ಈ ಘಟಾನುಘಟಿಗಳಲ್ಲಿ ಯಾರು ವಿಧಾನಸಭೆಗೆ, ಯಾರು ಮನೆಗೆ?

ಬೆಂಗಳೂರು, ಮೇ 15 : ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ, ಸುದ್ದಿಮನೆಯಲ್ಲಿ, ಸಾಫ್ಟ್ ವೇರ್ ಕಂಪನಿಗಳಲ್ಲಿ ಮಾತ್ರವಲ್ಲ, ಮನೆಮನೆಗಳಲ್ಲಿ, ಬೀದಿಬೀದಿಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಏನಾಗುತ್ತದೋ ಎಂದು ಉಸಿರು ಬಿಗಿಹಿಡಿದು ಕಾದು ಕುಳಿತಿದ್ದಾರೆ. ಅಷ್ಟೊಂದು ನಿರೀಕ್ಷೆಯನ್ನು ಈ ಚುನಾವಣೆ ಹುಟ್ಟಿಸಿದೆ.

ವಿರೋಧ ಪಕ್ಷ ಭಾರತೀಯ ಜನತಾ ಪಕ್ಷ ಮತ್ತು ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಸರಿಸಮನಾಗಿ ಗುದ್ದಾಟ ನಡೆಸಿದ್ದರೆ, ಈ ಇಬ್ಬರ ಜೊತೆ ಸೆಣಸಾಟಕ್ಕೆ ಇಳಿದಿರುವ ಪ್ರಾದೇಶಿಕ ಪಕ್ಷವಾಗಿರುವ ಜಾತ್ಯತೀತ ಜನತಾದಳ ಪಕ್ಷ ಕೂಡ ಭಾರೀ ಪೈಪೋಟಿ ನೀಡಿದೆ. ಫಲಿತಾಂಶ ಏನು ಬೇಕಾದರೂ ಆಗಬಹುದು, ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ನಡುವೆ, ಕೆಲ ಪ್ರಮುಖ ಅಭ್ಯರ್ಥಿಗಳ ಮೇಲೆ ಸಹಜವಾಗಿ ಮತದಾರರ ಕಣ್ಣಿದೆ. ಇವರಲ್ಲಿ ಇಂಥವರು ಗೆದ್ದೇ ಗೆಲ್ಲುತ್ತಾರೆ ಎಂದು ಖಚಿತವಾಗಿ ಹೇಳುವಂತಿಲ್ಲ. ಸ್ಪರ್ಧೆ ಅಷ್ಟು ತುರುಸಿನಿಂದ ಈ ಕ್ಷೇತ್ರಗಳಲ್ಲಿ ನಡೆದಿದ್ದು, ಎಲ್ಲವೂ ಮತದಾರ ಪ್ರಭುಗಳ ಕೃಪಾಕಟಾಕ್ಷವಿದ್ದರೆ ಮಾತ್ರ ಜಯ ಸಿಗಲಿದೆ. ಅಂಥವರು ಯಾರು, ಅವರ ಹಣೆಬರಹ ಏನಾಗಲಿದೆ, ಗೆದ್ದು ಬೀಗುತ್ತಾರೆ, ಮಣ್ಣುಮುಕ್ಕಿ ಮನೆ ದಾರಿ ಹಿಡಿಯುತ್ತಾರಾ ಎನ್ನುವುದು ಕೆಲವೇ ಕ್ಷಣಗಳಲ್ಲಿ ತಿಳಿದುಬರಲಿದೆ.

ಅವರು ಯಾರ್ಯಾರು ಎಂಬುದನ್ನು ನೋಡೋಣ ಬನ್ನಿ.

 ಸಿದ್ದರಾಮಯ್ಯ

ಸಿದ್ದರಾಮಯ್ಯ

ಇಡೀ ಕರ್ನಾಟಕದ ನಾಡಿನ ಜನರ ಕಣ್ಣು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲಿದೆ. ಮೈಸೂರಿನ ಚಾಮುಂಡೇಶ್ವರಿ ಮತ್ತು ಬಾಗಲಕೋಟೆಯ ಬಾದಾಮಿ ಕ್ಷೇತ್ರಗಳಿಂದ ಸ್ಪರ್ಧಿಸಿರುವ ಅವರಿಗೆ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ನ ಜಿಟಿ ದೇವೇಗೌಡ ಮತ್ತು ಬಾದಾಮಿಯಲ್ಲಿ ಬಿಜೆಪಿಯ ಶ್ರೀರಾಮುಲು ಅವರು ಬೆವರಿಳಿಸುವಂಥ ಸ್ಪರ್ಧೆ ನೀಡಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಎಷ್ಟು ತುರುಸಿನಿಂದ ಕೂಡಿದೆಯೆಂದರೆ ಸಿದ್ದರಾಮಯ್ಯ ಗೆದ್ದರೂ ಗೆಲ್ಲಬಹುದು, ಸೋತರೂ ಸೋಲಬಹುದು ಎಂಬಂತಿದೆ. ಚಾಮುಂಡಿ ಒಲಿಯುತ್ತಾಳಾ, ತಾಯಿ ಬನಶಂಕರಿ ಸಿದ್ದರಾಮಯ್ಯನವರಿಗೆ ಆಶೀರ್ವಾದ ಮಾಡುತ್ತಾಳಾ?

ಕರ್ನಾಟಕ ಜನಾದೇಶ: ಒಂದಷ್ಟು ಕಹಿ, ಮತ್ತಷ್ಟು ಸಿಹಿ

ಶ್ರೀರಾಮುಲು

ಶ್ರೀರಾಮುಲು

ಜನಾರ್ದನ ರೆಡ್ಡಿ ಆಪ್ತರಾಗಿರುವ ಶ್ರೀರಾಮುಲು ಅವರಿಗೆ ಟಿಕೆಟ್ ಕೊಟ್ಟಿದ್ದನ್ನೇ ಕಾಂಗ್ರೆಸ್ ಭಾರೀ ವಿರೋಧಿಸಿತ್ತು. ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ ಈಬಾರಿ ಯಾವುದೇ ಸಂಸದನಿಗೂ ಟಿಕೆಟ್ ನೀಡುವುದಿಲ್ಲ ಎಂದಿದ್ದ ಬಿಜೆಪಿ, ಅವರಿಗೆ ಎರಡೆರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ ಅಚ್ಚರಿ ಮೂಡಿಸಿತ್ತು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಭಾರೀ ಪ್ರತಿರೋಧದ ನಡುವೆ ಟಿಕೆಟ್ ಪಡೆದ ಶ್ರೀರಾಮುಲು, ಬಾದಾಮಿಯಲ್ಲಿಯೂ ಟಿಕೆಟ್ ಗಿಟ್ಟಿಸಿ ಸಿದ್ದರಾಮಯ್ಯನವರಿಗೆ ಟಕ್ಕರ್ ನೀಡಿದ್ದಾರೆ. ಅವರು ಬಾದಾಮಿಯಿಂದ ಗೆದ್ದರೆ, ಬಿಜೆಪಿಯೂ ಜಯಭೇರಿ ಬಾರಿಸಿದರೆ ಅವರು ಉಪಮುಖ್ಯಮಂತ್ರಿಯಾಗುವ ಕನಸನ್ನೂ ಇಟ್ಟುಕೊಂಡಿದ್ದಾರೆ.

ಯಡಿಯೂರಪ್ಪ

ಯಡಿಯೂರಪ್ಪ

ಅಧಿಕಾರವನ್ನು ಕಾಂಗ್ರೆಸ್ಸಿನಿಂದ ಕಿತ್ತು ಮೂರನೇ ಬಾರಿ ಮುಖ್ಯಮಂತ್ರಿಯಾಗುವ ಕನಸು ಹೊತ್ತಿರುವ 75ರ ಹರೆಯದ ಯಡಿಯೂರಪ್ಪನವರ ಮೇಲೆ ಬಿಜೆಪಿ ರಾಷ್ಟ್ರ ನಾಯಕರು ಭಾರೀ ಭರವಸೆ ಇಟ್ಟುಕೊಂಡಿದ್ದಾರೆ. ಪರಿವರ್ತನೆ ಯಾತ್ರೆಯ ಮೂಲಕ ಕಾಲಿಗೆ ಚಕ್ರ ಕಟ್ಟಿಕೊಂಡಂತೆ, ಬಿಳಿ ಸಫಾರಿಧಾರಿ ಯಡಿಯೂರಪ್ಪನವರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಊರೂರು ಸುತ್ತಿದ್ದಾರೆ, ಲೆಕ್ಕವಿಲ್ಲದಷ್ಟು ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ. ಅವರಿಗೆ ಕಾಂಗ್ರೆಸ್ಸಿನ ಜಿಬಿ ಮಾಲತೇಶ್ ಅವರು ಭಾರೀ ಸ್ಪರ್ಧೆ ಒಡ್ಡಿದ್ದಾರೆ. ಆದರೂ ಯಡಿಯೂರಪ್ಪ ಗೆಲುವು ಸಲೀಸು ಎಂದು ಹೇಳಲಾಗುತ್ತಿದೆ.

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

ಬಿಜೆಪಿಯಲ್ಲಿ ಬಂಡಾಯದ ಕಿಡಿಯೆಬ್ಬಿಸಿದ್ದ ಮತ್ತು ಕಳೆದ ಚುನಾವಣೆಯಲ್ಲಿ ಸೋತಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರಿಗೆ ಟಿಕೆಟ್ ಸಿಗುವುದೇ ಕಷ್ಟವಿತ್ತು. ಅಂಥದರಲ್ಲಿ ಶಿವಮೊಗ್ಗದಿಂದ ಸ್ಪರ್ಧಿಸಿರುವ ಈಶ್ವರಪ್ಪ ಅವರಿಗೆ ಕಾಂಗ್ರೆಸ್ಸಿನ ಅಭ್ಯರ್ಥಿ ಮತ್ತು ಹಾಲಿ ಶಾಸಕ ಕೆಬಿ ಪ್ರಸನ್ನಕುಮಾರ್ ಮತ್ತು ಜೆಡಿಎಸ್ ಪಕ್ಷದ ಸಮರ್ಥ ಅಭ್ಯರ್ಥಿ ನಿರಂಜನ ಅವರು ಭಾರೀ ಸ್ಪರ್ಧೆ ಒಡ್ಡಿದ್ದಾರೆ. ಈಶ್ವರಪ್ಪ ಗೆದ್ದರೆ ದೊರೆಯಾಗುತ್ತಾರೆ, ಬಿದ್ದರೆ ಮನೆಗೆ ವಾಪಸ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+