ಉಪ ಚುನಾವಣೆ: ಒಟ್ಟು 37 ಅಭ್ಯರ್ಥಿಗಳು ಕಣದಲ್ಲಿ!
ಬೆಂಗಳೂರು, ಅ. 16: ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೆ ನಾಮಪತ್ರ ಪರಿಶೀಲನೆ ಇಂದು ನಡೆದಿದ್ದು, ಒಟ್ಟು ನಾಲ್ಕು ಜನರ ನಾಮಪತ್ರಗಳು ತಿರಸ್ಕರಿಸಲ್ಪಿಟ್ಟಿವೆ. ನಾಮಪತ್ರ ಸಲ್ಲಿಸಲು ನಿನ್ನೆ (ಅ.16) ಕೊನೆಯ ದಿನವಾಗಿತ್ತು. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 20 ಜನರ ನಾಮಪತ್ರಗಳು ಸಿಂಧುವಾಗಿದ್ದು, ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 17 ಅಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿವೆ. ಹೀಗಾಗಿ ಉಪ ಚುನಾವಣಾ ಕಣದಲ್ಲಿ ಒಟ್ಟಾರೆಯಾಗಿ 37 ಅಭ್ಯರ್ಥಿಗಳು ಕಣದಲ್ಲಿ ಉಳಿದಂತಾಗಿದೆ.
ಇಂದು ಎರಡೂ ಕ್ಷೇತ್ರಗಳ ನಾಮಪತ್ರಗಳ ಪರಿಶೀಲನೆ ನಡೆಯಿತು. ಶಿರಾ ಕ್ಷೇತ್ರದಲ್ಲಿ ಒಟ್ಟು 17 ಜನರು 25 ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದರು. ಅವುಗಳಲ್ಲಿ ಒಂದು ಸೆಟ್ ನಾಮಪತ್ರ ತಿರಸ್ಕರಿಸಲ್ಪಟ್ಟಿದ್ದು, ಉಳಿದ 24 ಸೆಟ್ ನಾಮಪತ್ರಗಳು ಸಿಂಧುವಾಗಿವೆ. ಜೊತೆಗೆ ಎಲ್ಲ 17 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ 23 ಜನರು 27 ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದರು. ಅವುಗಳಲ್ಲಿ 3 ಜನರು ಸಲ್ಲಿಸಿದ್ದ 3 ನಾಮಪತ್ರಗಳು ಅಸಿಂಧುವಾಗಿದ್ದು, ಅಂತಿಮವಾಗಿ 20 ಅಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿವೆ.
Recommended Video
ಅಕ್ಟೋಬರ್ 19 ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ. ನವೆಂಬರ್ 3 ರಂದು ಮತದಾನ ನಡೆಯಲಿದ್ದು, ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದೆ.