕೋಲದ ಹಿಂದಿನ ದಿನದಂದು ಸಜ್ಜುಗೊಳಿಸಲಾಗುತ್ತದೆ.
ವಿಶಿಷ್ಟವಾದ ಭೂತಾರಾಧನೆ
ಹಲವು ಸಂಪ್ರದಾಯಗಳ ಮೂಲಕ, ಹುಲಿಯಂತೇ ವೇಷ ಧರಿಸಿ ಬರುವ ಭೂತ ಪಾತ್ರಧಾರಿಗೆ ಗರ್ಭಗುಡಿಯ ಮುಂದೆ ಚಂಡಿ ಪಿಲಿಕೋಲದ ಆವಾಹನೆ ನೀಡಲಾಗುತ್ತದೆ ಮತ್ತು ಗಗ್ಗರ (ಕಾಲಿಗೆ ಹಾಕುವ ಗೆಜ್ಜೆ) ಕಟ್ಟಲಾಗುತ್ತದೆ. ದೇವರಿಗೆ ಮೂರು ಸುತ್ತು ಬರುವ ಪಿಲಿಕೋಲ ಪಾತ್ರಧಾರಿ ಭೇಟೆಗಾಗಿ ಶರವೇಗದಲ್ಲಿ ಹೊರಡುತ್ತದೆ.
ಇಲ್ಲಿನ ನಂಬಿಕೆ
ಚಂಡಿ ಮೈಮೇಲೆ ಬಂದಿರುವ ಪಿಲಿಕೋಲ ಪಾತ್ರಧಾರಿ ಭೇಟಿಗಾಗಿ ಹೊರಟಾಗ ಜನರು ದೂರದಿಂದ ಇದನ್ನು ನೋಡುತ್ತಿರುತ್ತಾರೆಯೇ ಹೊರತು, ಹತ್ತಿರ ಸುಳಿಯಲು ಯಾರೂ ಧೈರ್ಯ ತೋರುವುದಿಲ್ಲ. ಯಾಕೆಂದರೆ ಈ ವೇಳೆ ಭೂತಪಾತ್ರಧಾರಿ ಯಾರನ್ನಾದರೂ ಮುಟ್ಟಿದರೆ (ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ) ಒಂದು ವರ್ಷದೊಳಗೆ ಸಾವು ಖಚಿತ ಎನ್ನುವ ನಂಬಿಕೆ. ಶನಿವಾರ (ಮೇ 14) ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲೂ ಭೂತಪಾತ್ರಧಾರಿ ಒಬ್ಬನನ್ನು ಮುಟ್ಟಿದೆ.
ಯಾರನ್ನೂ ಮುಟ್ಟದಿದ್ದರೆ ಪಾತ್ರಧಾರಿಗೆ ಸಾವು
ಭೂತ ಪಾತ್ರಧಾರಿ ಯಾರನ್ನಾದರೂ ಮುಟ್ಟಲು ವಿಫಲವಾದ ಪಕ್ಷದಲ್ಲಿ ಪುನ: ಮಾರಿಗುಡಿಗೆ ಬಂದು, ದೇವಾಲಯದ ಹೊರಾಂಗಣದಲ್ಲಿ ಜೀವಂತ ಕೋಳಿಯನ್ನು ಬಲಿಪಡೆದು, ತೆಂಗಿನಕಾಯಿ ಹೊಡೆದು ಬಾಳೆ ಎಲೆಯಲ್ಲಿ ಮಲಗುತ್ತದೆ. ದೇವಾಲಯದ ಅರ್ಚಕರು ಅಭಿಷೇಕದ ನೀರನ್ನು ಸಂಪ್ರೋಕ್ಷಿಸಿದ ನಂತರ ಭೂತ ಪಾತ್ರಧಾರಿಯನ್ನು ವಾಪಸ್ ಕರೆದುಕೊಂಡು ಹೋಗಲಾಗುತ್ತದೆ.
ಭೂತ ಪಾತ್ರಧಾರಿಗೂ ಸಾವು
ಚಂಡಿ ಪಿಲಿ ಮೈಮೇಲೆ ಬಂದವೇಳೆ, ಯಾರನ್ನೂ ಮುಟ್ಟಲು ವಿಫಲವಾದ ಪಕ್ಷದಲ್ಲಿ ಭೂತ ಪಾತ್ರಧಾರಿ ಒಂದು ವರ್ಷದೊಳಗೆ ಸಾವನ್ನಪ್ಪುತಾನೆ ಎನ್ನುವ ನಂಬಿಕೆಯೂ ಇದೆ. ಈ ಧಾರ್ಮಿಕ ಪದ್ದತಿಯನ್ನು ನಂಬುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರ.